ಭಾರತೀಯ ಮುಸ್ಲಿಂ ಮತ್ತು ದೇಶ ಪ್ರೇಮದ ಸರ್ಟಿಫಿಕೇಟಿನ ಅನಿವಾರ್ಯತೆ · ವಾಸ್ತವ ಸಂಚಿ

ಭಾರತೀಯ ಮುಸ್ಲಿಂ ಮತ್ತು ದೇಶ ಪ್ರೇಮದ ಸರ್ಟಿಫಿಕೇಟಿನ ಅನಿವಾರ್ಯತೆ

induian muslim

“ಭಾರತೀಯ ಮುಸ್ಲಿಮರು ದೇಶಕ್ಕಾಗಿ ಬದುಕುತ್ತಾರೆ ದೇಶಕ್ಕಾಗಿ ಪ್ರಾಣ ಕೊಡುತ್ತಾರೆ “. ನಮ್ಮ ಘನವೆತ್ತ ಪ್ರಧಾನ ಮಂತ್ರಿಯ ಉಚ್ಚಿಷ್ಠ ಉವಾಚವಿದು. ನಮ್ಮ ಪ್ರಧಾನಿಯಿಂದ ಇಂಥದ್ದೊಂದು ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆ ಬಂದೊದಗಿದ್ದು ಭಾರತೀಯ ಮುಸ್ಲಿಮನ ಪಾಲಿಗೆ ಬಹು ನೋವಿನ ಸಂಗತಿ.

ಭಯೋತ್ಪಾದಕ, ಮೂಲಭೂತವಾದಿ, ದೇಶದ್ರೋಹಿ, ಹೇಗೆಲ್ಲಾ ಹೀಗಳೆದು ಸಮಾಜದ ಮುಖ್ಯವಾಹಿನಿಯಿಂದ ಒಂದಿಷ್ಟು ಅಂತರ ಕಾಯುವಂತೆ ಮಾಡಿ, ಹುಟ್ಟಿ ಬಿದ್ದ ಮಣ್ಣಿನಲ್ಲಿ ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿಸಿದರೂ, ಸ್ವತಂತ್ರಾ ನಂತರ ಬಂದೊದಗಿದ ಕೋಮುಗಲಭೆಯ ಕಂಟಕಗಳು, ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಹಿಂದುಳಿದು ‘ನವ ದಲಿತರು’ ಎಂದು ಕರೆಯಲ್ಪಟ್ಟರೂ ಭಾರತೀಯ ಮುಸ್ಲಿಂ ತನ್ನೆಲ್ಲ ನೋವನ್ನು ಸಮಯದ ಭೂ ಗರ್ಭದಲಿ ಅರಗಿಸಿಕೊಂಡು ಮುನ್ನಡೆಯುತ್ತಿದ್ದಾನೆ.

ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್, ಹೈದರಾಲಿ, ಮೌಲಾನಾ ಶೌಕತ್ ಅಲಿ, ಖಾನ್ ಅಬ್ದುಲ್ ಗಫಾರ್ ಖಾನ್, ಡಾ।ಮಗ್ಫೂರ್ ಅಹ್ಮದ್ ಅಜಾಝಿ, ಮೌಲಾನಾ ಮಂಝುರ್ ಅಹ್ಸನ್ ಅಜಾಝಿ, ಅಲಿ ಆಸೀಫ್,ಮೊಹಮ್ಮದ್ ಜೌಹರ್,ಅಲಿ ಇನಾಯತ್, ಶಹೀದ್ ಫೀರ್ ಅಲಿ, ವಲಯತ್ ಅಲಿ, ಅಲಿ ವಾರಿಸ್, ಅಬ್ದುಲ್ ಖಯ್ಯೂಮ್ ಅನ್ಸಾರಿ, ಮೌಲಾನಾ ಅಬ್ದುಲ್ ಕಲಾಂ ಅಝಾದ್, ಹಕೀಮ್ ಅಜ್ಮಲ್ ಖಾನ್, ಅಶ್ಫಾಕುಲ್ಲಾಹ್ ಖಾನ್, ಬೇಗಮ್ ಹಜ್ರತ್ ಮಹಲ್,ಮೌಲಾನಾ ಹುಸೈನ್ ಅಹ್ಮದ್, ರಫಿ ಅಹ್ಮದ್ ಕಿದ್ವಾಯಿ ಹಾಗು ಇನ್ನು ಹಲವಾರು ಮುಸ್ಲಿಂ ಧಾರ್ಮಿಕ ಮತ್ತು ಸಾಮುದಾಯಿಕ ನಾಯಕರು ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಮುಖ್ಯ ಭೂಮಿಕೆಯಲ್ಲಿದ್ದರು. ಇವರ ದೇಶ ಪ್ರೇಮವು ಪ್ರಶ್ನಾತೀತವಾಗಿರುವಗಲೇ, ಪ್ರಸ್ತುತ ಭಾರತೀಯ ಮುಸ್ಲಿಮರು ದೇಶ ಪ್ರೇಮವನ್ನು,ದೇಶನಿಷ್ಠೆಯನ್ನು ಪ್ರತೀ ದಿನ ಸಾಬೀತುಪಡಿಸಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾನೆ.

ಅಷ್ಟಕ್ಕೂ ಮುಸ್ಲಿಮರ ದೇಶಪ್ರೇಮವು ಪ್ರಧಾನಿಯಿಂದ ಸ್ಪಷ್ಟನೆ ದೊರೆಯಬೇಕಾದ ಮಟ್ಟಕ್ಕೆ ಪ್ರಶ್ನಾರ್ಹವಾಗಿಸಿದವರು ಯಾರು.. ?.

1947ರಲ್ಲಿ ಭಾರತಕ್ಕೆ ಸ್ವಾತಂತ್ರ ದೊರೆತಾಗ ಧಾರ್ಮಿಕ ಭಾವನೆಗಳನ್ನು ಬಡಿದೆಬ್ಬಿಸಲಾಯಿತು. ಆಗ ಪಾಕಿಸ್ತಾನ ತನ್ನನ್ನೊಂದು ಇಸ್ಲಾಮಿಕ್ ರಾಷ್ಟ್ರವೆಂದು ಘೋಷಿಸಿದ ಕಾರಣಕ್ಕಾಗಿ ಭಾರತವನ್ನು ಒಂದು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಲು ಹಿಂದೂ ರಾಷ್ಟ್ರವಾದಿಗಳು ಒತ್ತಾಯಿಸಿದ್ದರೂ ಭಾರತ ಧರ್ಮ ನಿರಪೇಕ್ಷ ರಾಷ್ಟ್ರವಾಗಿ ರೂಪುಗೊಂಡಿತು. ಆದರೂ ಕೆಲವು ಶಕ್ತಿಗಳಿಂದ ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯಿತು, ಈಗಲೂ ನಡೆಯುತ್ತಿದೆ.
ಇತಿಹಾಸವನ್ನು ತಿರುಚಿಯೂ, ಇಸ್ಲಾಮಿನ ಬಗ್ಗೆ ತಪ್ಪು ಭಾವನೆ ಹರಡಿಯೂ, ಬಹುಸಂಖ್ಯಾತರಲ್ಲಿ ಅಸುರಕ್ಷಿತೆ ಭಾವನೇ ಮೂಡಿಸಿಯೂ, ಯಾರೋ ಉಂಡ ಮನೆಗೆ ಬಗೆಯುವ ಕ್ರಿಮಿಗಳು ದೇಶದ್ರೋಹದ ಕೆಲಸ ಮಾಡಿದಾಗ ಅದನ್ನು ಮುಸ್ಲಿಂ ಸಮುದಾಯದ ತಲೆಗೆ ಕಟ್ಟುವಂಥ ಕೆಲಸದ ಮೂಲಕವೂ ಅವರು ಮುಸ್ಲಿಮರನ್ನು ಮುಖ್ಯಧಾರೆಯಲ್ಲಿ ಸಂಶಯದ ನೆರಳಿನಿಂದ ಬದುಕುವಂತೆ ಮಾಡಿದ್ದಾರೆ. ಇವರೊಂದಿಗೆ ಮುದ್ರಣ ಮತ್ತು ಟಿವಿ ಮಾಧ್ಯಮಗಳು ಕೈ ಜೋಡಿಸಿದಾಗ ಕೆಲಸ ತುಂಬಾ ಸುಲಭವಾಯ್ತು. ‘ಶಂಕಿತ ಉಗ್ರಗಾಮಿ’ಗಳು ಎಂಬ ಬರಹದಡಿ ಪ್ರತೀ ಮುಸ್ಲಿಂ ಯುವಕನನ್ನು , ಅದರಲ್ಲೂ ಟೋಪಿ ಹಾಕುವ, ಗಡ್ಡ ಬಿಡುವ ಮುಸ್ಲಿಮರನ್ನು ಸಂಶಯದ ನೋಟದಿಂದ ನೋಡುವಂತೆ ಮಾಡಲಾಯಿತು. ವಿದೇಶಕ್ಕೆ ಹೋಗುವ ಮುಸ್ಲಿಮನ ಬ್ಯಾಗಲ್ಲಿರುವ ಇಲೆಕ್ಟ್ರಾನಿಕ್ ವಸ್ತುಗಳು ಬಾಂಬ್ ಗಳಾದವು. ಕ್ಷಣಾರ್ದದಲ್ಲಿ ಅವನನ್ನು ಅಂತರಾಷ್ಟ್ರೀಯ ಭಯೋತ್ಪಾದನೆ ಗುಂಪಿನೊಂದಿಗೆ ತಳುಕು ಹಾಕಿ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸುವಂತ ಪರಿಪಾಠ ಆರಂಭವಾಯ್ತು.

ಪ್ರಧಾನಿಯ ಹೇಳಿಕೆಯ ಹಿಂದಿನ ಮರ್ಮವೇನು ?.
ಮೋದಿಯ ಸಂಪುಟ ಅಸ್ತಿತ್ವಕ್ಕೆ ಕೂಡಲೇ ವಕ್ಫ್ ಮಂತ್ರಿಗಳು ಮುಸ್ಲಿಮರು ಅಲ್ಪಸಂಖ್ಯಾತರಲ್ಲ ಹೇಳಿಕೆ ನೀಡಿದ್ದರು.ಅದು ವಿವಾದವೂ ಆಯಿತು. ನಂತರದ ದಿನಗಳಲ್ಲಿಯೂ ಮುಸ್ಲಿಂ ತುಷ್ಟೀಕರಣ ನಡೆಯಿತು. ಮುಸ್ಲಿಮರ ಕಲ್ಯಾಣದಲ್ಲಿ ವಕ್ಫ್ ಇಲಾಖೆಯ ಪಾತ್ರವನ್ನು ಗೌಣಗೊಳಿಸಿ ಮತ್ತು ಹಿಂದಿನ ಯುಪಿಎ ಸರಕಾರದ ಧೋರಣೆಗಳನ್ನು ತಿರಸ್ಕರಿಸಿ ಈ ಇಲಾಖೆಯನ್ನು ಪುನರ್ರೂಪಿಸುವ ನಿರ್ಧಾರದ ಹಿಂದಿನ ಉದ್ದೇಶ ಶುದ್ದಿ ಕೂಡ ಪ್ರಶ್ನಾರ್ಹವಾಗಿದೆ. ಮೋದಿ ಸಂಪುಟದ ಸಚಿವರುಗಳೇ ಮದರಸಾ ಭಯೋತ್ಪಾದನೆ, ಲವ್ ಜಿಹಾದ್ ಮುಂತಾದ ಅಸ್ತಿತ್ವವೇ ಇಲ್ಲದ ವಿಚಾರಗಳನ್ನೆತ್ತಿ ಮುಸ್ಲಿಮರ ಸಂವೇದನೆಯನ್ನು ಕೆಣಕಿದರು. ಇಷ್ಟೆಲ್ಲಾ ಆದ ನಂತರ ಈ ಬಂದ ವಿಧಾನ ಸಭಾ ಚುನಾವಣೆಯಲ್ಲಿ ಅನುಭವಿಸಿದ ಮುಖಭಂಗ. ಇವೆಲ್ಲದರ ಭಾಗವಾಗಿ ಮುಸ್ಲಿಂ ಓಲೈಕೆ ಮೋದಿಯವರಿಗೆ ಅತ್ಯವಶ್ಯಕವಾಗಿ ಕಂಡುಬಂದಿದೆ. ರಾಜಕೀಯ ಪಂಡಿತ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ಲೇಶಿಸಲ್ಪಟ್ಟ ಮೋದಿಯವರಿಂದ ಇಂಥದ್ದೊಂದು ಅಣಿ ಮುತ್ತು ಉದುರಿದರೆ ಅದರ ಹಿಂದಿನ ರಾಜಕೀಯ ಅಜೆಂಡಾವನ್ನು ಗಮನಿಸಬೇಕಾಗುತ್ತದೆ. ಕಾರಣ ಮೋದಿಯವರ ರಾಜಕೀಯ ಜೀವನವೇ ಹಾಗಿದೆ.

ಏನೇ ಇರಲಿ, ದೇಶ ಪ್ರೇಮವನ್ನು ಧಾರ್ಮಿಕ ನಂಬಿಕೆಯ ಭಾಗವಾಗಿ ಮದರಸದಲ್ಲಿ ಕಲಿಯುವ ಮುಸ್ಲಿಮರಿಗೆ ಖಂಡಿತಾ ದೇಶ ಪ್ರೇಮದ ಸರ್ಟಿಫಿಕೇಟ್ ಅಗತ್ಯತೆ ಇಲ್ಲ. ಬದಲಿಗೆ ನಮಗೆ ಮಾಡಬೇಕಿರುವುದು ಸಾಮಾಜಿಕ ಹಕ್ಕು. ದೇಶದ ಮೂಲೆಯಲ್ಲಿ ವಿಚಾರನಾಧೀನ ಕೈದಿಗಳಲ್ಲಿ ಶೇಕಡಾ 60 ಮಂದಿ ಮುಸ್ಲಿಮರಿದ್ದಾರೆ. ಗುಜರಾತ್‍ನಲ್ಲಿ ಶೇ. 10 ರಷ್ಟಿರುವ ಮುಸ್ಲಿಮರ ಜನಸಂಖ್ಯೆಯಲ್ಲಿ ಶೇ. 22 ಮಂದಿ ಅಲ್ಲಿನ ಜೈಲಲ್ಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇದು ಶೇ. 46, ಉತ್ತರ ಪ್ರದೇಶದಲ್ಲಿ ಇವರ ಸಂಖ್ಯೆ ಶೇ. 21. ಮಾನವ ಹಕ್ಕುಗಳನ್ನು ನಿಷೇಧಿಸಲ್ಪಟ್ಟ ಇವರಿಗೆ ನ್ಯಾಯದ ಬೆಳಕನ್ನು ನೀಡಬೇಕು. ಮುಸ್ಲಿಮರನ್ನು ಎರಡನೇ ದರ್ಜೆಗೆ ತಳ್ಳುವ ಪ್ರತಿಯೊಂದು ಶಕ್ತಿಯನ್ನು ಮಟ್ಟ ಹಾಕಬೇಕು. ಕೋಮುಗಲಭೆಗಳಲ್ಲಿ ಎಲ್ಲವನ್ನುಕಳೆದುಕೊಂಡ ಅದೆಷ್ಟೋ ಅಮಾಯಕ ಮುಸ್ಲಿಮರಿಗೆ ಪುನರ್ವಸತಿ ಕಲ್ಪಿಸಬೇಕು. ಸಾಚಾರ್ ಸಮಿತಿಯು ಮುಸ್ಲಿಮರನ್ನು “ಅಧುನಿಕ ಹರಿಜನರು” ಎಂದು ವ್ಯಾಖ್ಯಾನಿಸಿದ್ದರೆ, ಅವರ ಜೀವನ ಮಟ್ಟ ಎಷ್ಟು ಬರ್ಬರವಾಗಿದೆ ಎಂದು ಊಹಿಸಿಕೊಳ್ಳಬಹುದು. ಆ ವರದಿಯಲ್ಲಿ ತಿಳಿಸಿದ ಪ್ಯಾಕೇಜ್ ಅಂಶಗಳನ್ನು ಕಾರ್ಯರೂಪಕ್ಕೆ ತರಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಆಡಳಿತಾವಧಿಯಲ್ಲಿ ಮುಸ್ಲಿಮರಿಗೆ ಸುರಕ್ಷತೆಯ ಭಾವನೆಯಲ್ಲಿ ಮೂಡಿಸಬೇಕು.

ದೇಶದ ಅಖಂಡತೆಯು ಈ ದೇಶದ ಧಾರ್ಮಿಕ ಸಾಮರಸ್ಯತೆಯನ್ನೂ ಅವಲಂಬಿಸಿದೆ. ಮೋದಿಯವರು ಈ ನಿಟ್ಟಿನಲ್ಲಿ ಎಲ್ಲಾ ಧರ್ಮವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಧರ್ಮದ ಹಂಗಿನ ಪಾಲುದಾರಿಕೆಯಿಲ್ಲದ ಜಾತ್ಯತೀತ ಭವ್ಯ ಭಾರತ ನಿರ್ಮಾಣಕ್ಕೆ ಮುಂದಾಗಬೇಕು. ಅವರಿಗೆ ಶುಭ ಹಾರೈಸೋಣ.
ಜೈ ಹಿಂದ್ !

ಮುಹಮ್ಮದ್ ಹುಸೈನ್

ಈ ಲೇಖನ ವಿಶ್ವ ಕನ್ನಡಿಗರ ನ್ಯೂಸ್ ನಲ್ಲಿ ಪ್ರಕಟವಾಗಿದೆ. ಓದಲು ಇಲ್ಲಿ ಕ್ಲಿಕ್ಕಿಸಿ

Leave a comment

ಬದುಕುವ ಹಕ್ಕಿನಿಂದ ಬದುಕು ಕಳೆದುಕೊಂಡ ಸವಿತಾ ಹಾಲಪ್ಪನವರ್.. · ವಾಸ್ತವ ಸಂಚಿ

ಬದುಕುವ ಹಕ್ಕಿನಿಂದ ಬದುಕು ಕಳೆದುಕೊಂಡ ಸವಿತಾ ಹಾಲಪ್ಪನವರ್..

ಸವಿತಾ ಹಾಲಪ್ಪನವರ್!. ಜೀವರಕ್ಷಣೆಗೆ ನಿರೂಪಿಸಿದ ‘ಅಮಾನುಷ’ ಕಾನೂನಿನಿಂದಾಗಿ ಜೀವ ಕಳೆದುಕೊಂಡ ನಮ್ಮ ಬೆಳಗಾವಿ ಮೂಲದ ದಂತವೈದ್ಯೆ. ಧಾರ್ಮಿಕ ಸಂಕುಚಿತತೆಯ ನೆರಳಿನಲ್ಲಿ ಜೀವಪರ ಎಂಬ ಹಣೆಪಟ್ಟ ಕಟ್ಟಿ ಐರ್ಲೆಂಡ್ ಸರಕಾರ ರೂಪಿಸಿದ ಕಾನೂನು ಒಂದು ಜೀವವನ್ನೇ ಬಲಿತೆಗೆದುಕೊಂದದ್ದು ಆ ದೇಶದ ಇತಿಹಾಸ ದುರಂತವೇ ಸರಿ. ಎಲ್ಲರಿಗೂ ಬದುಕುವ ಹಕ್ಕನ್ನು ಪ್ರತಿಪಾದಿಸುವ ಈ ಕಾನೂನು ಹೆಣ್ಣಿನ ಜೀವನದ ಮತ್ತೊಂದು ಮಜಲನ್ನು ಕಾಣದೆ ಹೋದದ್ದು ದೊಡ್ಡ ದುರಂತ.

ಮಾಜಿ ಕೆ.ಪಿ.ಟಿ.ಸಿ.ಎಲ್ ಉದ್ಯೋಗಿ ಆನಂದ್ ಯಾಳಗಿ ಮತ್ತು ಅಕ್ಕಮಹಾದೇವಿಯವರ ಪುತ್ರಿ ಸವಿತಾ ಸದಾ ಸ್ಪೂರ್ತಿಯ ಚಿಲುಮೆ, ಸ್ನಿಗ್ದ ಸೌಂದರ್ಯವತಿ. ಬಾಲ್ಯದಲ್ಲಿಯೇ ಹತ್ತು ಹಲವು ಸಾಧನೆಗಳ ರೂವಾರಿ. ಉದ್ಯೋಗ ನಿಮಿತ್ತ ಆಕೆ ಪತಿ ಪ್ರವೀಣ್ ಹಾಲಪ್ಪನವರ್ ಜೊತೆ ಕೆಲ ವರ್ಷದಿಂದ ದೂರದ ಐರ್ಲೆಂಡ್ ನಲ್ಲಿ ವಾಸವಾಗಿದ್ದರು. 5 ತಿಂಗಳ ಬಸುರಿಯಾಗಿದ್ದ ಆಕೆಗೆ ಅಕ್ಟೋಬರ್ 21ರಿಂದು ಇದ್ದಕ್ಕಿಂದ್ದಂತೆ ಬೆನ್ನು ನೋವು ಕಾಣಿಸಿಕೊಂಡಿತ್ತು .ಗಾಲ್ವೆಯ ವಿವಿ ಯಲ್ಲಿ ಪರೀಕ್ಷೆ ಮಾಡಿದ ವೈದ್ಯರು ಭ್ರೂಣ ಜಾರಿದೆ, ಅಲ್ಲದೆ ಗರ್ಭಕೋಶ ಊದಿಕೊಂಡಿದ್ದು, ಅಮಿನಿಯೋಟಿಕ್ ದ್ರವ ಸೋರಿಕೆಯಾಗುತ್ತಿದ್ದರಿಂದ ಮಗು ಉಳಿಯೋದು ಕಷ್ಟ ಎಂದಿದ್ದರು. ಈ ನಡುವೆ ಆಕೆಗೆ ತೀವ್ರ ಹೊಟ್ಟೆ ನೋವೂ ಕಾಣಿಸಿಕೊಂಡಿತ್ತು. ರಕ್ತಸ್ರಾವ ತೀವ್ರವಾಗುತ್ತಿದ್ದಂತೆ ಗರ್ಭಪಾತ ಮಾಡಿಸಿ ಪತ್ನಿಯ ಜೀವ ಉಳಿಸುವಂತೆ ಪ್ರವೀಣ್ ಕೇಳಿಕೊಂಡರು. ಆದರೆ ಭ್ರೂಣ ಇನ್ನೂ ಸತ್ತಿಲ್ಲವಾದ್ದರಿಂದ ವೈದ್ಯರು ಗರ್ಭಪಾತ ಮಾಡಲು ಒಪ್ಪಿಕೊಳ್ಳಲಿಲ್ಲ. “ಇದು ಕ್ಯಾಥೊಲಿಕ್ ರಾಷ್ಟ್ರ, ಇಲ್ಲಿ ಭ್ರೂಣ ಹತ್ಯೆಗೆ ಕಾನೂನು ಅವಕಾಶ ಕೊಟ್ಟಿಲ್ಲ” ಎಂಬುದಾಗಿತ್ತು ವೈದ್ಯರ ಉತ್ತರ. ಪತ್ನಿಯ ನರಕಯಾತನೆ ನೋಡಲಾರದೆ ಪ್ರವೀಣ್ ವೈದ್ಯರ ಕಾಲಿಗೆ ಬಿದ್ದರೂ ವೈದ್ಯರ ಮನಸು ಕರಗಲಿಲ್ಲ. ಯಾತನಾಮಯ ನೋವಿನಿಂದ ಸವಿತಾ “ನಾನು ಕ್ಯಾಥೊಲಿಕ್ ಅಲ್ಲ, ಐರ್ಲೆಂಡ್ ಪ್ರಜೆಯೂ ಅಲ್ಲ, ನಾನೊಬ್ಬ ಹಿಂದೂ, ದಯಮಾಡಿ ಮಗುವನ್ನು ಹೊರ ತೆಗೀರಿ” ಅಂತ ಗೊಗೆರೆದರೂ ಅವಳ ಮೊರೆ ಕೇಳಲಿಲ್ಲ. ಭ್ರೂಣದ ಎದೆಬಡಿತ ನಿಲ್ಲುವವರೆಗೂ ನಾವು ಏನೂ ಮಾಡುವಂತಿಲ್ಲ ಎಂದು ವೈದ್ಯರು ಕೈ ಚೆಲ್ಲಿದರು. ಮುಂದಿನ ಮೂರು ದಿನಗಳಲ್ಲಿ ಸವಿತಾ ಮತ್ತು ಪ್ರವೀಣ್ ಹಲವಾರು ಬಾರಿ ಅಬಾರ್ಶನ್ ಮಾಡುವಂತೆ ಆಸ್ಪತ್ರೆ ಅಧಿಕಾರಿಗಳಲ್ಲಿ ವಿನಂತಿಸಿದ್ದರೂ, ಅವರು ಕಾನೂನಿನ ಹೆಸರು ಹೇಳಿ ನಿರಾಕರಿಸಿದ್ದರು. ಅಕ್ಟೋಬರ್ 23 ರಂದು ಶೌಚಾಲಯದಲ್ಲಿ ಕುಸಿದು ಬಿದ್ದ ಆಕೆಯನ್ನು ಐ.ಸಿ.ಯುಗೆ ಸೇರಿಸಿದ ಕೆಲವೇ ಗಂಟೆಗಳಲ್ಲಿ ಭ್ರೂಣದ ಎದೆ ಬಡಿತ ನಿಂತಿತು. ಕೊನೆಗೂ ಮಗುವನ್ನು ಅಬಾರ್ಶನ್ ಮಾಡಿ ಹೊರತೆಗೆಯಲಾಯಿತು. ಅಷ್ಟರಲ್ಲೇ ಸಮಯ ಮೀರಿತ್ತು. ಅದಾದ ಮೂರನೇ ದಿನದಲ್ಲಿ ಆಕೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ದೇಹದ ಉಷ್ಣತೆಯಲ್ಲಿ ಏರು ಪೇರಾಯಿತು. ಹೃದಯ, ಮೂತ್ರಜನಕಾಂಗ ಮತ್ತು ಪಿತ್ತಜನಕಾಂಗ ಕೆಲಸ ಮಾಡುವುದನ್ನು ನಿಲ್ಲಿಸಿತು. ಕೊನೆಗೆ ನವೆಂಬರ್ 1ಕ್ಕೆ ಅಕೆಯ ನರಕಮಯ ಬದುಕು ಕೊನೆಗೊಂಡಿತು.

ಮಾನವ ಹಕ್ಕುಗಳ ಪಾಲಕರೆಂದು ಬೊಬ್ಬಿಡುವ ಐರ್ಲೆಂಡ್ ದೇಶದ ಕಾನೂನು ಎಷ್ಟೊಂದು ಅಮಾನುಷ ಮತ್ತು ಜೀವಭಕ್ಷಕೆವೆಂದು ಈ ಪ್ರಕರಣದ ಮೂಲಕ ಬೆಳಕಿಗೆ ಬಂದಿದೆ. ಧರ್ಮಾಂಧತೆಯ ತಳಹದಿಯ ಮೇಲೆ ದೇಶದ ಕಾನೂನನ್ನು ಕಟ್ಟಿದರೆ ಆಗುವ ಅನಾಹುತಕ್ಕೆ ಈ ಪ್ರಕರಣ ಕನ್ನಡಿಯಂತಿದೆ. 1861ರ ಕಾನೂನಿನ ಪ್ರಕಾರ ಐರ್ಲೆಂಡ್ ದೇಶದಲ್ಲಿ ಗರ್ಭಪಾತ ನಿಷೇಧಿಸಲಾಯಿತು. ಈ ಕಾನೂನಿನ ಹಿಂದೆ ಸಂಪ್ರದಾಯವಾದಿ ಕ್ಯಾಥೊಲಿಕರ ದಟ್ಟ ಪ್ರಾಭಾವವಿತ್ತು. ‘ಎಲ್ಲರಿಗೂ ಬದುಕುವ ಹಕ್ಕಿದೆ’ ಎಂಬ ನೀತಿಯನ್ನು ಜಾರಿಗೊಳುಸುವ ನಿಟ್ಟಿನಲ್ಲಿ ಈ ಕಾಯಿದೆ ಜಾರಿ ಬಂತಾದರೂ, ಸ್ತ್ರೀ ಬದುಕಿನ ಇನ್ನೊಂದು ಆಯಾಮವನ್ನು ಅಳೆಯಲು ಈ ಕಾನೂನು ಸಂಪೂರ್ಣವಾಗಿ ವಿಫಲಗೊಂಡಿತ್ತು. ಅಗತ್ಯ ಸನ್ನಿವೇಶಗಳಲ್ಲಿ ಗರ್ಭವನ್ನು ಉಳಿಸುವ ಅಥವಾ ಬಿಡುವ ಆಯ್ಕೆಯನ್ನು ವೈದ್ಯರಿಗೆ ಮತ್ತು ಆ ಮಹಿಳೆಗೆ ಬಿಟ್ಟು ಕೊಡದೆ ಕಾನೂನಿನ ಕೈಗೆ ಒಪ್ಪಿಸುವುದು ಒಂಥರಾ ಮೂರ್ಖತನದ ಪರಮಾವದಿ. ಹಲವು ಕ್ಯಾಥೊಲಿಕ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳು ಈ ನಿಟ್ಟಿನಲ್ಲಿ ತಮ್ಮ ಕಾನೂನಿಗೆ ಅಗತ್ಯ ಬದಲಾವಣೆಯನ್ನು ತಂದಿದೆ.

ಈ ಮೊದಲು 1992ರಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯ ಗರ್ಭಪಾತಕ್ಕೆ ಅವಕಾಶ ಕೊಡದ ಈ ಕಾನೂನಿನ ಬಗ್ಗೆ ಅಲ್ಲಿನ ಪ್ರಜ್ಞಾವಂತ ನಾಗರಿಕರು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದ್ದರು. 2009ರಲ್ಲಿ ಐರೊಪ್ಯ ಒಕ್ಕೂಟ ಈ ಕಾಯಿದೆಗೆ ಬದಲಾವಣೆಯನ್ನು ತರಲು ಸೂಚನೆ ಕೊಟ್ಟಿತು. ಆದರೆ ಧಾರ್ಮಿಕ ಕಟ್ಟರ್ ವಾದಿಗಳ ಕೊಪವನ್ನೆದುರಿಸಲು ಸಿದ್ದರಿಲ್ಲದ ಅಲ್ಲಿನ ಸರಕಾರ ಈ ನಿಟ್ಟಿನಲ್ಲಿ ಒಂದೇ ಒಂದು ಹೆಜ್ಜೆಯನ್ನೂ ಮುಂದಿಡಲಿಲ್ಲ.

ಸದ್ಯ ಈ ಪ್ರಕರಣಕ್ಕೆವಿಶ್ಯವ್ಯಾಪಿ ಸಂಚಲನ ಮೂಡಿಸಿದುದಲ್ಲದೆ, ಇದರ ವಿರುದ್ದ ಭಾರಿ ಅಕ್ರೋಶ ವ್ಯಕ್ತವಾಗಿದೆ. ಸ್ವತಃ ಐರ್ಲೆಂಡ್ ನಲ್ಲೆ ಜನರು ಆಕ್ರೋಶದಿಂದ ಬೀದಿಗಿಳಿದಿದ್ದಾರೆ. ಅಲ್ಲಿನ ಅರೋಗ್ಯ ಸಚಿವರು ಎರಡು ಕಡೆಯಿಂದ ತನಿಖೆಗೆ ಆದೇಶಿಸಿದ್ದಾರೆ. ಇನ್ನಾದರೂ ಅಲ್ಲಿನ ಸರಕಾರ ಎಚ್ಚೆತ್ತು ಧಾರ್ಮಿಕ ನಂಬಿಕೆಯನ್ನು ವೈದ್ಯಕೀಯ ಕ್ಷೇತ್ರದಿಂದ ಬೇರ್ಪಡಿಸಿ ಆ ಕ್ಷೇತ್ರವನ್ನು ಸ್ವತಂತ್ರವಾಗಿಸುವ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು. ಆ ಮೂಲಕ ಕಾನೂನಿನಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಬೇಕು. ಇಲ್ಲದಿದ್ದರೆ ಇನ್ನೂ ಅದೆಷ್ಟು ಸವಿತೆಯರು ಬದುಕುವ ಹಕ್ಕಿನ ಹೆಸರಲ್ಲಿ ಬದುಕನ್ನು ಕಳೆಯಬೇಕೋ ….?


1 comment

ಈ ಲೇಖನವನ್ನು VkNewz ನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

ಈ ಲೇಖನವನ್ನು ಗಲ್ಫ್ ಕನ್ನಡಿಗದಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

ಮಲಾಲ ಯೂಸಫ್ ಝಾಯಿ · ವಾಸ್ತವ ಸಂಚಿ

ಮಲಾಲ ಯೂಸಫ್ ಝಾಯಿ :ನಿನ್ನ ಕಿಚ್ಚು ಕಾಳ್ಗಿಚ್ಚಾಗಿ ಹರಡಲಿ …!

“ಮಲಾಲ ಯೂಸಫ್ ಝಾಯಿ”ಎಂಬ ಪುಟ್ಟ ಹೋರಾಟಗಾರ್ತಿ ಕೆಲವು ದಿನಗಳಿಂದ ಬಿಡದೆ ಕಾಡುತ್ತಿದ್ದಾಳೆ. ಇದೇ ಅಕ್ಟೋಬರ್ ೯ ರಂದು ನರ ರಾಕ್ಷಸ ತಾಲಿಬಾನಿಗರಿಂದ ಗುಂಡೇಟು ತಿಂದು ಸದ್ಯ ಜೀವನ್ಮರಣ ಹೋರಾಟದಲ್ಲಿರುವ 14ರ ಹರೆಯದ ಪುಟ್ಟ ಪಾಕಿಸ್ತಾನಿ ಮಾನವ ಹಕ್ಕುಗಳ ಹೋರಾಟಗಾರ್ತಿಯದು. ಅಷ್ಟಕ್ಕೂ ಆಕೆ ಮಾಡಿದ ತಪ್ಪಾದರೂ ಏನು..?. ಇಸ್ಲಾಮಿನಲ್ಲಿ ಪ್ರತಿಪಾದಿಸಿರುವ ಸ್ತ್ರೀ ವಿಧ್ಯಾಬ್ಯಾಸವನ್ನು ಎತ್ತಿ ಹಿಡಿದದ್ದೇ…? ಅಥವಾ ತಾಲಿಬಾನಿ ಕಪಿಮುಷ್ಟಿಯಲ್ಲಿರುವ ಸ್ವಾತ್ ಕಣಿವೆಯಲ್ಲಿ ಸ್ತ್ರೀ ಹಕ್ಕಿಗಾಗಿ ಹೋರಾಡಿದ್ದೆ…?

ಮಲಾಲ ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿರುವ ಮಿನ್ಗೋರ ಪಟ್ಟಣದ ಶಾಲಾ ವಿದ್ಯಾರ್ಥಿನಿ. ಅಪ್ಪ ಝೈದುದ್ದೀನ್ ಯೂಸುಫ್‍ಝಾಯಿ ಹುಟ್ಟು ಕವಿಯಾಗಿದ್ದರು. ಖುಶಾಲ್ ಎಂಬ ನಾಮದಡಿ ತನ್ನದೇ ಆದ ಹಲವು ಶಾಲೆಗಳನ್ನು ನಡೆಸುತ್ತಿದ್ದರಲ್ಲದೆ, ಶಿಕ್ಷಣದ ಹೋರಾಟಗಾರನೂ ಆಗಿದ್ದರು . ಮಲಾಲ ತನ್ನ ಭವಿಷ್ಯದ ಬಗ್ಗೆ ಅಧಮ್ಯವಾದ ಕನಸು ಹೊತ್ತಿದ್ದಳು. ಚಿಕ್ಕದ್ದಿನಿಂದಲೇ ಹೋರಾಟದ ಕಿಚ್ಚನ್ನು ಹತ್ತಿಸಿಕೊಂಡ ಅವಳು ರಾಜಕಾರಣಿಯಾಗಬೇಕೆಂಬುದು ಅಪ್ಪನ ಆಸೆಯಾಗಿದ್ದರೂ, ತಾನು ಡಾಕ್ಟರ್ ಆಗಬೇಕೆಂಬುದು ಅವಳ ಅಭಿಲಾಷೆಯಾಗಿತ್ತು. ತನ್ನೂರು ಸ್ವಾತ್ ಬಗ್ಗೆ ಅವಳಿಗೆ ಎಲ್ಲಿಲ್ಲದ ಕಾಳಜಿ. ಪ್ರೀತಿಯಿಂದ ಅದನ್ನು “ನನ್ನ ಸ್ವಾತ್ ” ಎಂದು ಕರೆಯುತ್ತಿದ್ದಳು.

ಅದು 2009. ಮಲಾಲ’ಳಿಗಿನ್ನೂ 11 ವರ್ಷ ಪ್ರಾಯ. ಮೌಲಾನಾ ಫಜಲುಲ್ಲಾಹ್ ಎಂಬ ತಾಲಿಬಾನಿ ನಾಯಕ ಸ್ವಾತ್ ಕಣಿವೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸರ್ವಾಧಿಕಾರ ನಡೆಸುತ್ತಿದ್ದ. ಸಂಗೀತ, ದೂರದರ್ಶನ, ಸ್ತ್ರೀ ವಿಧ್ಯಾಬ್ಯಾಸಕ್ಕೆಲ್ಲ ಆತ ನಿಷೇಧ ಹೇರಿದ್ದ. ಆ ಸಮಯದಲ್ಲಿ ಅಬ್ದುಲ್ ಹೈ ಕಕ್ಕಾರ್ ಎಂಬ BBC ಪತ್ರಕರ್ತನ ಮೂಲಕ ಮಲಾಲ’ಳಿಗೆ ಮೊತ್ತ ಮೊದಲಾಗಿ BBC ಉರ್ದುವಿನಲ್ಲಿ “ತಾಲಿಬಾನ್ ಆಡಳಿತದಲ್ಲಿ ನನ್ನ ಜೀವನ” ಎಂಬ ವಿಷಯದಲ್ಲಿ ಬರೆಯುವ ಅವಕಾಶ ಸಿಕ್ಕಿತ್ತು. ತನ್ನ ನಿಜ ನಾಮಧೇಯವನ್ನು ಬಳಸಿದರೆ ಆಗುವ ಅನಾಹುತದ ಸ್ಪಷ್ಟ ಚಿತ್ರಣವಿದ್ದ ಕಾರಣ ಮಲಾಲ “ಗುಲ್ ಮಖಾಯಿ” ಎಂಬ ಕಾವ್ಯನಾಮದಡಿ ತನ್ನ ಮೊದಲ ಅಂಕಣವನ್ನು ಶುರುವಿಟ್ಟಳು. ಹೀಗೆ ತಾಲಿಬಾನಿ ಕಪಿ ಮುಷ್ಟಿಯಲ್ಲಿ ನರಳುತ್ತಿರುವ ಸ್ವಾತ್ ಜನರ ಮನೋವೇದನೆಯನ್ನು, ತನ್ನ ಶಾಲಾ ದೈನಂದಿನ ಚಟುವಟಿಕೆಗಳನ್ನು ಆಕೆ ಹೊರ ಜಗತ್ತಿಗೆ ಪರಿಚಯಿಸತೊಡಗಿದಳು.

ಈ ಮಧ್ಯೆ ಪಾಕಿಸ್ತಾನ ಸರಕಾರ ತಾಲಿಬಾನ್ ವಿರುದ್ದ ಕೈಗೊಂಡ ಕಾರ್ಯಾಚರಣೆ ಯೂಸಫ್ ಝಾಯಿ ಕುಟುಂಬವನ್ನು ಪೇಶಾವರಕ್ಕೆ ತಲುಪಿಸಿತ್ತದೆ. ಅಲ್ಲಿಂದಲೇ ತನ್ನ ಹೋರಾಟದ ಕಿಚ್ಚಿಗೆ ತುಪ್ಪ ಸುರಿದ ಮಲಾಲ ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತಿದ್ದಳು. ಆಕೆಯ ಬಗ್ಗೆ ಡಾಕ್ಯುಮೆಂಟರಿ ತಯಾರಾಯಿತು. ಯೂ ಟ್ಯೂಬಿನಲ್ಲಿ ಅವಳ ಸಂದರ್ಶನಗಳು ಬಂದವು. 2011 ಡಿಸೆಂಬರ್ 19ರಂದು ಪಾಕ್ ಸರಕಾರವು ಮಲಾಲಳಿಗೆ ಪ್ರಥಮ ರಾಷ್ಟ್ರೀಯ ಶಾಂತಿ ಪ್ರಶಸ್ತಿ ನೀಡಿ ಗೌರವಿಸಿತು.. ಅದೇ ತಿಂಗಳು 25ಕ್ಕೆ ಡಚ್ ಸರಕಾರ “ಅಂತರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿ” ಮತ್ತು ಅಕ್ಟೋಬರ್ 15 , 2012 ರಂದು ಪಾಕಿಸ್ತಾನ ಸರಕಾರ “ಅತ್ಯುನ್ನತ ನಾಗರಿಕ ಶೌರ್ಯ ಪ್ರಶಸ್ತಿ” ನೀಡಿತು. ಅದಲ್ಲದೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಅವಳನ್ನು ಅರಸಿ ಬಂದವು . ಮಲಾಲ’ಳಿಗೆ ಗೌರವಾರ್ಥವಾಗಿ ಪಾಕಿಸ್ತಾನಿ ಸರಕಾರ ಸ್ವಾತ್ ನಲ್ಲಿರುವ ಸರಕಾರೀ ಸೆಕೆಂಡರಿ ಸ್ಕೂಲ್ ‘ಗೆ “ಮಲಾಲ ಯೂಸಫ್ ಝಾಯಿ ಗರ್ಲ್ಸ್ ಸ್ಕೂಲ್” ಎಂದು ಮರು ನಾಮಕರಣ ಮಾಡಿತು. ಈ ನಡುವೆ ಆವಳನ್ನು ತಾಲಿಬಾನಿ ವಿರೋಧಿಯಂತೆ ಬಿಂಬಿಸಲಾಯ್ತು. ತಮ್ಮ ವಿರುದ್ದ ಧ್ವನಿಯೇತ್ತುವವರನ್ನು ಕೊಲ್ಲುವ ತಾಲಿಬಾನಿಗರು ಇವಳಿಗೂ ಜೀವ ಬೆದರಿಕೆಯೊಡ್ಡಿದರು. ಅದ್ಯಾವ ಅಂಜಿಕೆಯೂ ಇಲ್ಲದ ಮಲಾಲ ತನ್ನ ದೌತ್ಯದೆಡೆಗೆ ದಾಪುಗಾಲು ಹಾಕುತ್ತಲೇ ಇದ್ದಳು.

ಮಲಾಲ BBC ಉರ್ದುವಿಗೆ ಬರೆದ ಬರಹಗಳು:
ಜನವರಿ 3 ಶನಿವಾರ, 2009 – “ನಾನು ಭಯಭೀತಲಾದೆ”
ನಿನ್ನೆ ರಾತ್ರಿ ಕಂಡ ಘನ ಘೋರ ಕನಸಿನಲ್ಲಿ ಮಿಲಿಟರಿ ಹೆಲಿಕಾಪ್ಟರ್ ಮತ್ತು ತಾಲಿಬಾನಿಗರು ಬಂದಿದ್ದರು. ಸ್ವಾತ್ ನಲ್ಲಿ ಮಿಲಿಟರಿ ಕಾರ್ಯಾಚರಣೆ ಶುರುವಾಗಿನಿಂದಲೂ ಇಂತಹ ಕನಸುಗಳು ಮಾಮೂಲು. ಅಮ್ಮ ಕೊಟ್ಟ ತಿಂಡಿ ತಿಂದು ಶಾಲೆಗೇ ಹೊರಟೆ. ತಾಲಿಬಾನಿಗರು ಹೆಣ್ಣು ಮಕ್ಕಳು ಶಾಲೆ ಹೋಗುವುದನ್ನು ನಿಷೇಧಿಸಿದ್ದರಿಂದ ನನಗೆ ಒಳಗೊಳಗೇ ಭಯವಾಗುತ್ತಿದೆ.
ತಾಲಿಬಾನ್ ಆದೇಶದ ಪರಿಣಾಮವಾಗಿ 27 ಮಂದಿಯಲ್ಲಿ ಕೇವಲ 11 ಮಂದಿಯ ಹಾಜರಾತಿ. ನನ್ನ ಮೂವರು ಗೆಳತಿಯರು ಇದೇ ಅದೆಶದಿಂದಾಗಿ ಲಾಹೋರ್ ,ಪೇಶಾವರ ಮತ್ತು ರಾವಲ್ಪಿಂಡಿಗೆ ತಮ್ಮ ಕುಟುಂಬ ಸಮೇತ ತೆರಳಿದ್ದಾರೆ.
“ಕೊಂದು ಬಿಡ್ತೀನಿ ನಿನ್ನ” ಶಾಲೆಯಿಂದ ಮರಳುವಾಗ ವ್ಯಕ್ತಿಯೊಬ್ಬನ ಮಾತು ಕೇಳಿ ನಾನು ಭಯಭೀತಳಾಗಿ ನಡೆಯುವ ವೇಗವನ್ನು ಹೆಚ್ಚಿಸಿದೆ. ಸ್ವಲ್ಪ ದೂರದಿಂದ ಆತ ಹಿಂಬಾಲಿಸುತ್ತಿದ್ದಾನ ಎಂದರಿಯಲು ತಿರುಗಿ ನೋಡಿದೆ. ಆತ ಫೋನಿನಲ್ಲಿ ಮಾತನಾಡುತ್ತಿದ್ದುದು ಕಂಡು ನೆಮ್ಮದಿಯಾಯ್ತು. ನಿಜವೇನೆಂದರೆ ಆತ ಫೋನಲ್ಲಿ ಯಾರಿಗೋ ಬೆದರಿಕೆ ಒಡ್ಡುತ್ತಿದ್ದ.

ಜನವರಿ 4 ಭಾನುವಾರ, 2009 – “ನಾನು ಶಾಲೆಗೇ ಹೋಗಲೇಬೇಕು”
ಶಾಲೆಗೇ ರಜೆಯಾದ ಕಾರಣ ತಡವಾಗಿ ಎದ್ದೆ. ಗಂಟೆ ಹತ್ತು ಆಗಿರಬಹುದು. ಗ್ರೀನ್ ಚೌಕದಲ್ಲಿ ಮೂರು ಶವಗಳು ಬಿದ್ದಿರುವುದಾಗಿ ತಂದೆ ಮಾತನಾಡಿಕೊಳ್ಳುತ್ತಿದ್ದರು. ಅದನ್ನು ಕೇಳಿ ಬೇಸರವಾಯಿತು. ಸೈನಿಕ ಕಾರ್ಯಾಚರಣೆಯ ಆರಂಭಕ್ಕಿಂತ ಮುಂಚೆ ಆದಿತ್ಯವಾರ ಮರ್ಗಾಜ್ಹರ್ , ಫಿಜ್ಹ ಘಾಟ್ ಮತ್ತು ಕಂಜು ಮುಂತಾದ ಪ್ರದೇಶಗಳಿಗೆ ಪಿಕ್ನಿಕ್ ಹೋಗುತ್ತಿದ್ದೆವು.ಆದರೆ ಕಳೆದ ಒಂದೂವರೆ ವರ್ಷದಿಂದ ನಾವು ಎಲ್ಲೂ ಪಿಕ್ನಿಕ್’ಗೆ ಹೋಗಲಾರದ ಪರಿಸ್ಥಿತಿ.
ಮುಂಚೆ ರಾತ್ರಿ ಊಟ ಆದ ಬಳಿಕ ಸ್ವಲ್ಪ ದೂರ ನಡೆಯುತ್ತಿದ್ದೆವು. ಆದರೆ ಈಗ ಸೂರ್ಯ ಮುಳುಗುವ ಮುಂಚೆ ಮನೆ ಸೇರಬೇಕು. ಇಂದು ಒಂದಿಷ್ಟು ಮನೆಕೆಲಸ ಮಾಡಿ , ಹೋಂ ವರ್ಕ್ ಮುಗಿಸಿ ತಮ್ಮನ ಜೊತೆ ಆಟವಾಡಿದೆ.ಆದರೆ ಹೃದಯ ಮಾತ್ರ ಬಡಿದುಕೊಳ್ಳುತ್ತಲೇ ಇದೇ ..”ನಾಳೆ ನಾನು ಶಾಲೆಗೇ ಹೋಗಬೇಕು..”.

ಜನವರಿ 5 ಸೋಮವಾರ, 2009 – “ಬಣ್ಣದ ಬಟ್ಟೆಗಳನ್ನು ಧರಿಸಬಾರದು”
ಶಾಲೆಗೆ ಹೊರಡಲು ಅಣಿಯಾಗುತ್ತಾ ಯುನಿಫಾರ್ಮ್ ಕೈಗೆತ್ತಿಕೊಂಡೆ. ತಕ್ಷಣ, ನಾಳೆಯಿಂದ ಎಲ್ಲರೂ ಸಾಮಾನ್ಯ ಉಡುಪುಗಳನ್ನು ಧರಿಸಿ ಶಾಲೆಗೆ ಬರಬೇಕು, ಯುನಿಫಾರ್ಮು ಧರಿಸುವಂತಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದು ನೆನಪಾಯ್ತು. ನಾನು ನನ್ನ ಇಷ್ಟದ ಪಿಂಕ್ ಡ್ರೆಸ್ ಹಾಕುವುದಾಗಿ ತೀರ್ಮಾನಿಸಿದೆ.ಉಳಿದವರೆಲ್ಲರೂ ಬಣ್ಣದ ಬಣ್ಣದ ಡ್ರೆಸ್ ಧರಿಸಿದ್ದರಿಂದ ಶಾಲೆಯಲ್ಲೂ ಮನೆಯ ವಾತಾವರವಿತ್ತು. “ದೇವರಾಣೆ..! ಸತ್ಯ ಹೇಳು , ತಾಲಿಬಾನಿಗಳು ನಮ್ಮ ಶಾಲೆಯ ಮೇಲೆ ಆಕ್ರಮಣ ಮಾಡುತ್ತಾರಂತೆ ಹೌದಾ..?” ಗೆಳತಿಯೊಬ್ಬಳು ಪ್ರಶ್ನಿಸಿದಳು. ಬೆಳಗ್ಗಿನ ಅಸೆಂಬ್ಲಿಯಲ್ಲಿ ಬಣ್ಣದ ಬಟ್ಟೆ ಧರಿಸಿ ಬರಬೇಡಿ. ಅದಕ್ಕೆ ತಾಲಿಬಾನ್ ವಿರೋಧ ವ್ಯಕ್ತಪಡಿಸಬಹುದೆಂದು ತಾಕೀತು ಮಾಡಿದರು.
ಶಾಲೆಯಿಂದ ಬಂದು ಊಟ ಮುಗಿಸಿದೆ. ನಂತರ ಟ್ಯೂಶನ್ ಇತ್ತು. ಸಂಜೆ ಟಿ.ವಿ ನೋಡಿತ್ತಿದ್ದಾಗ ಶಕರ್ದದಲ್ಲಿ ಹದಿನೈದು ದಿನಗಳ ನಂತರ ಕರ್ಫ್ಯೂ ಹಿಂತೆಗೆದುಕೊಂಡ ಸುದ್ದಿ ಕೇಳಿ ಸಂತಸವಾಯಿತು. ನಮ್ಮ ಇಂಗ್ಲಿಷ್ ಟೀಚರ್ ಅಲ್ಲಿ ವಾಸವಿದ್ದರು. ಬಹುಶಃ ನಾಳೆ ಶಾಲೆಗೇ ಬರಬಹುದೇನೋ..?

ಜನವರಿ 7 ಬುಧವಾರ, 2009 – “ದಾಳಿಯೂ ಇಲ್ಲ.. ಹೆದರಿಕೆಯೂ ಇಲ್ಲ ”
ನಾನು ಮೊಹರಂ ರಜೆ ಕಳೆಯಲು ಬುನೈರಿಗೆ ಬಂದಿದ್ದೇನೆ. ಚೆಂದದ ಪರ್ವತ ಮತ್ತು ಹಸಿರುಹಾಸಿನ ಕಾರಣ ನಾನು ಬುನೈರನ್ನು ತುಂಬಾ ಇಷ್ಟಪಡುತ್ತೇನೆ.”ನನ್ನ ಸ್ವಾತ್ ” ಕೂಡ ನಂಗೆ ತುಂಬಾ ಇಷ್ಟ. ಆದರೆ ಅಲ್ಲಿ ಶಾಂತಿಯಿಲ್ಲ. ಇಲ್ಲಿ ಶಾಂತಿಯಿದೆ;ನೆಮ್ಮದಿಯಿದೆ. ಇಲ್ಲಿ ಯಾವುದೇ ದಾಳಿ ಇಲ್ಲ , ಅದರ ಭಯವೂ ಇಲ್ಲ. ನಾವೆಲ್ಲಾ ತುಂಬಾ ಸಂತೋಷವಾಗಿದ್ದೇವೆ.
ಇವತ್ತು ನಾವು ಫೀರ್ ಬಾಬಾ ಮ್ಯೂಸಿಯಂ’ಗೆ ಹೋಗಿದ್ದೆವು. ಅಲ್ಲಿ ತುಂಬಾ ಜನ ಜಂಗುಳಿಯಿತ್ತು . ಅವರೆಲ್ಲರೂ ಪ್ರಾರ್ಥಿಸಲು ಬಂದಿದ್ದರು. ಆದರೆ ನಾವು ವಿಹಾರಕ್ಕೆಂದು ಬಂದವರು. ಇಲ್ಲಿ ಬಳೆ, ಕಿವಿಯ ರಿಂಗು ಮತ್ತಿತರ ಕೃತಕ ಆಭರಣಗಳ ಅಂಗಡಿ ಇದೆ. ಖರೀದಿಸಬೇಕು ಎಂದುಕೊಂಡೆಯಾದರೂ ಯಾವುದೂ ಇಷ್ಟ ಆಗಲಿಲ್ಲ. ಆದರೆ ನನ್ನ ತಾಯಿ ಬಳೆ ಮತ್ತು ಕಿವಿಯ ರಿಂಗನ್ನು ಖರೀದಿಸಿದರು.

ಜನವರಿ 9 ಶುಕ್ರವಾರ, 2009 – “ಮೌಲಾನ ರಜೆಯಲ್ಲಿ ಹೊರಟರೇ.. ?”
ಇಂದು ಶಾಲೆಯಲ್ಲಿ ಬುನೈರ್ ಪ್ರವಾಸದ ಬಗ್ಗೆ ಗೆಳತಿಯರಲ್ಲಿ ಹೇಳಿದೆ. ಬುನೈರ್ ಕತೆ ಕೇಳಿ ಬೇಸರವಾಗಿದೆ ಅಂತ ಅವರು ಮುಖ ತಿರುಗಿಸಿದರು. ತದನಂತರ ಎಫ್ ಎಂ ರೇಡಿಯೋದಲ್ಲಿ ಪ್ರವಚನ ನೀಡುತ್ತಿದ್ದ ಮೌಲಾನ ಸಾವಿನ ವದಂತಿಯ ಬಗ್ಗೆ ಚರ್ಚಿಸಿದೆವು. ಹೆಣ್ಣು ಮಕ್ಕಳು ಶಾಲೆಗೇ ಹೋಗಬಾರದೆಂದು ಘೋಷಿಸಿದವರಲ್ಲಿ ಅವರೂ ಒಬ್ಬರು.
ಕೆಲವರು ಅವರು ಸತ್ತು ಹೋಗಿದ್ದಾರೆ ಎಂದರೆ ಮತ್ತೆ ಕೆಲವರು ಅದನ್ನು ಒಪ್ಪಲಿಲ್ಲ. ನಿನ್ನೆ ರಾತ್ರಿ ರೇಡಿಯೋದಲ್ಲಿ ಅವರ ಪ್ರವಚನ ಪ್ರಸಾರವಾಗದ್ದರಿಂದ ಅವರು ಸತ್ತು ಹೋಗಿದ್ದಾರೆ ಅಂತ ವದಂತಿ ಹಬ್ಬಿತ್ತು. ಮೌಲಾನ ರಜೆಯ ಮೇಲೆ ಹೋಗಿದ್ದಾರಷ್ಟೇ ಎಂದು ಹುಡುಗಿಯೊಬ್ಬಳು ಹೇಳಿದಳು. ಶುಕ್ರವಾರ ಟ್ಯೂಶನ್
ಇಲ್ಲದ ಕಾರಣ ಇಡೀ ಮಧ್ಯಾಹ್ನ ಆಟವಾಡುತ್ತ ಕಳೆದೆ. ಸಂಜೆ ಟಿ.ವಿ ಆನ್ ಮಾಡಿದಾಗ ಲಾಹೋರಿನಲ್ಲಿ ಬಾಂಬ್ ಸ್ಪೋಟವಾದ ವರದಿ ಬರುತ್ತಿತ್ತು. “ಪಾಕಿಸ್ತಾನದಲ್ಯಾಕೆ ಇಷ್ಟು ಸ್ಪೋಟಗಳು ನಡೆಯುತ್ತವೆ” ನನಗೆ ನಾನೇ ಕೇಳಿಕೊಂಡೆ.

ಜನವರಿ 14 ಬುಧವಾರ ,2009 – “ಇನ್ನೆಂದೂ ಶಾಲೆಗೆ ಹೋಗಲಾರದು ”
ಇವತ್ತು ಶಾಲೆಗೆ ಹೋಗಲು ಮನಸ್ಸಿರಲಿಲ್ಲ. ಕಾರಣ ನಾಳೆಯಿಂದ ಚಳಿಗಾಲದ ರಜೆ ಪ್ರಾರಂಭ. ಪ್ರಿನ್ಸಿಪಾಲರು ರಜೆಯನ್ನು ತಿಳಿಸಿದರಾದರೂ ಶಾಲೆಯ ಪುನರಾರಂಭದ ಬಗ್ಗೆ ಏನೂ ಹೇಳಲಿಲ್ಲ. ಈ ರೀತಿ ಆದದ್ದು ಇದು ಮೊದಲನೇ ಬಾರಿ.
ಮುಂಚೆ ಶಾಲೆ ಪುನರಾರಂಭದ ದಿನಾಂಕವನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ಜನವರಿ 15ರ ಬಳಿಕ ಹೆಣ್ಣು ಮಕ್ಕಳ ಶಾಲೆ ತೆರೆಯಕೂಡದು ಎಂಬ ತಾಲಿಬಾನ್ ಆದೇಶವೇ ಬಹುಶಃ ಪ್ರಾಂಶುಪಾಲರು ಮೌನವಾಗಿರುವುದಕ್ಕೆ ಕಾರಣ ಎಂದು ನನ್ನ ಅಂದಾಜು. ಈ ಬಾರಿ ನಮಗ್ಯಾರಿಗೂ ರಜೆಯ ಬಗ್ಗೆ ಸಂತಸವಿರಲಿಲ್ಲ.
ತಾಲಿಬಾನ್ ಆದೇಶ ಜಾರಿಗೆ ಬಂದರೆ ಮತ್ತೆ ನಾವು ಶಾಲೆಗೆ ಬರಲಾಗುವುದಿಲ್ಲ ಎಂಬ ಸತ್ಯ ನಮ್ಮ ಅರಿವಿಗೆ ಬಂದಿತ್ತು. ಕೆಲವರು ಪೆಬ್ರವರಿಯಲ್ಲಿ ಶಾಲೆ ಮತ್ತೆ ಆರಂಭವಾಗುತ್ತದೆ ಎಂಬ ಅಶಾವಾದದಲ್ಲಿದ್ದರು. ಮತ್ತೆ ಕೆಲವರ ಹೆತ್ತವರು ವಿಧ್ಯಭ್ಯಾಸಕ್ಕಾಗಿ ಸ್ವಾತನ್ನೇ ಬಿಟ್ಟು ಹೋಗುತ್ತಾರಂತೆ ಅಂತ ಮಾತನಾಡಿಕೊಳ್ಳುತ್ತಿದ್ದರು.
ಕೊನೆಯ ದಿನವಾದ ಕಾರಣ ಮೈದಾನದಲ್ಲಿ ಹೆಚ್ಚು ಹೊತ್ತು ಆಟವಾಡಿದೆವು. ಶಾಲೆ ಮತ್ತೆ ಪ್ರಾರಂಭವಾಗುತ್ತದೆ ಅಂತ ನಾನು ನಂಬಿದ್ದೇನೆ. ಆದರೂ ಶಾಲೆಯಿಂದ ಹೋಗುವಾಗ ಮತ್ಯಾವತ್ತು ಇಲ್ಲಿಗೆ ಬರದ ಭಾವದಿಂದ ಶಾಲಾ ಕಟ್ಟಡವನ್ನು ನೋಡಿಕೊಂಡು ಬಂದೆ.

ಜನವರಿ 15 ಗುರುವಾರ , 2009 – “ಕರಾಳ ರಾತ್ರಿಗಳು ”
ರಾತ್ರಿಯಿಡೀ ಬಂದೂಕಿನ ಅರ್ಭಟದಿಂದಾಗಿ ಮೂರು ಬಾರಿ ಎಚ್ಚರವಾಯ್ತು. ಶಾಲೆಯಿಲ್ಲದ ಕಾರಣ ಹೊತ್ತು ಮೀರಿ ಹತ್ತು ಗಂಟೆಗೆ ಎದ್ದೆ. ತದನಂತರ ಮನೆಗೆ ಬಂದ ಗೆಳತಿಯೊಡನೆ ಹೋಂ ವರ್ಕಿನ ಬಗ್ಗೆ ಚರ್ಚಿಸಿದೆ. ಇಂದು ಜನವರಿ 15 . ತಾಲಿಬಾನ್ ಆದೇಶ ಜಾರಿಗೆ ತರಲು ಕೊನೆಯ ದಿನಾಂಕ. ನನ್ನ ಗೆಳೆತಿ ಇದ್ಯಾವುದರ ಪರಿವೇ ಇಲ್ಲದೆ ಹೋಂ ವರ್ಕಿನ ಬಗ್ಗೆ ಚರ್ಚಿಸುತ್ತಿದ್ದಳು.
ಇಂದು BBC ಉರ್ದುವಿಗೆ ನಾನು ಬರೆದ ಡೈರಿಯನ್ನು ಓದಿದೆ.ಮತ್ತು ಪತ್ರಿಕೆಯಲ್ಲಿ ಪ್ರಕಟಿಸಿದೆ. “ಗುಲ್ ಮಖಾಯಿ” ಎಂಬ ನನ್ನ ಕಾವ್ಯನಾಮವನ್ನು ತಾಯಿ ತುಂಬಾ ಇಷ್ಟಪಟ್ಟಿದ್ದಳು. ಅವಳ ಹೆಸರನ್ನು “ಗುಲ್ ಮಖಾಯಿ” ಅಂತ ಬದಲಿಸಬಹುದಲ್ಲವೇ ಅಂತ ತಂದೆಯಲ್ಲಿ ಕೇಳಿದರು. ನನಗೂ “ಗುಲ್ ಮಖಾಯಿ” ಎಂಬ ಹೆಸರು ಇಷ್ಟವಾಗಿತ್ತು ಕಾರಣ ನನ್ನ ನಿಜ ಹೆಸರಿನ ಅರ್ಥ “ದುಃಖ ಭರಿತಳು..!”
ಕೆಲ ದಿನಗಳ ಹಿಂದೆ ಯಾರೂ ನನ್ನ ಡೈರಿಯ ಪ್ರಿಂಟ್ ಔಟ್ ತೆಗೆದು ಎಷ್ಟು ಚೆನ್ನಾಗಿದೆ ಅಂತ ಹೇಳಿ ತಂದೆಗೆ ತೋರಿಸಿದರಂತೆ. ಇದು ಬರೆದದ್ದು ತನ್ನ ಮಗಳೆಂದು ಹೇಳದೆ ತಂದೆ ಮುಗುಳ್ನಕ್ಕು ಸುಮ್ಮನಾದರಂತೆ…!

ಮಲಾಲ ಕೇವಲ 11 ವರ್ಷ ಪ್ರಾಯದಲ್ಲಿ BBC ಉರ್ದುವಿಗಾಗಿ ಬರೆದ ಬರಹಗಳಿವು. ಧರ್ಮಾಂಧ ತಾಲಿಬಾನಿಗಳ ನಡುವೆ, ಸ್ತ್ರೀ ಸ್ವಾತಂತ್ರ , ಸ್ತ್ರೀ ಮೂಲಭೂತ ಹಕ್ಕುಗಳು ಮತ್ತು ಹದಿಹರೆಯದ ಹೆಣ್ಣು ಮಕ್ಕಳ ವಿಧ್ಯಾಬ್ಯಾಸದ ಅಗತ್ಯತೆಯನ್ನು ಎತ್ತಿಹಿಡಿದ ಪುಟ್ಟ ಮಲಾಲ’ಳನ್ನು ಅಮಾನವೀಯವಾಗಿ ಗುಂಡಿಟ್ಟ ತಾಲಿಬಾಲಿಗಳ ವಿರುದ್ದ ವಿಶ್ವ ವ್ಯಾಪಿ ಖಂಡನೆ, ಅಕ್ರೋಶ ವ್ಯಕ್ತವಾಗಿದೆ.ಪಾಕಿಸ್ತಾನದಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಿದೆ. ಧರ್ಮದ ವಿಶಾಲತೆಯನ್ನು ಒಪ್ಪದೆ ಅದರ ಆದರ್ಶಗಳನ್ನು ದುರ್ವ್ಯಾಖ್ಯಾನಿಸಿ, ಆ ಮೂಲಕ ಹೊಸ ಅಚಾರ ವಿಚಾರಗಳನ್ನು ಸಮಾಜದ ಮೇಲೆ ಎತ್ತಿಕಟ್ಟುವ ಧಾರ್ಮಿಕ ಸಂಕುಚಿತವಾಗಿಗಳ ನಡುವೆ ದನಿಯೆತ್ತಿದ ಆಕೆಯ ಕಿಚ್ಚು, ಮುಂದೆ ಬೆಂಕಿಯುಂಡೆಯಾಗಿ, ಕಾಲ್ಗಿಚ್ಚಾಗಿ ಹರಡಲಿ ಎಂಬುದು ಎಲ್ಲರ ಪ್ರಾರ್ಥನೆ.


Leave a Comment

ಕನ್ನಡ ಬ್ಲಾಗಿನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ