ಕಳೆದ ಭಾನುವಾರದ [6/11/2016] ವಿಜಯ ಕರ್ನಾಟಕ – ಲವಲvk ಪುರವಣಿಯಲ್ಲಿ ಪ್ರಕಟವಾದ ನನ್ನದೊಂದು ಪದ್ಯ
Category: ಮನಸಿನ ಹಾ(ಪಾ)ಡು
ನೆನಪಿನ ಸಂಚಿ – ಹತ್ತು ಲಕ್ಷ ದಾಟಿದ ಓದುಗರು !!
ಒಂದು ಖುಷಿಯ ವಿಚಾರ ನಿಮಗೆ ಹೇಳೋದೇ ಮರೆತು ಹೋಯ್ತು.. ಅದೇನೆಂದರೆ ನನ್ನ ಅಸಂಬದ್ಧ ಅಲಾಪಗಳ “ನೆನಪಿನ ಸಂಚಿ” ಬ್ಲಾಗ್ ಓದುಗರ ಸಂಖ್ಯೆ ಬರೋಬ್ಬರಿ 1 0 0 0 0 0 0 [ಹತ್ತು ಲಕ್ಷ] ದಾಟಿದೆ. ನನ್ನೆಲ್ಲಾ ಖುಷಿ, ಆದ್ವಾನ, ಸಂಕಟ , ತಳಮಳ, ಕ್ಷುಲ್ಲಕತನ, ಒಂಟಿತನ, ಸೋಲಿನ ಅಂಚಿನ ಗೆಲುವು, ಪ್ರೇಮ ಮುಂತಾದ ಮನುಷ್ಯ ಸಹಜ ಅವಸ್ಥೆಗಳಲ್ಲಿ ಮೂಡಿದ ಭಾವವನ್ನು ಅಕ್ಷರವಾಗಿಸಿ ಗುಡ್ಡ ಹಾಕಿರುವ ನನ್ನದೇ ಮನಸ್ಸಿನ ಪ್ರತಿಫ಼ಲನದ ಪುಟಗಳವು . ಬಹುಶಃ ನಿಮ್ಮ ಎದೆಯ ಹಾಡು ಕೂಡ ಅದೇ ಆಗಿದ್ದರಿಂದ ಏನೋ ನಾಲ್ಕೈದು ವರ್ಷಗಳ ಹಿಂದೆ ನಾನು ಆರಂಭಿಸಿದ್ದ ಬ್ಲಾಗ್ ಈ ಮಟ್ಟಕ್ಕೆ ಬೆಳೆದಿರುವುದು. ಮುಂಚೆಲ್ಲಾ ಕವಿತೆಗಳಲ್ಲಿ ಮುಳುಗಿ ಹೋಗುವ ಜಾಯಮಾನ ನನ್ನದು. ಬದುಕಿನ ಆದ್ಯತೆಗಳು ಬದಲಾದಂತೆಲ್ಲಾ ನನ್ನನ್ನು ನಾನೇ ಕಳೆದುಕೊಂಡಿದ್ದೀನಿ ಅನಿಸಿತ್ತದೆ.
ಅನಿಸಿಕೆಗಳಿಗಿಂತ ಹೆಚ್ಚಾಗಿ ಆ ದಿನ , ಆಕ್ಷಣ ಆ ಘಟನೆ, ಆ ವಸ್ತುವಿನ ಬಗ್ಗೆ ನನ್ನ ಬರಹಗಳು ಹೆಚ್ಚಾಗಿ ಮಾತನಾಡುವುದರಿಂದ ಏನೋ ಕಾವ್ಯಾತ್ಮಕ ಅಲ್ಲದ ಹಲವು ಬರಹಗಳು ನೀವಲ್ಲಿ ಕಾಣಬಹುದು. ಎಲ್ಲದಕ್ಕೂ ಅತೀತವಾಗಿ ಕಾಡುವ ಬದುಕು, ಬಾಲ್ಯ, ಆ ತೊರೆ ತೀರದ ನೆನಪುಗಳು, ಸಮುದ್ರ, ತೀರ ಹೆಚ್ಚಾಗಿ ಬಂದು ಹೋಗುತ್ತದೆ. ಒಂದಷ್ಟು ಹನಿಗಳು, ಕವಿತೆಗಳು(?), ನ್ಯಾನೋ ಕಥೆಗಳು, ಸಂಧ್ಯಾಲಾಪಗಳು… ಮತ್ತೊಂದಿಷ್ಟು ಕಾಡುವ ಬದುಕು.. ಇದು ನಿಮ್ಮದೇ “ನೆನಪಿನ ಸಂಚಿ”.
ಪ್ರೀತಿಯ ಓದುಗರಿಗೆ ಮನದಾಳದ ಅನಂತ ಧನ್ಯವಾದಗಳು
ನಿಮ್ಮವನೇ,
ಹುಸೇನಿ ~
ಮೌನದ ಹಾಡು …
ಮಾತಾಗುತ್ತಾಳೆ, ಮಾತಿನಲ್ಲೇ
ಮೌನದ ಹಾಡೊಂದು
ಗುನುಗುತ್ತದೆ,
ತಡೆಯುತ್ತಾಳೆ, ಬಲವಂತವಾಗಿ
ಅಥವಾ, ……
ಮಣ್ಣು ಬೀಜದ
ಕತೆಗೆ ಕೊಪಗೊಳ್ಳುತ್ತಾಳೆ,
ಸೃಷ್ಟಿ ಹಾಡು ಕರ್ಕಶವಂತೆ!
ಪದಗಳಲಿ
ಒಳಗುದಿಗಳನೆಲ್ಲ
ಬಗೆದು ಬಗೆದು
ಬೆತ್ತಲಾಗಿದ್ದು ನಿಜವೇ ಸರಿ.
ಕತ್ತಲಲ್ಲಿ ಬೆತ್ತಲಾಗೋದು
ಸುಲಭ!
ಒಂಟಿತನಗಳು ಅಲ್ಲೇ ತಾನೇ ಗರ್ಭಕಟ್ಟಿ
ಹುಟ್ಟೋದು?!
ದೂರ ನಿಲೀಗಾಸದ ನೀಲಿಮೆ ನಾನು
ಮುಗಿಯುತ್ತೇನೆ, ಮುಂಚೆ ಆಸೆಯೊಂದೇ
ಪರದೆಯೊಳಗೆ ಹನಿವ
ಕಣ್ಣುಗಳ ಮಿಂಚಿನ
ಬೆಳಕಿನ(ಕತ್ತಲಿನ)ಹಾಡು ಗುನುಗಬೇಕು,
ರಾಗ
ಹರಿಯಬೇಕು ಸರಾಗ,
ನದಿಯಾಗಿ, ಸಮುದ್ರವಾಗಿ, ಮತ್ತೆ
ಬದುಕಾಗಿ.. !
ಹೌದು ಬದುಕಾಗಿ…
ಹುಸೇನಿ ~
ನೀನು..
ಭೋರ್ಗರೆದು ಮೊರೆದು,
ಸಿಡಿದು, ಹಾಲ್ನೊರೆಗೆರೆದು,
ನಿನ್ನ ಭೇಟಿಯಲ್ಲಿ
ಶಾಂತ – ಅಲೆ ನಾನು..!
ಧರಿತ್ರಿ ನೀನು..
ನೀಲ ನಭದಿ ಕಪ್ಪಿಟ್ಟು
ಹಾರಿ ಹರಡಿ, ಗುಡುಗು ಸಿಡಿಲಿಗೆ
ಚದುರಿ ಹನಿಯಾಗಿ
ನಿನ್ನೊಳಗೆ ಲೀನ – ಮೇಘ ನಾನು..!
ಶರಧಿ ನೀನು..
ಕೆನೆದು ತೊನೆದು
ಧುಮ್ಮಿಕ್ಕಿ ಹರಿದು,
ನಿನ್ನ ಸೇರುವ ಅನವರತ
ಧಾವಂತದ- ನದಿ ನಾನು.. !
ತಾಯಿ ನೀನು…
ಪೆಪ್ಪರಮೆಂಟಿಗೆ ಸೋಗು ಹಾಕಿ
ಅತ್ತು ಕೂಗಿ ಕರೆದು, ರಚ್ಚೆಹಿಡಿದು
ನಿನ್ನ ಮಡಿಲ ಸಾರ್ಥಕ್ಯದಲ್ಲಿ
ಜಗ ಮರೆವ – ಮಗು ನಾನು…
~ಹುಸೇನಿ
ಮಾತು…ಮೌನ..
ಮಾತು…
ನೀಲನಭದಿ ಮಡುಗಟ್ಟಿ
ಹಾರಿ ಹರಡಿ, ಗುಡುಗು ಸಿಡಿಲಿಗೆ
ಭೂಮಿಗೆರಗಿದ ವರ್ಷಧಾರೆ,
ಮೌನ..
ಮಳೆ ನ೦ತರದ ಖಾಲಿ ಅಂಬರ
ತೊಳೆದ ಮುತ್ತಿನ೦ಥಾ ಭುವಿಗೆ
ಪವಡಿಸುವ ಸೂರ್ಯೋಜಸ್ಸಿನ ಸಿ೦ಗಾರ
ಮತ್ತೆ ಅಲ್ಲಲ್ಲೇ ತೇಲುತ್ತಾ
ದಟ್ಟೈಸುವ ಬಾನು..
_ಹುಸೇನಿ
ವ್ಯಸನ ವ್ಯೂಹ
‘ನನ್ನ ದೇಶ, ನನ್ನ ಜನ,
ಜಾತ್ಯಾತೀತತೆ, ಕೋಮುವಾದ,
ಸುಧಾರಿತ ಭಾರತ’ದ ಬಗ್ಗೆ ಮಾತನಾಡುವ
ಅವನು ಅದಾಗಲೇ ಒಂದು ಪ್ಯಾಕೆಟ್ ಸಿಗರೆಟ್ ಸುಟ್ಟಿದ್ದ;
ಭವಿಷ್ಯದ ಭಾರತದ ಶ್ವಾಸಕೋಶ ಕಪ್ಪಾಗಿತ್ತು.
‘ಇಂಡಿಯಾ ದ ಸೂಪರ್ ಪವರ್’
ನಕ್ಷತ್ರ ಹೋಟೆಲಿನಲ್ಲೊಂದು ವಿಐಪಿ ಮೀಟಿಂಗು
ಸ್ವದೇಶೀ ಭಕ್ಷ್ಯಗಳ ಜೊತೆ ಠಣಗುಟ್ಟಿದ ಗ್ಲಾಸಿನೊಳಗೆ
ವಿದೇಶಿ ಮಧ್ಯಗಳು; ಭ್ರಮನಿರಸ ಕನಸಿನ ಭಾರತ
ನಶೆಯಲ್ಲಿ ತೂರಾಡುತ್ತಿತ್ತು.
ಮಧ್ಯ ರಾತ್ರಿ, ಬಸ್ಸಿನೊಳಗೆ ಹೊಕ್ಕ ಒಂಟಿ
ಹುಡುಗಿ, ಹಸಿ ಮಾಂಸ ತಿಂದು ತೇಗಿ ಕೊನೆಗೆ
ಕಬ್ಬಿಣದ ರೋಡಿನಿಂದ ಆ ಭಾಗವನ್ನೇ ತಿವಿದ
ಕಂಭೂತ ನರಭಕ್ಷಕರು;
ರಾಮರಾಜ್ಯ ಭಾರತದ ಪುರುಷತ್ವ
ಸ್ತ್ರೀ ಕುಲಕ್ಕೆ ಮತ್ತಷ್ಟು ಮಾರಿಯಾಗಿತ್ತು.
ವ್ಯಸನ ವ್ಯೂಹವ ತೊಡೆಯಬೇಕು, ನಮ್ಮೊಳಗಿನ
ಭಾರತ ಜಾಗೃತವಾಗಬೇಕು, ನೆಮ್ಮದಿಯ ನಾಳೆಗೆ;
ಹುಟ್ಟಬೇಕು ಮತ್ತೆ ಭಗತ, ಅಝಾದರು
ಮೊದಲು ನನ್ನೊಳಗೆ ಮತ್ತೆ ನಿಮ್ಮೊಳಗೆ…
-ಹುಸೇನಿ
ಕನ್ನಡ ಕವನಗಳು – ಕನ್ನಡ ಪ್ರೇಮ ಕವನಗಳು – Kannada Kavanagalu – Kannada Love Poems
ನೀನೆಂದರೆ..
ನೀನೆಂದರೆ..
ಕಾದು ಕಾವಲಿಯಾದ ಮನಸಿಗೆ
ಹೊಂಗೆ ತಂಪು
ಇರುಳ ಕರಾಳತೆಯಲ್ಲಿ
ಕಳೆದು ಹೋಗುವ
ಕನಸು..!
ನೀನೆಂದರೆ..
ಕಲ್ಪನೆ, ಪರಿಕಲ್ಪನೆ
ಬದಲಾವಣೆ!
ನಾಳೆಯ ನಿರೀಕ್ಷೆ,
ಪ್ರತೀಕ್ಷೆ !
ನೀನೆಂದರೆ..
ಮುಂಗುರುಳು ಮುಂಜಾನೆಯ
ಮಂಜ ಹನಿ,
ಕೇಳಿದಷ್ಟೂ ಕೇಳಬೇಕೆನಿಸುವ
ಕಹಾನಿ!
ನೀನೆಂದರೆ..
ನನ್ನೊಳಗಿನ ತುಮುಲ,
ಹೊಯ್ದಾಟ!
ತನ್ನ ಅಸ್ತಿತ್ವಕ್ಕಾಗಿ
ಮಾತಿನ ಮೊರೆ ಹೋದ
ಪರಾವಲಂಬಿ ಮೌನ !
ನೀನೆಂದರೆ..
ಭರವಸೆಯ ಆಲಿಂಗನ,
ಕಣ್ಣೋಟದ
ಸಿಹಿ ಚುಂಬನ…!
ಒಂಟಿ ಕತ್ತಲ ಏಕಾಂಗಿತನ..
ಮತ್ತೆ ನನ್ನೀ
ಜೀವನ..!
ಉಳಿಸು ಕಣೆ.. ನನ್ನ ಪ್ರೀತಿಯ..
ಮರಳಿ ಬರಬಾರದೇ…?
ತುಡಿತದೆದೆಯ ಬಡಿತದಲೂ
ತಡವರಿಸುವ ಕನಸಲೂ
ದೇಹದ ಸಕಲ ನರ ನಾಡಿಯಲೂ
ತುಂಬಿರುವೆ ನೀನು
ಹೆಸರಿಲ್ಲದೆ ಅಳಿದು ಹೋದ ಬಂಧವಿದು
ಹೊಸ ಹೆಸರ ಕೊಡಬೇಕು..
ಆ ಹೆಸರ ನಾ ಕೂಗಿ ಕರೆಯಲು
ಓ ಎನುತ ನೀನೋಡಿ ಬರಬೇಕು
ನಿನ್ನ ಸೆಳೆತವಿರದ ಕ್ಷಣವಿಲ್ಲ
ನಿನ್ನ ನೆನಪಿರದ ದಿನವಿಲ್ಲ..
ನಿನ್ನ ಮರೆತು ಬದುಕುವ
ಕ್ಷಣಗಳ ಕಲ್ಪನೆಯೂ ನನಗಿಲ್ಲ
ಬತ್ತಿದೆ ನನ್ನೆದೆಯ ಮಾತು
ಬಿಕ್ಕಳಿಸುತಿದೆ ಹೃದಯ
ಅಳಿವು ಉಳಿವು ನಿನ್ನಲ್ಲಿದೆ
ಉಳಿಸು ಕಣೆ.. ನನ್ನ ಪ್ರೀತಿಯ
ಅಲ್ಲ ನನ್ನ ಜೀವವ.. ಜೀವನವ..!
ಶುಭವಾಗಲಿ ನಿನಗೀದಿನ..!
ಸೂರ್ಯನ ಪ್ರೀತಿಗೆ ಸೋತು
ಅರಳಿನಿಂತ ಸೂರ್ಯಕಾಂತಿಯ ಘಮೆ..
ಜೊತೆಗೆ ಮಳೆ ಹನಿಯ ತುಂತುರು…
ಹಕ್ಕಿಗಳ ಕಲರವ..ಜಿಗಿ ಹುಳಗಳ ಝೇಂಕಾರ..
ಆಯಿತು ಹೊಸ ಕನಸುಗಳ ಶುಭೋದಯ…!
ಮತ್ತೆ ಬಂದಿದೆ ಹೊಸ ಚೈತನ್ಯದ ನವ ದಿನ
ಹೊಸ ಬಯಕೆ ಹೊಸ ಕನಸುಗಳ ನವ ಜೀವನ..!
ಮುಂಜಾನೆಯ ಸವಿಯಲಿ ಮುಪ್ಪೂ ಯವ್ವನ!
ಹೊರಡು ನೀನು,ಶುಭವಾಗಲಿ ನಿನಗೀದಿನ..!
ಕಂಡ ಕನಸುಗಳ ನನಸಾಗಿಸೋ ಛಲ
ನಿನ್ನೆಗಳು ಕೊಟ್ಟ ನೋವನು ಮರೆಯುವ ಬಲ
ಸಾಧನೆಯ ಹಾದಿಯಲಿ ಮುನ್ನೇರುವ ಹಂಬಲ
ಕೊಡಲಿ ಈ ಹೊಸ ದಿನದ ರಾಶಿ ಫಲ!
ಹೊಸ ಕನಸ ಹೊತ್ತು ಸೂರ್ಯ ಏರಿದ್ದಾನೆ ಮೂಡಣ..
ಸಾಧನೆಯ ಎವರೆಸ್ಟ್ ಏರಬೇಕು.. ತೊಡು ನೀ ಪಣ!
ಗುರಿಯತ್ತ ಸಾಗಲಿ ನಿನ್ನ ಮುಂದಿನ ಪಯಣ..
ಸೋಲಿದೆ.. ಆದರೆ ಗೆಲ್ಲಬೇಕಿದೆ.. ಅದುವೇ ಜೀವನ..!
ಹೊರಡು ನೀನು,ಶುಭವಾಗಲಿ ನಿನಗೀದಿನ..!
ಅಮ್ಮಾ..
ಓ ಮಮಕಾರದ ಅಕ್ಷಯ ನಿಧಿಯೇ
ನಿನಗೆ ಕೋಟಿ ವಂದನೆ..!
ಓ ಸ್ನೇಹದ ಮೂರ್ತ ರೂಪವೇ
ನಿನಗೆ ಕೋಟಿ ವಂದನೆ..!
ನಡು ರಾತ್ರಿಯಲು ನನ್ನ ಅಳುವಿಗೆ
ಎದೆ ಹಾಲಿನ ಸಾಂತ್ವನ ನೀಡಿ..
ನನ್ನ ಹಟಕ್ಕೆಲ್ಲ ತಲೆಬಾಗಿ ನಿಂತು..
ಅತ್ತಾಗ ಕಣ್ಣೊರೆಸಿ , ನಕ್ಕಾಗ ಕಣ್ಣರಳಿಸಿ..
ಪ್ರೀತಿಯ ಮಳೆ ಸುರಿಸಿ, ಗೆಲುವಿನ ದಾರಿ ತೋರಿಸಿ
ಬೆಳೆಸಿದಳು ನನ್ನ ತಾಯಿ…
ಓ ಜನನೀ.. ನಿನಗೆ ಕೋಟಿ ವಂದನೆ…!
ತೆವಳಿ ಬರಲು ಕೈ ನೀಡಿಡಳು..
ತೊದಲು ನುಡಿಯಲು ತಿದ್ದಿ ಹೇಳಿದಳು..
ಚಂದ ಮಾಮನ ತೋರಿಸಿ ತುತ್ತು ಕೊಟ್ಟು
ಹಸಿವ ನೀಗಿಸಿದಳು..
ತನ್ನ ಬಸಿರೊಳಗೂ ನನಗೆ ಉಸಿರಾದಳು..
ಓ ದಿವ್ಯ ಚೇತನವೇ.. ನಿನಗೆ ಕೋಟಿ ವಂದನೆ..!
ತನ್ನ ಬೇಸರವ ಮರೆತು ನನಗೆ
ಸಾಂತ್ವನವಾದಳು..
ನನ್ನ ಸಂತೋಷದಲಿ ನಗೆಯ ಕಂಡಳು..
ಗೆಲುವಿಗೆ ಸ್ಪೂರ್ತಿಯಾದಳು…
ಬದುಕಿದೆ ದಾರಿದೀಪವಾದಳು..
ಓ ಸ್ಪೂರ್ತಿಯ ಚಿಲುಮೆಯೇ.. ನಿನಗೆ ಕೋಟಿ ವಂದನೆ..!
ಪದಗಳು ಸಾಕಾಗದು ನಿನ್ನ ಬಣ್ಣಿಸಲು..
ಈ ಜನ್ಮವು ಸಾಕಾಗದು ನಿನ್ನ ಋಣವ ತೀರಿಸಲು..
ನವಮಾಸ ನೀ ಹೊತ್ತ ಈ ಜೀವ
ನಿನಗಷ್ಟೇ ಮೀಸಲು..
ಹೊತ್ತು ಹೆತ್ತ ಹೆತ್ತವಳು ನೀನು.
ನನ್ನ ಉಸಿರಿನ ಒಡತಿ ನೀನು.. .
ಅಮ್ಮಾ… ನಿನಗೆ ಕೋಟಿ ಕೋಟಿ ವಂದನೆ….!