ಚಿಗುರುವ ಚಿಗುರ ಚಿವುಟದಿರಿ...!

ಚಿಗುರುವ ಚಿಗುರ ಚಿವುಟದಿರಿ…!

save-the-girl-child_CQPMv_3868
ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆಯನ್ನು 1994ರಿಂದ ನಿಷೇಧಿಸಲಾಗಿದೆ. ಆದರೂ ವಾರ್ಷಿಕ 50 ಲಕ್ಷ ಭ್ರೂಣ ಹತ್ಯೆ ಅಧಿಕೃತವಾಗಿ ಪತ್ತೆಯಾಗುತ್ತಿದೆ. ಅನಧಿಕೃತವಾಗಿ ಈ ಸಂಖ್ಯೆ ಅದೆಷ್ಟು ಕೋಟಿ ದಾಟಬಹುದೋ ?. ಆರೋಗ್ಯ ಕ್ಷೇತ್ರದಲ್ಲಿನ ಆವಿಷ್ಕಾರಗಳು ಹೆಣ್ಣು ಕುಲಕ್ಕೆ ಸಹಕಾರ ನೀಡುವ ಬದಲು ಮಾರಕವಾಗಿ ಪರಿಣಮಿಸಿದೆ. ತಾಯಿ ಗರ್ಭದಲ್ಲಿರುವಾಗಲೇ ಸ್ಕ್ಯಾನಿಂಗ್ ಮೂಲಕ ಮಗು ಯಾವುದು ಎಂದು ತಿಳಿದು, ಹೆಣ್ಣಾಗಿದ್ದರೆ ಭ್ರೂಣದಲ್ಲೇ ಹತ್ಯೆ ಮಾಡುವ ಪ್ರಸಂಗಗಳು ನಡೆಯುತ್ತಲೇ ಇವೆ.

ಹೆಣ್ಣು ಭ್ರೂಣ ಹತ್ಯೆಗೆ ಹಲವು ಕಾರಣಗಳನ್ನು ಊಹಿಸಬಹುದಾಗಿದೆ. ಮೊತ್ತ ಮೊದಲಾಗಿ ವರದಕ್ಷಿಣೆ, ಹೆಣ್ಣು ಮಕ್ಕಳಿಂದ ಪ್ರಯೋಜನ ಇಲ್ಲವೆಂಬ ವೈಯುಕ್ತಿಕ ಸ್ವಾರ್ಥ ಕಾರಣ, ಅವರನ್ನು ಬೆಳೆಸಲು ಇರುವ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳು, ಗಂಡು ಮಕ್ಕಳು ಮಾತ್ರ ತಮಗೆ ಹಾಗೂ ತಮ್ಮ ಪಿತೃಗಳಿಗೆ ಮೋಕ್ಷ ದೊರಕಿಸಿ ಕೊಡುತ್ತಾರೆ ಎಂಬ ಧಾರ್ಮಿಕ ನಂಬಿಕೆ . ಗಂಡು ಮಗುವಾದರೆ ಆಸ್ತಿ ಕುಟುಂಬದಲ್ಲಿಯೇ ಉಳಿಯುತ್ತದೆ ಎಂಬ ವ್ಯಾವಹಾರಿಕ ಕಾರಣ. ತಾನು ಅನುಭವಿಸಿದ ನರಕ ಸದೃಶ ಜೀವನ ನನ್ನ ಮಗಳು ಅನುಭವಿಸಬಾರದೆಂಬ ಕಾರಣವೂ ಸೇರಿದರೆ ಅದು ನಮ್ಮ ಸಮಾಜದ ಕ್ರೌರ್ಯ ಕಾರಣ.

ತೀರ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ೧೦೦೦ ಪುರುಷರಿಗೆ ಕೇವಲ ೯೩೦ ಮಹಿಳೆಯರು ಇದ್ದಾರೆ. ಅಲ್ಲದೆ ಅದು ಮುಂದಿನ ವರ್ಷಗಳಲ್ಲಿ ಇನ್ನೂ ಕಡಿಮೆ ಆಗುವ ಸಾಧ್ಯತೆಗಳಿವೆ. ಆ ಕಾರಣಗಳಿಂದಲೇ ನಿನ್ನೆ ಸುಪ್ರೀಮ್ ಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡುಕೊಂಡಿದೆ. “ನಿಯಮ ರೂಪಿಸುವ ನೀವು, ಅದನ್ನುಜಾರಿಗೆ ತರುವಲ್ಲಿ ಕಾಳಜಿ ವಹಿಸುತ್ತಿಲ್ಲ, ಸಂಬಂದಿಸಿದ ಸಂಘ, ಸಂಸ್ಥೆ, ಇಲಾಖೆಗಳು ಕಾರ್ಯಶೂನ್ಯವಾಗಿದೆ ” ಎಂದು ಪೀಠವು ಶಕ್ತ ಭಾಷೆಯಲ್ಲಿ ಎಚ್ಚರಿಕೆ ನೀಡಿದೆ.

ಏನೇ ಇರಲಿ, ಈ ಅಮಾನವೀಯ ಸಾಮಾಜಿಕ ಪಿಡುಗನ್ನು ತೊಲಗಿಸಲು ಮೊದಲು ಆಗಬೇಕಾದುದು ಮನುಷ್ಯ ಮನಸ್ಸುಗಳ ಸಂಸ್ಕರಣೆ. ಮಹಿಳೆಯನ್ನು ಸಮಾಜದ “ಹೊರೆ” ಎಂದುಕೊಳ್ಳುವವರಿಗೆ ಹೆಣ್ಣಿಲ್ಲದ ಸಮಾಜದ ಪರಿಕಲ್ಪನೆಯನ್ನು ಮನದಟ್ಟು ಮಾಡಿಸಬೇಕು. ಸರಕಾರವು ಕೂಡ ಮಹಿಳೆಯರಿಗೆ ಹೆಚ್ಚು ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು. ಅಲ್ಲದೆ ಭ್ರೂಣ ಹತ್ಯೆಯನ್ನು ತಡೆಗಟ್ಟುವ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸಿ ಅದನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಚಿಗುರುವ ಚಿಗುರ ಚಿವುಟದಿರಿ,
ಬೆಳೆದು ಹೆಮ್ಮರವಾಗಿ
ನೆರಳಾದೀತು, ಗಾಳಿ,
ಬೆಳಕಾದೀತು.. !

Leave a comment