ಬಾ ರಚ್ಚೆ ಹಿಡಿ.. · ಯಾ ರೂಹಿ ....

ಬಾ ರಚ್ಚೆ ಹಿಡಿ..

cute
ಬಾ ರಚ್ಚೆ ಹಿಡಿ.. ಕೋಪ ತೋರ್ಸು.. ಗ್ಲಾಸು ತುಂಬಾ ಹಾಲು ಬೇಕಂತ,ಆ ಚಕ್ಲಿ ಪ್ಯಾಕೆಟಲ್ಲೇ ಬೇಕಂತ, ಹೊಸ ಪ್ಲೇಟಲ್ಲೇ ಊಟ ಕೊಡು ಅಂತೆಲ್ಲಾ ಹಠ ಹಿಡಿ, ನಾ ನಿನ್ನನ್ನೆತ್ತಿ ಮುದ್ದಾಡಲು ಓಡಿ ಬಂದಾಗ ಕೈಗೆ ಸಿಗದೇ ಓಡಿ ಬಾಗಿಲ ಮರೆಯಲ್ಲಿ ನಿಂತು ಕತ್ತೆತ್ತಿ ನೋಡು, ನನ್ನ ಕೂದಲನ್ನು ಹಿಡಿದೆಳೆದು ನೋವು ಮಾಡು, ಮುಖದ ತುಂಬಾ ಪರಚಿ ಬಿಡು, ಕೈಗೆ ಸಿಕ್ಕ ಎಲ್ಲವನ್ನೂ ಬಾಯಿಗೆ ಹಾಕು, ಅಂಗಳದ ಮಣ್ಣು ಕಹಿಯಾದಾಗ ಓಡಿಬಾ, ಬಾಯಿಗೆ ಕೈಹಾಕಿ ತೆಗದು ಬಾಯಿ ತೊಳೆಸಿದಾಗ ಸಕ್ಕರೆ ಡಬ್ಬಕ್ಕೆ ಕೈ ತೋರ್ಸು, ಮಿಲ್ಕ್ ಪೌಡರನ್ನು ಅಡಗಿಸಿಟ್ಟಲ್ಲಿಂದ ತೆಗೆದು ಕೈ ಮುಖದಲ್ಲೆಲ್ಲಾ ಮೆತ್ತು, ಇಲ್ಲದ ಹೊಟ್ಟೆನೋವಿಗೆ ಇಷ್ಟಗಳ ಬಾಯಿ ಮಾಡಿ ಅಳು, ನಾಟಕ ಅಂತ ಗೊತ್ತಿದ್ರು ಹೊಟ್ಟೆಯ ನೇವರಿಸಿ ನಿಯಾಳಿಸುವಾಗ ಮುದ್ದು ಮುದ್ದು ಮುಖ ಮಾಡು, ಖಾರದ ಪದಾರ್ಥ ತಿಂದು ನೀರಿಗಾಗಿ ಓಡೋಡಿ ಬಾ, ಒಂದೇ ಗುಟುಕಿಗೆ ನೀರು ಕುಡಿಯುವಾಗ ಕೆಮ್ಮಿ ನೀರು ಬಾಯಲ್ಲೂ ಮೂಗಲ್ಲೂ ಬರಲಿ.. ಮಧ್ಯ ರಾತ್ರಿ ಸುಮ್ಸುಮ್ನೆ ಅಳು .. ಎಷ್ಟಾದರೂ ನಿಲ್ಲಿಸದೇ…ನಿನ್ನ ಮುದ್ದು ಮುದ್ದು ಮಾಡಿ ಮುತ್ತಿನ ಮಳೆಗೆರಿತೇನೆ… ಕೊನೆಗೆ ಅತ್ತು ಅತ್ತು ಸುಸ್ತಾಗಿ ನನ್ನೆದೆಯಲ್ಲೇ ಮಲಗಿ ಬಿಡು…
ಬಾ.. ಬಾ … ಮಗುವಾಗು ನನಗಿಂದು ನಿನ್ನ ಅಪ್ಪನಾಗುವ ಆಸೆ ಆಗಿದೆ..

ಹುಸೇನಿ~

Leave a comment

ಪ್ರತೀ ಸಂಜೆ...! · ಮತ್ತೆ ಸಂಜೆಯಾಗುತ್ತಿದೆ.. · ಯಾ ರೂಹಿ .... · ರೂಹೀ

kannada Love Letter – kannada Quotes

ಪ್ರತೀ ಸಂಜೆ…!

ಹೇಯ್ ಹುಡುಗಿ.. !
ಈ ಕೊಳದ ದಂಡೆಯಲ್ಲಿ ಇಂದೂ ಕಾದು ಕುಳಿತಿದ್ದೇನೆ. ಎದೆಯ ನೋವು ನಲಿವು,ಆರ್ದ್ರತೆ, ಸಂತಸ, ಸಂಭ್ರಮವನ್ನೆಲ್ಲ ನಿನ್ನಲ್ಲಿ ಹರವಿ ಈ ಕ್ಷಣ ‘ಜೀವಿಸಲು’ಕಾಯುವ ಘಳಿಗೆ ಇದು.ಕೈಯೊಳಗೆ ಕೈ ಪೋಣಿಸಿ ಬೆರಳುಗಳ ಮಧ್ಯದ ಖಾಲಿತನವನ್ನೂ ತುಂಬುವ ಆ ಹೊತ್ತನ್ನು ನೆನೆಯುವಾಗೆಲ್ಲ ನನ್ನೆದೆಯ ನಗಾರಿಯ ಜೀವ ಹುಚ್ಚೆದ್ದು ಕುಣಿ ಕುಣಿದು ಖುಶಿ ಪಡುತ್ತಿದೆ. ಆ ಕ್ಷಣ….ಆ ಕ್ಷಣಗಳಷ್ಟೇ ನಾನು ಜೀವಿಸುತ್ತೇನೆ. ಈ ಅಲ್ಪನ ಮನಸಿನ ಒಳ ಪದರದ ಅಂಚಂಚಲ್ಲು ಅಳಿಸಲಾಗದ ಭಾವದುಂಧುಬಿ ತುಂಬುವ ಅಮೂರ್ತ ಕ್ಷಣವದು. ಕಣ್ಣಂಚಿನ ಆ ನೋಟದ ಒಂದು ಕ್ಷಣಕ್ಕಾಗಿ ನನ್ನ ಕಣ್ಣ ಕೂಪದಲಿ ಕನಸುಗಳ ಬಣ್ಣ ತುಂಬಿ ಕನಸ ನೋಟದ ಅನುಭಾವಕೆ ಕನಲಿ ನಾ ಕಾತರಿಸಿಹೆನು. ಅಲ್ಲೇ ಆ ನಿನ್ನ ಕಣ್ಣ ಕೊಳದಲ್ಲಿ ಇಳಿದು ಬಿಡುವಾಸೆ. ಮತ್ತೊಮ್ಮೆಯೂ ಮೆಲೇರಲಾಗದಂತೆ.. ನಿನ್ನ ಆರ್ದ್ರ ನೋಟದಂಚಲಿ ಮೂಡುವ ಮಂದಸ್ಮಿಥ ನನ್ನೊಳಗೆ ತುಂಬುವ ಸ್ಥಾಯೀ ಭಾವ ನನ್ನ ಜೀವಧಾತು.. ಆ ಒಂದು ಕಿರು ನಗೆ ನನ್ನೊಳಗೆ ಮುತ್ತಾಗಿ ಹೊಳೆಯುವಾಗೆಲ್ಲ ನನ್ನನ್ನೇ ನಾನು ಕಂಡುಕೊಳ್ಳುತ್ತೇನೆ… ಹೀಗೆ ನಿನ್ನ ಕಾಯುತ್ತಾ ಕಾಯುತ್ತಾ ವಿಷಣ್ಣ ಭಾವದ ಶೃಂಗದಲ್ಲಿ ಕುಳಿತು ನನ್ನೊಂದಿಗೆ ನನ್ನ ಸ್ವಗತ ಸಾಗುತ್ತದೆ… ಪ್ರತೀ ಸಂಜೆ…!

~ಹುಸೇನಿ

ನನ್ನ ಹೆಸರು.. · ಯಾ ರೂಹಿ ....

ನನ್ನ ಹೆಸರು..

nanna-hesaru

“ನಿನ್ನ ಹೆಸರು ಹೇಳುವಾಗೆಲ್ಲಾ ಖುಷಿಯಲೆಗಳು ಪುಟಿದೇಳುತ್ತವೆ.. ಭಾವ ತಂತುವೊಂದು ಮೀಟಿ ರಾಗವ ಹೊಮ್ಮಿದ ಹಾಗೆ.. ಅದು ತರಂಗವೆಬ್ಬಿಸುತ್ತಾ ಹಾಡಿನಾಚೆಗೂ ಇರುವ ಶುಭದ ಹಾದಿಯನ್ನೇ ತೆರೆಯುವ ಹಾಗೆ.. ನನ್ನ ಕುಟುಂಬದಲ್ಯಾರೂ ಈ ಹೆಸರಿನವರಿಲ್ಲ.. ಯಾರಾದರೂ ಬಾಯಿಂದ ಈ ಹೆಸರು ಕೇಳಿದರೆ ಆತ್ಮದೊಳಗೊಂದು ವಿದ್ಯುತ್-ಸಂಚಲನ… ನಿನ್ನ ಹೆಸರು ಮತ್ತೆ ಮತ್ತೆ ಕೂಗುವುದು ನನ್ನೊಳಗೆ ಸಂಭ್ರಮದ ಹೊನಲು ಸೃಷ್ಟಿಸುತ್ತದೆ… “..
ನನ್ನ ಹೆಸರಿನ ಬಗ್ಗೆ ಅವಳು ಹೇಳುತ್ತಲೇ ಇದ್ದಳು..

ಅವತ್ತು ಭಾನುವಾರ ನಾನು ಊರಲ್ಲಿದ್ದೆ, ಹಾಸ್ಟೆಲಿನಲ್ಲಿ ಒಂದೆರಡು ಮಂದಿ ಮಾತ್ರ ಇದ್ದರು. ಅಂದು ಬೆಳಿಗ್ಗೆ ಮೂರು ದಿನಗಳ ಹಿಂದಷ್ಟೇ ಹಾಸ್ಟೆಲು ಸೇರಿದ್ದ ನನ್ನ ಹೆಸರಿನ ವಯಸ್ಸಾದ ಒಬ್ಬರು ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿ ಅಸುನೀಗಿದ್ದರು. ಕ್ಷಣ ಮಾತ್ರದಲ್ಲಿ ಹಾಸ್ಟೆಲಿಂದ ಹೋದ ಮೆಸೇಜ್ ಈ ರೀತಿಯಿತ್ತು “ಹುಸೇನ್ ನೋ ಮೋರ್.. ”
ಮೆಸೇಜ್ ಓದಿದವರೆಲ್ಲಾ ದಿಗ್ಭ್ರಾಂತರಾದರು. ಪಾಪ.. ಅವನಿಗೆ ಸಾವಿನ ವಯಸ್ಸಾಗಲಿಲ್ಲವೇ…. ?? ಅಂತೆಲ್ಲಾ ಮಾತುಕತೆ ನಡೆಯಿತು. ಕೊನೆಗೆ ಆ ದಿನ ಸಂಜೆ ಸತ್ತಿದ್ದು ನಾನಲ್ಲ ಅಂತ ಗೊತ್ತಾದ್ಮೇಲೆ ಅದು ತಮಾಷೆ ವಸ್ತುವಾಯ್ತು.
ಅಲ್ಲೂ..ಇಲ್ಲೂ ನನ್ನ ಹೆಸರು… ಒಂದು ಕಡೆ ಬದುಕಿನ ಉತ್ಸಾಹ ಕೊಟ್ಟಿತು. ಇನ್ನೊಂದು ಕಡೆ ಸಾವಿನ ಸೂತಕವಾಯ್ತು .. !

~ಹುಸೇನಿ

Leave a comment

ಏ ರೂಹಿ...! ನೀ ತಾಯಿಯಾಗುವಾಗೆಲ್ಲ... · ತೊರೆಯ ತೀರದ ನೆನಪುಗಳು · ಯಾ ರೂಹಿ ....

ಏ ರೂಹಿ…! ನೀ ತಾಯಿಯಾಗುವಾಗೆಲ್ಲ…

Huseni

…. ನೀನು ಮಗುವಾಗ್ತಾ ಇದ್ದೀಯಾ …
…. ನೀನು ತಾಯಿಯಾದಂತೆಲ್ಲಾ ನಾನು ಮಗುವಾಗುತ್ತಿದ್ದೇನೆ…

ಹೌದು.. ನೀನು ಮಮತೆಯ ಮಡಿಲಾದಂತೆಲ್ಲಾ ನಾನು ಮಗುವಾಗುತ್ತೇನೆ… ಮತ್ತೆ ಮತ್ತೆ.. ಹಾಗೆ ಮಗುವಾದಾಗೆಲ್ಲ ನನ್ನ ಮಗುತನ ಸುಮ್ಮನೆ ಗರಿ ಬಿಚ್ಚುತ್ತದೆ.. ಮಗುತನದಲ್ಲೇ ಏನೇನೋ ಹುಚ್ಚು ಆಸೆಗಳು..
ಪೆಪ್ಪರ್ಮೆಂಟಿಗೆ ಸೋಗುಹಾಕಿ ಅತ್ತು ಕರೆದು ರಚ್ಚೆ ಹಿಡಿದು ಇಷ್ಟಗಲ ಬೊಚ್ಚು ಬಾಯಲ್ಲಿ ಆಆ ಅಂತ ಅಳಬೇಕು. ಬೆಳಿಗ್ಗೆ ನಿನ್ನ ಕೂಗನ್ನು ಲೆಕ್ಕಿಸದೆ ಹಾಗೆ ಮಲಗಬೇಕು, ನೀ ಮೂರು ಬಾರಿ ಎಬ್ಬಿಸಿ ಹೋದರು ಅಲುಗಾಡದೆ ರಗ್ಗು ಹೊದ್ದು ಮತ್ತೆ ಮಲಗಬೇಕು, ಆಮೇಲೆ ಕೋಪದಲ್ಲೇ ನೀ ಬಂದು ದಿಂಬನ್ನೂ ರಗ್ಗನ್ನೂ ಬಲವಂತವಾಗಿ ಬಿಸಾಕಿ ನನ್ನನ್ನು ಹೆಗಲ ಮೇಲೆ ಎತ್ಕೊಂಡು ಬಾತ್ರೂಮಲ್ಲಿ ಇಳಿಸಿ ಬ್ರಶ್ಶಿಗೆ ಪೇಸ್ಟ್ ಹಾಕಿ ಬಾಯಿಗೆ ತುರುಕಿ ಹೋಗಿ ಒಂದೈದು ನಿಮಿಷದ ನಂತರ ಬಂದು ನೋಡುವಾಗ ಹಾಗೆಯೆ ಬಾಯಲ್ಲಿ ಬ್ರಶ್ಶಿಟ್ಟು ಕೂತಲ್ಲೇ ನಿದ್ದೆ ಮಾಡಬೇಕು.. ಆಮೇಲೆ ನಿನ್ನ ಕೈಯಾರೆ ಹಲ್ಲುಜ್ಜಿಸಬೇಕು. ಹೊಟ್ಟೆನೋವೆಂಬ ಸುಳ್ಳು ನೆಪ ಹೇಳಿ ಶಾಲೆಗೇ ಚಕ್ಕರ್ ಹಾಕಬೇಕು. ಆಮೇಲೆ ಕಹಿ ಕಷಾಯದೊಂದಿಗೆ ನೀ ಬಂದಾಗ ಶರ್ಟು ಎತ್ತಿ ಹೊಟ್ಟೆ ನೋವೇ ಇಲ್ಲ ನೋಡು ಅಂತ ಮುಗುಮ್ಮಾಗಿ ಸಾಗ ಹಾಕಬೇಕು. ನೀ ತಟ್ಟೆಯಲ್ಲಿ ಊಟ ಹಿಡಿದು ಬಂದಾಗೆಲ್ಲ ನಿನ್ನ ಕೈಗೆ ಸಿಗದೇ ಓಡಿಹೋಗಬೇಕು, ನೀ ಅಟ್ಟಾಡಿಸಿ ಬಾಯಿಗೆ ತುರುಕುವ ಅನ್ನವನ್ನೆಲ್ಲ ಅರ್ಧ ತಿಂದು ಅರ್ಧ ಪಿಚಕ್ಕನೆ ಉಗುಳಿ ನಿನ್ನ ಬಟ್ಟೆಯನ್ನೆಲ್ಲ ಕೊಳೆಯಾಗಿಸಬೇಕು. ಬಾಗಿಲ ಸಂಧಿಯಲ್ಲಿ ಅಡಗಿ ನೀ ಒಳ ಬರುವಾಗ ಬ್ಹೋ ಅಂತ ನಿನ್ನ ಹೆದರಿಸಬೇಕು. ಅಟ್ಟದಲ್ಲಿ ಅಡಗಿ ಕೂತು ನೀ ಹೆದರಿ ಹುಡುಕುವ ಪರಿಯ ನೋಡಬೇಕು. ನೀನು ಮನೆಕೆಲಸದಿಂದ ದಣಿವಾದಾಗ ಬಣ್ಣದ ಕಾಗದವನ್ನು ನೀರಲ್ಲಿ ಹಾಕಿ ಬಾಟಲಿಯಲ್ಲಿ ತುಂಬಿಸಿ ಬಣ್ಣ ಬಣ್ಣದ ಶರಬತ್ತು ನಿನಗೆ ಕೊಡಬೇಕು. ಭಾನುವಾರದ ದಿನ ಹಬ್ಬದ ಕುಶಿಯಲ್ಲಿ ನಿನ್ನ ಜೊತೆ ಜೊತೆಗೇ ಇರಬೇಕು. ನೀ ತೆಂಗಿನ ಕಾಯಿ ಒಡೆಯುವಾಗ ಅದರ ನೀರಿಗೆ ಓಡಿ ಬರಬೇಕು. ಆ ಕಾಯಿಯನ್ನು ತುರಿದ ಮೊದಲ ಭಾಗವನ್ನೆತ್ತಿ ಬಾಯಿಗಿಡಬೇಕು. ಕೋಳಿ ಸಾರಿನ ದಿನ ನಿನ್ನ ಜೊತೆ ಅಡುಗೆಮನೆಯಲ್ಲೇ ಗಿರಕಿ ಹೊಡೆಯಬೇಕು. ಒಲೆಯಿಂದಲೇ ಒಂದು ಚಿಕ್ಕ ತುಂಡು ಎತ್ತಿ ನೀ ಕೊಟ್ಟಾಗ ಅದನ್ನು ತಿಂದು ಕೈಯನ್ನೂ ಚಪ್ಪರಿಸಬೇಕು. ಗೆಳೆಯರೊಂದಿಗೆ ಜಗಳ ಮಾಡ್ಕೊಂಡು ಇದ್ದ ಎರಡು ಬಿಳಿ ಅಂಗಿಯಲ್ಲಿ ಒಂದನ್ನು ಹರಿದು ಬಂದು ಪೆಚ್ಚು ಮೋರೆ ಹಾಕಿ ನಿಲ್ಲಬೇಕು. ನೀನದನ್ನ ನೋಡಿ ಸಿಟ್ಟಿನಿಂದ ಕಣ್ಣು ಕೆಂಪು ಮಾಡುವುದನ್ನು ನೋಡಬೇಕು. ಮಳೆಗಾಲದಲ್ಲಿ ದಾರಿಯಲ್ಲಿರುವ ಹೊಂಡಗಳ ಕೆಸರನ್ನು ಬೆನ್ನುವರೆಗೂ ಮೆತ್ತಿಸಿಕೊಂಡು ಬರಬೇಕು. ಹಾಗೆ ಬರುವಾಗೆಲ್ಲ ನನಗೂ ಮಳೆಗೂ ಬಯ್ಯುತ್ತಾ ಸೆರಗಿನಲ್ಲೆ ತಲೆ ಒರೆಸಬೇಕು. ಹುಳ ತಿಂದ ಕಾಲಿಗೆ ನಿನ್ನ ಕಯ್ಯಾರೆ ಸೀಮೆ ಎಣ್ಣೆ ಹಚ್ಚಬೇಕು. ಸಂಜೆ ಸ್ನಾನಕ್ಕೆ ನೀ ಕರೆವಾಗೆಲ್ಲ ಭೂಮಿಗೆ ಬೇರು ಬಿಟ್ಟವನಂತೆ ಕದಲದೆ ಕೂರಬೇಕು, ಕಾದು ಸುಸ್ತಾಗಿ ನೀ ನನ್ನನ್ನೆತ್ತಿ ಬಚ್ಚಲು ಮನೆಗೆ ಓಡುವಾಗ ಕೊಸರಿ ತೊಳಲಾಡಿ ಜಾರಿ ಬಿದ್ದು ಎದ್ದು ಓಡಿಹೊಗಬೇಕು. ಮಳೆಗಾಲಕ್ಕೆ ನೀ ಮಾಡಿಟ್ಟ ಹಲಸಿನ ಪಪ್ಪಡಕ್ಕಾಗಿ ಅದು ಮುಗಿಯುವವರೆಗೂ ಕಾಡಿಸಬೇಕು. ಆಟವಾಡುವಾಗ ಕಾಲು ಗುದ್ದಿ ತೋರು ಬೆರಳಿನ ಉಗುರು ಕಿತ್ತು ಹೋಗಿ, ಅದು ಒಣಗುವ ಮೊದಲೇ ಮತ್ತೊಮ್ಮೆ ಇನ್ನೊಂದು ಕಾಲಿಗೆ ಗಾಯ ಮಾಡ್ಕೊಂಡು ನಿನ್ನ ಹತ್ರ ಬೈಸ್ಕೋಬೇಕು. ರಾತ್ರಿ ಗುಡುಗಿಗೆ ನಿನ್ನ ಮಡಿಲೊಳಗೆ ಬಚ್ಚಿಟ್ಟುಕೊಳ್ಳಬೇಕು. ಆ ತೊರೆಯಲ್ಲಿ ನೀ ಬಟ್ಟೆ ಒಗೆಯುವಾಗ, ನಿನ್ನ ಸೀರೆಯಲ್ಲಿ ಮೀನು ಹಿಡಿದು ಬಾಟಲಿಯಲ್ಲಿ ಹಾಕಿ ರಾತ್ರಿಯಿಡೀ ಅದನ್ನು ನೋಡುವಾಗ ಹತ್ತಿರ ಬಂದು ಮುಗುಳ್ನಕ್ಕು ತಲೆ ನೇವರಿಸಿ ನಿಯಾಳಿಸಬೇಕು. ಗುಮ್ಮನ ನೋಡಿ ಹೆದರಿ ಅಳಬೇಕು, ಆಗ ನೀ ‘ಅಲ್ಲಿ ಎನೂ ಇಲ್ಲ ರಾಜ.. ‘ ಅಂತೇಳಿ ಮಡಿಲಲ್ಲಿ ಬರಸೆಳೆದು ಅಪ್ಪಿ ಮುದ್ದಾಡುವ ಸವಿಯನ್ನು ಅನುಭವಿಸಬೆಕು. ನಿನ್ನ ಹತ್ತಿರ ಮಲಗಲು ಇಲ್ಲದ ಹೊಟ್ಟೆನೋವು, ತಲೆನೋವಿನ ನೆಪ ಹುಡುಕಬೇಕು. ಕರೆಂಟಿಲ್ಲದ ರಾತ್ರಿ ನಿನ್ನ ಕತೆ ಕೇಳಬೇಕು. ನಿನ್ನ ಲಾಲಿಹಾಡಿಗೆ ತಲೆದೂಗಿ ನಿನ್ನ ಪ್ರೀತಿಯ ಮಡಿಲಲ್ಲಿ ನಾ ಬೆಚ್ಚಗೆ ನಿದ್ರಿಸಬೇಕು….

ನನ್ನ ಕೋಪಕ್ಕೆ ನೀ ಮಣಿಯುವಾಗ, ನನ್ನ ಆಸೆಗಳಿಗೆ, ಬಯಕೆಗಳಿಗೆ ನೀರೆರೆಯುವಾಗ, ನನ್ನ ಅಂತರಂಗದ ಕತ್ತಲ ಕೋಣೆಗೆ ದೀಪ ಹಚ್ಚುವಾಗ, ನಿನ್ನೆಲ್ಲ ಕನಸುಗಳ ಮಧ್ಯೆ ನನ್ನ ಕನಸುಗಳನ್ನೂ ಸಲಹುವಾಗ, ಅದಕ್ಕಾಗಿ ತುಡಿಯುವಾಗ, ನನ್ನೆಲ್ಲಾ ನೋವನ್ನೂ, ನಲಿವನ್ನೂ ನಿನ್ನದೇ ಅಂತ ಮಡಿಲೊಡ್ಡಿ ಸಂತೈಸುವಾಗ ನಿನ್ನಲ್ಲಿ ತಾಯಿಯನ್ನು ಕಾಣುತ್ತೇನೆ..
ಏ ರೂಹಿ…!
ನೀ ತಾಯಿಯಾಗುವಾಗೆಲ್ಲ ನಾ ಮಗುವಾಗುತ್ತೇನೆ.

~ಹುಸೇನಿ

Leave a comment

ಕಾಡುವ ಹನಿಗಳು · ಖಾಲಿ ಗೆರೆಯಲ್ಲಿ · ತೊರೆಯ ತೀರದ ನೆನಪುಗಳು · ಯಾ ರೂಹಿ .... · ಸಣ್ಣ ಕತೆ

ಖಾಲಿ ಗೆರೆಯಲ್ಲಿ….

line

…ಒಂದು ಪ್ರಶ್ನೆ, ಅದರ ಉತ್ತರದಲ್ಲಿ ಮೂಡಿದ ಮತ್ತೆರಡು ಪ್ರಶ್ನೆ, ಈಗ ಎಷ್ಟೆಂದರೆ ಒಳಗಿನ ದನಿಯೇ ಕೇಳದಷ್ಟು ಪ್ರಶ್ನೆಗಳ ಸಂತೆಗೂಡು, ಹೊರತೆಗೆದು ನಿರಾಳವಾಗಲಾರದ ವಿಕ್ಷಿಪ್ತ ಮನಸ್ಥಿತಿ, ಜೊತೆಗೂಡಿ ಮತ್ತಷ್ಟು ನಿರ್ಲಿಪ್ತತೆಗೆ ತಳ್ಳುವ ತಲ್ಲಣಗಳು, ದ್ವಂದ್ವಗಳು. ಉತ್ತರ ಕಂಡುಕೊಳ್ಳಲು ಪ್ರಯಾಣ ಆರಂಭಿಸಿ ದಿನಗಳೇ ಕಳೆಯಿತು. ಕಾಲವೇ ಎಲ್ಲದಕ್ಕೂ ಉತ್ತರ ಎಂದರು.. ಅಂಥದ್ದೊಂದು ಕಾಲಕ್ಕೆ ನಾನು ಕಾಯುತ್ತಿದ್ದೆ. ಬತ್ತಿದ ತೀರ ಮುಂಗಾರಿಗೆ ಕಾಯುವಂತೆ. ಪೊರೆ ಪೊರೆಗಳಾಗಿ ಸುತ್ತಿಕೊಂಡ ನನ್ನೆಲ್ಲಾ ಪ್ರಶ್ನೆಗಳನ್ನು ಹರವಿಟ್ಟು ಒಂದೊಂದೇ ಉತ್ತರವನ್ನು ತುಂಬಿಕೊಂಡು ಕೊನೆಗೆ ಶೂನ್ಯವಾಗುವ ಕಾಲದ ಅಧಮ್ಯ ಕಾತರಿಕೆಯದು. ಅಂಥದ್ದೊಂದು ಕಾಲ ಕೊನೆಗೂ ಆಗತವಾಯಿತು. ಆ ವಸಂತ ಕಾಲಕ್ಕೆ ನಿನ್ನ ಹೆಸರಿತ್ತು.

ನೀನು ಸಿಕ್ಕ ದಿನ ನಿನಗೆ ನೆನಪಿರಬಹುದು. ನೀನು ನುಡಿದ ಮೊದಲ ಮಾತು ನನ್ನಲ್ಲೊಳಗೆ ಸೃಜಿಸಿದ ಅನುಭಾವಶರಧಿಯ ಆಳ ಮತ್ತು ವಿಸ್ತಾರ ನಿನ್ನ ಊಹೆಗೆ ನಿಲುಕುವಂಥದ್ದಲ್ಲ.
ನಿನಗೆ ಗೊತ್ತು ನನ್ನದು ಯಾರ ಮುಂದೆಯೂ ತೆರೆದುಕೊಳ್ಳದ, ಸ್ಪಂದನೆಯ ಹಂಗೇ ಇಲ್ಲದಂತೆ ಪರಿತ್ಯಕ್ತ ಮನಸ್ಸು. ಗಿಜಿಗಿಡುವ ಸಂತೆಯೊಳಗಿನ ಅಬ್ಬರದ ಮಾತುಗಳ ನಡುವಿಂದ ಮೌನದ ಚಿಪ್ಪಿನೊಳಗೆ ತೂರಿ ಅಡಗಿಕೊಂಡು ಬಿಡಬೇಕೆನ್ನಿಸುವ ಮೌನ-ಮೋಹಿ ಅದು. ಆ ಮನಸ್ಸು ಇಗೀಗ ಸುಮ್ಮನೆ ನಗುವುದು ಕಲಿತಿದೆ. ನೀ ಸಿಕ್ಕಿದ ಘಳಿಗೆಯಿಂದ ನೋವುಗಳನ್ನು ಒಪ್ಪಿಕೊಂಡು ಅದನ್ನು ಮೀರಿಸುವ ದಿವ್ಯ ಶಕ್ತಿಯೊಂದನ್ನು ಅವಾಹಿಸಿಕೊಂಡಿದ್ದೇನೆ. ನನ್ನ ನೆನಪುಗಳು, ಭೂತಕಾಲದ ಅತಿರೇಕಗಳು ಜೀವಧಾತು ನಗುವನ್ನು ಕಸಿದುಕೊಳ್ಳದಂತೆ ಸಮದೂರ ಕಾಯ್ದುಕೊಂಡು ಹಸನ್ಮುಖಿಯಾಗಿ ಬದುಕುವ ಕಲೆಯನ್ನು ಪಡಕೊಳ್ಳುತ್ತಿದ್ದೇನೆ. ಕನಸುಗಳೊಂದಿಗಿನ ಬಡಿದಾಟದಲ್ಲಿ ನಾನೇ ಮೇಲುಗೈ ಹೊಂದಿದವನಂತೆ ಭಾಸವಾಗುತ್ತದೆ. ನನ್ನೊಳಗಿನ ದ್ವಂದ್ವಗಳ ಒಂದೊಂದೇ ಪೊರೆ ಕಳಚುತ್ತಾ ಸಾಗುತ್ತಿದ್ದೇನೆ…ಹಾಗೆ ಕಳಚುತ್ತಾ ಕಳಚುತ್ತಾ ಶೂನ್ಯತೆಯೆಡೆಗೆ ಹತ್ತಿರವಾಗುವಂತೆನಿಸುತಿದೆ ನನಗೆ. ಶೂನ್ಯದಲ್ಲಿ ಹುಟ್ಟಿದ ‘ನಾನು’ ಮತ್ತೆ ಶೂನ್ಯತೆಗೆ ತಲುಪುವಾಗಿನ ಅಮಿತ ಆನಂದ ಅವರ್ಣನೀಯ..

………. ಈ ಖಾಲಿ ಗೆರೆಯಲ್ಲಿ ಈ ಬಂಧಕ್ಕೊಂದು ಹೊಸ ಹೆಸರಿಡಬೇಕು ಅನ್ನಿಸಿದ ಮರುಕ್ಷಣ ಹೆಸರಿನ ಹಂಗನು ಮರೆತು ಈಗಷ್ಟೇ ಚಿಗುರೊಡೆದಿಡುವ ಈ ಸ್ನೇಹದ ಜೋಪಡಿಯಲ್ಲಿ ಈ ಬಂಧದ ಹಣತೆಯೊಂದನ್ನು ಹಚ್ಚಿಟ್ಟುಕೊಂಡು ನಮ್ಮಿಬ್ಬರ ಬದುಕಿನ ಕತ್ತಲೆಯನ್ನು ಪರಸ್ಪರ ಬೆಳಗೋಣ..ಅದರಲ್ಲೇ ಹೆಚ್ಚು ಅರ್ಥವಿದೆ ಅಂದೆನಿಸುತ್ತದೆ..
ಹೌದು.. ಮತ್ತೊಮ್ಮೆ ಹೇಳುತ್ತೆನೆ.. ನೀನೆಂದರೆ ಅಪ್ಪಟ ಜೀವ ಚೈತನ್ಯ, ನೀನಂದರೆ ಎಂದೂ ಬತ್ತದ/ಬತ್ತಬಾರದ ಜೀವಜಲ.. ನೀನಂದರೆ ನನ್ನೊಳಗೆ ಮನುಷ್ಯ ಭಾವ ತುಂಬಿಕೊಟ್ಟ ಆತ್ಮ ಸಾಂಗತ್ಯ.. … … ನೀನೆಂದರೆ… ನಾನೇ !!

~ಹುಸೇನಿ

Leave a comment

ಕಾಡುವ ಹನಿಗಳು · ನೆನಪಿನ ಹನಿ · ಯಾ ರೂಹಿ ....

ಯಾ ರೂಹಿ ….

Screenshot_2015-01-27-11-39-50

ಯಾ ರೂಹೀ
ಸಂಭಂದಗಳಿಗೆ ಅರ್ಥದ ಮೊದಲು
ಹೆಸರು ಹುಡುಕುವ ಲೋಕ-ಕ್ರಿಯೆಯಲ್ಲಿ
‘ಹುಚ್ಚರು’ ಅಂತನ್ನಿಸಿ ನಗುವ ಬಾ…!
_
ತೋಡಿನ ಮರಳು ಹೆಕ್ಕಿ
ತಟದಲ್ಲೊಂದು ಮನೆ ಮಾಡಿ
ಮನ್ನುಂಡೆ ಮಾಡಿ ಆಟ ಆಡಿದ್ದೆ;
ಅಂಥದ್ದೊಂದೇ ಮರಳ ತಟದಲ್ಲಿ
ನಿನ್ನೊಂದಿಗೆ ಹೆಜ್ಜೆಗೆ ಹೆಜ್ಜೆ ಪೋಣಿಸಿದಾಗ
ಕಾಲ ಬಸವಳಿದು ನನ್ನ ಕಾಲಡಿ ಬಿದ್ದಿದ್ದ..!
ಅದನೋಡಿ ನೀ ಕಚ್ಚಿ ತಿಂದ ಅರ್ಧ ಚಂದ್ರ ಮೋಡದ
ಮರೆ ಸೇರಿದ್ದು ಈರ್ಷ್ಯೆಯಿಂದಲ್ಲವೇ ರೂಹಿ…? 

_
ಯಾ ರೂಹಿ..
ಆ ಶರಧಿ ತೀರದಲ್ಲಿ ನಿನ್ನ ಹೆಸರು ಬರೆದಿದ್ದೆ ;
ಧಾವಂತದ ಅಲೆಗಳು ಅದನಳಿಸಿದವು;
ಇನ್ನು
ಎದೆ ಬಯಲೊಳಗೆ ಅಲೆಗಳೇಳುವುದಿಲ್ಲ.. !

_

ಯಾ ರೂಹಿ..
ನೀನು ಕನಸುಗಳ ರಭಸಕ್ಕೆ
ಎದೆಯೊಡ್ಡಿ ನಿಂತವನ
ಜೀವನ್ಮುಖಿ ಭಾವಕ್ಕೆ
ಆತ್ಮ ತುಂಬಿದವಳು…

~ಹುಸೇನಿ

Leave a comment