ನನ್ನ ನಾಳೆಯ ಕುರಿತು ನನಗಲ್ಲ, ಈ ಭೂಮಿ ಯಾವುದೇ ಜೀವಿಗೂ ಪ್ರವಚಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವತ್ತೂ ಬಾರದ ನಾಳೆಯ ಬಗ್ಗೆ ನಂಗೇನು ಅಷ್ಟು ಕುತೂಹಲವಿಲ್ಲ. ಈ ಬದುಕು ಈ ಕ್ಷಣದ್ದು ಅಷ್ಟೇ ಎಂದು ನಂಬುವವನು ನಾನು. ನಾ ಈ ಪದವನ್ನು ಬೆರೆಯುವ ವೇಳೆ 'ಈ ಕ್ಷಣ' ಆಗಿದ್ದ ಈ ಹೊತ್ತನ್ನು ಇನ್ನೈದು ನಿಮಿಷದ ಬಳಿಕ ನಾ ತಿರುಗಿ ನೋಡಬಹುದು. ಅಂಥಹ ನನ್ನ ದೃಷ್ಟಿ ಪರದೆಯಲ್ಲಿ ಶಾಶ್ವತವಾಗಿ ಉಳಿಯುವ, ನನ್ನನ್ನು ಸದಾ ಜೀವಂತವಿರಿಸುವ ಪ್ರೇರಣೆಯಾಗಿ, ಒಂಟಿಯಾದಾಗ ದಿಕ್ಕಾಗಿ, ದುಃಖಕ್ಕೆ ಸಾಂತ್ವನವಾಗಿ, ಭಾರಕ್ಕೊಂದು ಹೆಗಲಾಗಿ, ಅತ್ತ ಕ್ಷಣವ ನಗುವಾಗಿ, ನಕ್ಕ ಕ್ಷಣ ಅಳುವಾಗಿ, ಮಳೆಯ ನಂತರ ತೊಟ್ಟಿಕ್ಕುವ ಹನಿಯಾಗಿ, ಬದುಕು ಇಷ್ಟೆಯಾ ಎಂದೆನಿಸುವ ವೇಳೆ ನೀಲಾಗಸದ ತುಂಬಾ ಕಾಮನಬಿಲ್ಲಾಗಿ ಮೂಡುವ ನನ್ನ ನೆನಪುಗಳು, ಅಂತಹ ನೆನಪುಗಳ ವ್ಯಸನಿ ನಾನು. ಆ ಕಾರಣಕ್ಕೇ ಇರಬಹುದು ನಿನ್ನೆಗಳಲ್ಲೇ ಹೆಚ್ಚು ಬದುಕುತ್ತೇನೆ. ಅಂತಹ ಒಂದಿಷ್ಟು ಬೊಗಸೆ ನೆನಪುಗಳನ್ನು ಈ ಸಂಚಿಯೊಳಗೆ ತುಂಬಿದ್ದೇನೆ..
ನನ್ನ ಬಗ್ಗೆ ನನ್ನ ಬರಹಗಳೇ ಹೆಚ್ಚು ಮಾತನಾಡುವುದರಿಂದ ಇಲ್ಲಿ ಹೇಳಲು ಹೆಚ್ಚು ಉಳಿದಿಲ್ಲ. ಇಳಿಸಂಜೆಯಲ್ಲಿ ಕಾಡುಮಧ್ಯೆಯೋ, ಕಡಲ ತೀರದಲ್ಲೋ ಕಳೆದುಹೋಗಲು ಸದಾ ಹಂಬಲಿಸುವ ಮನ, ಬಾನ ಮಡಿಲಿನಿಂದ ಒಂದಿಷ್ಟು ವರ್ಷಧಾರೆಯೂ ಸೇರಿಕೊಂಡರೆ ಕಥೆ ಮುಗಿಯುತು;ನೆನಪುಗಳನ್ನೆಲ್ಲ ನೇವರಿಸಿ ಮಾತಿಗೆ ಕೂತು, ಮನಸ್ಸು ಮೌನವಾಗಿ ಅದ್ಯಾವುದೋ ಲೋಕದ ವಾಸಿಯಾಗುತ್ತದೆ. ಅಲ್ಲಿ ಬದುಕಿನ ಜಂಜಡವಿಲ್ಲ. ಗಾಳಿ, ನೀರು, ಬೆಳಕು ಉಚಿತವಾಗಿ ಸಿಗೋ ಜಗದಲಿ ಬದುಕನ್ನು ದುಸ್ತರ ಮಾಡಿಕೊಂಡ ನಿಮ್ಮಗಳ ಸಿನಿಕ ಜಗದಾಚೆಯ ಅನೂಹ್ಯ ಲೋಕವದು. ಹಕ್ಕಿಗಳ ಕಲರವಕ್ಕೆ ಸಾಥಿಯಾದ ಜೀರುಂಡೆಗಳ ನಾದ. ಪಕ್ಕದಲ್ಲೇ ಹರಿವ ತೋಡಿನ ಝುಳು-ಝುಳು. ರಾತ್ರಿಯ ನಿಶೀಥತೆ, ದೂರದಲ್ಲಿ ಒದರುವ ಗೂಬೆ, ಊಳಿಡುವ ನರಿ. ನನ್ನದೇ ಲೋಕವದು. ಕತ್ತಲಿಗೂ ಬೆಳಕನ್ನು ತೊಡಿಸಿ ಉನ್ಮಾದವನ್ನು ಉಣ್ಣುವ ಬೆಳಕಿನ ಜನರ ವಿಕ್ಷಿಪ್ತತೆಗೆ ಅಲ್ಲಿ ಜಾಗವಿಲ್ಲ. ಕತ್ತಲನ್ನು ಕತ್ತಲಾಗಿಯೂ ಬೆಳಕನ್ನು ಬೆಳಕಾಗಿಯೂ ಆಸ್ವಾದಿಸುತ್ತೇನೆ, ಅಲ್ಲಷ್ಟೇ ನಾನು ನಾನಾಗಿ ಹೆಚ್ಚು ಬದುಕುತ್ತೇನೆ. ಅದರಿಂದಲೋ ಏನೋ ನಾನು ಎಂದೂ ಸಲ್ಲದ ಈ ಬೆಳಕಿನ ಜಗದ ಬಗ್ಗೆ ತೀರದ ಅಸಹ್ಯತನವಿದೆ. ಕೋಪವಿದೆ, ಪರಿತಾಪವಿದೆ. ಆದರೇನು ? ಒಲ್ಲದೆಯೂ ನಾನು ಕೂಡ ಈ ಜಗದ ಕ್ಷುಲ್ಲಕತೆಯ ಭಾಗವಾಗಿದ್ದೇನೆ. ಅದರಿಂದಾಚೆ ಹೊರಬರಲು ಪ್ರಯತ್ನಿಸಿದಷ್ಟೂ ತೀವ್ರವಾಗಿ ನನ್ನನ್ನು ಸೆಳೆಯುತ್ತದೆ ಅದು. ಮನುಷ್ಯನೊಂದಿಗೆ ಹುಟ್ಟಿದ ಅಥವಾ ಹೇರಲ್ಪಟ್ಟ ಒಂದಷ್ಟು ಜವಾಬ್ದಾರಿಗಳೆಂಬ ಕಟ್ಟುಪಾಡುಗಳು, ಸಂಭಂದಗಳೆಂಬ ಬೇಲಿ. ಖುಷಿಯನ್ನು ವಸ್ತುಗಳ ಗಾತ್ರಕ್ಕೂ ಬೆಲೆಗೂ ನಿಗುದಿಗೊಳಿಸಿ, ಆ ವಸ್ತು ಸಿಕ್ಕರೆಷ್ಟೇ ಖುಷಿ ಎಂದು ಬದುಕಿಗೆ ನಿಯಮ ಹಾಕಲಾಗಿದೆ ಇಲ್ಲಿ. ಭೌತ ವಸ್ತುಗಳ ವ್ಯಾಮೋಹದಲ್ಲಿ ಬಾಲ್ಯವನ್ನೂ, ಕೌಮಾರವನ್ನೂ, ಯವ್ವನವನ್ನೂ ಅನುಭವಿಸಲು ಸಾಧ್ಯವಿಲ್ಲವಾಗಿದೆ. ಇದೆಲ್ಲದರಿಂದ ಮುಕ್ತಿಗಾಗಿ ಸದಾ ಹಂಬಲಿಸುತ್ತೇನೆ. ನೀ ಕಟ್ಟಿಕೊಂಡ ಸೌಧವೋ, ಕೋಟೆವೋ, ನೀನುಡುವ ವಸ್ತ್ರದ ಬೆಲೆಯೋ, ಸಂಚರಿಸುವ ವಾಹನದ ಮೌಲ್ಯವೋ, ಬ್ಯಾಂಕಿನ ಲಾಕರಿನಲ್ಲಿಟ್ಟಿರುವ ಒಡವೆಯೊ, ನಿನ್ನ ಹಿಂಬಾಲಕ ಪಡೆಯೋ ನಿನ್ನ ಮನಸಿನ ಸಂತೃಪ್ತಿಯನ್ನೂ ಖುಷಿಯನ್ನೂ ಅಲೆಯುವ ಮಾಪಕವಲ್ಲ. ಇದ್ಯಾವುದರಲ್ಲೂ ಪೂರ್ಣ ಸಂತೋಷವನ್ನು ಪಡೆದವರ್ಯಾರು ನಾನು ಕಂಡದ್ದಿಲ್ಲ, ಕೇಳಿದ್ದಿಲ್ಲ. "ಮನಃಶಾಂತಿಯೇ ಅತ್ಯುನ್ನತ ಶ್ರೀಮಂತಿಕೆ", ಈ ಬೆಳಕಿನ ಜಗದ ತುಂಬೆಲ್ಲಾ ಯಾವುದೊ ಕರ್ಕಶ ಸಂಗೀತಕ್ಕೆ ಕಿವುಡಾದ ಮಂದಿಯ ಮಧ್ಯೆ ಈ ಸತ್ಯವನ್ನು ಕೂಗಿ ಕೂಗಿ ಹೇಳುವ ಪ್ರಯತ್ನದಲ್ಲಿದ್ದೇನೆ..
ನಿಮ್ಮನೆ ಹುಡುಗ,
ಹುಸೇನಿ ~
ನೆನಪಿನ ಸಂಚಿಯ ಕುರಿತಾದ ನಿಮ್ಮ ಅಭಿಪ್ರಾಯವನ್ನು ಕಳುಹಿಸಿ : nenapinasanchi@gmail.com
ಕೆಲವೊಮ್ಮೆ ಎಲ್ಲದಕ್ಕೂ ಅತೀತವಾಗಿ ಬದುಕು ಕಾಡುತ್ತದೆ. ಅಪರಾತ್ರಿಗಳಲ್ಲಿ ಎದ್ದು ಕೂರುತ್ತೇನೆ, ಸಾಂತ್ವನಕ್ಕೆ ಮತ್ತದೇ ಹೆಂಚಿನ ಮನೆ, ಅಡಿಕೆ ತೋಟ, ಅದರಾಚೆಗಿನ ತೋಡು, ತೋಡು ಬದಿಯ ಪೇರಳೆ ಮರಗಳು, ಮಾವಿನ ಮರ, ಹಲಸಿನ ಮರ , ಕೊಕ್ಕೋ ಮರ, ಸೀತಾಫಲ, ನೇರಳೆ… ಪಕ್ಕದಲ್ಲೇ ಇರುವ ಆಟದ ಬಯಲು, ಅಡಿಕೆ ಗರಿಯ ಬ್ಯಾಟು, ರಬ್ಬರ್ ಚೆಂಡು, ಕೊಡ ತುಂಬಾ ನೀರು, ಆ ಉರಿ ಬಿಸಿಲು… ಆ ಹರಿದ ಬ್ಯಾಗು, ಬಟನ್ ಇರದ ಬಿಳಿ ಅಂಗಿ, ಕಲರ್ ಮಾಸಿ ಹೋದ ನೀಲಿ ಚಡ್ಡಿ, ಕಂಠಪಾಠದ ಮಗ್ಗಿ… ಇವೆಲ್ಲ ಬೇಕೆನಿಸುತ್ತದೆ. ದೊಡ್ದವನಾದಂತೆ ಬಾಲ್ಯಕ್ಕೆ ಮರಳುವ ಅಧಮ್ಯ ತುಡಿತ, ಇಷ್ಟು ವರ್ಷದ ಒಡನಾಟದ ನಂತರವೂ ಈ ಮೆಟ್ರೋ ಸಿಟಿಯು ನನಗೆ ಆಪ್ತವಾಗಲಿಲ್ಲ. ಇಲ್ಲಿರುವುದೆಲ್ಲವೂ ನನ್ನದಲ್ಲ ಎಂಬ ಕೊರಗು, ಅಥವಾ ಈ ಅತಿವೇಗಕ್ಕೆ ಒಗ್ಗಿಕೊಂಡ ಬದುಕಿನೊಂದಿಗಿರುವ ಅಸಮಾಧಾನ. ಇಲ್ಲಿಗೆ ಸಲ್ಲುವುದೇ ಇಲ್ಲ ನಾನು. ಒಂಟಿಯಾದಂತೆಲ್ಲ ಮತ್ತಷ್ಟು ಆಳದ ಪಾತಾಳಕ್ಕೆ ಇಳಿಯುತ್ತೇನೆ. ಅಲ್ಲಿ ಮೌನದ ಕಿವಿಗುಚ್ಚುವ ಕರಾಡತನ ಮತ್ತಷ್ಟು ಅಸಹನೀಯವೆನಿಸುತ್ತದೆ. ವ್ಯಾಕುಲಚಿತ್ತ ಮನಸ್ಸು ಮತ್ತೆ ಹಂಬಲಿಸುವುದೊಂದೇ .. ವೊಹ್ ಕಾಗಝ್ ಕಿ ಕಷ್ತಿ.. ವೊಹ್ ಬಾರೀಶ್ ಕ ಪಾನಿ.
ಖುಷಿ ತಾನಾಗಿ ಒಲಿಯುವ ಬಾಲ್ಯಕ್ಕೂ, ಖುಷಿಯನ್ನು ಹುಡುಕಿ ಹೋಗಬೇಕಾದ ಅನಿವಾರ್ಯತೆಯ ಈ ಕಾಲಕ್ಕೂ ತುಂಬಾ ವ್ಯತ್ಯಾಸವಿದೆ. ಬಾಲ್ಯವೆಂದರೆ ಬದುಕು ಹರಳುಗಟ್ಟುವ ಕಾಲ. ಅಲ್ಲಿನ ಆಟ, ಪಾಠ, ಮುಗ್ದತೆ, ಕುತೂಹಲ, ಭಯ, ತುಂಟಾಟ, ಮೋಜು, ಮಸ್ತಿಗಳೆಲ್ಲಾ ಖುಷಿಯನ್ನು ಮೊಗೆಮೊಗೆದು ಕೊಡುತ್ತವೆ. ಅಲ್ಲಿ ಖುಶಿಯಾಗಲು ನಿರ್ದಿಷ್ಟ ಕಾರಣ ಬೇಕಿಲ್ಲ. ಬೇಲಿ ಹಾರಿ ಗೇರು ಬೀಜ ಕದಿಯುವಾಗ ತೋಟದಾಳು ಬಂದು ಓಡಿಸಿದರೂ ಖುಷಿ, ನೆಲ್ಲಿಕಾಯಿ ಹುಡುಕಿ ಕಾಡೇರಿದಾಗ ಜಾರಿ ಬಿದ್ದು ಕಾಲಿಗೆ ಪೆಟ್ಟಾದರೂ ಖುಷಿ, ತಮ್ಮನಿಗೆ ಕೀಟಲೆ ಮಾಡಿ ಅಮ್ಮನಿಂದ ಬೆನ್ನಿಗೆರೆಡು ಸಿಕ್ಕರೂ ಖುಷಿ, ಊಟ ಮಾಡದ ಹಠದಲ್ಲಿ ಬರಸೆಳೆದು ಮುತ್ತುಗೆರೆದು ಅಮ್ಮನ ಕೈತುತ್ತಿನಲ್ಲಿ ಎಂಥಾ ಖುಷಿ, ಮನೆಲೆಕ್ಕ ಮಾಡದೆ ಟೀಚರ್ ಬೆತ್ತ ತೆಗ್ಯೋ ಮುನ್ನವೇ ಕೈ ಚಾಚುವಾಗ್ಲೂ ಖುಷಿ, ಸಂಜೆ ತೋಡಲ್ಲಿ ಹುಟ್ಟುಡುಗೆಯಲ್ಲಿ ಈಜಾಡುವಾಗಲೂ ಖುಷಿ, ಅಲ್ಲಿ ಪ್ರತೀ ಒಂದು ಕ್ಷಣವು ಖುಷಿಯ ವಾಗ್ದಾನದೊಂದಿಗೆ ಬರುತ್ತದೆ. ಆ ಖುಶಿಗಳನ್ನೆಲ್ಲ ಇಲ್ಲಿ ಎಲ್ಲಿ ಹುಡುಕಲಿ?. ಹಬ್ಬದ ಹೊಸ ಉಡುಗೆಯನ್ನು ಮತ್ತೆ ಮತ್ತೆ ನೋಡಿ, ಮೂಸಿ, ಮೈ ಮೇಲೆ ಇಟ್ಟು ಕನ್ನಡಿ ನೋಡುವಾಗಿನ ಖುಷಿ ತಿಂಗಳಿಗೊಂದು ಖರೀದಿಸುವ ಬ್ರಾಂಡೆಡ್ ಡ್ರೆಸ್-ಗಳಲ್ಲಿ ಹೇಗೆ ಹುಡುಕಲಿ?, ಸ್ಕೂಲಿನ ಖಾಲಿ ಬೆಂಚಿನ ತುದಿಯಲ್ಲಿ ಕೂತು ಬೆಂಚನ್ನು ಮೇಲೆಕ್ಕೆತ್ತುವ ಖುಷಿ ಸಾಫ್ಟ್ವೇರ್ ಕಂಪೆನಿಗಳ ಅರಾಮಿ ಚೆಯರ್ಗಳಲ್ಲಿ ಹೇಗೆ ಹುಡುಕಲಿ?, ಗೇರು ಬೀಜದ ಮರ, ಮಾವಿನ ಮರಗಳಿಗೆ ಚಕಚಕನೆ ಹತ್ತಿ ಹಣ್ಣು ಕೊಯ್ಯುವ ಖುಷಿಯನ್ನು, ಹಿತ್ತಿಲಿನ ಮರಕ್ಕೆ ಹತ್ತಿ ಮಂಗನಾಟವಾಡಿದ ಖುಷಿಯನ್ನು, ಕರೆಂಟಿರದ ನಮ್ಮೂರ ಸರ್ಕಾರಿ ಶಾಲೆಯ ಮರದ ಕೆಳಗಿನ ಕನ್ನಡ ಪಾಠದ ಖುಷಿಯನ್ನು ಈ ಕಾಂಕ್ರೀಟ್ ಕಾಡಲ್ಲಿ ಎಲ್ಲಿ ಹುಡುಕಲಿ?, ಕ್ರಿಕೆಟ್ ಆಟದಲ್ಲಿ, ಬೆಟ್ಟ ಹತ್ತುವಾಗ, ಮಳೆನೀರಿನ ಪಾಚಿಗೆ ಜಾರಿ ಬಿದ್ದು ಏಟು ಮಾಡಿಕೊಳ್ಳುವ ಖುಶಿಯನ್ನು ಈ ಫುಟ್ಬಾತ್ ಮತ್ತು ಆಫೀಸ್ ಕಾರಿಡಾರ್ಸಲ್ಲಿ ಹೇಗೆ ಹುಡುಕಲಿ?, ಹೊಸ ಆಟಿಕೆಯ ಆಟದ ಮಧ್ಯೆ ಅದರೊಳಗೇನಿದೆ ಎಂಬ ಕುತೂಹಲಕ್ಕೆ ಜೋತು ಬಿದ್ದು ಬಿಚ್ಚಿಡುವ, ಮತ್ತೆ ಪೋಣಿಸಲಾಗದ ಖುಶಿಯನ್ನು ಈ ಲ್ಯಾಪ್ಟಾಪ್, ಡೆಸ್ಕ್ಟಾಪ್ ಮತ್ತು ಮ್ಯಾಕ್ ಗಳಲ್ಲಿ ಹೇಗೆ ಹುಡುಕಲಿ?, ಶಾಲೆಗೆ ಚಕ್ಕರ್ ಹಾಕುವ ನೆಪದ ಹೊಟ್ಟೆನೋವಿನ, ಅಮ್ಮನ ಕಹಿ ಕಷಾಯದ ಖುಷಿಯನ್ನು ರಜಕ್ಕೆ ಒಂದು ತಿಂಗಳು ಮುಂಚೆ ಹೇಳಬೇಕಾದ ಐಟಿ ಕಂಪೆನಿಯ ಹಾಲಿಡೇ ಮಾನೇಜ್ಮೆಂಟ್ಗಳಲ್ಲಿ ಹೇಗೆ ಹುಡುಕಲಿ?, ಸೈಕಲ್ ಚಕ್ರವೊಂದನ್ನು ಕೋಲಿನಲ್ಲಿ ಬಡಿಯುತ್ತಾ ರಸ್ತೆಯಲ್ಲಿ ಓಡಿಸಿದ್ದ ಖುಷಿಯನ್ನು, ಉಜಾಲದ ಬಾಟಲಿಗೆ ಚಪ್ಪಲಿಯ ಚಕ್ರ ಮಾಡಿ ಊರಿನ ಗಲ್ಲಿಗಳಲ್ಲಿ ಮೆರವಣಿಗೆ ಹೋದ ಖುಷಿಯನ್ನು ಕಂಪೆನಿ ಕ್ಯಾಬ್-ಗಳಲ್ಲಿ ಹೇಗೆ ಹುಡುಕಲಿ?, ಮನೆ ಮುಂದಿನ ಹುಳಿ ಮರದಲ್ಲಿ ಉಯ್ಯಾಲೆಯಾಡಿದ ಖುಷಿಯನ್ನು, ಮಣ್ಣಲ್ಲೇ ಜಾರುಬಂಡಿಯ ಖುಷಿಯನ್ನು ಈ ಮೆಟ್ರೋದ ಪಾರ್ಕುಗಳಲ್ಲಿ ಹೇಗೆ ಹುಡುಕಲಿ?, ಮಕ್ಕಳ ದಿನಾಚರಣೆಗೆ ಹಾಕಿದ ಬಣ್ಣ ಬಣ್ಣದ ವೇಷದ ಖುಷಿಯನ್ನು, ಈದ್ ಮಿಲಾದಿಗೆ ಊರ ಜನರ ಮುಂದೆ ಹಾಡಿದ ಖುಷಿಯನ್ನು ಇಲ್ಲಿನ ಇವೆಂಟ್ಸ್-ಗಳಲ್ಲಿ, ಫೌಂಡೇಷನ್ ಡೇಗಳಲ್ಲಿ ಹೇಗೆ ಹುಡುಕಲಿ?, ಜೇನು ಕೊಪ್ಪೆಗೆ ಕಲ್ಲು ಹೊಡೆದದ್ದು, ಗಿಳಿ ಗೂಡಿಗೆ ಇಣುಕಿ ನೋಡಿದ್ದು, ಪಾರಿವಾಳದ ಗೂಡಿಂದ ಮೊಟ್ಟೆ ಕದ್ದದ್ದು, ನಾಟಿ ಕೋಳಿಯ ಹಸಿ ಮೊಟ್ಟೆಯನ್ನು ಕುಡಿದದ್ದು, ಅಮ್ಮ ಕೆರೆದಿಟ್ಟ ಬಿಸಿ ಹಸು ಹಾಲನ್ನು ಕುಡಿದದ್ದು, ಅಂಗಳದಲ್ಲಿ ಮನೆ ಮಾಡಿದ್ದು, ಮದುವೆ ಮಾಡಿ ಆಡಿದ್ದು, ಮಣ್ಣುಂಡೆ ಮಾಡಿ ಹಂಚಿದ್ದು, ಮಾವಿನ ಮಿಡಿಯನ್ನು ಉಪ್ಪಿನೊಂದಿಗೆ ಮುಕ್ಕಿ ತಿಂದದ್ದು, ಬೆಕ್ಕಿನ ಮರಿಗೆ ರಟ್ಟಿನ ಮನೆ ಮಾಡಿ ಕೊಟ್ಟದ್ದು, ಕಳ್ಳ ಪೋಲೀಸ್ ಆಟದಲ್ಲಿ ಮೋಸ ಮಾಡಿದ್ದು, ಮಕ್ಕಳನ್ನೆಲ್ಲ ಸಾಲಾಗಿ ಅಂಗಿಯ ತುದಿಗೆ ಹಿಡಿಯಲು ಹೇಳಿ ಬಸ್ ಆಟದಲ್ಲಿ ಡ್ರೈವರ್ ಆದದ್ದು, ಮಳೆಗಾಲದಲ್ಲಿ ನೀರಲ್ಲಿ ಮಜಾ ಮಾಡಿದ್ದು, ರಾತ್ರಿ ಕಾಲು ಹುಳ ತಿಂದ ನೋವಿಗೆ ಅತ್ತಿದ್ದು, ಜೋರು ಗಾಳಿಗೆ ಕೊಡೆ ಹಿಮ್ಮುಖವಾದಾಗ ಅದರಲ್ಲಿ ನೀರು ತುಂಬಿದ್ದು… ಈ ಖುಶಿಗಳನ್ನೆಲ್ಲ ಇಲ್ಲಿ ಹೇಗೆ ಹುಡುಕಲಿ ?. ಅದೆಲ್ಲಕ್ಕಿಂತ ಹೆಚ್ಚಾಗಿ ಅಮ್ಮನ ಎದೆಗೂಡಿನ ಕಾವಿನ ಖುಶಿಯನ್ನೂ, ಮಡಿಲ ಸಾಂತ್ವನದ ಖುಶಿಯನ್ನೂ ಇಲ್ಲಿ ಹೇಗೆ ಹುಡುಕಲಿ?.
ಮನ ಬಾಲ್ಯದ ಓಣಿಯೇರಿದಾಗ ಎಲ್ಲೆ ಮೀರಿ ಚಡಪಡಿಸುತ್ತದೆ. ಯಾವ ಚಿಂತೆ,ನಿರೀಕ್ಷೆ ,ಅಸೆ ಏನೂ ಇಲ್ಲದೆ ಬಂಧನ ವಿಲ್ಲದೆ ಹಾರಾಡುತ್ತ ಕಳೆದ ಆ ದಿನಗಳು… ನಾ ದುನಿಯಾಂಕ ಗಮ್ ಥಾ.. ನಾ ರಿಶ್ತೊಂಕೆ ಬಂಧನ್ ಬಡೀ ಖೂಬ್ ಸೂರತ್ ಥಿ ವೋ ಝಿಂದಗಾನಿ… ಈಗಿನ ಸುಂದರ ಮುಖವಾಡದ, ಕೃತಕ ನಗುವಿನ, ಜವಾಬ್ದಾರಿಗಳ ಕುಲುಮೆಯಲ್ಲಿ ಪ್ರತೀದಿನ ನರಳಬೇಕಾದ, ನನಸಾಗದ ಕನಸುಗಳ ಬೆನ್ನೇರಿ ಓಡುವ ಹುಂಬತನದ ಯವ್ವನ ಉಸಿರುಗಟ್ಟಿಸುವಾಗ ಮತ್ತೆ ಕವಿವಾಣಿ ನೆನಪಾಗುತ್ತದೆ… ಯೆ ದೌಲತ್ ಭಿ ಲೇಲೋ, ಯೆ ಶುಹ್ರತ್ ಭಿ ಲೇಲೋ, ಭಲೇ ಛೀನ್ ಲೋ ಮುಜ್ಹ್ ಸೇ ಮೇರೀ ಜವಾನೀ , ಮಗರ್ ಮುಜ್ಹ್ ಕು ಲೌಟಾದೋ ಬಚ್ಪನ್ ಕಾ ಸಾವನ್, ವೊಹ್ ಕಾಗಜ್ ಕಿ ಕಶ್ತೀ ವೊಹ್ ಬಾರಿಶ್ ಕಾ ಪಾನೀ”
ಮತ್ತೆ ಏನೂ ಬರೆಯಲ್ಲ ಅಂತ ಪ್ರೀತಿಯಿಂದ ಬಯ್ಯುವ ನನ್ನ ಅಸಂಬದ್ಧ ಆಲಾಪಗಳ ಹಿರಿ/ಕಿರಿ ಗೆಳೆಯ ಗೆಳತಿಯರಲ್ಲಿ ಕ್ಷಮೆ ಕೇಳುತ್ತಾ … ವರ್ಷಗಳ ಹಿಂದೆ ಎಂದೋ ಬರೆದಿಟ್ಟು ಮರೆತುಹೋದ ಅಪೂರ್ಣ ಸಾಲುಗಳು .. ಜನ್ಮಕ್ಕಂಟಿದ ಉದಾಸೀನತೆಯೋ, ಕ್ಷಣದ ನಂತರದ ಭಾವ-ಭಂಗತೆಯೋ ಕಾರಣವಾಗಿರಬಹುದಾದ ಈ ಅಪೂರ್ಣಸಾಲುಗಳಿಗೆ ಮುಕ್ತಿ ಕೊಡುತ್ತಿದ್ದೇನೆ 😂🙏
[ಮೊದಲೇ ಹೇಳಿದಂತೆ ಇಲ್ಲಿರುವ ಒಂದೊಂದು ಬರಹಗಳು ಅಪೂರ್ಣ. ಆ ಕಾರಣಕ್ಕೆ ಇಲ್ಲಿನ ಭಾವಗಳೂ ಪೂರ್ಣವಾಗಿಲ್ಲವೆಂದು ಇನ್ನೊಮ್ಮೆ ನೆನಪಿಸುತ್ತೇನೆ]
೧. ಇನ್ನು ಒಂದು ಜನ್ಮವಿರಬಹುದೇ…? ಇದ್ದರೆ ಒಂದು ಹೂವಿನ ಎಸಳುಗಳಾಗಿ ನಾವು ಹುಟ್ಟಬೇಕು.. ವಸಂತವು ನಮ್ಮನ್ನು ನೋಡಿ ಅಸೂಯೆಪಡಬೇಕು… ಕಾಲ ನಮ್ಮನ್ನು ನೋಡಿ ಮಂದಹಾಸ ಬೀರಬೇಕು.. ಒಂದು ದಿನ ಬಿಸಿಲ ಬೇಗೆಯಲ್ಲಿ ನಾನು ಬಾಡಿ ಹೋಗಲು.. ನೆನಪಿಗಾಗಿ ನೀನು ಒಂದಿಷ್ಟು ಕಣ್ಣೀರು ಹರಿಸಬೇಕು.. ಅದಲ್ಲವೇ “ಪ್ರೀತಿ ಬಂಧನ “…
೨. ಕನಸುತ್ತೇನೆ .. ಸಂಭ್ರಮಿಸುತ್ತೇನೆ .. ಮತ್ತೆಲ್ಲದರ ಹಾಗೆ ನಿರಂತರತೆಯನ್ನು ಕಾಯ್ದುಕೊಳ್ಳದ ಬದುಕಿನ ಪ್ರತೀ ಮಜಲಿನೊಂದಿಗೆ ಅವಿನಾಭಾವತೆಯನ್ನು ಬೆಳೆಸಲು ಪ್ರಯತ್ನಿಸುತ್ತೇನೆ… ಬದುಕೆಂದರೆ ನಿರಂತರ ಚಲನೆಯಲ್ಲವೇ ? ಹೌದು .. ಗೋಚರಿಸದ ಇಲೆಕ್ಟ್ರಾನುಗಳು ತಮ್ಮ ಪರಮಾಣು ಬೀಜದ ಸುತ್ತ, ನಾವು ಇರುವ ಭೂಮಿಸೂರ್ಯನ ಸುತ್ತ, ಸೂರ್ಯ ತನ್ನ ಅಕ್ಷದ ಸುತ್ತ ಮತ್ತು ತನ್ನ ಪರಿವಾರ ಸಮೇತ ಬ್ರಹ್ಮಾಂಡ ಅಥವ ಗೆಲಕ್ಸಿಯ ಕೇಂದ್ರದ ಸುತ್ತ, ಪ್ರತೀ ಗೆಲಕ್ಸಿ ಇತರ ಗೆಲಕ್ಸಿಗಳಿಂದ ದೂರಕ್ಕೆ , ಹೀಗೆ ವಿಶ್ವದಲ್ಲಿ ಘಟಿಸುವ ಪ್ರತಿಯೊಂದರ ಬುನಾದಿಯಲ್ಲಿ ಇರುವ ವಿದ್ಯಮಾನವೇ ಚಲನೆ. ಅಂಥಹ ಚಲನೆಗಳ ಒಟ್ಟು ಮೊತ್ತ ಫಲಿತಾಂಶವೇ ಬದುಕು.
೩. ಕಡುಗಪ್ಪು ತುಂಬಿದ ನನ್ನ ಬಾಳಲ್ಲಿ, ದೀವಟಿಗೆಯ ಹಿಡಿದು ಬೆಳಕ ಚೆಲ್ಲಿದವಳು.. ಆ ಬೆಳಕಿಗೇ ಮರುಳಾದೆನು.. ದೀಪದ ಕೆಳಗಿನ ತಮವ ಅರಿಯದಾದೆನು..
ನಸುನಕ್ಕು ನನ್ನೆದೆಯ ಬಾಂದಳದ ಶಶಿಯಾದಳು.. ಆ ಶಶಿಯ ನಿಶೆಗೆ ಮರುಳಾದೆನು ತಪ್ಪದೇ ಬರುವ ಅಮಾವಾಸ್ಯೆಯ ತಿಳಿಯದಾದೆನು… (ಪೇಲವತನಕ್ಕೆ ಕ್ಷಮೆಯಿರಲಿ 😄🙏 ತುಂಬಾ ಹಳೇದು )
೪. ಮೋಹದ ನಿನ್ನ ಹಸಿ ಕನಸುಗಳಿಗೆ ಸಾಲುಗಳು ಕೂಡುವುದೇ ಇಲ್ಲ ರೂಹೀ
ಬಾ.. ಎದೆಗಿಳಿದು ಕವಿತೆಯಾಗಿಬಿಡು ನಿನ್ನ ಸಾಲುಗಳ ಸಾಲಕ್ಕೆ ನನ್ನ ಬದುಕ ಅಡವಿಟ್ಟುಬಿಡುತ್ತೇನೆ..
೫. ನೀನು ಸಿಕ್ಕ ದಿನ ನಿನಗೆ ನೆನಪಿರಬಹುದು. ನೀನು ನುಡಿದ ಮೊದಲ ಮಾತು ನನ್ನಲ್ಲೊಳಗೆ ಸೃಜಿಸಿದ ಅನುಭಾವಶರಧಿಯ ಆಳ ಮತ್ತು ವಿಸ್ತಾರ ನಿನ್ನ ಊಹೆಗೆ ನಿಲುಕುವಂಥದ್ದಲ್ಲ. ನಿನಗೆ ಗೊತ್ತು ನನ್ನದು ಯಾರ ಮುಂದೆಯೂ ತೆರೆದುಕೊಳ್ಳದ, ಸ್ಪಂದನೆಯ ಹಂಗೇ ಇಲ್ಲದಂತೆ ಪರಿತ್ಯಕ್ತ ಮನಸ್ಸು. ಗಿಜಿಗಿಡುವ ಸಂತೆಯೊಳಗಿನ ಅಬ್ಬರದ ಮಾತುಗಳ ನಡುವಿಂದ ಮೌನದ ಚಿಪ್ಪಿನೊಳಗೆ ತೂರಿ ಅಡಗಿಕೊಂಡು ಬಿಡಬೇಕೆನ್ನಿಸುವ ಮೌನ-ಮೋಹಿ ಅದು. ಆ ಮನಸ್ಸು ಇಗೀಗ ಸುಮ್ಮನೆ ನಗುವುದು ಕಲಿತಿದೆ. ನೀ ಸಿಕ್ಕಿದ ಘಳಿಗೆಯಿಂದ ನೋವುಗಳನ್ನು ಒಪ್ಪಿಕೊಂಡು ಅದನ್ನು ಮೀರಿಸುವ ದಿವ್ಯ ಶಕ್ತಿಯೊಂದನ್ನು ಅವಾಹಿಸಿಕೊಂಡಿದ್ದೇನೆ.