1. ಈಗಷ್ಟೇ ಮದುವೆಯಾಗಿದ್ದೀವಿ, ಇನ್ನೊಂದಿಷ್ಟು ಕಾಲ ಹೋಗಲಿ ಅಂತ ಮೊದಲನೆಯ ಮಗುವನ್ನು ಗರ್ಭಪಾತ ಮಾಡಿದ್ದರು. ಈಗಷ್ಟೇ ಹೊಸ ಮನೆ ಕಟ್ಟಿಸಿದ್ದೀವಿ, ಈ ಸಾಲ ಗೀಲ ಎಲ್ಲ ಮುಗೀಲಿ ಆಮೇಲೆ ಸಾಕು ಮಗು ಅಂತ ಎರಡನೆಯ ಮಗುವನ್ನೂ ಗರ್ಭಪಾತ ಮಾಡಿದರು. ಅದೇಕೋ ಆಮೇಲೆ ಅವಳ ಮುಟ್ಟು ನಿಲ್ಲಲೇ ಇಲ್ಲ.
2. ಈ ಜಮಾನ ನಿಮ್ಮಂತಹ ನವಯುವಕರದು..” ಎಂದವರು ಮತ್ತೊಂದು ಕಡೆ “ಈ ಕಾಲ ಬಹಳ ಕೆಟ್ಟಿದೆ ” ಅಂದರು… ಕೊನೆಗೆ ಕಾಲವನ್ನು ಕೆಡಿಸಿದ ಅಪರಾಧವನ್ನೂ ಯುವಕರ ತಲೆಮೇಲೆ ಹಾಕಿ ನಿರಾಳವಾದರು.
3. ‘ಪ್ರೀತಿ’ ಎಂಬ ವಿಷಯದಲ್ಲಿ ನಡೆದ ಸಣ್ಣ ಕತಾ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದವನು ಬರೆದದ್ದು ಇಷ್ಟೇ “ಪ್ರೀತಿ ಅಂದರೆ ನಾನು-ನನ್ನವಳು”.
4. ತನ್ನ ಮುಖದಲ್ಲಿ ಮೊಡವೆಯಿಂದ ಉಂಟಾದ ಕಲೆಯಿಂದ ಬೇಸರಗೊಂಡಿದ್ದ ಅವಳನ್ನು “ಆ ಚಂದಮಾಮನಲ್ಲೂ ಕಲೆಯಿಲ್ಲವೇ..?” ಅಂತ ಮುದ್ದಾಗಿ ಅವನು ಕೇಳಿದ್ದೇ ತಡ, ಅವಳ ಮುಖದಲ್ಲಿ ಮತ್ತದೇ ಹಳೆಯ ಪ್ರಸನ್ನತೆ ಮೂಡಿತು.
5. ಗಾಂಧೀ ಜಯಂತಿಯ ಅಂಗವಾಗಿ ಗಾಂಧೀ ಶಾಂತಿ ಪ್ರತಿಷ್ಠಾನ ನಡೆಸಿದ ಗಾಂಧಿ ಛದ್ಮ ವೇಷ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪಡೆದ ದುಡ್ಡಿನಿಂದ ಕುಡಿದು ತೂರಾಡುತ್ತಿದ್ದ ನಮ್ಮ ಕುಮಾರಣ್ಣನನ್ನು ಸ್ನೇಹಿತರು ಮಧ್ಯ ರಾತ್ರಿ ಸೇಫ್ ಆಗಿ ಮನೆಗೆ ತಲುಪಿಸಿದ್ದಾರಂತೆ.
6. ಒಂದಷ್ಟು ಕೊಲೆ, ದರೋಡೆ, ಬಾಂಬ್ ಸ್ಪೋಟ, ರೇಪ್ ಸುದ್ದಿಗಳು ಇರದಿದ್ದರೆ ಆ ಸಂಪಾದಕನಿಗೆ ತನ್ನ ಪತ್ರಿಕೆ ಪೇಲವ ಅಂತ ಅನ್ನಿಸ್ತಿತ್ತು.