ಆತ್ಮ ಸಂಗಾತದೊಂದಿಗೆ ಅತ್ಮೀಯ ಬಾಲ್ಯ ... · ತೊರೆಯ ತೀರದ ನೆನಪುಗಳು · ಮತ್ತೆ ಸಂಜೆಯಾಗುತ್ತಿದೆ.. · ಸಣ್ಣ ಕತೆ

ಆತ್ಮ ಸಂಗಾತದೊಂದಿಗೆ ಅತ್ಮೀಯ ಬಾಲ್ಯ …

“ನಿನ್ನ ಒಂದಿಷ್ಟು ಶೂನ್ಯ ತಾ.. ನನ್ನೊಂದಿಷ್ಟು ಏಕಾಂತ ತರುವೆ.. ಮೌನದಿಂದಲೇ ಈ ಸ್ನೇಹಕ್ಕೊಂದು ಸೂರು ಕಟ್ಟೋಣ ಆಗದೇ… ?”

ನಿನ್ನ ಈ ಸಾಲು ಓದಿದಾಗೆಲ್ಲ ಈ ಜಗದ ಮಾನಸಿಕ ಅಪರಿಚಿತತೆಯ ಮೆಟ್ಟಿ ನಿಂತು ಎದ್ದು ಬಿದ್ದು ಅಂಬೆಗಾಲಿಕ್ಕುವ ಮಗುವಿನ ಜೀವನೋತ್ಸಾಹದಂತೆ, ಹೊಸ ಕವನಕ್ಕೆ ಕಾವು ಕೊಟ್ಟ ಕವಿಯಂತೆ ಸಂಭ್ರಮಿಸುತ್ತೇನೆ. ಅಲ್ಲೆಲ್ಲೊ ಭೋರ್ಗರೆವ ಶರಧಿಯ ನಡುವೆ ನಿರ್ಲಿಪ್ತ ಏಕಾಂಗಿ ದ್ವೀಪವಾಗಿದ್ದೆ ನಾನು. ನನ್ನೊಳಗೆ ನಾನೇ ಕಟ್ಟಿಕೊಡ ಜಗತ್ತು ಅದು. ಯಾವ ಹಂಗೂ ಇಲ್ಲ, ಮುಂಜಾನೆಯ ವಿಭಾಕಿರಣಗಳು, ಮುಸ್ಸಂಜೆಯ ಮೆಲುಗಾಳಿ, ಅಮವಾಸ್ಯೆಗಳೂ ಹುಣ್ಣಿಮೆಗಳೂ ನನ್ನೊಳಗೆ ಯಾವುದೇ ವಿಶೇಷ ತರಂಗವನ್ನು ಸೃಷ್ಟಿಸುತ್ತಿರಲಿಲ್ಲ. ಕಿನಾರೆಯಲ್ಲಿ ನಿಂತು ಶರಧಿಯನ್ನು ಮುತ್ತಿಕ್ಕುವ ಆಗಸದ ಆ ಅನಂತ ಬಿಂದುವನ್ನು ತದೇಕಚಿತ್ತದಿಂದ ವೀಕ್ಷಿಸುತ್ತಿದ್ದೆ. ಹಾಗೆ ದಿಟ್ಟಿಸುವಾಗೆಲ್ಲ ಭಾವ ಬಂಧಗಳಿಗೆ ತೆರೆದುಕೊಂಡು ಬದುಕಿAlone-Boy-In-Love-Wallpaperನ ಅರ್ಥ ಕಂಡುಕೊಳ್ಳಬೇಕೆಂಬ ತಹತಹಿಕೆ ನನ್ನೊಳಗೆ ಒತ್ತರಿಸಿ ಬರುತ್ತಿತ್ತು.. ಅದು ಅಷ್ಟು ಸುಲಭವಲ್ಲ… ನಾನೆಂಬುದು ಬರಿಯ ಗೋಜಲಿನ ಮೂಟೆ, ನಾನೇನು..? ನನ್ನ ಅಸಿತ್ವವೇನು..? ಎಲ್ಲವೂ ದ್ವಂದ್ವ. ಪೂರ್ವವೂ ಅಲ್ಲದ, ಪಶ್ಚಿಮವೂ ಅಲ್ಲದ ರಾತ್ರಿಯೂ ಅಲ್ಲದ, ಹಗಲೂ ಅಲ್ಲದ, ನಿದಿರೆಯೂ ಅಲ್ಲದ, ಎಚ್ಚರವೂ ಅಲ್ಲದ, ಅದೊಂದು ತ್ರಿಶಂಕು ಮನಸ್ಥಿತಿ. ನನ್ನ ತವಕ ತಲ್ಲಣಗಳು, ಅನುಮಾನಗಳು, ಆತಂಕಗಳು, ಅತಿರೇಕಗಳು, ಅನುಭವಗಳು, ಅನುಭಾವಗಳು ಇದೆಲ್ಲವನ್ನೂ ನನ್ನನ್ನು ಮತ್ತಷ್ಟು ಅಯೋಮಯವಾಗುಸುತ್ತದೆ. ನನ್ನ ಹಾಗೆ ಯೋಚಿಸುವ, ನನ್ನದೇ ಬಡಿತದ ಲಯದಲ್ಲಿ, ತಾಳದಲ್ಲಿ ಹೃದಯ ಬಡಿತವಿರುವ ಯಾರಾದರೂ ಇರಬಹುದೇ ಎಂಬ ನನ್ನ ಜಿಜ್ಞಾಸೆಗೆ ಉತ್ತರ ಸಿಗಲಾರದೆ ಪರಿತಪಿಸುತ್ತಿದ್ದೆ.

TOPSHOTS Pakistani children play near the Ravi river in Lahore on April 6, 2015. AFP PHOTO / Arif ALIArif Ali/AFP/Getty Images

ಕಾಲ ಎಲ್ಲದಕ್ಕೂ ಉತ್ತರವಾಗಿ ಬಂತು. ನೀ ನನಗೆ ಸಿಕ್ಕಿದೆ, ಅಲ್ಲ ನನಗೆ ನಾ ದಕ್ಕಿದೆ. ನಿನ್ನದೇ ಮಾತಿನಲ್ಲಿ ಹೇಳಬೇಕಾದರೆ ಒಂದಿನಿತು ಸ್ನೇಹದಾಸೆ ನಮಗಾಗಿ ಹೊಸ ಜಗತ್ತನ್ನೇ ತೆರೆದಿಟ್ಟಿತು, ಮೆಚ್ಚುಗೆ, ಪ್ರೀತಿ, ಮಮಕಾರ, ಹವ್ಯಾಸ, ಇಷ್ಟಗಳು ಎಷ್ಟೊಂದು ಸಾಮ್ಯತೆ.. !. ಇನ್ನಿಲ್ಲದಂತಹಾ ಆತ್ಮೀಯತೆ, ಹಿಂದೆಂದೂ ಕಂಡರಿಯದ ನನ್ನೊಂದಿಗೇ ನನ್ನ ನಂಟು, ಭಾವನಾ ಲೋಕದಲ್ಲಿ ವಿಹರಿಸುತ್ತಿದ್ದರೂ ವಾಸ್ತವದಲ್ಲಿ ಒಂದಾಗುವ ಹೃದಯದ ಮಿಡಿತ, ಮಾತುಗಳಲ್ಲಿರದ ಆಕರ್ಷಣೆ ಆ ಮೌನ ಆರ್ದ್ರ ನೋಟಗಳಲ್ಲಿ ಕಂಡುಬರುವುದೇನು ಸಾಮಾನ್ಯವೇ ವಿಷಯವೇ..?. ಕೆಲವೊಂದು ಸಲ ನಿನ್ನ ಮಾತುಗಳು ನನ್ನ ಕರ್ಣ ಪಟಲವನ್ನು ದಾಟಿ, ಭಾವ ತಂತುಗಳ ವರೆಗೂ ಮುಟ್ಟಿ ಅಲ್ಲಿ ಸೂಕ್ಷ್ಮ ತರಂಗ ಗಳನ್ನೇ ಉಂಟುಮಾಡುತ್ತದೆ. ಹೀಗೆ ನಿನ್ನ ಮಾತಿಗೆ ಒಮ್ಮೆ ಆಶ್ಚರ್ಯ ಪಡುತ್ತ, ಬೆರಗಾಗುತ್ತ, ಮತ್ತೊಮ್ಮೆ ಆ ಮಾತು ನನಗೆ ಪ್ರಶ್ನೆಯಾಗುತ್ತ ಮಗದೊಮ್ಮೆ ಉತ್ತರವಾಗುತ್ತ ಎಷ್ಟೋ ಸಲ ಆ ಮಾತಿಗೆ ನಾನೇ ಭಾವವಾಗುತ್ತಾ ನನ್ನ ಮುಗ್ಧ ಪ್ರಪಂಚ ವಿಸ್ತಾರವಾಗುತ್ತಿದೆ. ಕೆಲವಕ್ಷರಗಳ ಸಂದೇಶಕ್ಕೆ ಇಡೀ ಜೀವಿತವನ್ನೇ ತೆರೆದಿಡುವ ಶಕ್ತಿ, ಹೃದಯದೊಂದರ್ಧ ಚಡಪಡಿಸಿದಾಗ ಮತ್ತೊಂದರ್ಧ ದಲ್ಲಿ ಏನೋ ತಳಮಳ, ಒಂದರ ನೋವು ಮತ್ತೊಂದು ಕಣ್ಣಲ್ಲಿ ನೀರು ತರಿಸುವುದೇಕೋ, ಇಲ್ಲಿ ಬಾಹ್ಯ ಮಿಲನವೇ ಇಲ್ಲ ಅದರ ವಾಂಛೆಯೂ ಇಲ್ಲ,ಆತ್ಮಗಳ ವಿರಹದ ಬೇಗೆ ಮಾತ್ರ ಸುಡುವಂತಿದೆ, ಇಹದ ಮಿಲನದ ಹಂಗಿಲ್ಲದವರ ಸಾಲಲ್ಲಿ ಶೂನ್ಯ ಏಕಾಂತದ ಜೊತೆಯಾಗಿದೆ, ಭಾವನೆಗಳ ಮಿಲನ ಹೃದಯಕ್ಕೆ ನಿಷ್ಕಳಂಕ ಸ್ನೇಹದ ಗರ್ಭದಾನ ಮಾಡಿ, ಭಾವಲೋಕದಲ್ಲೊಂದು ಮುಗ್ಧ ಶಿಶು ಜನಿಸಿದೆ…!

atma-sangatha-criket

ಆ ಶಿಶು ನಮ್ಮೊಳಗಿನ ಅನೂರವಾದ ಸ್ನೇಹ. ನಿನಗೆ ಗೊತ್ತಾ… ? ನನ್ನನ್ನು ನಿನ್ನನ್ನೂ ಹುಟ್ಟಿನಿಂದಲೇ ಬೆಸೆಯಲಾಗಿತ್ತು. ನಿನ್ನದೇ ಮುಂದುವರಿಕೆ ನಾನು ಅಥವಾ ನನ್ನದೇ ಮುಂದುವರಿಕೆ ನೀನು.. ಅಂದು ನಿಮ್ಮೂರಲ್ಲಿ ಸಿಹಿ ಹಂಚಲಾಗಿತ್ತು. ನಿನ್ನಪ್ಪ ರಾಜಗಾಂಭೀರ್ಯದಿಂದ ರಾಜಕುಮಾರಿಯನ್ನು ದಿಟ್ಟಿಸಿ ಸಂಭ್ರಮಪಟ್ಟಿದ್ದ. ನಮ್ಮನೆಯಲ್ಲೂ ಅಷ್ಟೇ, ಅಜ್ಜಿಗೆ ಮೊದಲ ಮೊಮ್ಮಗ, ಸಿಹಿ ಹಂಚಿದ ಅಪ್ಪನ ಮೊಗದ ಮಂದಹಾಸದಲ್ಲೊಂದು ಅನುಶ್ವರವಾದ ಸಂತಸವೊಂದಿತ್ತು. ನೀನು ನನಗಿಂತಲೂ ಮುಂಚೆ ಅಂಬೆಗಾಲಿಡಲು, ದೇಕಲು, ಕುಳಿತುಕೊಳ್ಳಲು, ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ನಡೆಯಲು ಆರಂಭಿಸಿದ್ದೆ. ಆಮೇಲೆ ಶಾಲೆ ಮದ್ರಸಾ.. ನಮ್ಮೆಲ್ಲ ಮಗುತನವ ಕೊಂಚ ಕೊಂಚವೇ ಕಳೆದುಕೊಳ್ಳಲು ಆರಂಭವಾಯ್ತು. ನಾನು ಸ್ಕೂಲ್ ಕಳ್ಳ, ಊರ ಗುಡ್ಡದ ಮೇಲಿನ ಸರ್ಕಾರಿ ಶಾಲೆ ನಂಗೆ ಅವಾಗ ಭೂತ ಬಂಗಲೆ. ಒಂದನೇ ತರಗತಿಗೆ ಹೋದದ್ದೇ ಕಮ್ಮಿ. ಅಮ್ಮ ಎಷ್ಟು ಸಲ ಅಟ್ಟಾಡಿಸ್ಕೊಂಡು ಹೋಗಿದ್ರು ಗೊತ್ತ?. ಹಾಗೆ ಓಡಿಸುವಾಗ ದಾರಿ ಬದಿಯ ಬಳ್ಳಿ ಗಿಡದ ಬೆತ್ತದ ರುಚಿ ತೀರ ರುಚಿಸುತ್ತಿರಲಿಲ್ಲ. ನೀನು ಅಷ್ಟೇ ಪೆಚ್ಚು ಮೊರೆ ಹಾಕಿ ಇಷ್ಟಗಲ ಬೊಚ್ಚುಬಾಯಿ ಅಳು, ಅಮ್ಮನಿಂದ ಬೆನ್ನಿಗೆರಡು ಸಿಕ್ರೇನೆ ಶಾಲೆ ದಾರಿ ನೆನಪಾಗೋದು.

atma-sangatha-scooterನಿನ್ನ ಮದ್ರಸಾ ಉಸ್ತಾದರ ಕೈಯಲ್ಲಿ ನಿಮ್ಮಪ್ಪ ಕೊಟ್ಟ ನಾಗರ ಬೆತ್ತ ನಿನಗೆ ದಿಗಿಲು ಹುಟ್ಟಿಸುತ್ತಿತ್ತು. ಅರ್ದ ಉರು ಹೊಡೆದ ಪಾಠಗಳನ್ನೂ ಕನವರಿಸುತ್ತಿದ್ದೆ ಅಂತ ನಿನ್ನಮ್ಮ ಹೇಳ್ಕೊಳ್ತಾ ಇದ್ರು. ಶಾಲೆಯಿಂದ ಬರುವಾಗ ಇದ್ದ ಸಿಟ್ಟೆಲ್ಲ ದಾರಿಯಲ್ಲಿರುವ ಕಮ್ಮ್ಯುನಿಷ್ಟ್ ಗಿಡದ ಮೇಲೆ ತೀರಿಸ್ಕೊಳ್ತಿದ್ವಿ. ಒಂದು ಬೆತ್ತ ಹಿಡಿದು ಓದಿದ್ಯಾ..? ಉತ್ತರಕೊಡು.. ಅಂತ ಪ್ರಶ್ನೆ ಕೇಳಿ ಅದರ ತಲೆ ಹಾರಿಸ್ತಿದ್ದೆವು. ಕೋಪ ಹೆಚ್ಚಿದರೆ ಅದು ನುಚ್ಚು ನೂರು. ಮನೆಗೆ ತಲುಪಿದವಳೇ ಆಡು ಮರಿಯನ್ನೆತ್ತಿ ಮುದ್ದು ಮಾಡಿ ಮಡಿಲಲ್ಲಿ ಕುಳ್ಳಿರಿಸಿ ತಲೆ ನೇವರ್ಸ್ತಿದ್ದೆ. ನಾನಿಲ್ಲಿ ನನ್ನ ಮುದ್ದು ಬೆಕ್ಕು ಮರಿಗೆ ಹಾಲೆರಿತಿದ್ದೆ. ಅದು ಕಣ್ಣು ಮುಚ್ಚಿ ಕುಡಿಯೋದನ್ನ ನೋಡುವುದೇ ಸಂಭ್ರಮ. ಆಮೇಲೆ ಚಿಣ್ಣಿ – ದಾಂಡು, ಲಗೋರಿ, ಕ್ರಿಕೆಟ್, ನಿನ್ನ ಕುಂಟೆ ಬಿಲ್ಲೆ, ಜೋಕಾಲಿ, ಹೆಸರು ಗೊತ್ತಿಲ್ಲದ ಆ ಕೈಯಲ್ಲೇ ಕಲ್ಲನ್ನು ಆಡಿಸುವ ಆಟ, ಸ್ಟಾಚ್ಯೂ, ಕಲರ್ ಕಲರ್ ವಾಟರ್ ಕಲರ್, ಕಳ್ಳ ಪೋಲಿಸ್, ಮನೆಯಿಂದ ಕದ್ದು ತಿಂದ ಮಿಲ್ಕ್ ಪೌಡರ್, ಬೆಲ್ಲ, ಹಾರ್ಲಿಕ್ಸ್ … ಇನ್ನೇನೋ. ಪಕ್ಕದ ಮನೆಯ ಇಕ್ಕುನೊಂದಿಗೆ ಸೇರಿ ಬೀಡಿ ಎಳೆದದ್ದು, ಮೂಗಲ್ಲಿ ಹೊಗೆ ಬಿಡಲು ಹೋಗಿ ಕೆಮ್ಮು ಬಂದು ಅರ್ಧಕ್ಕೆ ಬಿಸಾಡಿದ್ದು, ರಾತ್ರಿ ಪೂರ ಹೊಟ್ಟೆಯಿಂದ ಹೊಗೆಯ ವಾಸನೆಗೆ ಕೆಮ್ಮಿ ಕೆಮ್ಮಿ ಸುಸ್ತಾದ್ದು. ಅದೆಲ್ಲ ಗೊತ್ತಾಗಿ ಅಲ್ಲಿಂದಲೇ ಗೊಳ್ಳೆಂದು ನಕ್ಕಿದ್ದೆ ನೀನು. ನನಗಿಲ್ಲಿ ಸಂಜೆ ತೋಟದ ಬದಿಯ ತೊರೆಯ ಸ್ನಾನದ ಮಜಾನೆ ಬೇರೆ ಇತ್ತು. ನಿನಗಲ್ಲಿ ಅಮ್ಮ ಹತ್ತು ಬಾರಿ ಕೂಗ್ಬೇಕು ನಿನ್ನ ಸ್ನಾನಕ್ಕೆ. ಅದರಲ್ಲೂ ಸೋಂಬೇರಿ ನೀನು!. pithooರಾತ್ರಿಯ ಅಜ್ಜಿ ಕತೆಯ ರಕ್ಕಸರು ನಿನಗೆ ಕೊಟ್ಟಷ್ಟೇ ಹೆದರಿಕೆ ನಂಗೂ ಕೊಟ್ಟಿತ್ತು. ಅದ ಕೇಳಿ ಬಚ್ಚಲು ಮನೆಗೆ ಹೋಗಲು ಭಯ ಅಲ್ವಾ … ?. ಬಾಲಮಂಗಳದ ಡಿಂಗ ಲಂಬೋದರ ನಿನಗೆಷ್ಟು ಇಷ್ಟವೋ ನಂಗೂ ಅಷ್ಟೇ ಇಷ್ಟ ಆಗಿದ್ರು. ನೀನಲ್ಲಿ ಮಾವಿನ ಮಿಡಿಯನ್ನು ಕದ್ದು ತಂದ ಉಪ್ಪಿನೊಂದಿಗೆ ತಿನ್ನುವಾಗ ಇಲ್ಲಿ ನನ್ನ ಬಾಯಲ್ಲಿ ನಿರೂರಿತ್ತು. ಅಪ್ಪನ ಸ್ಕೂಟರ್ ಮೇಲೆ ಕೂತ್ಕೊಂಡು ಅಂಬಾರಿ ಮೇಲೆ ಕೂತಂತೆ ಆದ್ಕೊತ್ತಿದ್ದೆ ನೀನು. ನಂಗೆ ಸಿರಾಜನ ಕೈಯಲ್ಲಿದ್ದ ಸೈಕಲ್ ನೋಡುವುದೇ ಕುಶಿ. ಶಾಲಾ ಟೂರ್-ಗೆ ನೀನು ನಿಮ್ಮ ಶಾಲೆಯ ಹೆಸರು ಹಾಕಿ ಪ್ರವಾಸಕ್ಕೆ ಶುಭವಾಗಲಿ ಅಂತ ಬರೆದು ಬಸ್ಸಿಂದಲೇ ಹಾರಿಸಿದ ಚೀಟಿ ನಮ್ಮೂರಿನ ರಸ್ತೆಯಲ್ಲಿ ಸಿಕ್ಕಿತ್ತು. ನಿನ್ನ ದುಂಡು ಅಕ್ಷರ ಎಷ್ಟು ಚೆಂದ ಗೊತ್ತಾ..?. ನೀನಲ್ಲಿ ನಿನ್ನಬ್ಬನ ಜೊತೆ ಸೇರಿ ಊಟ ಮಾಡುವಾಗ ನಾನು ಕೂಡಾ ಉಪ್ಪನೊಟ್ಟಿಗೇ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದೆ. ದೂರದರ್ಶನ ಬಂದ ಮೇಲಂತು ಶಕ್ತಿಮಾನ್ ನಮಗೆ ಹೀರೋ ಆಗಿದ್ದ. ದಿ ಗ್ರೇಟ್ ಡಾಕ್ಟರ್ ತಮ್ರಾಜ್ ಕಿಲ್ವಿಶ್ ಕರ್ಕಶವಾಗಿ “ಅಂಧೇರಾ ಖಾಯಂ ರಹೇ ..” ಅನ್ನುವಾಗ ನೀನಲ್ಲಿ ಕಂಪಿಸುತ್ತಿದ್ದೆ. ನಾನಿಲ್ಲಿ ಅದನ್ನು ನೋಡಿ ಮುಸಿ ಮುಸಿ ನಗುತ್ತಿದ್ದೆ. ಆಮೇಲೆ ರಾತ್ರಿಯ ಚಿತ್ರಗೀತ್ ‘ಸುರಾಗ್’ ಇಬ್ರು ಬಿಡದೆ ನೋಡ್ತಿದ್ದೆವು. ಬದುಕು ಸಾಗುತ್ತಿತ್ತು. ನಮ್ಮೆಲ್ಲ ಮಗುತನವನ್ನು ಅಳಿಸಿ … ನಂತರ ಹೈಸ್ಕೂಲು, ಪಿಯೂಸಿ, ಡಿಗ್ರಿ…. ಇಲ್ಲೇಲ್ಲವೂ ನಮ್ಮಿಬ್ಬರ ಅಭಿರುಚಿಗಳು kabaddiಸಮಾನವಾಗಿತ್ತು. ದೂರದೂರವಿದ್ದರೂ ಯಾವುದೊ ಅಗೋಚರ ಶಕ್ತಿ ನಮ್ಮನ್ನು ಅವಿನಾಭಾವವಾಗಿ ಬೆಸೆದಿತ್ತು. ಬೆಳೆಯುತ್ತ ಬೆಳೆಯುತ್ತಾ ಇಂದಿನ ನಾವಾಗಿದ್ದೇವೆ. ಎರಡು ದೇಹ ಎರಡು ಹೃದಯ, ಅದರ ತುಡಿತ ಮಿಡಿತ ಒಂದೇ… ಒಂದೇ ಮನಸ್ಸು. ನಾನು ಏನಾಗಿತ್ತೋ ನೀನೂ ಅದೇ ಆಗಿದ್ದೆ. ಮೌನ ಕಣಿವೆಯಲ್ಲಷ್ಟೇ ನನ್ನ ಭಾವನೆಗಳು ಗುಪ್ತಗಾಮಿನಿಯಾಗಿ ಹರಿಯುತ್ತದೆ. ಬೇರೆಲ್ಲೂ ಅದು ತೆರೆದುಕೊಳ್ಳುವುದಿಲ್ಲ. ನಿರ್ದಿಷ್ಟ ಗಡಿಯೊಳಗಷ್ಟೇ ಅದು ಚಲಾವಣೆಗೊಳ್ಳುತ್ತದೆ. ಬಹುಶಃ ಈ ತರದ್ದೊಂದು ಗಡಿಯಿಟ್ಟು ಕೊಂಡವರಿಗಷ್ಟೇ ಪರಸ್ಪರ ತುಡಿತ, ಆತಂಕ, ಅಭೀಪ್ಸೆಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇರಬಹುದು. ಹಾಗಾಗಿಯೇ ಇವತ್ತಿನ ಈ ಕ್ಷಣದವರೆಗಿನ ನಮ್ಮ ಆತ್ಮೀಯತೆ ಈ ಮಟ್ಟಕ್ಕೆ ಬಂದು ನಿಂತದ್ದು.

ನೀನು ಅಂತರಾತ್ಮದಲ್ಲಿ ಸೃಜಿಸುವ ಜೀವಕಲೆ.. ನನ್ನ ಮುಂಜಾನೆಯಲ್ಲೂ ಮುಸ್ಸಂಜೆಯಲ್ಲೂ ಉಸಿರಿಗೆ ಜೀವನ್ಮುಖೀ ಭಾವತುಂಬಿ ಎದೆಯ ಶೂನ್ಯ ಬಟ್ಟಲ ತುಂಬಿಕೊಡುವ ಆವರ್ತ ಮಳೆ. ಎದೆ ಬಯಲಲಿ ಹೂ ಬಿಡುವ ಮಧುರ ಭಾವಗಳ ಒರತೆಯ ಮೂಲ ಸೆಲೆ. ಇನ್ನು ಯಾವ ಪರದೆಯೂ ಪರಿಧಿಯೂ ಇಲ್ಲ(ಬೇಡ).. ಆತ್ಮ ಸಂಗಾತ ನೀನು… ಆತ್ಮದೊಳಗಿಂದ ಭರವಸೆಯ ಕಿಡಿಗೆ ನಿನ್ನದೇ ಹೆಸರಿದೆ, ಉಸಿರಿದೆ.. ಬಾ.. ನೀನೊಮ್ಮೆ ಸಾಗರವಾಗು… ನದಿಯಾಗಿ ಹರಿದು ನಿನ್ನಲ್ಲೇ ಲೀನವಾಗಬೇಕು.. ನನ್ನ ಅಸ್ತಿತ್ವವೇ ಇಲ್ಲದ ಹಾಗೆ… ಅದರಲ್ಲೇ ಹೆಚ್ಚು ಖುಷಿ ನನಗೆ.

~ಹುಸೇನಿ

Leave a comment

ಕಾಡುವ ಹನಿಗಳು · ನೆನಪಿನ ಸಂಚಿ - ಹತ್ತು ಲಕ್ಷ ದಾಟಿದ ಓದುಗರು · ನೆನಪಿನ ಹನಿ · ನ್ಯಾನೋ ಕಥೆಗಳು · ಬಿಂದು · ಬಿರಿಯದ ಮೊಗ್ಗು · ಮತ್ತೆ ಸಂಜೆಯಾಗುತ್ತಿದೆ.. · ಮನಸಿನ ಹಾ(ಪಾ)ಡು · ಸಣ್ಣ ಕತೆ · ಹುಸೇನಿ_ಪದ್ಯಗಳು

ನೆನಪಿನ ಸಂಚಿ – ಹತ್ತು ಲಕ್ಷ ದಾಟಿದ ಓದುಗರು !!

nenapinasanchi 10 lacks readres
ಒಂದು ಖುಷಿಯ ವಿಚಾರ ನಿಮಗೆ ಹೇಳೋದೇ ಮರೆತು ಹೋಯ್ತು.. ಅದೇನೆಂದರೆ ನನ್ನ ಅಸಂಬದ್ಧ ಅಲಾಪಗಳ “ನೆನಪಿನ ಸಂಚಿ” ಬ್ಲಾಗ್ ಓದುಗರ ಸಂಖ್ಯೆ ಬರೋಬ್ಬರಿ 1 0 0 0 0 0 0 [ಹತ್ತು ಲಕ್ಷ] ದಾಟಿದೆ. ನನ್ನೆಲ್ಲಾ ಖುಷಿ, ಆದ್ವಾನ, ಸಂಕಟ , ತಳಮಳ, ಕ್ಷುಲ್ಲಕತನ, ಒಂಟಿತನ, ಸೋಲಿನ ಅಂಚಿನ ಗೆಲುವು, ಪ್ರೇಮ ಮುಂತಾದ ಮನುಷ್ಯ ಸಹಜ ಅವಸ್ಥೆಗಳಲ್ಲಿ ಮೂಡಿದ ಭಾವವನ್ನು ಅಕ್ಷರವಾಗಿಸಿ ಗುಡ್ಡ ಹಾಕಿರುವ ನನ್ನದೇ ಮನಸ್ಸಿನ ಪ್ರತಿಫ಼ಲನದ ಪುಟಗಳವು . ಬಹುಶಃ ನಿಮ್ಮ ಎದೆಯ ಹಾಡು ಕೂಡ ಅದೇ ಆಗಿದ್ದರಿಂದ ಏನೋ ನಾಲ್ಕೈದು ವರ್ಷಗಳ ಹಿಂದೆ ನಾನು ಆರಂಭಿಸಿದ್ದ ಬ್ಲಾಗ್ ಈ ಮಟ್ಟಕ್ಕೆ ಬೆಳೆದಿರುವುದು. ಮುಂಚೆಲ್ಲಾ ಕವಿತೆಗಳಲ್ಲಿ ಮುಳುಗಿ ಹೋಗುವ ಜಾಯಮಾನ ನನ್ನದು. ಬದುಕಿನ ಆದ್ಯತೆಗಳು ಬದಲಾದಂತೆಲ್ಲಾ ನನ್ನನ್ನು ನಾನೇ ಕಳೆದುಕೊಂಡಿದ್ದೀನಿ ಅನಿಸಿತ್ತದೆ.
ಅನಿಸಿಕೆಗಳಿಗಿಂತ ಹೆಚ್ಚಾಗಿ ಆ ದಿನ , ಆಕ್ಷಣ ಆ ಘಟನೆ, ಆ ವಸ್ತುವಿನ ಬಗ್ಗೆ ನನ್ನ ಬರಹಗಳು ಹೆಚ್ಚಾಗಿ ಮಾತನಾಡುವುದರಿಂದ ಏನೋ ಕಾವ್ಯಾತ್ಮಕ ಅಲ್ಲದ ಹಲವು ಬರಹಗಳು ನೀವಲ್ಲಿ ಕಾಣಬಹುದು. ಎಲ್ಲದಕ್ಕೂ ಅತೀತವಾಗಿ ಕಾಡುವ ಬದುಕು, ಬಾಲ್ಯ, ಆ ತೊರೆ ತೀರದ ನೆನಪುಗಳು, ಸಮುದ್ರ, ತೀರ ಹೆಚ್ಚಾಗಿ ಬಂದು ಹೋಗುತ್ತದೆ. ಒಂದಷ್ಟು ಹನಿಗಳು, ಕವಿತೆಗಳು(?), ನ್ಯಾನೋ ಕಥೆಗಳು, ಸಂಧ್ಯಾಲಾಪಗಳು… ಮತ್ತೊಂದಿಷ್ಟು ಕಾಡುವ ಬದುಕು.. ಇದು ನಿಮ್ಮದೇ “ನೆನಪಿನ ಸಂಚಿ”.
ಪ್ರೀತಿಯ ಓದುಗರಿಗೆ ಮನದಾಳದ ಅನಂತ ಧನ್ಯವಾದಗಳು

ನಿಮ್ಮವನೇ,
ಹುಸೇನಿ ~

ನಿಮ್ಮ ನಲ್ನುಡಿ

ತೊರೆಯ ತೀರದ ನೆನಪುಗಳು · ವೊಹ್ ಕಾಗಝ್ ಕಿ ಕಷ್ತಿ ವೊಹ್ ಬಾರಿಶ್ ಕಾ ಪಾನೀ.. · ಸಣ್ಣ ಕತೆ · ಹುಸೇನಿ ಬರಹಗಳು

ವೊಹ್ ಕಾಗಝ್ ಕಿ ಕಷ್ತಿ ವೊಹ್ ಬಾರಿಶ್ ಕಾ ಪಾನೀ..

kagaj-1

ಕೆಲವೊಮ್ಮೆ ಎಲ್ಲದಕ್ಕೂ ಅತೀತವಾಗಿ ಬದುಕು ಕಾಡುತ್ತದೆ. ಅಪರಾತ್ರಿಗಳಲ್ಲಿ ಎದ್ದು ಕೂರುತ್ತೇನೆ, ಸಾಂತ್ವನಕ್ಕೆ ಮತ್ತದೇ ಹೆಂಚಿನ ಮನೆ, ಅಡಿಕೆ ತೋಟ, ಅದರಾಚೆಗಿನ ತೋಡು, ತೋಡು ಬದಿಯ ಪೇರಳೆ ಮರಗಳು, ಮಾವಿನ ಮರ, ಹಲಸಿನ ಮರ , ಕೊಕ್ಕೋ ಮರ, ಸೀತಾಫಲ, ನೇರಳೆ… ಪಕ್ಕದಲ್ಲೇ ಇರುವ ಆಟದ ಬಯಲು, ಅಡಿಕೆ ಗರಿಯ ಬ್ಯಾಟು, ರಬ್ಬರ್ ಚೆಂಡು, ಕೊಡ ತುಂಬಾ ನೀರು, ಆ ಉರಿ ಬಿಸಿಲು… ಆ ಹರಿದ ಬ್ಯಾಗು, ಬಟನ್ ಇರದ ಬಿಳಿ ಅಂಗಿ, ಕಲರ್ ಮಾಸಿ ಹೋದ ನೀಲಿ ಚಡ್ಡಿ, ಕಂಠಪಾಠದ ಮಗ್ಗಿ… ಇವೆಲ್ಲ ಬೇಕೆನಿಸುತ್ತದೆ. ದೊಡ್ದವನಾದಂತೆ ಬಾಲ್ಯಕ್ಕೆ ಮರಳುವ ಅಧಮ್ಯ ತುಡಿತ, ಇಷ್ಟು ವರ್ಷದ ಒಡನಾಟದ ನಂತರವೂ ಈ ಮೆಟ್ರೋ ಸಿಟಿಯು ನನಗೆ ಆಪ್ತವಾಗಲಿಲ್ಲ. ಇಲ್ಲಿರುವುದೆಲ್ಲವೂ ನನ್ನದಲ್ಲ ಎಂಬ ಕೊರಗು, ಅಥವಾ ಈ ಅತಿವೇಗಕ್ಕೆ ಒಗ್ಗಿಕೊಂಡ ಬದುಕಿನೊಂದಿಗಿರುವ ಅಸಮಾಧಾನ. ಇಲ್ಲಿಗೆ ಸಲ್ಲುವುದೇ ಇಲ್ಲ ನಾನು. ಒಂಟಿಯಾದಂತೆಲ್ಲ ಮತ್ತಷ್ಟು ಆಳದ ಪಾತಾಳಕ್ಕೆ ಇಳಿಯುತ್ತೇನೆ. ಅಲ್ಲಿ ಮೌನದ ಕಿವಿಗುಚ್ಚುವ ಕರಾಡತನ ಮತ್ತಷ್ಟು ಅಸಹನೀಯವೆನಿಸುತ್ತದೆ. ವ್ಯಾಕುಲಚಿತ್ತ ಮನಸ್ಸು ಮತ್ತೆ ಹಂಬಲಿಸುವುದೊಂದೇ .. ವೊಹ್ ಕಾಗಝ್ ಕಿ ಕಷ್ತಿ.. ವೊಹ್ ಬಾರೀಶ್ ಕ ಪಾನಿ.
kagaj-2
ಖುಷಿ ತಾನಾಗಿ ಒಲಿಯುವ ಬಾಲ್ಯಕ್ಕೂ, ಖುಷಿಯನ್ನು ಹುಡುಕಿ ಹೋಗಬೇಕಾದ ಅನಿವಾರ್ಯತೆಯ ಈ ಕಾಲಕ್ಕೂ ತುಂಬಾ ವ್ಯತ್ಯಾಸವಿದೆ. ಬಾಲ್ಯವೆಂದರೆ ಬದುಕು ಹರಳುಗಟ್ಟುವ ಕಾಲ. ಅಲ್ಲಿನ ಆಟ, ಪಾಠ, ಮುಗ್ದತೆ, ಕುತೂಹಲ, ಭಯ, ತುಂಟಾಟ, ಮೋಜು, ಮಸ್ತಿಗಳೆಲ್ಲಾ ಖುಷಿಯನ್ನು ಮೊಗೆಮೊಗೆದು ಕೊಡುತ್ತವೆ. ಅಲ್ಲಿ ಖುಶಿಯಾಗಲು ನಿರ್ದಿಷ್ಟ ಕಾರಣ ಬೇಕಿಲ್ಲ. ಬೇಲಿ ಹಾರಿ ಗೇರು ಬೀಜ ಕದಿಯುವಾಗ ತೋಟದಾಳು ಬಂದು ಓಡಿಸಿದರೂ ಖುಷಿ, ನೆಲ್ಲಿಕಾಯಿ ಹುಡುಕಿ ಕಾಡೇರಿದಾಗ ಜಾರಿ ಬಿದ್ದು ಕಾಲಿಗೆ ಪೆಟ್ಟಾದರೂ ಖುಷಿ, ತಮ್ಮನಿಗೆ ಕೀಟಲೆ ಮಾಡಿ ಅಮ್ಮನಿಂದ ಬೆನ್ನಿಗೆರೆಡು ಸಿಕ್ಕರೂ ಖುಷಿ, ಊಟ ಮಾಡದ ಹಠದಲ್ಲಿ ಬರಸೆಳೆದು ಮುತ್ತುಗೆರೆದು ಅಮ್ಮನ ಕೈತುತ್ತಿನಲ್ಲಿ ಎಂಥಾ ಖುಷಿ, ಮನೆಲೆಕ್ಕ ಮಾಡದೆ ಟೀಚರ್ ಬೆತ್ತ ತೆಗ್ಯೋ ಮುನ್ನವೇ ಕೈ ಚಾಚುವಾಗ್ಲೂ ಖುಷಿ, ಸಂಜೆ ತೋಡಲ್ಲಿ ಹುಟ್ಟುಡುಗೆಯಲ್ಲಿ ಈಜಾಡುವಾಗಲೂ ಖುಷಿ, ಅಲ್ಲಿ ಪ್ರತೀ ಒಂದು ಕ್ಷಣವು ಖುಷಿಯ ವಾಗ್ದಾನದೊಂದಿಗೆ ಬರುತ್ತದೆ. ಆ ಖುಶಿಗಳನ್ನೆಲ್ಲ ಇಲ್ಲಿ ಎಲ್ಲಿ ಹುಡುಕಲಿ?. kagaj-3 ಹಬ್ಬದ ಹೊಸ ಉಡುಗೆಯನ್ನು ಮತ್ತೆ ಮತ್ತೆ ನೋಡಿ, ಮೂಸಿ, ಮೈ ಮೇಲೆ ಇಟ್ಟು ಕನ್ನಡಿ ನೋಡುವಾಗಿನ ಖುಷಿ ತಿಂಗಳಿಗೊಂದು ಖರೀದಿಸುವ ಬ್ರಾಂಡೆಡ್ ಡ್ರೆಸ್-ಗಳಲ್ಲಿ ಹೇಗೆ ಹುಡುಕಲಿ?, ಸ್ಕೂಲಿನ ಖಾಲಿ ಬೆಂಚಿನ ತುದಿಯಲ್ಲಿ ಕೂತು ಬೆಂಚನ್ನು ಮೇಲೆಕ್ಕೆತ್ತುವ ಖುಷಿ ಸಾಫ್ಟ್ವೇರ್ ಕಂಪೆನಿಗಳ ಅರಾಮಿ ಚೆಯರ್ಗಳಲ್ಲಿ ಹೇಗೆ ಹುಡುಕಲಿ?, ಗೇರು ಬೀಜದ ಮರ, ಮಾವಿನ ಮರಗಳಿಗೆ ಚಕಚಕನೆ ಹತ್ತಿ ಹಣ್ಣು ಕೊಯ್ಯುವ ಖುಷಿಯನ್ನು, ಹಿತ್ತಿಲಿನ ಮರಕ್ಕೆ ಹತ್ತಿ ಮಂಗನಾಟವಾಡಿದ ಖುಷಿಯನ್ನು, ಕರೆಂಟಿರದ ನಮ್ಮೂರ ಸರ್ಕಾರಿ ಶಾಲೆಯ ಮರದ ಕೆಳಗಿನ ಕನ್ನಡ ಪಾಠದ ಖುಷಿಯನ್ನು ಈ ಕಾಂಕ್ರೀಟ್ ಕಾಡಲ್ಲಿ ಎಲ್ಲಿ ಹುಡುಕಲಿ?, ಕ್ರಿಕೆಟ್ ಆಟದಲ್ಲಿ, ಬೆಟ್ಟ ಹತ್ತುವಾಗ, ಮಳೆನೀರಿನ ಪಾಚಿಗೆ ಜಾರಿ ಬಿದ್ದು ಏಟು ಮಾಡಿಕೊಳ್ಳುವ ಖುಶಿಯನ್ನು ಈ ಫುಟ್ಬಾತ್ ಮತ್ತು ಆಫೀಸ್ ಕಾರಿಡಾರ್ಸಲ್ಲಿ ಹೇಗೆ ಹುಡುಕಲಿ?, ಹೊಸ ಆಟಿಕೆಯ ಆಟದ ಮಧ್ಯೆ ಅದರೊಳಗೇನಿದೆ ಎಂಬ ಕುತೂಹಲಕ್ಕೆ ಜೋತು ಬಿದ್ದು ಬಿಚ್ಚಿಡುವ, ಮತ್ತೆ ಪೋಣಿಸಲಾಗದ ಖುಶಿಯನ್ನು ಈ ಲ್ಯಾಪ್ಟಾಪ್, ಡೆಸ್ಕ್ಟಾಪ್ ಮತ್ತು ಮ್ಯಾಕ್ ಗಳಲ್ಲಿ ಹೇಗೆ ಹುಡುಕಲಿ?, ಶಾಲೆಗೆ ಚಕ್ಕರ್ ಹಾಕುವ ನೆಪದ ಹೊಟ್ಟೆನೋವಿನ, ಅಮ್ಮನ ಕಹಿ ಕಷಾಯದ ಖುಷಿಯನ್ನು ರಜಕ್ಕೆ ಒಂದು ತಿಂಗಳು ಮುಂಚೆ ಹೇಳಬೇಕಾದ ಐಟಿ ಕಂಪೆನಿಯ ಹಾಲಿಡೇ ಮಾನೇಜ್ಮೆಂಟ್ಗಳಲ್ಲಿ ಹೇಗೆ ಹುಡುಕಲಿ?, ಸೈಕಲ್ ಚಕ್ರವೊಂದನ್ನು ಕೋಲಿನಲ್ಲಿ ಬಡಿಯುತ್ತಾ ರಸ್ತೆಯಲ್ಲಿ ಓಡಿಸಿದ್ದ ಖುಷಿಯನ್ನು, ಉಜಾಲದ ಬಾಟಲಿಗೆ ಚಪ್ಪಲಿಯ ಚಕ್ರ ಮಾಡಿ ಊರಿನ ಗಲ್ಲಿಗಳಲ್ಲಿ ಮೆರವಣಿಗೆ ಹೋದ ಖುಷಿಯನ್ನು ಕಂಪೆನಿ ಕ್ಯಾಬ್-ಗಳಲ್ಲಿ ಹೇಗೆ ಹುಡುಕಲಿ?, ಮನೆ ಮುಂದಿನ ಹುಳಿ ಮರದಲ್ಲಿ ಉಯ್ಯಾಲೆಯಾಡಿದ ಖುಷಿಯನ್ನು, ಮಣ್ಣಲ್ಲೇ ಜಾರುಬಂಡಿಯ ಖುಷಿಯನ್ನು ಈ ಮೆಟ್ರೋದ ಪಾರ್ಕುಗಳಲ್ಲಿ ಹೇಗೆ ಹುಡುಕಲಿ?, ಮಕ್ಕಳ ದಿನಾಚರಣೆಗೆ ಹಾಕಿದ ಬಣ್ಣ ಬಣ್ಣದ ವೇಷದ ಖುಷಿಯನ್ನು, ಈದ್ ಮಿಲಾದಿಗೆ ಊರ ಜನರ ಮುಂದೆ ಹಾಡಿದ ಖುಷಿಯನ್ನು ಇಲ್ಲಿನ ಇವೆಂಟ್ಸ್-ಗಳಲ್ಲಿ, ಫೌಂಡೇಷನ್ ಡೇಗಳಲ್ಲಿ ಹೇಗೆ ಹುಡುಕಲಿ?, ಜೇನು ಕೊಪ್ಪೆಗೆ ಕಲ್ಲು ಹೊಡೆದದ್ದು, ಗಿಳಿ ಗೂಡಿಗೆ ಇಣುಕಿ ನೋಡಿದ್ದು, ಪಾರಿವಾಳದ ಗೂಡಿಂದ ಮೊಟ್ಟೆ ಕದ್ದದ್ದು, ನಾಟಿ ಕೋಳಿಯ ಹಸಿ ಮೊಟ್ಟೆಯನ್ನು ಕುಡಿದದ್ದು, ಅಮ್ಮ ಕೆರೆದಿಟ್ಟ ಬಿಸಿ ಹಸು ಹಾಲನ್ನು ಕುಡಿದದ್ದು, ಅಂಗಳದಲ್ಲಿ ಮನೆ ಮಾಡಿದ್ದು, ಮದುವೆ ಮಾಡಿ ಆಡಿದ್ದು, ಮಣ್ಣುಂಡೆ ಮಾಡಿ ಹಂಚಿದ್ದು, ಮಾವಿನ ಮಿಡಿಯನ್ನು ಉಪ್ಪಿನೊಂದಿಗೆ ಮುಕ್ಕಿ ತಿಂದದ್ದು, ಬೆಕ್ಕಿನ ಮರಿಗೆ ರಟ್ಟಿನ ಮನೆ ಮಾಡಿ ಕೊಟ್ಟದ್ದು, ಕಳ್ಳ ಪೋಲೀಸ್ ಆಟದಲ್ಲಿ ಮೋಸ ಮಾಡಿದ್ದು, ಮಕ್ಕಳನ್ನೆಲ್ಲ ಸಾಲಾಗಿ ಅಂಗಿಯ ತುದಿಗೆ ಹಿಡಿಯಲು ಹೇಳಿ ಬಸ್ ಆಟದಲ್ಲಿ ಡ್ರೈವರ್ ಆದದ್ದು, ಮಳೆಗಾಲದಲ್ಲಿ ನೀರಲ್ಲಿ ಮಜಾ ಮಾಡಿದ್ದು, ರಾತ್ರಿ ಕಾಲು ಹುಳ ತಿಂದ ನೋವಿಗೆ ಅತ್ತಿದ್ದು, ಜೋರು ಗಾಳಿಗೆ ಕೊಡೆ ಹಿಮ್ಮುಖವಾದಾಗ ಅದರಲ್ಲಿ ನೀರು ತುಂಬಿದ್ದು… ಈ ಖುಶಿಗಳನ್ನೆಲ್ಲ ಇಲ್ಲಿ ಹೇಗೆ ಹುಡುಕಲಿ ?. ಅದೆಲ್ಲಕ್ಕಿಂತ ಹೆಚ್ಚಾಗಿ ಅಮ್ಮನ ಎದೆಗೂಡಿನ ಕಾವಿನ ಖುಶಿಯನ್ನೂ, ಮಡಿಲ ಸಾಂತ್ವನದ ಖುಶಿಯನ್ನೂ ಇಲ್ಲಿ ಹೇಗೆ ಹುಡುಕಲಿ?.

ಮನ ಬಾಲ್ಯದ ಓಣಿಯೇರಿದಾಗ ಎಲ್ಲೆ ಮೀರಿ ಚಡಪಡಿಸುತ್ತದೆ. ಯಾವ ಚಿಂತೆ,ನಿರೀಕ್ಷೆ ,ಅಸೆ ಏನೂ ಇಲ್ಲದೆ ಬಂಧನ ವಿಲ್ಲದೆ ಹಾರಾಡುತ್ತ ಕಳೆದ ಆ ದಿನಗಳು…
ನಾ ದುನಿಯಾಂಕ ಗಮ್ ಥಾ.. ನಾ ರಿಶ್ತೊಂಕೆ ಬಂಧನ್ ಬಡೀ ಖೂಬ್ ಸೂರತ್ ಥಿ ವೋ ಝಿಂದಗಾನಿ…
ಈಗಿನ ಸುಂದರ ಮುಖವಾಡದ, ಕೃತಕ ನಗುವಿನ, ಜವಾಬ್ದಾರಿಗಳ ಕುಲುಮೆಯಲ್ಲಿ ಪ್ರತೀದಿನ ನರಳಬೇಕಾದ, ನನಸಾಗದ ಕನಸುಗಳ ಬೆನ್ನೇರಿ ಓಡುವ ಹುಂಬತನದ ಯವ್ವನ ಉಸಿರುಗಟ್ಟಿಸುವಾಗ ಮತ್ತೆ ಕವಿವಾಣಿ ನೆನಪಾಗುತ್ತದೆ…
ಯೆ ದೌಲತ್ ಭಿ ಲೇಲೋ, ಯೆ ಶುಹ್ರತ್ ಭಿ ಲೇಲೋ, ಭಲೇ ಛೀನ್ ಲೋ ಮುಜ್ಹ್ ಸೇ ಮೇರೀ ಜವಾನೀ , ಮಗರ್ ಮುಜ್ಹ್ ಕು ಲೌಟಾದೋ ಬಚ್ಪನ್ ಕಾ ಸಾವನ್, ವೊಹ್ ಕಾಗಜ್ ಕಿ ಕಶ್ತೀ ವೊಹ್ ಬಾರಿಶ್ ಕಾ ಪಾನೀ”

ಹುಸೇನಿ ~

Leave a comment

ಅಮ್ಮಂದಿರ ಕಥೆ · ನ್ಯಾನೋ ಕಥೆಗಳು · ಸಣ್ಣ ಕತೆ

ಅಮ್ಮಂದಿರ ಕಥೆ

mothers-love-julie-reyes
೧)
ಆಗ ನಾನು ಬೆಂಗಳೂರಿನ ಬ್ರಿಗೇಡ್ ರೋಡ್ ಪಕ್ಕ ಮೆಟ್ರೋ ಸಿಟಿ ಲೋಡ್ಜಲ್ಲಿ ಗೆಳೆಯನೊಂದಿಗೆ ವಾಸವಾಗಿದ್ದೆ. ಅಡುಗೆ ಮಾಡಲು ಅಸಾಧ್ಯವಾದ್ದರಿಂದ ಮೂರು ಹೊತ್ತು ಹೊರಗಡೆಯಿಂದಲೇ ಊಟ. ಅದನ್ನು ತಿಂದು ತಿಂದು ಸುಸ್ತಾದ ನಮಗೆ ಇನ್ನೇನು ಬರಲಿರುವ ರಂಜಾನ್ ತಿಂಗಳ ಊಟದ ಬಗ್ಗೆ ತುಂಬಾ ಗೊಂದಲವಿತ್ತು. ರಂಜಾನ್ ತಿಂಗಳಲ್ಲಿ ಬೆಳ್ಳಂ ಬೆಳಿಗ್ಗೆ ೪ ಗಂಟೆಗೆ ಎದ್ದು ಅತ್ತಾಳ(ಸಹರಿ) ಊಟ ಮಾಡ್ಬೇಕು. ಹೊರಗಡೆಯಿಂದ ರಾತ್ರಿಯೇ ತಂದಿದುವ ಯೋಜನೆ ನಮ್ಮದಾಗಿತ್ತಾದರೂ ನಮ್ಮೊಳಗೆ ಅಸಮಾಧಾನವಿತ್ತು.

ನಮ್ಮ ರೂಮಿನ ಪಕ್ಕದ ರೂಮಲ್ಲಿ ಒಬ್ಬರು ಮಲಯಾಳಿ ಚೇಚ್ಚಿ(ಅಕ್ಕ) ಅವರ ಗಂಡನೊಂದಿಗೆ ವಾಸವಗಿದ್ದರು. ತುಂಬಾ ಸೌಮ್ಯ ಸ್ವಭಾವದ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿತ್ವ ಅವರದು. ರಂಜಾನ್ ತಿಂಗಳ ಆರಂಭಕ್ಕೆ ಇನ್ನೇನು 2 ದಿನ ಇರುವಾಗ ಮಾತಿನ ಮದ್ಯೆ ನನ್ನ ಗೆಳೆಯ ಅತ್ತಾಳದ ಕಷ್ಟವನ್ನು ಅವರೊಂದಿಗೆ ಹಂಚಿಕೊಂಡಿದ್ದ. ಕೇರಳದ ತ್ರಿಶೂರಿನವರಾಗಿದ್ದ ಅವರ ನೆರೆಹೊರೆಯವರೆಲ್ಲರೂ ಮುಸ್ಲಿಮರೇ ಆಗಿದ್ದರಿಂದ ರಂಜಾನ್ ತಿಂಗಳ ಬಗ್ಗೆ ಅವರು ಚೆನ್ನಾಗಿ ಬಲ್ಲವರಾಗಿದ್ದರು. ಒಂದು ತಿಂಗಳ ನಮ್ಮ ಊಟದ ಸಂಪೂರ್ಣ ಜವಾಬ್ದಾರಿ ಅವರು ವಹಿಸಿಕೊಂಡರು. ರಾತ್ರಿ 11ರ ವೇಳೆಗೆ ಸಹರಿಯ ಊಟ ತಯಾರಾಗಿ ಬರುತ್ತಿತ್ತು. ಮನೆಯಿಂದ ದೂರವಿದ್ದು ತಾಯಿಯನ್ನು ಪ್ರತೀಕ್ಷಣ ಮಿಸ್ ಮಾಡ್ಕೊತ್ತಿದ್ದ ನಾನು ಅವರಲ್ಲಿ ಮತ್ತೊಬ್ಬಳು ತಾಯಿಯನ್ನು ಕಾಣುತ್ತಿದ್ದೆ.

೨)
ಅದೇ ಲಾಡ್ಜಲ್ಲಿ ತಂಗುತ್ತಿದ್ದ ಕಾಲ. ಅದೊಂದು ದಿನ ಭಾನುವಾರದ ಊಟ ಕೈ ಕೊಟ್ಟಿತು. ರಾತ್ರಿ ೨ ಗಂಟೆಗೆ ಹೊಟ್ಟೆಯಲ್ಲಿ ಅಸಹನೀಯ ನೋವು ಕಾಣಿಸಿಕೊಂಡಿತು. ಜೊತೆಗೆ ಫುಡ್ ಪೋಯ್ಸನ್ ಸೈಡ್ ಎಫೆಕ್ಟ್ಸ್. ಬೆಳಗಿನವರೆಗೂ ನಾನುಭವಿಸಿದ ‘ಯಾತನೆ’ ಅಷ್ಟಿಷ್ಟಲ್ಲ. ಹೇಗೋ ಬೆಳಗಾಯ್ತು. ರೂಂ ಮೇಟ್ ಅಂತೂ ಎದ್ದವನೇ ಆಫೀಸಿಗೆ ಹೋದ.

ಹೊಟ್ಟೆ ನೋವು ಕಡಿಮೆಯಾಗಿರಲಿಲ್ಲ. ಪಕ್ಕದ ರೂಮಿನಲ್ಲಿ ಸಮೀಪದ Hosmat ಆಸ್ಪತ್ರೆಗೆ ಟ್ರೀಟ್ಮೆಂಟ್ಗೆ ಪಶ್ಚಿಮ ಬಂಗಾಳದಿಂದ ಒಬ್ರು ಆಂಟಿ ಅವರ ಮಗಳೊಂದಿಗೆ ಬಂದಿದ್ರು. ೧೩ ವರ್ಷದ ಮಗಳಿಗೆ ಏನೋ ಆಪರೇಶನ್ ಅಗೊದಿತ್ತು. ಅವರು ಈ ಮೊದಲು ನಮ್ಮ ಲಾಡ್ಜಿಗೆ ಬಂದಿದ್ರಿಂದ ಅವರ ಪರಿಚಯ ಇತ್ತು. ಅವರಿಗೋ ಬೆಂಗಾಲಿ ಬಿಟ್ರೆ ಬೇರೆ ಯಾವ ಭಾಷೆನೂ ಬರುತ್ತಿರಲಿಲ್ಲ. ಆದರು ಮಾತನಾಡಿಸೋರು. ನನ್ನ ಅವಸ್ತೆಯನ್ನು ಕಂಡು ಮರುಗಿದ ಅವರು ಅದೇನೋ ಬೆಂಗಾಲಿ ಶೈಲಿಯ ಲಘು ಆಹಾರವನ್ನು ಅವತ್ತು ಮೂರು ಹೊತ್ತು ಮಾಡಿಕೊಟ್ರು. ಅಲ್ಲದೆ ಆಗಾಗ ನನ್ನ ರೂಮಿಗೆ ಬಂದು ಹೋಗುತ್ತಿದ್ದರು. ಎಲ್ಲಿಯ ಬಂಗಾಳ ಎಲ್ಲಿಯ ಕರ್ನಾಟಕ !, ಪರಸ್ಪರ ಮಾತನಾಡಲಾಗದೆ ಇದ್ದರು ಅವರು ನನ್ನನ್ನು ನೋಡಿಕೊಂಡ ರೀತಿ… ಜೀವನದಲ್ಲಿ ಮರೆಯುವ ಹಾಗಿಲ್ಲ. ತಾಯಿ ಮಗನ ಸಂಭಂದವೊಂದು ಅಲ್ಲಿ ಮೂಡಿತ್ತು, ಅಲ್ಲ.. ಅವತ್ತಿನ ಪಾಲಿಗೆ ನನ್ನ ತಾಯಿಯೇ ನನ್ನ ಬಳಿ ಇದ್ದರು.

೩)
ನಾನು ತಿರುವನಂತಪುರದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಜ್ವರ ಬಂದು ಮನೆಯಲ್ಲಿದ್ದವನು ಸುಧಾರಿಸಿಕೊಂಡು ಮತ್ತೆ ಹೊರಟು ನಿಂತು ಕಾಸರಗೋಡಿನಿಂದ ತಿರುವನಂತಪುರಕ್ಕೆ ಟ್ರೈನ್ ಹತ್ತಿದ್ದೆ. ರಾತ್ರಿಗೆ ಬೇಕಾದ ಆಹಾರ, ನೀರು ಎಲ್ಲವೂ ನನ್ನ ಬಳಿಯಿತ್ತು. ಟ್ರೈನ್ ಹತ್ತಿ ಕೂತು ಸ್ವಲ್ಪ ಸಮಯದಲ್ಲೇ ನಿದ್ದೆ ಆವರಿಸಿತ್ತು. ಎದ್ದು ನೋಡುವಾಗ ಮದ್ಯ ರಾತ್ರಿ!. ಎದ್ದು ಮುಖ ತೊಳೆದು ಬಂದು ಪಾರ್ಸೆಲ್ ಬಿಚ್ಚಿ ಊಟ ಮಾಡತೊಡಗಿದೆ. ಮಧ್ಯೆ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ನೀರಿನ ಬಾಟಲಿಗಾಗಿ ತಡಕಾದುವಷ್ಟರಲ್ಲಿ ತಿಳಿಯಿತು ಬಾಟಲಿಯನ್ನು ಯಾರೋ ಎಗರಿಸಿದ್ದಾರೆಂದು.. ಬಿಕ್ಕಳಿಗೆ ಜೋರಾಯಿತು. ಬಿಕ್ಕುತ್ತಲೇ ಪಕ್ಕದ ಸೀಟಲ್ಲಿದ್ದ ಮಲಯಾಳಿ ಅಂಕಲ್ ಹತ್ರ ವಾಟರ್ ಬಾಟಲ್ ನೋಡಿದ್ದೀರಾ ಎಂದು ವಿಚಾರಿಸಿದೆ. ನೋಡಿಲ್ಲ ಎಂದವರು ಸುಮ್ಮನಾಗುವಷ್ಟರಲ್ಲಿ ಅವರ ಹೆಂಡತಿ ತನ್ನ ಬ್ಯಾಗಿಂದ ನೀರಿನ ಬಾಟ್ಲಿ ತೆಗೆದು ಕೊಟ್ರು, ನೀರು ಕುಡಿದು ಕೆಮ್ಮುವಾಗ ತಲೆ ಮಧ್ಯೆಗೆ ಕೈಯ್ಯಿಂದ ಒತ್ತಿ ನೇವರಿಸಿದರು. ಸುಧಾರಿಸಿಕೊಂಡು ನಾನು ಅವನ ಮುಖವನ್ನು ದಿಟ್ಟಿಸಿದೆ. ಅಮ್ಮ ನನ್ನ ಮುಂದೆ ನಿಂತಿದ್ದರು.

ಹುಸೇನಿ ~

Leave a comment

ಏರ್ಪೋರ್ಟ್ ಚಿತ್ರಗಳು · ನ್ಯಾನೋ ಕಥೆಗಳು · ಸಣ್ಣ ಕತೆ

ಏರ್ಪೋರ್ಟ್ ಚಿತ್ರಗಳು ..

airport counters

ಏರ್ಪೋರ್ಟ್ ಹೊರಗಡೆ ತಮ್ಮವರಿಗಾಗಿ ಕಾಯುವ ದಟ್ಟ ಜನಸಂದಣಿ. ಪಿಸುಮಾತುಗಳೆಲ್ಲವೂ ಒಟ್ಟಾಗಿ ಒಂದು ಸಣ್ಣ ಸಂತೆಯಷ್ಟು ಗೌಜು,ಗದ್ದಲ..ಕೆಲವು ಮುಖಗಳಲ್ಲಿ ಕಾತರಿಕೆಯ ಚಡಪಡಿಕೆ, ಇನ್ನು ಕೆಲವು ಮುಖಗಳಲ್ಲಿ ಅಗಲಿಕೆಯ ನೋವು..ಒಂಥರಾ ವಿಕ್ಷಿಬ್ದ ವಾತಾವರಣ.. ಪತಿಯನ್ನು ಬೀಳ್ಕೊಡುವ ಪತ್ನಿಯ ನಿರ್ಲಿಪ್ತತೆ, ತಬ್ಬಿಕೊಂಡು ಅಳುವ ಜೋಡಿಗಳು, ಮಕ್ಕಳನ್ನು ಕಳುಹಿಸಿಕೊಡುವ ಅಪ್ಪ,ಅಮ್ಮಂದಿರು. ಎಂದೋ ಮರೆತ ಅಪ್ಪನ ಮುಖವನ್ನು ಮತ್ತೆ ಕಾಣಲು ಕಾತರಿಸುವ ಮಕ್ಕಳು, ಯಾರೋ ವಿಐಪಿಯ ಹೆಸರಿನ ಫ಼ಲಕವನ್ನು ಹಿಡಿದು ಕಾಯುವ ಚಾಲಕರ ನಿಸ್ತೇಜ ಮುಖ.. ಸುಮಾರು 4 ಗಂಟೆಗಳಷ್ಟು ಸಮಯ ಏರ್ಪೋರ್ಟ್ ಹೊರಗಡೆ ಗೆಳೆಯನಿಗಾಗಿ ಕಾದು ಕುಳಿತಿದ್ದ ನನಗೆ ಅಲ್ಲಿನ ಕೆಲವು ಚಿತ್ರಗಳು ಇನ್ನೂ ಕಾಡುತ್ತಿದೆ.

೧)
ವಸ್ತ್ರಧಾರಣೆ ನೋಡಿದರೆ ಅವಳು ಗಗನ ಸಖಿ ಇರಬೇಕು..ಉತ್ತರ ಭಾರತದ ಹುಡುಗಿ.. ತನ್ನ ಸಹೋದ್ಯೋಗಿಯೊಂದಿಗೆ ಚಹಾ ಕುಡಿಯಲು ಬಂದವಳು. ಪಕ್ಕದ ಟೇಬಳಲ್ಲಿ ಅಮ್ಮನ ಭುಜದ ಮೇಲಿದ್ದ ಮಗುವಿನ ಮುಖ ಅವಳಿಗೆ ಅಭಿಮುಖವಾಗಿತ್ತು. ಮಗುವಿನೊಂದಿಗೆ ಆಟಕ್ಕಿಳಿದಳು. ಗಲ್ಲವನ್ನು ಮುಟ್ಟುವುದು,ಬೆರಳನ್ನು ಹಿಡಿಯೋದು, ಮುಖವನ್ನು ವಿರೂಪ ಮಾಡಿ ಮಗುವನ್ನು ನಗಿಸಲು ಪ್ರಯತ್ನ ಪಡುವುದು ಹೀಗೆ ಸಾಗಿತ್ತು. ಅದೇನಾಯ್ತೋ ಗೊತ್ತಿಲ್ಲ.. ಒಮ್ಮೆಲೇ ಎವೆಯಿಕ್ಕದೆ ಮಗುವನ್ನು ದಿಟ್ಟಿಸಿದಳು.. ನಾನು ಅವಳನ್ನು ದಿಟ್ಟಿಸುತ್ತಿದ್ದೆ.. ಮಗುವನ್ನು ದಿಟ್ಟಿಸುತ್ತಲೇ ಕಳೆದುಹೋಗಿದ್ದಾಳೆ ಅಂತಿತ್ತು ಅವಳ ಮುಖಭಾವ.. ಮರುಕ್ಷಣ ಕಟ್ಟೆಯೊಡೆದ ನೀರಿನಂತೆ ಎರಡು ಕಣ್ಣುಗಳಿಂದ ವೇಗವಾಗಿ ಹರಿದ ಕಣ್ಣೀರು ಅವಳ ಗಲ್ಲವನ್ನು ದಾಟಿತು.. ತಕ್ಷಣ ಎಚ್ಚರಗೊಂಡವಳಂತೆ ಅಕ್ಕ ಪಕ್ಕ ಕಣ್ಣೊರಳಿಸಿದವಳು ಎರಡೂ ಕೈಗಳಿಂದ ಮುಖವನ್ನು ಮುಚ್ಚಿದಳು….

೨)
ಅದೊಂದು ಕುಟುಂಬ.. ಅಮ್ಮ,10ರ ಆಸುಪಾಸಿನ ಗಂಡು ಮಗು ಮತ್ತು 8ರ ಆಸುಪಾಸಿನ ಹೆಣ್ಣು ಮಗು.. ಮಕ್ಕಳು ಅಪ್ಪನ ಆಗಮನದ ನಿರೀಕ್ಷೆಯಲ್ಲಿ ತುಂಬಾ ಖುಷಿಯಾಗಿದ್ದರು. ಅಪ್ಪ ಏನೆಲ್ಲಾ ನಮಗಾಗಿ ತಂದಿರಬಹುದು ಎಂಬ ವಿಚಾರದಲ್ಲಿ ಮಕ್ಕಳು ಮುಗ್ದವಾಗಿ ಜಗಳ ಶುರುವಿಟ್ಟುಕೊಂಡದ್ದು ನೋಡುತ್ತಾ ಖುಶಿಪಡುತ್ತಿದ್ದೆ. ಕೆಲವು ಹೊತ್ತಿನ ಬಳಿಕ ಪುಟ್ಟ ಹುಡುಗಿ ಅಮ್ಮನಲ್ಲಿ ಹಣಕ್ಕಾಗಿ ರಚ್ಚೆಹಿಡಿಯುತ್ತಿದ್ದುದ್ದು, ಅಮ್ಮ ಬಯ್ಯುವುದು ಎಲ್ಲ ನಡೆಯಿತು. ಕೊನೆಗೆ ದುಡ್ಡು ಪಡೆದುಕೊಂಡ ಹುಡುಗಿ ಖುಷಿಯಾಗಿ ಓಡೋಡಿ ಅಲ್ಲಿದ್ದ ಪ್ರತೀ ಅಂಗಡಿಗಳಿಗೆ ಹೋಗಿ ಏನೋ ಕೇಳಿ, ಅಂಗಡಿಯಾತ ಇಲ್ಲವೆಂದಾಗ ಮಗುಮ್ಮಾಗಿ ಮುಖ ಸಣ್ಣದು ಮಾಡುತ್ತಿತ್ತು. ಅದೇನು ಕೇಳುತ್ತಿದ್ದಾಳೆ ಎಂದು ತಿಳಿಯುವ ಕುತೂಹಲ. ಕೊನೆಗೆ ನಾನು ಕೂತಿದ್ದ ಬೆಂಚಿನ ಪಕ್ಕದಲ್ಲಿರುವ ಚಾಕೊಲೇಟು ಅಂಗಡಿಗೆ ಬಂದು “ವೆಲ್ಕಮ್ ಫ್ಲವರ್ ಹೇ ಕ್ಯಾ ?” ಅಂತ ಕೇಳಿದಳು.. ಇಲ್ಲೂ ಮಗುವಿಗೆ ನಿರಾಶೆ ಕಾದಿತ್ತು.. ಅಲ್ಲೇ ಯೋಚಿಸುತ್ತಾ ನಿಂತ ಹುಡುಗಿ ಕೊನೆಗೊಂದು ಡೈರಿ ಮಿಲ್ಕ್ ಚಾಕೊಲೇಟು ಕೊಂಡು ಕುಣಿಯುತ್ತಾ ಅಮ್ಮನೆಡೆಗೆ ಸಾಗಿದಳು…

೩) ಬಹುಶಃ ವಿದೇಶದಲ್ಲಿ ಕೆಲಸದಲ್ಲಿರುವವನು ಅವನು. ರಜಾದಲ್ಲಿ ಊರಿಗೆ ಬಂದಿದ್ದಾನೆ. ಸ್ವೀಕರಿಸಲು ಅಪ್ಪ,ಅಮ್ಮ,ತಮ್ಮ ಮತ್ತು ಮನೆಯವರು ಬಂದಿದ್ದರು. ನಿರ್ಗಮನದ ಹಾದಿಯಲ್ಲಿ ಮಗನನ್ನು ನೋಡಿದ್ದೇ ತಡ ಅಮ್ಮ ಮಗನನ್ನು ತಬ್ಬಿಕೊಂಡಳು. ನಂತರದ ಸರದಿ ತಮ್ಮನದು. ನಂತರ ಮನೆಯವರು. ಅಪ್ಪ ನಿಂತಲ್ಲೇ ಇದ್ದ. ಕೊನೆಗೆ ಮಗ ಅಪ್ಪನ ಆಶೀರ್ವಾದ ಪಡೆದು ನಿಂತುಕೊಂಡು ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡ. ಕೂಲಿಂಗ್ ಗ್ಲಾಸ್ ಹಾಕಿಕೊಂಡಿದ್ದವನು ಅದನ್ನೆತ್ತಿ ತಬ್ಬಿಯೇ ಕಣ್ಣೀರೊರೆಸಿಕೊಳ್ಳುತ್ತಿದ್ದ. ಎಲ್ಲವೂ ಮುಗಿದು ಬ್ಯಾಗನ್ನೆಲ್ಲಾ ಎತ್ತಿ ಹೊರದಳಣಿಯಾದರು. ಎಲ್ಲರೂ ಮುಂದೆ ಸಾಗಿದ ನಂತರ ಅಪ್ಪ ಕರ್ಚೀಪು ಎತ್ತಿ ಕಣ್ಣಿಗಿಟ್ಟರು..

ಇನ್ನೂ ಇದೆ..
ಹುಸೇನಿ ~

Leave a comment

ಮತ್ತೆ ನೀನಿಲ್ಲದ ಸಂಜೆ.. · ಮತ್ತೆ ಸಂಜೆಯಾಗುತ್ತಿದೆ.. · ಸಣ್ಣ ಕತೆ

ಮತ್ತೆ ನೀನಿಲ್ಲದ ಸಂಜೆ..

matte sanje

ಈ ಸಂಜೆ ಬಂತೆಂದರೆ ಸಾಕು… ರಾತ್ರಿ ಕನವರಿಸಿದ ನಿನ್ನ ಸಕ್ಕರೆ ನೆನಪುಗಳು ಗರಿಗೆದರಿ ಮತ್ತೆ ಕುಣಿಯಲು ಶುರುಮಾಡುತ್ತವೆ. ನಿನ್ನ ಬಂಗಾರದ ಬೆರಳ ಕಚಗುಳಿಯಿಟ್ಟಂತಾಗಿ ಮೈತುಂಬಾ ಒಂದು ತೆರನಾದ ಜೀವಂತಿಕೆಯ ಹೂವು ಅರಳುತ್ತವೆ. ಬಿರಿದ ಆ ಹೂವಿಗೂ ನಿನ್ನದೇ ಘಮಲಿರುತ್ತದೆ. ಮೊದಲು ನಿನ್ನ ನಿಶ್ವಾಸವನ್ನು ಬೊಗಸೆ ತುಂಬಿ ನನ್ನ ಕಣ್ಣಿಗಿಡುತ್ತೇನೆ. ನಂತರ ಒಂದಿಚೂ ಅಂತರವಿಲ್ಲದಂತೆ ಬರಸೆಳೆದು ಮುಖಕ್ಕೆ ಮುಖವಿಟ್ಟು ನಿನ್ನ ನಿಶ್ವಾಸವನ್ನು ಉಚ್ವಾಸವಾಗಿ ನನ್ನೊಳಗೆ ತುಂಬಿಕೊಳ್ಳುತ್ತೇನೆ. ಆ ಕ್ಷಣ ಆಹ್ಲಾದತೆಯ ಉನ್ಮಾದ ಅಲೆಯಲ್ಲಿ ತೇಲುತ್ತೇನೆ, ನಿನ್ನೆದೆಯೊಳಗಿನ ಬಿಸಿಯುಸಿರ ಕುಡಿದ ನನ್ನಲ್ಲಿ, ನಿನ್ನದೇ ಎದೆ ಬಡಿತದ ನಿನಾದ… ನಿನ್ನಸ್ಮಿಥೆಯನ್ನು ಮೊಗೆದು ಕುಡಿದು ನಿನ್ನ ಧರಿಸಿದ ನಾನು ನನಗೇ ಅಪರಿಚಿತನಾಗುತ್ತೇನೆ.. ನನ್ನೊಳಗಿನ ಸೀಮೆ ವಿಸ್ತ್ರುತಗೊಂಡು, ದೃಷ್ಟಿ, ದಿಕ್ಕು ಹೊಸ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತವೆ. ಆ ಅರಳಿದ ಹೂವನ್ನು ಪ್ರೀತಿಯಿಂದ ಎದೆಗೊತ್ತಿ, ನಿನ್ನೆದೆಯ ಬಡಿತದ ಸ್ವಾದದಿಂದ ಸುಸ್ಪುಷ್ಟಗೊಳಿಸಿ ಬದುಕಿಗೆ ಹೊಸ ಅರ್ಥ, ಸೌಂದರ್ಯ ಮತ್ತು ಬೆಳಕನ್ನು ಕೊಡುತ್ತೇನೆ.. ನನ್ನೊಳಗೆ ಪ್ರತಿಷ್ಟಾಪಿಸಿದ ನಿನ್ನತ್ಮದ ಪ್ರಭೆಯೊಂದಿಗೆ, ನಿನ್ನ ಆ ಮಲ್ಲಿಗೆ ಕಂಪಿನೊಂದಿಗೆ ಜೀವ-ಜೀವ ಸೇರಿ ಬೆಸೆಯುವ ಆ ಅಮೂರ್ತ ಬಂಧನದ ತೆಕ್ಕೆಯಲ್ಲಿ ನಾನು ಮತ್ತಷ್ಟು ಜೀವಿಸುತ್ತೇನೆ…

~ಹುಸೇನಿ

ಕಾಡುವ ಹನಿಗಳು · ಖಾಲಿ ಗೆರೆಯಲ್ಲಿ · ತೊರೆಯ ತೀರದ ನೆನಪುಗಳು · ಯಾ ರೂಹಿ .... · ಸಣ್ಣ ಕತೆ

ಖಾಲಿ ಗೆರೆಯಲ್ಲಿ….

line

…ಒಂದು ಪ್ರಶ್ನೆ, ಅದರ ಉತ್ತರದಲ್ಲಿ ಮೂಡಿದ ಮತ್ತೆರಡು ಪ್ರಶ್ನೆ, ಈಗ ಎಷ್ಟೆಂದರೆ ಒಳಗಿನ ದನಿಯೇ ಕೇಳದಷ್ಟು ಪ್ರಶ್ನೆಗಳ ಸಂತೆಗೂಡು, ಹೊರತೆಗೆದು ನಿರಾಳವಾಗಲಾರದ ವಿಕ್ಷಿಪ್ತ ಮನಸ್ಥಿತಿ, ಜೊತೆಗೂಡಿ ಮತ್ತಷ್ಟು ನಿರ್ಲಿಪ್ತತೆಗೆ ತಳ್ಳುವ ತಲ್ಲಣಗಳು, ದ್ವಂದ್ವಗಳು. ಉತ್ತರ ಕಂಡುಕೊಳ್ಳಲು ಪ್ರಯಾಣ ಆರಂಭಿಸಿ ದಿನಗಳೇ ಕಳೆಯಿತು. ಕಾಲವೇ ಎಲ್ಲದಕ್ಕೂ ಉತ್ತರ ಎಂದರು.. ಅಂಥದ್ದೊಂದು ಕಾಲಕ್ಕೆ ನಾನು ಕಾಯುತ್ತಿದ್ದೆ. ಬತ್ತಿದ ತೀರ ಮುಂಗಾರಿಗೆ ಕಾಯುವಂತೆ. ಪೊರೆ ಪೊರೆಗಳಾಗಿ ಸುತ್ತಿಕೊಂಡ ನನ್ನೆಲ್ಲಾ ಪ್ರಶ್ನೆಗಳನ್ನು ಹರವಿಟ್ಟು ಒಂದೊಂದೇ ಉತ್ತರವನ್ನು ತುಂಬಿಕೊಂಡು ಕೊನೆಗೆ ಶೂನ್ಯವಾಗುವ ಕಾಲದ ಅಧಮ್ಯ ಕಾತರಿಕೆಯದು. ಅಂಥದ್ದೊಂದು ಕಾಲ ಕೊನೆಗೂ ಆಗತವಾಯಿತು. ಆ ವಸಂತ ಕಾಲಕ್ಕೆ ನಿನ್ನ ಹೆಸರಿತ್ತು.

ನೀನು ಸಿಕ್ಕ ದಿನ ನಿನಗೆ ನೆನಪಿರಬಹುದು. ನೀನು ನುಡಿದ ಮೊದಲ ಮಾತು ನನ್ನಲ್ಲೊಳಗೆ ಸೃಜಿಸಿದ ಅನುಭಾವಶರಧಿಯ ಆಳ ಮತ್ತು ವಿಸ್ತಾರ ನಿನ್ನ ಊಹೆಗೆ ನಿಲುಕುವಂಥದ್ದಲ್ಲ.
ನಿನಗೆ ಗೊತ್ತು ನನ್ನದು ಯಾರ ಮುಂದೆಯೂ ತೆರೆದುಕೊಳ್ಳದ, ಸ್ಪಂದನೆಯ ಹಂಗೇ ಇಲ್ಲದಂತೆ ಪರಿತ್ಯಕ್ತ ಮನಸ್ಸು. ಗಿಜಿಗಿಡುವ ಸಂತೆಯೊಳಗಿನ ಅಬ್ಬರದ ಮಾತುಗಳ ನಡುವಿಂದ ಮೌನದ ಚಿಪ್ಪಿನೊಳಗೆ ತೂರಿ ಅಡಗಿಕೊಂಡು ಬಿಡಬೇಕೆನ್ನಿಸುವ ಮೌನ-ಮೋಹಿ ಅದು. ಆ ಮನಸ್ಸು ಇಗೀಗ ಸುಮ್ಮನೆ ನಗುವುದು ಕಲಿತಿದೆ. ನೀ ಸಿಕ್ಕಿದ ಘಳಿಗೆಯಿಂದ ನೋವುಗಳನ್ನು ಒಪ್ಪಿಕೊಂಡು ಅದನ್ನು ಮೀರಿಸುವ ದಿವ್ಯ ಶಕ್ತಿಯೊಂದನ್ನು ಅವಾಹಿಸಿಕೊಂಡಿದ್ದೇನೆ. ನನ್ನ ನೆನಪುಗಳು, ಭೂತಕಾಲದ ಅತಿರೇಕಗಳು ಜೀವಧಾತು ನಗುವನ್ನು ಕಸಿದುಕೊಳ್ಳದಂತೆ ಸಮದೂರ ಕಾಯ್ದುಕೊಂಡು ಹಸನ್ಮುಖಿಯಾಗಿ ಬದುಕುವ ಕಲೆಯನ್ನು ಪಡಕೊಳ್ಳುತ್ತಿದ್ದೇನೆ. ಕನಸುಗಳೊಂದಿಗಿನ ಬಡಿದಾಟದಲ್ಲಿ ನಾನೇ ಮೇಲುಗೈ ಹೊಂದಿದವನಂತೆ ಭಾಸವಾಗುತ್ತದೆ. ನನ್ನೊಳಗಿನ ದ್ವಂದ್ವಗಳ ಒಂದೊಂದೇ ಪೊರೆ ಕಳಚುತ್ತಾ ಸಾಗುತ್ತಿದ್ದೇನೆ…ಹಾಗೆ ಕಳಚುತ್ತಾ ಕಳಚುತ್ತಾ ಶೂನ್ಯತೆಯೆಡೆಗೆ ಹತ್ತಿರವಾಗುವಂತೆನಿಸುತಿದೆ ನನಗೆ. ಶೂನ್ಯದಲ್ಲಿ ಹುಟ್ಟಿದ ‘ನಾನು’ ಮತ್ತೆ ಶೂನ್ಯತೆಗೆ ತಲುಪುವಾಗಿನ ಅಮಿತ ಆನಂದ ಅವರ್ಣನೀಯ..

………. ಈ ಖಾಲಿ ಗೆರೆಯಲ್ಲಿ ಈ ಬಂಧಕ್ಕೊಂದು ಹೊಸ ಹೆಸರಿಡಬೇಕು ಅನ್ನಿಸಿದ ಮರುಕ್ಷಣ ಹೆಸರಿನ ಹಂಗನು ಮರೆತು ಈಗಷ್ಟೇ ಚಿಗುರೊಡೆದಿಡುವ ಈ ಸ್ನೇಹದ ಜೋಪಡಿಯಲ್ಲಿ ಈ ಬಂಧದ ಹಣತೆಯೊಂದನ್ನು ಹಚ್ಚಿಟ್ಟುಕೊಂಡು ನಮ್ಮಿಬ್ಬರ ಬದುಕಿನ ಕತ್ತಲೆಯನ್ನು ಪರಸ್ಪರ ಬೆಳಗೋಣ..ಅದರಲ್ಲೇ ಹೆಚ್ಚು ಅರ್ಥವಿದೆ ಅಂದೆನಿಸುತ್ತದೆ..
ಹೌದು.. ಮತ್ತೊಮ್ಮೆ ಹೇಳುತ್ತೆನೆ.. ನೀನೆಂದರೆ ಅಪ್ಪಟ ಜೀವ ಚೈತನ್ಯ, ನೀನಂದರೆ ಎಂದೂ ಬತ್ತದ/ಬತ್ತಬಾರದ ಜೀವಜಲ.. ನೀನಂದರೆ ನನ್ನೊಳಗೆ ಮನುಷ್ಯ ಭಾವ ತುಂಬಿಕೊಟ್ಟ ಆತ್ಮ ಸಾಂಗತ್ಯ.. … … ನೀನೆಂದರೆ… ನಾನೇ !!

~ಹುಸೇನಿ

Leave a comment

ಕನ್ನಡ ಕಥೆಗಳು - Kannada Kathegalu · ವೈದ್ಯರು ಕಳಿಸಿದ ಜೀವನ ಪಾಠ · ಸಣ್ಣ ಕತೆ

ಕನ್ನಡ ಕಥೆಗಳು – Kannada Kathegalu 

ವೈದ್ಯರು ಕಲಿಸಿದ ಜೀವನ ಪಾಠ

Daddy's Hands-Artistic
“ಡಾಕ್ಟರ್! ನಾನೊಂದು ಗಂಭೀರ ಸಮಸ್ಯೆಯಲ್ಲಿ ಸಿಲುಕಿದ್ದೇನೆ.. ನೀವು ಸಹಾಯ ಮಾಡಲೇಬೇಕು… “. ಕನ್ಸಲ್ಟೇಶನ್ ರೂಮಿಗೆ ಧಾವಿಸಿದ ಆಕೆ ವೈದ್ಯರ ಬಳಿ ಅಂಗಲಾಚತೊಡಗಿದಳು. “ನನ್ನ ಮಗುವಿಗಿನ್ನೂ ೧ ವರ್ಷ ತುಂಬಿಲ್ಲ, ನಾನು ಮತ್ತೆ ಪ್ರೆಗ್ನೆಂಟ್ ಆಗಿದ್ದೇನೆ, ಇಷ್ಟು ಬೇಗ ನನಗಿನ್ನೊಂದು ಮಗು ಬೇಡ ಡಾಕ್ಟರ್ ” ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿ ಆಕೆ ಡಾಕ್ಟರ ಮುಖವನ್ನು ವಿಷಣ್ಣವಾಗಿ ನೋಡುತ್ತಾ ಕುಳಿತಳು.

“ಸರಿ.. ನಾನೇನು ಮಾಡಬೇಕು ಹೇಳಿ” ಡಾಕ್ಟರ್ ಕೇಳಿದರು.
“ನನಗೆ ಈ ಮಗು ಬೇಕಿಲ್ಲ… ಅಬಾರ್ಶನ್ ಮಾಡ್ಬೇಕು.. ನೀವು ಸಹಾಯ ಮಾಡ್ಬೇಕು ಡಾಕ್ಟರ್… ” ಸಣ್ಣ ದನಿಯಲ್ಲಿ ಅವಳು ಉತ್ತರಿಸಿದಳು.
ಡಾಕ್ಟರ್ ಚಿಂತಾಮಗ್ನರಾದರು, ಒಂದಷ್ಟು ಸಮಯದ ಮೌನವನ್ನು ಮುರಿದು ಡಾಕ್ಟರ್ ಹೇಳಿದರು “ಅದಕ್ಕಿಂತಲೂ ಒಳ್ಳೆಯ ಉಪಾಯವಿದೆ ನನ್ನಲ್ಲಿ… ಇದರಿಂದ ನಿಮ್ಮ ಆರೋಗ್ಯಕ್ಕೂ ಯಾವುದೇ ಅನಾಹುತವಿಲ್ಲ…”.
ಆಕೆಯ ಮುಖ ಅರಳಿತು. ಡಾಕ್ಟರ್ ತನ್ನ ಕೋರಿಕೆಯನ್ನು ಒಪ್ಪಿಕೊಂಡಳೆಂದು ಮತ್ತಷ್ಟು ನಿರಾಳವಾದಳು.

ಡಾಕ್ಟರ್ ಮುಂದುವರೆಸಿದರು “ನೋಡಿ.. ೨ ಮಕ್ಕಳನ್ನು ಒಟ್ಟಿಗೆ ನೋಡಿಕೊಳ್ಳಲು, ಪೋಷಿಸಲು ನಿಮಗೆ ಕಷ್ಟವಿದೆ ಅಂದ್ರಿ.. ಹಾಗಾದ್ರೆ ಒಂದು ಮಗುವನ್ನು ಕೊಲ್ಲಲೇ ಬೇಕು… ನಿಮ್ಮ ಕೈಯಲ್ಲಿರುವ ಮಗುವನ್ನು ಇಲ್ಲವಾಗಿಸೋಣ..ಇದರಿಂದ ಮತ್ತೊಂದು ಮಗುವನ್ನು ಪಡೆಯುವ ಮುಂಚೆ ಒಂದಿಷ್ಟು ಕಾಲ ಅರಾಮವಾಗಿರಬಹುದು… ಹೇಗಾದರೂ ಒಂದು ಮಗುವನ್ನು ಇಲ್ಲವಾಗಿಸಲೇಬೇಕು.. ಯಾವ ಮಗುವಾದರೇನಂತೆ ?, ಅಬಾರ್ಶನ್ ಎಂಬುದು ತುಂಬಾ ರಿಸ್ಕಿ, ನಿಮ್ಮ ಕೈಯಲ್ಲಿರುವ ಮಗುವನ್ನು ಇಲ್ಲವಾಗಿಸಿದರೆ ನಿಮ್ಮ ಆರೋಗ್ಯಕ್ಕೂ ಯಾವುದೇ ಅನಾಹುತವಾಗುವುದಿಲ್ಲ…. …. …. ”
“ನೋ ನೋ ಡಾಕ್ಟರ್ !!, ನನ್ನ ಮಗುವನ್ನು ನಾನೇ ಕೊಲ್ಲುವುದಾ..?! ಅಬ್ಬಾ .. ಎಷ್ಟೊಂದು ಕ್ರೂರ !, ಎಷ್ಟೊಂದು ಭಯಾನಕ.. ನಾನದನ್ನು ಮಾಡಲಾರೆ… !”
ಇನ್ನೂ ಮಾತು ಮುಗಿಸದ ಡಾಕ್ಟರನ್ನು ತಡೆದ ಅವಳು ಜೋರುದನಿಯಲ್ಲಿ ಕಂಪಿಸುತ್ತಾ ನುಡಿದಳು, ಅವಳ ಹಣೆ ಬೆವರತೊಡಗಿತ್ತು, ಎದೆ ಬಡಿತ ಜೋರಾಗಿತ್ತು .

“ಓಕೆ ..ಒಕೆ .. ಐ ಅಗ್ರೀಡ್ !”
ಡಾಕ್ಟರ್ ಮಾತು ಮುಂದುವರೆಸಿದರು “ಒಂದು ಮಗುವನ್ನು ನೀವು ಕೊಲ್ಲಲ್ಲು ಒಪ್ಪಿಕೊಂಡಿದ್ದೀರಿ, ಹಾಗಿದ್ದಾಗ ನಿಮ್ಮ ಸಮಸ್ಯೆಗೆ ಇದುವೇ ಒಳ್ಳೆಯ ಪರಿಹಾರವೆಂದುಕೊಂಡೆ .. ಅದಕ್ಕೆ ಹೇಳಿದೆ.. ”

ಆಕೆಗೆ ತನ್ನ ತಪ್ಪಿನ ಅರಿವಾಯಿತು. ನಂತರ ಡಾಕ್ಟರ್ ಗರ್ಭದಲ್ಲಿರುವ ಮಗುವಿಗೂ ಆಕೆಯ ಇನ್ನೊಂದು ಮಗುವಿನಂತೆ ಜೀವವಿದೆ, ಅದನ್ನು ಗರ್ಭಪಾತ ಮಾಡಿ ತೆಗೆಸುವುದು ಕೊಲ್ಲುವುದಕ್ಕೆ ಸಮಾನ … ಅದು ಕೈಯಲ್ಲಿರುವ ಮಗುವನ್ನು ಕೊಂದಷ್ಟೇ ದೊಡ್ಡ ಅಪರಾಧ ಎಂದು ತಿಳಿ ಹೇಳಿದರು.
ದುಖಃದ ಕಟ್ಟೆ ಒಡೆದು ಆ ತಾಯಿ ಕಣ್ಣೀರಾದಳು, ಮಗುವನ್ನು ಎಷ್ಟೇ ಕಷ್ಟಪಟ್ಟರೂ ಹೆತ್ತು ಸಾಕುವುದಾಗಿ ಡಾಕ್ಟರ್ ಬಳಿ ಪ್ರತಿಜ್ಞೆಗೈದು ಭಾರವಾದ ಹೃದಯದೊಂದಿಗೆ ಹೊರಡಲು ಅಣಿಯಾಗುವಾಗ ಲೋಕದ ಸಮಸ್ತ ತಂದೆ-ತಾಯಿಗಳು ಕಲಿಯಬೇಕಾದ ಜೀವನ ಪಾಠವೊಂದನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದಳು.

_ಹುಸೇನಿ
ಎಳೆ:ಅಂತರ್ಜಾಲ

Leave a comment

ಬಾಗಿಲು · ಸಣ್ಣ ಕತೆ

ಬಾಗಿಲು

door
ಮದುವೆಯ ಮೊದಲ ರಾತ್ರಿ ಗಂಡ ಹೆಂಡತಿ ಒಂದು ಪಂದ್ಯ ಕಟ್ಟಿದರು. ಬೆಳಗ್ಗಿನ ತನಕ ಯಾರಿಗೂ ಬಾಗಿಲು ತೆರೆಯಬಾರದು ಎಂದಾಗಿತ್ತು ಆ ಪಂದ್ಯ.ಮೊದಲು ಗಂಡಿನ ಅಪ್ಪ ಅಮ್ಮ ಅವರನ್ನು ನೋಡಲು ಬಂದರು. ಅವನು ಮತ್ತು ಅವಳು ಇಬ್ಬರೂ ಬಾಗಿಲಿನ ಹಿಂದಿದ್ದರು, ಬಂದದ್ದು ಅವನ ಅಪ್ಪ ಎಂದು ತಿಳಿದಾಕ್ಷಣ ಪರಸ್ಪರ ಮುಖ ನೋಡಿಕೊಂಡರು. ಅವನಿಗೆ ಬಾಗಿಲು ತೆರೆಯಬೇಕೆಂದನಿಸಿತಾದರೂ, ಎಲ್ಲಿ ಸೋತು ಹೋಗುತ್ತೇನೋ ಅಂದುಕೊಂಡು ಸುಮ್ಮನಾದ. ಅವನ ಅಪ್ಪ ಅಮ್ಮ ಕಾದು ಇನ್ನೂ ಬಾಗಿಲು ತೆರೆಯದಿರುವುದನ್ನು ಕಂಡು ಮರಳಿ ಹೋದರು. ಸ್ವಲ್ಪ ಸಮಯದ ಬಳಿಕ ಹೆಣ್ಣಿನ ಹೆತ್ತವರು ಬಂದು ಬಾಗಿಲು ತಟ್ಟಿದರು. ಇಬ್ಬರೂ ಮತ್ತೆ ಪರಸ್ಪರ ಮುಖ ನೋಡಿಕೊಂಡರು. ಬಾಗಿಲ ಬಡಿತ ಅವಳಿಗೆ ಅಸಹನೀಯವಾಗತೊಡಗಿತು. ಏನೋ ನೆನಪಾಗಿ ದುಃಖ ಉಮ್ಮಳಿಸಿ ಬಂತು.. ನನ್ನಿಂದ ಇದು ಸಾಧ್ಯವಿಲ್ಲ.. ನನ್ನ ಹೆತ್ತವರಿಗೆ ನೋವು ಕೊಡಲಾರೆ ಎಂದವಳೇ ಬಾಗಿಲು ತೆರೆದಳು. ಆ ಕ್ಷಣ ಅವನು ಏನೂ ಮಾತನಾಡದೆ ಸುಮ್ಮನಾದನು.
ವರ್ಷಗಳು ಉರುಳಿತು, ಅವರಿಗೀಗ 4 ಗಂಡು ಮತ್ತು 1 ಹೆಣ್ಣು ಮಗಳು. ಅವನು ದಿನಗಳ ಹಿಂದೆ ಹುಟ್ಟಿದ ಮಗಳಿಗೆ ಅದ್ದೂರಿಯಾಗಿ ಪಾರ್ಟೀ ಆಯೋಜಿಸಿದನು. ಕುಟುಂಬದ ಪ್ರತಿ ಸದಸ್ಯನಿಗೂ ಆಮಂತ್ರಣವಿತ್ತು. ಅದೇ ರಾತ್ರಿ ಅದೇನೋ ಕನವರಿಸುತ್ತಿದ್ದ ಅವನಲ್ಲಿ ಅವಳು ಇದುವರೆಗೂ ಯಾವ ಮಕ್ಕಳಿಗೂ ಮಾಡದ ಇಷ್ಟು ದೊಡ್ಡ ಪಾರ್ಟೀ ಈಗ ಮಾಡಲು ಕಾರಣವನ್ನು ಕೇಳಿದಳು.. ಅವನು ಮುಗುಳ್ನಗುತ್ತಾ ಉತ್ತರಿಸಿದ..
“ಇವಳು ಮಾತ್ರ ನನಗಾಗಿ ಬಾಗಿಲು ತೆರೆಯುತ್ತಾಳೆ”

_ಹುಸೇನಿ
ಮೂಲ: ಅಂತರ್ಜಾಲ

Leave a comment

ಖಲೀಫಾ ಕತೆ - 1 · ಸಣ್ಣ ಕತೆ

ಖಲೀಫಾ ಕತೆ – 1

“ಖಲೀಫ಼ರೇ, ನೀವ್ಯಾಕೆ ಹಾಗೆ ಮಾಡಿದಿರಿ.. ? ದೀಪ ಹೊತ್ತಿಸಿ ಏನೋ ಬರೆಯುತ್ತಿದ್ದ ನೀವು ಆ ವ್ಯಕ್ತಿ ಬಂದು ಮಾತುಕತೆಗೆ ತೊಡಗಿದೊಡನೆ ಬೆಳಕು ಆರಿಸಿದಿರಿ. ಮಾತುಕತೆ ಮುಗಿಸಿ ಆ ವ್ಯಕ್ತಿ ಹೊರಟಾಗ ನೀವು ಮತ್ತೆ ದೀಪ ಹೊತ್ತಿಸಿ ಬರೆಯತೊಡಗಿದಿರಿ. ಮಾತುಕತೆ ವೇಳೆ ನೀವು ಬೆಳಕು ಆರಿಸಿದ್ದು ಯಾಕೆಂದು ಅರ್ಥವಾಗಲಿಲ್ಲವಲ್ಲಾ ….!” . ವ್ಯಕ್ತಿಯೊಬ್ಬರು ಇಸ್ಲಾಂನ ಎರಡನೇ ಖಲೀಫಾ ಉಮರುಲ್ ಫಾರೂಕ್ ರಲ್ಲಿ ಪ್ರಶ್ನಿಸಿದರು.

ಆ ಉರಿಯುತ್ತಿದ್ದ ದೀಪದ ಎಣ್ಣೆ ನನ್ನ ಸ್ವಂತದ್ದಲ್ಲ. ಅದು ರಾಜ್ಯಕ್ಕೆ ಸೇರಿದ್ದು ಆಡಳಿತಕ್ಕೆ ಸಂಬಧಪಟ್ಟ ವಿಷಯಗಳನ್ನು ಬರೆಯುವಾಗ ನಾನದನ್ನು ಉಪಯೋಗಿಸಬೇಕು. ಇಲ್ಲಿ ನಡೆದ ಮಾತುಕತೆ ನಮ್ಮ ವೈಯುಕ್ತಿಕ ವಿಷಯ. ವೈಯುಕ್ತಿಕ ಕಾರ್ಯಕ್ಕೆ ನಾನು ರಾಜ್ಯದ ಸೊತ್ತನ್ನು ಬಳಸಿದರೆ ದೇವರ ಮುಂದೆ ಹೇಗೆ ಉತ್ತರಿಸಲಿ..? ದೇಶಕ್ಕೆ ನ್ಯಾಯ ವಿಧಿಸುವ ನಾನೇ ನ್ಯಾಯವನ್ನು ಗಾಳಿಗೆ ತೂರುವುದೇ …?.

ಇದು ಖಲೀಫಾರ ಉತ್ತರವಾಗಿತ್ತು . ಎಂತಹ ಸೂಕ್ಷ್ಮ ಗ್ರಾಹಿ ನ್ಯಾಯ ವ್ಯವಸ್ಥೆ, ಎಂತಹ ನಿಸ್ವಾರ್ಥತೆ, ಎಂತಹ ನ್ಯಾಯ ರಕ್ಷಣೆ..
ಇಂತಹ ನಾಯಕನ ಆಡಳಿತ ನಮ್ಮ ದೇಶಕ್ಕೆ ಬೇಕು ಎಂದು ಗಾಂಧೀಜಿಯವರು ಹೇಳಿದ್ದಲ್ಲಿ ಆಶ್ಚರ್ಯವಾದರೂ ಏನಿದೆ ಹೇಳಿ .