ಜಾಹೀರಾತು
ಅವನ ಹಳೆಯ ಮನೆಯೆದುರಿಗಿದ್ದ ಬ್ಯಾಂಕ್ ಜಾಹೀರಾತು ಫಲಕದಲ್ಲಿ ತನ್ನ ನೆಚ್ಚಿನ ಸಿನಿಮಾ ನಟ ನಗುತ್ತ ನಿಂತಿದ್ದ . “ಸ್ನೇಹಿತನಾಗಿ, ಮಾರ್ಗದರ್ಶಕನಾಗಿ ಸದಾ ನಿಮ್ಮೊಂದಿಗೆ “ಎಂಬ ಒಕ್ಕಣೆಯೂ ಅಲ್ಲಿತ್ತು. ಅದನ್ನು ನೋಡಿದವನೇ ಖುಷಿಯಿಂದ ಅದೇ ಬ್ಯಾಕಿಂದ ಹೊಸ ಮನೆ ಕಟ್ಟಲು ‘ಮನೆಸಾಲ’ ಮಾಡಿದ. ವರ್ಷಗಳ ನಂತರ ಅವನಿಗೆ ಸಾಲ ಹಿಂದಿರುಗಿಸಲಾಗದೆ ಬ್ಯಾಂಕಿನವರು ಬಂದು ಮನೆ ಜಪ್ತಿ ಮಾಡಿ ಅವನನ್ನು ಹೊರಗಟ್ಟಿದರು.. ಉಮ್ಮಳಿಸಿ ಬರುವ ದುಃಖದಿಂದ ಆತ ಫಲಕವನ್ನೊಮ್ಮೆ ನೋಡಿದ.. ಅವನ ನೆಚ್ಚಿನ ನಟ ನಗುತ್ತ ನಿಂತಿದ್ದ..
ಕಾಡು ಮನುಷ್ಯ
ಆತ ಬಾಲ್ಯದಲ್ಲೇ ಮನೆಬಿಟ್ಟು ಕಾಡು ಸೇರಿ ಡಕಾಯಿತರ ಗುಂಪು ಸೇರಿದ್ದ. ಈಗ ಅವನೇ ಆ ಗುಂಪಿಗೆ ನಾಯಕ.. ಒಂದಿ ದಿನ ಕಾಡು ದಾರಿಯಿಂದ ವ್ಯಾಪಾರ ಮುಗಿಸಿ ಬರಿತ್ತಿದ್ದ ೩ ಜನರ ಗುಂಪನ್ನು ಕೊಂದು ಅವರಲ್ಲಿದ್ದ ಹಣವನ್ನೆಲ್ಲ ದೋಚಿದ..ಸಾಯುವ ವೇಳೆ ಅದರಲ್ಲಿದ್ದ ಮುದುಕನ ಆಕ್ರಂದನ ಆತನಲ್ಲಿ ಬದಲಾವಣೆಯನ್ನು ತಂದಿತ್ತು. ಆತ ಎಲ್ಲವನ್ನು ಬಿಟ್ಟು ಊರು ಕಡೆ ದಾರಿ ಹಿಡಿದ.. ಸಂತಸದಿಂದಲೇ ತನಗೆ ಮರೆತು ಹೋಗಿದ್ದ ತಂದೆ-ತಾಯಿಯ ಮುಖವನ್ನು ನೆನಪಿಗೆ ತರಲು ಪ್ರಯತ್ನಿಸುತ್ತಿದ್ದ..
ತಾಯಿಯನ್ನು ಕಂಡವನೇ ಕಾಲಿಗೆರಗಿ ಕ್ಷಮೆ ಕೇಳಿ ತನ್ನ ತಂದೆಯ ಬಗ್ಗೆ ವಿಚಾರಿಸಿದ.. ತಾಯಿ ಅಳುತ್ತ ನುಡಿದಳು..”ಮೊನ್ನೆ ಕಾಡು ದಾರಿಯಲ್ಲಿ ಬರುತ್ತಿದ್ದ ನಿಮ್ಮಪ್ಪನನ್ನು ಕಾಡು ಮನುಷ್ಯರು ಕೊಂದು ಹಾಕಿದ್ರು.. ”
ಮದುವೆ
ಮೂವರು ಸ್ನೇಹಿತರು ಕಾರಿನಲ್ಲಿ ಪ್ರವಾಸ ಹೊರಟಿದ್ದರು.. ಚಾಲಕ ವಾಯುವೇಗದಲ್ಲಿ ಕಾರನ್ನು ಓಡಿಸ ತೊಡಗಿದಾಗ ಒಬ್ಬಾತ ತಮಾಷೆಯಾಗಿ ಹೇಳಿದ “ಗುರೂ.. ಕಾರನ್ನು ಮೆಲ್ಲ ಓಡಿಸು .. ನನಗಿನ್ನೂ ‘ಮದುವೆ’ ಆಗಿಲ್ಲ “.. ಮತ್ತೊಬ್ಬ ಗಂಭೀರವಾಗಿ ಹೇಳಿದ “ಕಾರನ್ನು ಮೆಲ್ಲ ಓಡಿಸು… ನನಗೆ ‘ಮದುವೆ’ ಆಗಿದೆ “.
ಹೆಣ್ಣು
“ಅಪ್ಪಾ ಇದಿರಲಿ ಖರ್ಚಿಗೆ… ಅಣ್ಣ ಈ ವಾರನು ಬರದಿದ್ದರೆ .. ನೀನು ಇಲ್ಲೇ ಬಾ ..ಇಲ್ಲೇ ಇರೋಣ… ” ಮಗಳು ಕೊಟ್ಟ ದುಡ್ಡನ್ನು ಜೇಬಿಗಿಳಿಸುತ್ತ ಹೊರಟ ಆತನಿಗೆ “ಇಷ್ಟು ಕಷ್ಟಪಟ್ಟು ಹೆತ್ತಿದ್ದು ಹೆಣ್ಣನ್ನಾ….? ” ತಾನು ಹಿಂದೆ ಹೆಂಡತಿಗೆ ಕೇಳಿದ ಪ್ರಶ್ನೆ ಚೂರಿಯಾಗಿ ಎದೆಗೆ ತಿವಿಯುತ್ತಿತ್ತು …ಅವನರಿಯದೆ ಕಣ್ಣು ತೇವಗೊಂಡಿತ್ತು …
ಕೊಂದ ದಿನ
ಅಪ್ಪಾ..ಗಾಂಧೀ ತಾತನನ್ನು ಕೊಂದ ದಿವಸ ಯಾವುದಪ್ಪ ..? ಗೊತ್ತಿಲ್ಲ್ಲ ಮಗೂ ಇತ್ತೀಚಿಗಂತೂ ಪ್ರತೀದಿನ ಕೊಲ್ಲುತ್ತಿದ್ದೇವೆ.