ನ್ಯಾನೋ ಕಥೆಗಳು · ಪವಾಡ ಮತ್ತು ಇತರ ನ್ಯಾನೋ ಕತೆಗಳು

ಪವಾಡ ಮತ್ತು ಇತರ ನ್ಯಾನೋ ಕತೆಗಳು

ಶತ್ರು
ಒಂದು ಹಕ್ಕಿ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಅದನ್ನು ಕುಕ್ಕಲು ಶುರುವಿಟ್ಟಿತು. ತನ್ನ ಕೊಕ್ಕಿಗೆ ನೋವಾದರೂ ಅದು ಕುಕ್ಕುದನ್ನು ನಿಲ್ಲಿಸಲಿಲ್ಲ. ಕೊನೆಗೆ ತಣ್ಣಗಾಗಿ ಅದು ದೂರ ಹಾರಿ ಹೋಯ್ತು. ಮರು ದಿನವೂ ಇದೇ ಪುನರಾವರ್ತನೆ ಆಯಿತು. ತಾನು ಕುಕ್ಕುವುದು ತನ್ನ ಪ್ರತಿಬಿಂಬವನ್ನು ಅಂತ ಅದಕ್ಕೆ ತಿಳಿಯಲಿಲ್ಲ. ಕೊನೆಗೆ ತನ್ನಲ್ಲಿದ್ದ ಎಲ್ಲ ಶಕ್ತಿಯನ್ನು ಉಪಯೋಗಿಸಿ ಕುಕ್ಕಿದಾಗ ಕನ್ನಡಿ ಒಡೆದು ಚೂರಿ ಚೂರಾಯಿತು.ಈಗ ಅದರ ಪ್ರತಿಬಿಂಬ ನಾಲ್ಕಾಯ್ತು…. ಐದಾಯ್ತು. ಅದು ತನ್ನ ಶತ್ರುಗಳ ಸಂಖ್ಯೆ ಹೆಚ್ಚಾದುದು ಕಂಡು ಹೆದರಿ ದೂರಕ್ಕೆ ಹಾರಿ ಹೋಯ್ತು..
ಮನಷ್ಯನಿಗೆ ಶತ್ರುಗಳು ಹೆಚ್ಚಾಗುವುದು ಹೀಗೆಯೇ .. ಕತೆ ಮುಗಿಸಿದ ಸಂತ ದೀರ್ಘ ನಿಟ್ಟಿಸಿರು ಬಿಡುತ್ತಾ ಅದರ ತಾತ್ಪರ್ಯವನ್ನು ತನ್ನ ಶಿಷ್ಯಂದಿರ ಮುಂದಿಟ್ಟ .

ಪವಾಡ
ತನ್ನ ಪವಾಡದಿಂದ ದೇಶ ವಿದೇಶಗಳಿಂದ ಸಾವಿರಾರು ಭಕ್ತರನ್ನು ಹೊಂದಿದ್ದ ಸ್ವಾಮೀಜಿಯ ಆಸ್ಥಾನವದು. ಭಕ್ತರು ಒಬ್ಬೊಬ್ಬರಾಗಿ ತಮ್ಮ ಕಷ್ಟಗಳನ್ನು ಸ್ವಾಮೀಜಿ ಬಳಿ ನಿವೇದಿಸುತ್ತಿದ್ದರು. ಸ್ವಾಮೀಜಿ ತನ್ನ ಪವಾಡದಿಂದ ಗಾಳಿಯಿಂದ ಭಸ್ಮವನ್ನು ಸೃಷ್ಟಿಸಿ ಹಸನ್ಮುಖರಾಗಿ ಅವರಿಗೆ ಹಂಚುತ್ತಿದ್ದನು. ಭಕ್ತ ಸಮೂಹ ಅದನ್ನು ಅಷ್ಟೇ ಆದರದಿಂದ ಪಡೆದು ಧನ್ಯತೆಯ ಭಾವದಿಂದ ಹಿಂತಿರುಗುತ್ತಿದ್ದರು.
ಬರಗಾಲದಿಂದ ಕಂಗಾಲಾಗಿದ್ದ ರೈತನೊಬ್ಬ ಸ್ವಾಮೀಜಿ ಬಳಿ ಬಂದು ತನ್ನ ಕಷ್ಟಗಳನ್ನೆಲ್ಲ ಹೇಳಿಕೊಂಡನು.. ಸ್ವಾಮೀಜಿ ಎಂದಿನಂತೆ ಗಾಳಿಯಿಂದ ಭಸ್ಮವನ್ನು ತೆಗೆದು ಕೊಟ್ಟಾಗ ಅದನ್ನು ತಿರಸ್ಕರಿಸುತ್ತಾ ‘ ಬರದಿಂದ ಕಂಗಾಲಾದ ನನಗೆ ಬೇಕಾದುದು ಭಸ್ಮವಲ್ಲ, ಒಂದಿಷ್ಟು ಅಕ್ಕಿ ಮತ್ತು ಒಂದಿಷ್ಟು ಕಾಳುಗಳನ್ನು ತಾವು ಗಾಳಿಯಿಂದ ಸೃಷ್ಟಿಸಿ ಕೊಡಿ ..’ ನಯವಾಗಿ ರೈತನು ಬೇಡಿಕೆಯಿಟ್ಟನು.. ಸ್ವಾಮೀಜಿಯ ಮುಖದಲ್ಲಿದ್ದ ‘ಪ್ರಸನ್ನತೆ’ ಒಮ್ಮೆಲೇ ಮಾಯವಾಯ್ತು…

ನಾನು – ನೀನು
“ಪ್ರೀತಿ ಅಂದರೆ ಏನು ?” ಹಾಲು ಚೆಲ್ಲಿದ ಬೆಳದಿಂಗಳ ಬೆಳಕಿನಲ್ಲಿ ಆತನೊಂದಿಗಿದ್ದ ಅವಳು ಒಮ್ಮೆಲೇ ಪ್ರಶ್ನೆಯ ಬಾಣವನ್ನು ಛೂ ಬಿಟ್ಟಳು. ಪ್ರೀತಿಯೆಂದರೆ ಒಲವು , ವಿಶ್ವಾಸ, ಕಾಳಜಿ , ನವಿರು ಸ್ಪರ್ಶ , ಭಾವನೆಗಳು , ಕಾಮನೆಗಳ ಮಧುರ ಮಿಲನ ಆತ ಯೋಚಿಸುತ್ತ ಹೋದ, ಹೇಳಿದರೂ ಹೇಳಲಾಗದ ವಿವರಿಸಿದರೂ ವಿವರಿಸಲಾಗದ ವಿಚಿತ್ರ ವಿಕ್ಷಿಪ್ತ ವಿಸ್ಮಯವಾದ ಪ್ರೀತಿಯನ್ನು ಆತ ಪದಗಳಲ್ಲಿ ಕಟ್ಟಿ ಹಾಕಲು ಹೋಗಿ ಕೊನೆಗೆ ಸೋಲೊಪ್ಪಿ ಮೆಲ್ಲನೆ ಉಸಿರಿದ ” ಏನಿಲ್ಲ ಹುಡುಗಿ , ಪ್ರೀತಿಯೆಂದರೆ ಬರಿ ನಾನು ನೀನು…!”

ಕಾಗೆಗಳು
ನಡೆದು ಸುಸ್ತಾದ ಅವನು ಒಂದು ಕಲ್ಲಿನ ಮೇಲೆ ಕೂತ. ದೂರದಲ್ಲಿ ಕಾಗೆಗಳು ಏನನ್ನೋ ಕುಕ್ಕಿ ಎಳೆಯುತ್ತಿದೆ. ಜೊತೆ ಜೊತೆಗೆ ಆ ಕಾಗೆಗಳು ಇನ್ನಿತರ ಕಾಗೆಗಳನ್ನು ಕೂಗಿ ಕರೆಯುತ್ತಿವೆ. ಅವನು ಅಲ್ಲಿಂದ ಎದ್ದು ನಡೆದ. ಅವನ ಗೆಳೆಯನೊಬ್ಬ ಆವರೆಗೂ ಅವನ ಜೊತೆಗೆ ಇದ್ದ. ಅಲ್ಲಿಂದ ಮತ್ತೆ ಅವರು ಎರಡು ದಾರಿಯಲ್ಲಿ ಹೊರಟರು. ನಡೆದು ಕ್ಷೀಣಿಸಿದ ಅವನು ಹೋಟೆಲನ್ನು ಕಂಡದ್ದೇ ಅದರೊಳಗೆ ಹೊಕ್ಕ . ಹೊಟ್ಟೆ ತುಂಬಾ ತಿಂದು ತೇಗು ಬಿಡುತ್ತ ಹೊರಬರುತ್ತಿದ್ದಂತೆ ಅವನಿಗೆ ತನ್ನ ಗೆಳೆಯನ ನೆನಪಾಯ್ತು… “ಅವನೀಗ ಹಸಿದು ಕಂಗಾಲಾಗಿ ನಡೆಯುತ್ತಿರಬಹುದೇನೋ…?!”

ಕಾಡು
ತಾನು ಕಾಡೊಳಗೆ ಸಿಕ್ಕಿ ಹಾಕಿಕೊಂಡಿದ್ದೇನೆ ಅಂತ ಸಿಂಹಕ್ಕೆ ತಟ್ಟನೆ ಗೊತ್ತಾಯ್ತು, ಸುತ್ತಲು ದಟ್ಟವಾದ ಕಾಡು. ಅಲ್ಲಿ ಓಡುತ್ತಿರುವ ಯಾವುದೋ ವಿಚಿತ್ರ ಜೀವಿಗಳು (ಮನುಷ್ಯರು ಮತ್ತು ವಾಹನಗಳು) . ತಾನು ಸೂಕ್ಹ್ಮವಾಗಿ ಗಮನಿಸಿ ನಡೆಯದಿದ್ದರೆ ತನ್ನ ಜೀವಕ್ಕೆ ಆಪತ್ತು ಎಂದು ಅವನಿಗೆ ತಿಳಿಯಿತು. ಅವನು ಅವರ ಕಣ್ಣಿಗೆ ಬೀಳದಂತೆ ಮೆಲ್ಲ ಮೆಲ್ಲನೆ ಹೆಜ್ಜೆಯಿಟ್ಟ. ಆದರೂ ಅದ್ಯಾವುದೋ ಕ್ಷಣದಲ್ಲಿ ಅವರ ಕಣ್ಣಿಗೆ ಬಿದ್ದ. ತೂರಿ ಬಂದ ಅವರ ಆಯುಧ (ಗುಂಡು) ಅವನನ್ನು ನೆಲಕ್ಕೆ ಅಪ್ಪಳಿಸಿತು. ಅವನ ಕೊನೆಯ ಘರ್ಜನೆಯಲ್ಲಿ ರಾಜ ಗಾಂಭೀರ್ಯವಿತ್ತು. ಆದರೆ ಆ “ಕಾಂಕ್ರೀಟ್ ಕಾಡಿನಲ್ಲಿ” ಅದನ್ನು ಯಾರು ತಾನೆ ಕೇಳಿಯಾರು….?

ಚಿತ್ರಕೃಪೆ : ಅಂತರ್ಜಾಲ


Leave comments

ಕನ್ನಡ ಬ್ಲಾಗಿನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

ಹುಸೇನಿ ಪದ್ಯಗಳು - 9 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 9

ಬತ್ತಿದ ನನ್ನೆದೆಯೊಳು
ಬಿಕ್ಕಳಿಸುತಿವೆ
ನಿನ್ನ ನೆನಪುಗಳು …!

ಸಾವಿರ ಕೋಟಿ ನಕ್ಷತ್ರಗಳಿದ್ದರೂ
ರಾತ್ರಿಯ ಸೊಬಗು
ಚಂದ್ರನಲ್ಲವೇ….?

ನಾ ನಿನ್ನ ಕಂಡಾಗಲೇ
ಹೃದಯ ಜಾರಿದ್ದು ,ಮನಸು ಮಗುವಾಗಿ
ನಿನ್ನನೇ ಬೇಡಿದ್ದು…!

ನಿನ್ನ ನೆನಪನ್ನು
ಓಲೆ ಮೇಲೆ ಚೆಲ್ಲ ಹೊರಟಾಗಲೇ
ಅಕ್ಷರಗಳು ಪದವಾಗದೆ ಪ್ರತಿಭಟಿಸಿದ್ದು!

ನೀನಿತ್ತ ನೋವ ನೆನೆದು
ಮರುಗಿದಾಗಲೇ
ನನ್ನೆದೆ ನಿನ್ನ ಹೆಗಲ ಬಯಸಿದ್ದು..!


Leave a Comment

ಕನ್ನಡ ಬ್ಲಾಗಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಅನಾಥ ಶವಗಳು...

ಅನಾಥ ಶವಗಳು…

ಮನಸು ಮಾತಾಡುವುದ ನಿಲ್ಲಿಸಿಬಿಟ್ಟಿದೆ…
ಉಸಿರಾಟದಲ್ಲೂ ಜಾಗತೀಕರಣದ ಗಾಳಿ…
ಮನೆ ಬಾಗಿಲಲ್ಲೇ ಸಿಗುತ್ತವೆ
ವಿಶ್ವದರ್ಜೆಯ ಮುಖವಾಡಗಳು…

‘ಅಮ್ಮ’ – ‘ಮಮ್ಮಿ’ಯಾಗಿ ಹೆಣವೆನಿಸಿಕೊಂಡಳು
ತೊದಲು ನುಡಿಯಲ್ಲೂ ಮಣ್ಣಗಂಧವಿಲ್ಲ…

ತುಟಿ – ನಾಲಿಗೆಗಳಿಗೆ ದಿನವಿಡೀ ಬಿಡುವಿಲ್ಲ
ಕಿವಿ ಬಿಸಿಯಾಗಿ ಹೋಗಿದೆ
ಕುಣಿಯುತ್ತಿವೆ
ಭಾವಸೆಲೆಯಿಲ್ಲದ ಸಾವಿರಾರು ಒಣ ಶಬ್ದಗಳು…

ಹಸುಳೆಯ ಕೈಯಲ್ಲೂ ಗಣಕಯಂತ್ರ
ಬೆರಳುಗಳು ಮಾತಾಡುತ್ತವೆ ಅಜೀರ್ಣವಾಗುವಷ್ಟು
ಅಲ್ಲೂ ಕಡ ತಂದ ಸಂದೇಶಗಳದ್ದೇ ಮೇಲುಗೈ…

ಎಲ್ಲೋ ಯಾರೋ ಮಡಿದ ಸುದ್ದಿಗೆ
ಸಾಮಾಜಿಕ ಜಾಲತಾಣದಲ್ಲೊಂದು ತುಂಬ ನೋವಿನ (?)
ಗೋಡೆ ಬರಹ…
ವೃದ್ಧಾಶೃಮದಲ್ಲಿ ತನ್ನಮ್ಮ ನಿತ್ಯವೂ ಸಾಯುತಿರುವುದರೆಡೆಗೆ
ಜಾಣ ಮರೆವು…

ಕಾರು ಬಂಗಲೆಗಳೆಲ್ಲ ಸಾಧನೆಯ ಅಳತೆಗೋಲುಗಳಾಗಿ,
ಗಳಿಕೆ – ಹೂಡಿಕೆಗಳೇ ಬದುಕಾಗಿ ಹೋಗಿ,
ಜೀವಿಸುವ ಖುಷಿಯ ಕಳೆದುಕೊಂಡ
ವಿಶ್ವ ಮಾರುಕಟ್ಟೆಯಲ್ಲಿ
ಭಾವ – ಬಂಧಗಳೆಲ್ಲ
ಅನಾಥ ಶವಗಳು…

ಗೆಳೆಯ ಶ್ರೀವತ್ಸ ಕಂಚಿಮನೆ ರವರ ಈ ಕವಿತೆಯನ್ನು ಎರಡು ಬಾರಿ ಓದಿ ಮುಗಿಸಿದಾಗಳು ಸಾಕೆನಿಸದೆ ಮತ್ತೊಮ್ಮೆ ಓದಬೇಕೆನಿಸಿತು.. ಅದೇನೋ ಸೆಳೆಯುವ ಶಕ್ತಿಯಿತ್ತು ಈ ಕವಿತೆಗೆ. ಒಂದೊಂದು ಸಾಲುಗಳು ಮನದ ಒಳ ಹಂದರವನ್ನು ಹೊಕ್ಕವು. ಆಧುನಿಕತೆಯ ಸೊಗಡಿನಲ್ಲಿ ಅಪಮೌಲ್ಯಗೊಳ್ಳುತ್ತಿರುವ ಮಾನವ ಮೂಲ್ಯಗಳಿಗೆ, ಸಂಬಂಧಗಳಿಗೆ, ನಮ್ಮ ಸಂಸ್ಕೃತಿಗೆ ಹಿಡಿದ ಕನ್ನಡಿಯಂತಿತ್ತು ಈ ಕವಿತೆ.

ಹೌದು. ತಾಂತ್ರಿಕವಾಗಿ, ವೈಜ್ಞಾನಿಕವಾಗಿ, ವ್ಯಾವಾಹಾರಿಕವಾಗಿ ನಾವು ಅದೆಷ್ಟು ಮುಂದುವರೆದಿದ್ದರೂ ನಮ್ಮೊಳಗಿನ ‘ಮಾನವ’ ‘ತನ್ನತನ’ವನ್ನು ಉಳಿಸಿಕೊಂಡಿಲ್ಲ. ಅವನಲ್ಲಿರಬೇಕಾದ ಮಾನವೀಯ ಗುಣಗ ಳು ಅಧಃ ಪತನದ ಹಾದಿ ಹಿಡಿದಿವೆ . ಸಂಬಂಧಗಳು ಅರ್ಥಕಳೆದುಕೊಂಡು ಮೂಲೆಗುಂಪಾಗಿದೆ. ಆಧುನಿಕತೆಯ ಭರಾಟೆಯಲ್ಲಿ ನಾವು ಪಡೆದುದು, ಕಳೆದುಕೊಂಡದ್ದನ್ನು ಒಮ್ಮೆ ಆತ್ಮಾವಲೋಕನ ಮಾಡೋಣ. ನಮ್ಮಲ್ಲಿ ಎತ್ತರದ ಕಟ್ಟಡಗಳಿವೆ , ಆದರೆ ಸ್ಪೋಟಿಸುವ ಸ್ವಭಾವವು ಅದಕ್ಕಿವೆ. ನಮ್ಮ ರಸ್ತೆಗಳು ವಿಶಾಲವಾಗಿದೆ ಆದರೆ ನಮ್ಮ ದೃಷ್ಟಿಕೋನಗಳು ಸಂಕುಚಿತವಾಗಿವೆ. ನಮ್ಮ ಮನೆಗಳು ದೊಡ್ಡದಾಗುತ್ತಿವೆ , ಆದರೆ ಕುಟುಂಬ ಚಿಕ್ಕದಾಗುತ್ತಿವೆ. ಅಸಾಮಾನ್ಯ ವಿದ್ಯಾರ್ಹತೆ ಇದೆ , ಆದರೆ ಸಾಮಾನ್ಯ ಜ್ಞಾನ ಕಡಿಮೆಯಾಗಿದೆ. ವಿಷಯ ಸಂಗ್ರಹ ಹೆಚ್ಚಾಗಿದೆ, ಆದರೆ ವಿವೇಚನೆ ಕಡಿಮೆಯಾಗಿದೆ. ಔಷಧಿಗಳು ಹೆಚ್ಚಾಗಿದೆ, ಆದರೆ ಆರೋಗ್ಯ ಕಡಿಮೆಯಾಗಿದೆ. ನಾವು ಹೆಚ್ಚು ಗಳಿಸುತ್ತೀವೆ, ಆದರೆ ಕಡಿಮೆ ನಗುತ್ತೇವೆ. ನಮ್ಮ ಆಸ್ತಿ ಪಾಸ್ತಿಯ ಬೆಲೆ ಏರಿದೆ , ನಮ್ಮ ಮೌಲ್ಯ ಕುಸಿದಿದೆ.ನಮ್ಮ ಜೀವನಕ್ಕೆ ವರ್ಷಗಳನ್ನು ತುಂಬುತ್ತಿದ್ದೇವೆ , ಆದರೆ ವರ್ಷಗಳಿಗೆ ಜೀವ ತುಂಬುತ್ತಿಲ್ಲ.ನಾವು ಚಂದ್ರ ಲೋಕವನ್ನು ಮುಟ್ಟಿ ಬಂದಿದ್ದೇವೆ, ಕಂಪೌಂಡ್ ದಾಟಿ ನೆರೆ ಮನೆಯವರನ್ನು ಭೇಟಿಯಾಗಲು ಹೋಗಿಲ್ಲ. ನಾವು ಬಹಿರಂಗವಾಗಿ ಗೆಲ್ಲುತ್ತೇವೆ, ಆದರೆ ಅಂತರಂಗದಲ್ಲಿ ಸೋಲುತ್ತಿದ್ದೇವೆ. ಗಾಳಿಯನ್ನು ಶುದ್ದೀರಕಿಸುವ ವಿಧಾನವನ್ನು ಕಂಡು ಹಿಡಿದಿದ್ದೇವೆ, ಆದರೆ ನಮ್ಮ ಆತ್ಮವನ್ನು ಮಲಿನಗೊಳಿಸಿದ್ದೇವೆ. ಅಣುವನ್ನೂ ಖಂಡ ತುಂಡ ಮಾಡಿದ್ದೇವೆ, ಆದರೆ ನಮ್ಮ ಅಹಂ ಅಖಂಡವಾಗಿ ಉಳಿದಿದೆ. ನಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದ್ದೇವೆ, ಆದರೆ ನೈತಿಕತೆ ಕುಸಿದಿದೆ. ವಿಶ್ವ ಶಾಂತಿಯ ಬಗ್ಗೆ ಮಾತನಾಡುತ್ತೇವೆ, ಆದರೆ ಮನೆಯವರೊಂದಿಗೆ ಕಾದಾಡುತ್ತೇವೆ. ಗಂಡ ಹೆಂಡಿರ ದುಡಿಮೆ ಹೆಚ್ಚಾಗಿದೆ, ಆದರೆ ವಿಚ್ಚೇಧನಗಳೂ ಹೆಚ್ಚಾಗಿವೆ. ಹಸಿವು ಹೆಚ್ಚಿಸಲು , ಹಸಿವು ತಗ್ಗಿಸಲು , ಜೀರ್ಣಿಸಿಕೊಳ್ಳಲು ಮಾತ್ರೆಗಳಿವೆ , ದಪ್ಪಗಾಗಳು , ಸಣ್ಣಗಾಗಳು, ತೆಪ್ಪಗಿರಲೂ ಮಾತ್ರೆಗಳಿವೆ . ನಿದ್ದೆಗೂ , ನಿದ್ದೆಗೆಡಿಸುವುದಕ್ಕೂ, ಬದುಕುವುದಕ್ಕು , ಕೊನೆಗೆ ಸಾಯುವುದಕ್ಕೂ ಮಾತ್ರೆಗಳೇ ಬೇಕು …!

ಅಬ್ಬಾ… ಕಾಲದೊಂದಿಗೆ ನಾವೂ ಅದೆಷ್ಟು ಬದಲಾಗಿದ್ದೇವೆ ಅಲ್ವಾ ? ಗೆಳೆಯ ಶ್ರೀವತ್ಸ ಹೇಳಿದಂತೆ ಕಾರು ಬಂಗಲೆಗಳೆಲ್ಲ ಸಾಧನೆಯ ಅಳತೆಗೋಲುಗಳಾಗಿ, ಗಳಿಕೆ – ಹೂಡಿಕೆಗಳೇ ಬದುಕಾಗಿ ಹೋಗಿ, ಜೀವಿಸುವ ಖುಷಿಯ ಕಳೆದುಕೊಂಡ ವಿಶ್ವ ಮಾರುಕಟ್ಟೆಯಲ್ಲಿ ಭಾವ – ಬಂಧಗಳೆಲ್ಲ ಅನಾಥ ಶವಗಳು…


Leave a Comment

ಕನ್ನಡ ಬ್ಲಾಗ್ ನಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಹುಸೇನಿ ಪದ್ಯಗಳು - 8 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 8


ನಾನಿನ್ನ ನೆರಳೆಂದೆ ನೀನು
‘ನಾನು ಸತ್ಯ’
‘ನೆರಳು ಮಿಥ್ಯ’
ಅವೆರಡು ಜೊತೆಯಾಗಲಾರದೆಂಬುದು
ನಿತ್ಯ ಸತ್ಯ..!
——-

ಒಳಗೊಳಗೇ ಅತ್ತು
ಸತ್ತು ಹೋದ ನನ್ನ
ಕನಸುಗಳ
ಗೋರಿಗೆ
ನಿನ್ನ ಹೆಸರಿಟ್ಟಿದ್ದೇನೆ..!
——-

ನಿನ್ನೆದುರು ದನಿಯಾಗಲು
ಸೋತ ಮಾತುಗಳು
ಕಮ್ಮನೆ ಕುಳಿತಿವೆ..
ಮಡುಗಟ್ಟಿದ
ಕಣ್ಣೀರಿಗೆ
ಜೊತೆಯಾಗಿ..!
——-

ನನಗಸೂಯೆ..!
ಅವಳನ್ನು ಸೋಕಿ ಹೋಗುವ
ತಂಗಾಳಿ ಮೇಲೆ
ಅವಳ ಮೈ ಮೇಲೆರಗುವ
ಬಿಸಿಲ ಮೇಲೆ
ನನಗೊಂದಿಷ್ಟು ಜಾಗ ನೀಡದ
ಅವಳ ಮನಸಿನ ಮೇಲೆ ..!


Leave a Comment

ಕನ್ನಡ ಬ್ಲಾಗ್ ನಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಹುಸೇನಿ ಪದ್ಯಗಳು - 7 · ಹುಸೇನಿ_ಪದ್ಯಗಳು

ಮೂರೇ ಮೂರು (ಹುಸೇನಿ ಪದ್ಯಗಳು – 7)


ನಿನ್ನ ಮಾತಿಗಿಂತ
ಮೌನವೇ ಎನಗಿಷ್ಟ..
ಮೌನದೊಳು ನೀನಾಡದ
ಅದೆಷ್ಟು ಮಾತುಗಳು…!!೨
ಗೆಳತೀ ..
ಅದೋ ಅಲ್ಲಿ ನೋಡು..
ಚಂದಿರ..!
ಬೆಳದಿಂಗಳಿರಬಹುದು!
ಅವನಲ್ಲೂ ನಿನ್ನ ಅದೇ ಕಾಂತಿ..!


ಪ್ರೀತಿ ನನಗೆ ಎಲ್ಲವನ್ನೂ
ಕೊಟ್ಟಿತು
ನಿನ್ನ ಹೊರತಾಗಿ…!


Leave a Comment