ನ್ಯಾನೋ ಕಥೆಗಳು

ನ್ಯಾನೋ

ಅದೊಂದು ಬೃಹತ್ ದೇಶಭಕ್ತರ ಸಂಗಮ. ದೇಶಭಕ್ತ ಚಿಂತಕರಿಂದ ದೇಶದ ಸಂಪದ್ಭರಿತ ಇತಿಹಾಹಾಸದ ಬಗ್ಗೆ ಬಹುಪರಾಕ್ ಭಾಷಣಗಳು. ಬೇಳೆಕಾಳುಗಳ ರೀತಿಯಲ್ಲಿ ವಜ್ರ ವೈಢೂರ್ಯಗಳನ್ನು ಮಾರುವ ಆ ಕಾಲದ ಕಥೆಯನ್ನು ಕೇಳಿದ ಶೋತೃಗಳ ಮೈಮನ ಪುಳಕಗೊಂಡಿತು. ಜಯಘೋಷದೊಂದಿಗೆ ಮನೆಗೆ ಮರಳಿದರೂ ಇನ್ನೂ ಮುಗಿಯದ ರೋಮಾಂಚನ.

ಆ ಗಲ್ಲಿಯಲ್ಲಿ ಹಸಿವಿನಿಂದ ಸತ್ತುಬಿದ್ದ ಅಮ್ಮನ ಸ್ತನಪಾನಕ್ಕೆ ಹಾತೊರೆಯುತ್ತಿದ್ದ ಮಗುವಿನ ಬಗ್ಗೆ ನಿನ್ನೆಯೊಂದು ವಾರ್ತೆಯತ್ತು.

ಕಾಡುವ ಹನಿಗಳು · ನೆನಪಿನ ಸಂಚಿ - ಹತ್ತು ಲಕ್ಷ ದಾಟಿದ ಓದುಗರು · ನೆನಪಿನ ಹನಿ · ನ್ಯಾನೋ ಕಥೆಗಳು · ಬಿಂದು · ಬಿರಿಯದ ಮೊಗ್ಗು · ಮತ್ತೆ ಸಂಜೆಯಾಗುತ್ತಿದೆ.. · ಮನಸಿನ ಹಾ(ಪಾ)ಡು · ಸಣ್ಣ ಕತೆ · ಹುಸೇನಿ_ಪದ್ಯಗಳು

ನೆನಪಿನ ಸಂಚಿ – ಹತ್ತು ಲಕ್ಷ ದಾಟಿದ ಓದುಗರು !!

nenapinasanchi 10 lacks readres
ಒಂದು ಖುಷಿಯ ವಿಚಾರ ನಿಮಗೆ ಹೇಳೋದೇ ಮರೆತು ಹೋಯ್ತು.. ಅದೇನೆಂದರೆ ನನ್ನ ಅಸಂಬದ್ಧ ಅಲಾಪಗಳ “ನೆನಪಿನ ಸಂಚಿ” ಬ್ಲಾಗ್ ಓದುಗರ ಸಂಖ್ಯೆ ಬರೋಬ್ಬರಿ 1 0 0 0 0 0 0 [ಹತ್ತು ಲಕ್ಷ] ದಾಟಿದೆ. ನನ್ನೆಲ್ಲಾ ಖುಷಿ, ಆದ್ವಾನ, ಸಂಕಟ , ತಳಮಳ, ಕ್ಷುಲ್ಲಕತನ, ಒಂಟಿತನ, ಸೋಲಿನ ಅಂಚಿನ ಗೆಲುವು, ಪ್ರೇಮ ಮುಂತಾದ ಮನುಷ್ಯ ಸಹಜ ಅವಸ್ಥೆಗಳಲ್ಲಿ ಮೂಡಿದ ಭಾವವನ್ನು ಅಕ್ಷರವಾಗಿಸಿ ಗುಡ್ಡ ಹಾಕಿರುವ ನನ್ನದೇ ಮನಸ್ಸಿನ ಪ್ರತಿಫ಼ಲನದ ಪುಟಗಳವು . ಬಹುಶಃ ನಿಮ್ಮ ಎದೆಯ ಹಾಡು ಕೂಡ ಅದೇ ಆಗಿದ್ದರಿಂದ ಏನೋ ನಾಲ್ಕೈದು ವರ್ಷಗಳ ಹಿಂದೆ ನಾನು ಆರಂಭಿಸಿದ್ದ ಬ್ಲಾಗ್ ಈ ಮಟ್ಟಕ್ಕೆ ಬೆಳೆದಿರುವುದು. ಮುಂಚೆಲ್ಲಾ ಕವಿತೆಗಳಲ್ಲಿ ಮುಳುಗಿ ಹೋಗುವ ಜಾಯಮಾನ ನನ್ನದು. ಬದುಕಿನ ಆದ್ಯತೆಗಳು ಬದಲಾದಂತೆಲ್ಲಾ ನನ್ನನ್ನು ನಾನೇ ಕಳೆದುಕೊಂಡಿದ್ದೀನಿ ಅನಿಸಿತ್ತದೆ.
ಅನಿಸಿಕೆಗಳಿಗಿಂತ ಹೆಚ್ಚಾಗಿ ಆ ದಿನ , ಆಕ್ಷಣ ಆ ಘಟನೆ, ಆ ವಸ್ತುವಿನ ಬಗ್ಗೆ ನನ್ನ ಬರಹಗಳು ಹೆಚ್ಚಾಗಿ ಮಾತನಾಡುವುದರಿಂದ ಏನೋ ಕಾವ್ಯಾತ್ಮಕ ಅಲ್ಲದ ಹಲವು ಬರಹಗಳು ನೀವಲ್ಲಿ ಕಾಣಬಹುದು. ಎಲ್ಲದಕ್ಕೂ ಅತೀತವಾಗಿ ಕಾಡುವ ಬದುಕು, ಬಾಲ್ಯ, ಆ ತೊರೆ ತೀರದ ನೆನಪುಗಳು, ಸಮುದ್ರ, ತೀರ ಹೆಚ್ಚಾಗಿ ಬಂದು ಹೋಗುತ್ತದೆ. ಒಂದಷ್ಟು ಹನಿಗಳು, ಕವಿತೆಗಳು(?), ನ್ಯಾನೋ ಕಥೆಗಳು, ಸಂಧ್ಯಾಲಾಪಗಳು… ಮತ್ತೊಂದಿಷ್ಟು ಕಾಡುವ ಬದುಕು.. ಇದು ನಿಮ್ಮದೇ “ನೆನಪಿನ ಸಂಚಿ”.
ಪ್ರೀತಿಯ ಓದುಗರಿಗೆ ಮನದಾಳದ ಅನಂತ ಧನ್ಯವಾದಗಳು

ನಿಮ್ಮವನೇ,
ಹುಸೇನಿ ~

ನಿಮ್ಮ ನಲ್ನುಡಿ

ಅಮ್ಮಂದಿರ ಕಥೆ · ನ್ಯಾನೋ ಕಥೆಗಳು · ಸಣ್ಣ ಕತೆ

ಅಮ್ಮಂದಿರ ಕಥೆ

mothers-love-julie-reyes
೧)
ಆಗ ನಾನು ಬೆಂಗಳೂರಿನ ಬ್ರಿಗೇಡ್ ರೋಡ್ ಪಕ್ಕ ಮೆಟ್ರೋ ಸಿಟಿ ಲೋಡ್ಜಲ್ಲಿ ಗೆಳೆಯನೊಂದಿಗೆ ವಾಸವಾಗಿದ್ದೆ. ಅಡುಗೆ ಮಾಡಲು ಅಸಾಧ್ಯವಾದ್ದರಿಂದ ಮೂರು ಹೊತ್ತು ಹೊರಗಡೆಯಿಂದಲೇ ಊಟ. ಅದನ್ನು ತಿಂದು ತಿಂದು ಸುಸ್ತಾದ ನಮಗೆ ಇನ್ನೇನು ಬರಲಿರುವ ರಂಜಾನ್ ತಿಂಗಳ ಊಟದ ಬಗ್ಗೆ ತುಂಬಾ ಗೊಂದಲವಿತ್ತು. ರಂಜಾನ್ ತಿಂಗಳಲ್ಲಿ ಬೆಳ್ಳಂ ಬೆಳಿಗ್ಗೆ ೪ ಗಂಟೆಗೆ ಎದ್ದು ಅತ್ತಾಳ(ಸಹರಿ) ಊಟ ಮಾಡ್ಬೇಕು. ಹೊರಗಡೆಯಿಂದ ರಾತ್ರಿಯೇ ತಂದಿದುವ ಯೋಜನೆ ನಮ್ಮದಾಗಿತ್ತಾದರೂ ನಮ್ಮೊಳಗೆ ಅಸಮಾಧಾನವಿತ್ತು.

ನಮ್ಮ ರೂಮಿನ ಪಕ್ಕದ ರೂಮಲ್ಲಿ ಒಬ್ಬರು ಮಲಯಾಳಿ ಚೇಚ್ಚಿ(ಅಕ್ಕ) ಅವರ ಗಂಡನೊಂದಿಗೆ ವಾಸವಗಿದ್ದರು. ತುಂಬಾ ಸೌಮ್ಯ ಸ್ವಭಾವದ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿತ್ವ ಅವರದು. ರಂಜಾನ್ ತಿಂಗಳ ಆರಂಭಕ್ಕೆ ಇನ್ನೇನು 2 ದಿನ ಇರುವಾಗ ಮಾತಿನ ಮದ್ಯೆ ನನ್ನ ಗೆಳೆಯ ಅತ್ತಾಳದ ಕಷ್ಟವನ್ನು ಅವರೊಂದಿಗೆ ಹಂಚಿಕೊಂಡಿದ್ದ. ಕೇರಳದ ತ್ರಿಶೂರಿನವರಾಗಿದ್ದ ಅವರ ನೆರೆಹೊರೆಯವರೆಲ್ಲರೂ ಮುಸ್ಲಿಮರೇ ಆಗಿದ್ದರಿಂದ ರಂಜಾನ್ ತಿಂಗಳ ಬಗ್ಗೆ ಅವರು ಚೆನ್ನಾಗಿ ಬಲ್ಲವರಾಗಿದ್ದರು. ಒಂದು ತಿಂಗಳ ನಮ್ಮ ಊಟದ ಸಂಪೂರ್ಣ ಜವಾಬ್ದಾರಿ ಅವರು ವಹಿಸಿಕೊಂಡರು. ರಾತ್ರಿ 11ರ ವೇಳೆಗೆ ಸಹರಿಯ ಊಟ ತಯಾರಾಗಿ ಬರುತ್ತಿತ್ತು. ಮನೆಯಿಂದ ದೂರವಿದ್ದು ತಾಯಿಯನ್ನು ಪ್ರತೀಕ್ಷಣ ಮಿಸ್ ಮಾಡ್ಕೊತ್ತಿದ್ದ ನಾನು ಅವರಲ್ಲಿ ಮತ್ತೊಬ್ಬಳು ತಾಯಿಯನ್ನು ಕಾಣುತ್ತಿದ್ದೆ.

೨)
ಅದೇ ಲಾಡ್ಜಲ್ಲಿ ತಂಗುತ್ತಿದ್ದ ಕಾಲ. ಅದೊಂದು ದಿನ ಭಾನುವಾರದ ಊಟ ಕೈ ಕೊಟ್ಟಿತು. ರಾತ್ರಿ ೨ ಗಂಟೆಗೆ ಹೊಟ್ಟೆಯಲ್ಲಿ ಅಸಹನೀಯ ನೋವು ಕಾಣಿಸಿಕೊಂಡಿತು. ಜೊತೆಗೆ ಫುಡ್ ಪೋಯ್ಸನ್ ಸೈಡ್ ಎಫೆಕ್ಟ್ಸ್. ಬೆಳಗಿನವರೆಗೂ ನಾನುಭವಿಸಿದ ‘ಯಾತನೆ’ ಅಷ್ಟಿಷ್ಟಲ್ಲ. ಹೇಗೋ ಬೆಳಗಾಯ್ತು. ರೂಂ ಮೇಟ್ ಅಂತೂ ಎದ್ದವನೇ ಆಫೀಸಿಗೆ ಹೋದ.

ಹೊಟ್ಟೆ ನೋವು ಕಡಿಮೆಯಾಗಿರಲಿಲ್ಲ. ಪಕ್ಕದ ರೂಮಿನಲ್ಲಿ ಸಮೀಪದ Hosmat ಆಸ್ಪತ್ರೆಗೆ ಟ್ರೀಟ್ಮೆಂಟ್ಗೆ ಪಶ್ಚಿಮ ಬಂಗಾಳದಿಂದ ಒಬ್ರು ಆಂಟಿ ಅವರ ಮಗಳೊಂದಿಗೆ ಬಂದಿದ್ರು. ೧೩ ವರ್ಷದ ಮಗಳಿಗೆ ಏನೋ ಆಪರೇಶನ್ ಅಗೊದಿತ್ತು. ಅವರು ಈ ಮೊದಲು ನಮ್ಮ ಲಾಡ್ಜಿಗೆ ಬಂದಿದ್ರಿಂದ ಅವರ ಪರಿಚಯ ಇತ್ತು. ಅವರಿಗೋ ಬೆಂಗಾಲಿ ಬಿಟ್ರೆ ಬೇರೆ ಯಾವ ಭಾಷೆನೂ ಬರುತ್ತಿರಲಿಲ್ಲ. ಆದರು ಮಾತನಾಡಿಸೋರು. ನನ್ನ ಅವಸ್ತೆಯನ್ನು ಕಂಡು ಮರುಗಿದ ಅವರು ಅದೇನೋ ಬೆಂಗಾಲಿ ಶೈಲಿಯ ಲಘು ಆಹಾರವನ್ನು ಅವತ್ತು ಮೂರು ಹೊತ್ತು ಮಾಡಿಕೊಟ್ರು. ಅಲ್ಲದೆ ಆಗಾಗ ನನ್ನ ರೂಮಿಗೆ ಬಂದು ಹೋಗುತ್ತಿದ್ದರು. ಎಲ್ಲಿಯ ಬಂಗಾಳ ಎಲ್ಲಿಯ ಕರ್ನಾಟಕ !, ಪರಸ್ಪರ ಮಾತನಾಡಲಾಗದೆ ಇದ್ದರು ಅವರು ನನ್ನನ್ನು ನೋಡಿಕೊಂಡ ರೀತಿ… ಜೀವನದಲ್ಲಿ ಮರೆಯುವ ಹಾಗಿಲ್ಲ. ತಾಯಿ ಮಗನ ಸಂಭಂದವೊಂದು ಅಲ್ಲಿ ಮೂಡಿತ್ತು, ಅಲ್ಲ.. ಅವತ್ತಿನ ಪಾಲಿಗೆ ನನ್ನ ತಾಯಿಯೇ ನನ್ನ ಬಳಿ ಇದ್ದರು.

೩)
ನಾನು ತಿರುವನಂತಪುರದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಜ್ವರ ಬಂದು ಮನೆಯಲ್ಲಿದ್ದವನು ಸುಧಾರಿಸಿಕೊಂಡು ಮತ್ತೆ ಹೊರಟು ನಿಂತು ಕಾಸರಗೋಡಿನಿಂದ ತಿರುವನಂತಪುರಕ್ಕೆ ಟ್ರೈನ್ ಹತ್ತಿದ್ದೆ. ರಾತ್ರಿಗೆ ಬೇಕಾದ ಆಹಾರ, ನೀರು ಎಲ್ಲವೂ ನನ್ನ ಬಳಿಯಿತ್ತು. ಟ್ರೈನ್ ಹತ್ತಿ ಕೂತು ಸ್ವಲ್ಪ ಸಮಯದಲ್ಲೇ ನಿದ್ದೆ ಆವರಿಸಿತ್ತು. ಎದ್ದು ನೋಡುವಾಗ ಮದ್ಯ ರಾತ್ರಿ!. ಎದ್ದು ಮುಖ ತೊಳೆದು ಬಂದು ಪಾರ್ಸೆಲ್ ಬಿಚ್ಚಿ ಊಟ ಮಾಡತೊಡಗಿದೆ. ಮಧ್ಯೆ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ನೀರಿನ ಬಾಟಲಿಗಾಗಿ ತಡಕಾದುವಷ್ಟರಲ್ಲಿ ತಿಳಿಯಿತು ಬಾಟಲಿಯನ್ನು ಯಾರೋ ಎಗರಿಸಿದ್ದಾರೆಂದು.. ಬಿಕ್ಕಳಿಗೆ ಜೋರಾಯಿತು. ಬಿಕ್ಕುತ್ತಲೇ ಪಕ್ಕದ ಸೀಟಲ್ಲಿದ್ದ ಮಲಯಾಳಿ ಅಂಕಲ್ ಹತ್ರ ವಾಟರ್ ಬಾಟಲ್ ನೋಡಿದ್ದೀರಾ ಎಂದು ವಿಚಾರಿಸಿದೆ. ನೋಡಿಲ್ಲ ಎಂದವರು ಸುಮ್ಮನಾಗುವಷ್ಟರಲ್ಲಿ ಅವರ ಹೆಂಡತಿ ತನ್ನ ಬ್ಯಾಗಿಂದ ನೀರಿನ ಬಾಟ್ಲಿ ತೆಗೆದು ಕೊಟ್ರು, ನೀರು ಕುಡಿದು ಕೆಮ್ಮುವಾಗ ತಲೆ ಮಧ್ಯೆಗೆ ಕೈಯ್ಯಿಂದ ಒತ್ತಿ ನೇವರಿಸಿದರು. ಸುಧಾರಿಸಿಕೊಂಡು ನಾನು ಅವನ ಮುಖವನ್ನು ದಿಟ್ಟಿಸಿದೆ. ಅಮ್ಮ ನನ್ನ ಮುಂದೆ ನಿಂತಿದ್ದರು.

ಹುಸೇನಿ ~

Leave a comment

ಏರ್ಪೋರ್ಟ್ ಚಿತ್ರಗಳು · ನ್ಯಾನೋ ಕಥೆಗಳು · ಸಣ್ಣ ಕತೆ

ಏರ್ಪೋರ್ಟ್ ಚಿತ್ರಗಳು ..

airport counters

ಏರ್ಪೋರ್ಟ್ ಹೊರಗಡೆ ತಮ್ಮವರಿಗಾಗಿ ಕಾಯುವ ದಟ್ಟ ಜನಸಂದಣಿ. ಪಿಸುಮಾತುಗಳೆಲ್ಲವೂ ಒಟ್ಟಾಗಿ ಒಂದು ಸಣ್ಣ ಸಂತೆಯಷ್ಟು ಗೌಜು,ಗದ್ದಲ..ಕೆಲವು ಮುಖಗಳಲ್ಲಿ ಕಾತರಿಕೆಯ ಚಡಪಡಿಕೆ, ಇನ್ನು ಕೆಲವು ಮುಖಗಳಲ್ಲಿ ಅಗಲಿಕೆಯ ನೋವು..ಒಂಥರಾ ವಿಕ್ಷಿಬ್ದ ವಾತಾವರಣ.. ಪತಿಯನ್ನು ಬೀಳ್ಕೊಡುವ ಪತ್ನಿಯ ನಿರ್ಲಿಪ್ತತೆ, ತಬ್ಬಿಕೊಂಡು ಅಳುವ ಜೋಡಿಗಳು, ಮಕ್ಕಳನ್ನು ಕಳುಹಿಸಿಕೊಡುವ ಅಪ್ಪ,ಅಮ್ಮಂದಿರು. ಎಂದೋ ಮರೆತ ಅಪ್ಪನ ಮುಖವನ್ನು ಮತ್ತೆ ಕಾಣಲು ಕಾತರಿಸುವ ಮಕ್ಕಳು, ಯಾರೋ ವಿಐಪಿಯ ಹೆಸರಿನ ಫ಼ಲಕವನ್ನು ಹಿಡಿದು ಕಾಯುವ ಚಾಲಕರ ನಿಸ್ತೇಜ ಮುಖ.. ಸುಮಾರು 4 ಗಂಟೆಗಳಷ್ಟು ಸಮಯ ಏರ್ಪೋರ್ಟ್ ಹೊರಗಡೆ ಗೆಳೆಯನಿಗಾಗಿ ಕಾದು ಕುಳಿತಿದ್ದ ನನಗೆ ಅಲ್ಲಿನ ಕೆಲವು ಚಿತ್ರಗಳು ಇನ್ನೂ ಕಾಡುತ್ತಿದೆ.

೧)
ವಸ್ತ್ರಧಾರಣೆ ನೋಡಿದರೆ ಅವಳು ಗಗನ ಸಖಿ ಇರಬೇಕು..ಉತ್ತರ ಭಾರತದ ಹುಡುಗಿ.. ತನ್ನ ಸಹೋದ್ಯೋಗಿಯೊಂದಿಗೆ ಚಹಾ ಕುಡಿಯಲು ಬಂದವಳು. ಪಕ್ಕದ ಟೇಬಳಲ್ಲಿ ಅಮ್ಮನ ಭುಜದ ಮೇಲಿದ್ದ ಮಗುವಿನ ಮುಖ ಅವಳಿಗೆ ಅಭಿಮುಖವಾಗಿತ್ತು. ಮಗುವಿನೊಂದಿಗೆ ಆಟಕ್ಕಿಳಿದಳು. ಗಲ್ಲವನ್ನು ಮುಟ್ಟುವುದು,ಬೆರಳನ್ನು ಹಿಡಿಯೋದು, ಮುಖವನ್ನು ವಿರೂಪ ಮಾಡಿ ಮಗುವನ್ನು ನಗಿಸಲು ಪ್ರಯತ್ನ ಪಡುವುದು ಹೀಗೆ ಸಾಗಿತ್ತು. ಅದೇನಾಯ್ತೋ ಗೊತ್ತಿಲ್ಲ.. ಒಮ್ಮೆಲೇ ಎವೆಯಿಕ್ಕದೆ ಮಗುವನ್ನು ದಿಟ್ಟಿಸಿದಳು.. ನಾನು ಅವಳನ್ನು ದಿಟ್ಟಿಸುತ್ತಿದ್ದೆ.. ಮಗುವನ್ನು ದಿಟ್ಟಿಸುತ್ತಲೇ ಕಳೆದುಹೋಗಿದ್ದಾಳೆ ಅಂತಿತ್ತು ಅವಳ ಮುಖಭಾವ.. ಮರುಕ್ಷಣ ಕಟ್ಟೆಯೊಡೆದ ನೀರಿನಂತೆ ಎರಡು ಕಣ್ಣುಗಳಿಂದ ವೇಗವಾಗಿ ಹರಿದ ಕಣ್ಣೀರು ಅವಳ ಗಲ್ಲವನ್ನು ದಾಟಿತು.. ತಕ್ಷಣ ಎಚ್ಚರಗೊಂಡವಳಂತೆ ಅಕ್ಕ ಪಕ್ಕ ಕಣ್ಣೊರಳಿಸಿದವಳು ಎರಡೂ ಕೈಗಳಿಂದ ಮುಖವನ್ನು ಮುಚ್ಚಿದಳು….

೨)
ಅದೊಂದು ಕುಟುಂಬ.. ಅಮ್ಮ,10ರ ಆಸುಪಾಸಿನ ಗಂಡು ಮಗು ಮತ್ತು 8ರ ಆಸುಪಾಸಿನ ಹೆಣ್ಣು ಮಗು.. ಮಕ್ಕಳು ಅಪ್ಪನ ಆಗಮನದ ನಿರೀಕ್ಷೆಯಲ್ಲಿ ತುಂಬಾ ಖುಷಿಯಾಗಿದ್ದರು. ಅಪ್ಪ ಏನೆಲ್ಲಾ ನಮಗಾಗಿ ತಂದಿರಬಹುದು ಎಂಬ ವಿಚಾರದಲ್ಲಿ ಮಕ್ಕಳು ಮುಗ್ದವಾಗಿ ಜಗಳ ಶುರುವಿಟ್ಟುಕೊಂಡದ್ದು ನೋಡುತ್ತಾ ಖುಶಿಪಡುತ್ತಿದ್ದೆ. ಕೆಲವು ಹೊತ್ತಿನ ಬಳಿಕ ಪುಟ್ಟ ಹುಡುಗಿ ಅಮ್ಮನಲ್ಲಿ ಹಣಕ್ಕಾಗಿ ರಚ್ಚೆಹಿಡಿಯುತ್ತಿದ್ದುದ್ದು, ಅಮ್ಮ ಬಯ್ಯುವುದು ಎಲ್ಲ ನಡೆಯಿತು. ಕೊನೆಗೆ ದುಡ್ಡು ಪಡೆದುಕೊಂಡ ಹುಡುಗಿ ಖುಷಿಯಾಗಿ ಓಡೋಡಿ ಅಲ್ಲಿದ್ದ ಪ್ರತೀ ಅಂಗಡಿಗಳಿಗೆ ಹೋಗಿ ಏನೋ ಕೇಳಿ, ಅಂಗಡಿಯಾತ ಇಲ್ಲವೆಂದಾಗ ಮಗುಮ್ಮಾಗಿ ಮುಖ ಸಣ್ಣದು ಮಾಡುತ್ತಿತ್ತು. ಅದೇನು ಕೇಳುತ್ತಿದ್ದಾಳೆ ಎಂದು ತಿಳಿಯುವ ಕುತೂಹಲ. ಕೊನೆಗೆ ನಾನು ಕೂತಿದ್ದ ಬೆಂಚಿನ ಪಕ್ಕದಲ್ಲಿರುವ ಚಾಕೊಲೇಟು ಅಂಗಡಿಗೆ ಬಂದು “ವೆಲ್ಕಮ್ ಫ್ಲವರ್ ಹೇ ಕ್ಯಾ ?” ಅಂತ ಕೇಳಿದಳು.. ಇಲ್ಲೂ ಮಗುವಿಗೆ ನಿರಾಶೆ ಕಾದಿತ್ತು.. ಅಲ್ಲೇ ಯೋಚಿಸುತ್ತಾ ನಿಂತ ಹುಡುಗಿ ಕೊನೆಗೊಂದು ಡೈರಿ ಮಿಲ್ಕ್ ಚಾಕೊಲೇಟು ಕೊಂಡು ಕುಣಿಯುತ್ತಾ ಅಮ್ಮನೆಡೆಗೆ ಸಾಗಿದಳು…

೩) ಬಹುಶಃ ವಿದೇಶದಲ್ಲಿ ಕೆಲಸದಲ್ಲಿರುವವನು ಅವನು. ರಜಾದಲ್ಲಿ ಊರಿಗೆ ಬಂದಿದ್ದಾನೆ. ಸ್ವೀಕರಿಸಲು ಅಪ್ಪ,ಅಮ್ಮ,ತಮ್ಮ ಮತ್ತು ಮನೆಯವರು ಬಂದಿದ್ದರು. ನಿರ್ಗಮನದ ಹಾದಿಯಲ್ಲಿ ಮಗನನ್ನು ನೋಡಿದ್ದೇ ತಡ ಅಮ್ಮ ಮಗನನ್ನು ತಬ್ಬಿಕೊಂಡಳು. ನಂತರದ ಸರದಿ ತಮ್ಮನದು. ನಂತರ ಮನೆಯವರು. ಅಪ್ಪ ನಿಂತಲ್ಲೇ ಇದ್ದ. ಕೊನೆಗೆ ಮಗ ಅಪ್ಪನ ಆಶೀರ್ವಾದ ಪಡೆದು ನಿಂತುಕೊಂಡು ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡ. ಕೂಲಿಂಗ್ ಗ್ಲಾಸ್ ಹಾಕಿಕೊಂಡಿದ್ದವನು ಅದನ್ನೆತ್ತಿ ತಬ್ಬಿಯೇ ಕಣ್ಣೀರೊರೆಸಿಕೊಳ್ಳುತ್ತಿದ್ದ. ಎಲ್ಲವೂ ಮುಗಿದು ಬ್ಯಾಗನ್ನೆಲ್ಲಾ ಎತ್ತಿ ಹೊರದಳಣಿಯಾದರು. ಎಲ್ಲರೂ ಮುಂದೆ ಸಾಗಿದ ನಂತರ ಅಪ್ಪ ಕರ್ಚೀಪು ಎತ್ತಿ ಕಣ್ಣಿಗಿಟ್ಟರು..

ಇನ್ನೂ ಇದೆ..
ಹುಸೇನಿ ~

Leave a comment

ಎರಡು ನ್ಯಾನೋ ಕತೆಗಳು · ನ್ಯಾನೋ ಕಥೆಗಳು

ಎರಡು ನ್ಯಾನೋ ಕತೆಗಳು

634085963146408441-mother-and-child-blue
ಪ್ರೀತಿ
ಜಗತ್ತನ್ನೇ ಎದುರು ಹಾಕಿ ತಾನು ಗಳಿಸಿದ ಈ ಪ್ರೀತಿ ನನಗೆ ಕೊಟ್ಟದ್ದಾದರೂ ಏನು?. ಸಾಯಂ ಸಂಧ್ಯೆಯ ಏಕಾಂತದಲ್ಲಿ ಅವಳ ಯೋಚನಾ ಲಹರಿ ತೆರೆದುಕೊಂಡಿತ್ತು
ದಿನಂಪ್ರತಿ ಒಗೆಯಲು ರಾಶಿ ಬಟ್ಟೆಗಳು, ತೊಳೆಯಲು ಪಾತ್ರಗಳು, ಗುಡಿಸಿ ಚೆಂದಗಾಣಿಸಲು ಮನೆ ಅಂಗಳ, ಯಾವತ್ತೂ ಬೆಂಕಿ ಆರದ ಓಲೆ ಮತ್ತು… ಮತ್ತು ಕೈಯಲ್ಲೊಂದು ಮಗು.
ದೀರ್ಘ ನಿಟ್ಟುಸಿರೊಂದು ಅವಳ ನಿರಾಶೆಗೆ ಕನ್ನಡಿ ಹಿಡಿದಂತಿತ್ತು .

ಅಭಿವೃದ್ಧಿ
ಒಕ್ಕಲೆಬ್ಬಿಸಲ್ಪಟ್ಟವರ ಕೂಗು, ಮಕ್ಕಳ , ಮಹಿಳೆಯರ, ಹಿರಿ ಜೀವ ಗಳ ಮುಗಿಲು ಮುಟ್ಟುವ ಕರಾಡತನ, ಪ್ರಕೃತಿ ಸ್ನೇಹಿಗಳ, ಪರಿಸರ ಸಂರಕ್ಷಣೆ ಸಂಘಗಳ ಪ್ರತಿಭಟನೆ . ಎಲ್ಲ ಅನ್ಯಾಯಗಳಿಗೆ ಪ್ರಜಾಪರ್ಭುತ್ವದಲ್ಲಿ ಏಕ ಸಮರ್ಥನೆ – “ಅಭಿವೃದ್ಧಿ”

Leave a Comment

ನ್ಯಾನೋ ಕಥೆಗಳು · ಶೂನ್ಯ ಮತ್ತಿತರ ನ್ಯಾನೋ ಕತೆಗಳು

ಶೂನ್ಯ ಮತ್ತಿತರ ನ್ಯಾನೋ ಕತೆಗಳು

ni
ಶೂನ್ಯ
ಆತ ಹೆಂಡತಿಯ ಅಣತಿಯಂತೆ ತುಂಬು ಕುಟುಂಬದಿಂದ ದೂರವಾಗಿ ಫ್ಲಾಟ್ ಒಂದರಲ್ಲಿ ವಾಸಿಸುತ್ತಿದ್ದ . ಮಧ್ಯ ರಾತ್ರಿ ತಂದೆ ಕಾಣೆಯಾಗಿದ್ದಾರೆಂದು ತಮ್ಮನ ಫೋನ್ ಬಂದಿತ್ತು . ಫೋನ್ ಇಟ್ಟವನೇ “ನಾನೇನು ಮಾಡಲಿ ದೇವರೇ..?” ಎಂದು ದಿಗ್ಭ್ರಮೆಗೊಂಡು ತನ್ನಂತಾನೆ ಪ್ರಶ್ನಿಸಿಕೊಂಡ.
“ಸದ್ಯ ಲೈಟ್ ಆಫ್ ಮಾಡಿ… ಅಷ್ಟು ಸಾಕು !” ಹೆಂಡತಿ ನಿದ್ದೆಗಣ್ಣಲ್ಲಿ ಚಾಟಿ ಬೀಸಿದಳು.
ಬೆಳಿಗ್ಗೆ ಅವಳಿಗೆ ತನ್ನ ತಂದೆ ತೀರಿ ಹೋದರೆಂದು ಫೋನ್ ಬಂದಿತ್ತು. ಮಲಗಿದ್ದ ಗಂಡನನ್ನು ಎದ್ದೇಳಿಸಲು ಸಾದ್ಯವಾಗದೆ ಶೂನ್ಯ ಭಾವದಿಂದ ಅವನನ್ನು ದಿಟ್ಟಿಸುತ್ತಾ ನಿಂತಳು .

ಮೋಸ
ಬಹುಮತದಿಂದ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯ ೧ ರೂ ಗೆ ಅಕ್ಕಿ ಕೊಟ್ಟು ಇದು ನನ್ನ ಮತ್ತು ನನ್ನ ಪಕ್ಷದ ಕೊಡುಗೆಯೆಂದು ಅಕ್ಕಿ ಮೂಟೆ ಮೇಲೆ ತನ್ನ ಮತ್ತು ತನ್ನ ಪಕ್ಷದ ಚಿನ್ಹೆಯನ್ನು ಅಚ್ಚು ಹಾಕಿಸಿದರು.
ಅದೇ ಮುಖ್ಯಮಂತ್ರಿಯ ಆಡಳಿತ ಕಾಲದಲ್ಲಿ ಬೆಲೆಯೇರಿಕೆಯ ಬಿಸಿಯಿಂದ ಸಾಲಗಾರನಾದ ರೈತನ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿತು.
ಇದು ಕೂಡ ಅದೇ ಮುಖ್ಯಮಂತ್ರಿಯ ಮತ್ತವರ ಪಕ್ಷದ ಕೊಡುಗೆಯಾಗಿದ್ದರೂ ಅವರ ಶವ ಪೆಟ್ಟಿಗೆಯ ಮೇಲೆ ತನ್ನ ಮತ್ತು ತನ್ನ ಪಕ್ಷದ ಚಿನ್ಹೆಯ ಅಚ್ಚು ಹಾಕಿಸಿರಲಿಲ್ಲ.

ವಾರ್ತೆ
“ಹದಿನಾರರ ತರುಣಿಯ ಮೇಲೆ ಗ್ಯಾಂಗ್ ರೇಪ್” ಎಂಬ ತಲೆ ಬರಹದಲ್ಲಿ ಹದಿ ಹರೆಯದ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಸುದ್ದಿಯನ್ನು ವರ್ಣರಂಜಿತವಾಗಿ ಪ್ರಕಟಿಸಿ ದೊಡ್ಡ ವಾರ್ತೆಯಾಗಿಸಿದ ಆ ಪರ್ತಕರ್ತ ಅಕ್ಷರದಲ್ಲೇ ಆಕೆಯನ್ನು ಮತ್ತೊಮ್ಮೆ ಅತ್ಯಚಾರಗೈದಿದ್ದ ಸುದ್ದಿ ವಾರ್ತೆಯಾಗಲೇ ಇಲ್ಲ.

ಪೂಜನೀಯ
“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತ:” ನಮ್ಮ ದೇಶ ಮಹಿಳೆಯರಿಗೆ ಕೊಟ್ಟ ಪೂಜನೀಯ ಸ್ಥಾನವನ್ನು ಹೆಮ್ಮೆಯಿಂದ ಆ ಸ್ವಾಮೀಜಿ ನೆರೆದ ದೇಶ ವಿದೇಶದಿಂದ ಬಂದ ಸಭಿಕರೆದುರು ಪ್ರವಚಿಸುತ್ತಿದ್ದರು.
“ಜಲ ಪ್ರಳಯ : ಸಂಕಷ್ಟದಲ್ಲಿ ಸಿಲುಕಿದ ತಾಯಿ ಮಗಳ ಮೇಲೆ ಅತ್ಯಾಚಾರ ಮತ್ತು ಕೊಲೆ” ಮರುದಿನ ಪತ್ರಿಕೆಯ ಮುಖಪುಟದಲ್ಲಿ ಸುದ್ದಿಯೊಂದು ದೊಡ್ಡ ಅಕ್ಷರದಲ್ಲಿ ಪ್ರಕಟವಾಗಿತ್ತು.

ಸೇವೆ
ನಗರದ ಹೃದಯ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆ ಮಾಡಿದ ಸ್ವಾಮೀಜಿ ಉತ್ತಮ “ಸೇವೆ” ನೀಡುವಂತೆ ಹಾರೈಸಿದರು.
ನೆರೆದ ಸಭಿಕರಲ್ಲಿ ಇಬ್ಬರಿಗೆ ಎದೆ ನೋವು ಕಾಣಿಸಿಕೊಂಡಿತು.

(ನ್ಯಾನೋ ಕತೆಯನ್ನು ದಯವಿಟ್ಟು ನಿಲ್ಲಿಸಬೇಡಿ ಅಂತ ಹಲವಾರು ಗೆಳೆಯರು ಕೋರಿಕೊಂಡಿದ್ದರು .. ಗೆಳೆಯರೇ ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ )

ಪ್ರತಿಕ್ರಿಯಿಸಿ

ನ್ಯಾನೋ ಕಥೆಗಳು

ಧರ್ಮ ಮತ್ತು ಇತರೆ ನ್ಯಾನೋ ಕತೆಗಳು

flat,550x550,075,f
ಧರ್ಮ
ಅದೊಂದು ಊರು. ಸ್ವಯಂ ಘೋಷಿತ ಧರ್ಮ ರಕ್ಷಕರು ಅಕ್ರಮ ಗೋವು ಸಾಗಾಟವನ್ನು ತಡೆಯಲು ಆ ರಾತ್ರಿ ಕಾದು ಕುಳಿತು ಕೊನೆಗೊಂದು ಗೋವನ್ನು ಸಾಗಿಸುತ್ತಿದ್ದ ವಾಹನವನ್ನು ಹಿಡಿದು ಅದರಲ್ಲಿದ್ದವರಿಗೆ ಬಡಿದು ಧರ್ಮ ರಕ್ಷಣೆ ಮಾಡಿದರೆಂದು ಬೀಗಿದರು.
ಅದೇ ಊರಲ್ಲಿದ್ದ ಆಸ್ಪತ್ರೆಯಲ್ಲಿ ಅದೇ ರಾತ್ರಿ ಎರಡು ಭ್ರೂಣಗಳ ಹತ್ಯೆಯಾಯ್ತು. ಜೊತೆಗೆ ಮನುಷ್ಯ ಧರ್ಮವೂ.

ಅಭಿಪ್ರಾಯ
ಕೈಗೊಂದಿಷ್ಟು ಚೈನು, ಕಿವಿಯಲ್ಲಿ ಟಿಕ್ಕಿ, ಸೊಂಟದಿಂದ ಕೆಳಗೆ ಜಾರಿಬಿದ್ದ ಪ್ಯಾಂಟ್’ನ ಮೇಲ್ಭಾಗದಲ್ಲಿ ಪ್ರದರ್ಶನಕ್ಕಿಟ್ಟಂತೆ ಕಾಣುತ್ತಿದ್ದ ಒಳ ಉಡುಪು, ಆಕಾಶಕ್ಕೆ ಬಾಣ ಬಿಟ್ಟಂತೆ ಕೂದಲು ಬಿಟ್ಟಿದ್ದ ‘ನಮ್ಮತನ’ ಕಳೆದುಕೊಂಡ ನಮ್ಮ ದೇಶದ ಮುಂದಿನ ಭವಿಷ್ಯವಾದ ಯುವಕನೊಬ್ಬ ಅಂಗಡಿಯೊಂದಕ್ಕೆ ಹೊಕ್ಕವನೇ ದಿನ ಪತ್ರಿಕೆಯನ್ನು ಕೈಗೆತ್ತಿ ಓದಲು ಶುರುವಿಟ್ಟ.
“ಅಪ್ರಾಪ್ತೆಯ ಮೇಲೆ ಶೌಚಾಲಯದಲ್ಲಿ ಅತ್ಯಾಚಾರ” ಎಂಬ ತಲೆಬರಹ ಓದಿದವನೇ ರೊಚ್ಚಿಗೆದ್ದ..”ಛೆ! ಶೌಚಾಲಯದಲ್ಲಾ..?” ಅಲ್ಲಿದ್ದವರೆಲ್ಲ ಅವನನ್ನು ದುರುಗುಟ್ಟಿದಾಗ ಅವನು ತನ್ನ ಹೇಳಿಕೆಯನ್ನು ಬದಲಾಯಿಸಿದ.
“ಛೆ! ಪಾಪಿಗಳು ವಯಸ್ಸಿಗೆ ಬರದ ಹುಡುಗಿಯನ್ನೂ ಬಿಟ್ಟಿಲ್ಲ…!”

ಪರೀಕ್ಷೆ
ಅವನದು ಮೇರು ವ್ಯಕ್ತಿತ್ವ. ಅವನ ಯೋಚನೆಗಳು ಆಕಾಶದಷ್ಟು ದೊಡ್ಡಗಾಗಿದ್ದವು. ಅವನ ಹೃದಯ ಕಡಲಷ್ಟು ವಿಶಾಲವಾಗಿತ್ತು. ಅವನ ಭಾವನೆಗಳಿಗೆ ರೆಕ್ಕೆ ಪುಕ್ಕಗಳಿದ್ದವು. ಪ್ರಪಂಚದ ಆಗು ಹೋಗುಗಳ ಸ್ಪಷ್ಟ ಮಾಹಿತಿ ಅವನಲ್ಲಿತ್ತು. ಇಷ್ಟೆಲ್ಲಾ ಆಗಿದ್ದರೂ ಆ ಕೂಗು ಅವನನ್ನು ಬೆಚ್ಚು ಬೀಳಿಸಿತು.
“ಹೇಯ್ .. ಓದ್ಲಿಕ್ಕೆ ಕೂತ್ಕೊಂಕು ಅದೇನು ಬಾಯಿ ಬಿಟ್ಕೊಂಡು ಯೋಚನೆ ಮಾಡ್ತಿದ್ದೀಯ..? ನಾಳೆ ಪರೀಕ್ಷೆ ಅಂತ ಗೊತ್ತಿಲ್ವಾ ..?!”

ಬೆರಳು
“ಥೂ ದರಿದ್ರವಾಸಿ.. ಬದುಕೋ ಯೋಗ್ಯತೆ ಇಲ್ಲ ನಿಂಗೆ.. ಭೂಮಿಗೆ ಭಾರವಾಗಿ ಬದುಕೋದಕ್ಕಿಂಥ ಸಾಯುವುದು ಲೇಸು”. ಆತ ಒಂದು ಬೆರಳನ್ನು ಅವನೆಡೆಗೆ ತೋರಿಸಿ ಬಾಯಿಗೆ ಬಂದಂತೆ ಬೈತಿದ್ದ.
ಅವನ ಉಳಿದ ಮೂರು ಬೆರಳುಗಳು ಅವನನ್ನೇ ತೋರಿಸುತ್ತಿತ್ತು.


Leave a Comment

ದುರ್ಮರಣ ಮತ್ತಿತರ ನ್ಯಾನೋ ಕತೆಗಳು · ನ್ಯಾನೋ ಕಥೆಗಳು

ದುರ್ಮರಣ ಮತ್ತಿತರ ನ್ಯಾನೋ ಕತೆಗಳು

school bus seat

ದುರ್ಮರಣ
ಬಸ್ ಕಂದಕಕ್ಕೆ ಬಿದ್ದು ಇಬ್ಬರು ಯುವಕರು ದುರ್ಮರಣ ಹೊಂದಿದ್ದು ಪೇಪರಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಅವರ ಹೆತ್ತವರ ಕನಸುಗಳು ಮತ್ತು ನಿರೀಕ್ಷೆಗಳು ಅವರೊಂದಿಗೆ ದುರ್ಮರಣ ಹೊಂದಿದ್ದು ಸುದ್ದಿಯಾಗಲೇ ಇಲ್ಲ…

ಕೊಲ್ಲು
ಹದಿಹರೆಯದ ಯುವತಿಯನ್ನು ಅತ್ಯಾಚಾರ ಮಾಡಿ ಕೊಂದಿದ್ದ ಪಾಪಿಗೆ ಗಲ್ಲು ಶಿಕ್ಷೆ ನೀಡಿ ಕೊಲ್ಲಲಾಯಿತು. ಆ ಯುವತಿಯ ತಂದೆಗೆ ಈ ಸುದ್ದಿಯನ್ನು ತಿಳಿಸಲು ಹೋದವನು ಮಾತಿನ ನಡುವೆ ಕೇಳಿದರು. “ಆತನನ್ನು ಕೊಂದಿದ್ದು ನಿಮಗೆ ಸಮಾಧಾನ ನೀಡಿರಬೇಕಲ್ವಾ ..?”
“ಅವನನ್ನು ಪ್ರತೀ ದಿನ, ಪ್ರತೀ ಕ್ಷಣ ಮನಸ್ಸಿನಲ್ಲಿ ಕೊಂದು ಹಾಕುತ್ತಾ ಸಮಾಧಾನಪಟ್ಟಿದ್ದೆ”. ನಿಟ್ಟುಸಿರು ಬಿಡುತ್ತಾ ಯುವತಿಯ ತಂದೆ ಉತ್ತರಿಸಿದ.

ಪ್ರೀತಿ
“ಕಡು ಬಡತನದಲ್ಲಿ ತನ್ನೆಲ್ಲ ಸಂತೋಷವನ್ನು ಬಲಿ ಕೊಟ್ಟು, ತನ್ನದೆಲ್ಲವನ್ನೂ ನನಗಾಗಿ ಮುಡಿಪಿಟ್ಟು ನನ್ನನ್ನು ಸಾಕಿ, ಸಲುಹಿ ವಿದ್ಯಾವಂತೆಯನ್ನಾಗಿ ಮಾಡಿದ ನನ್ನ ತಾಯಿಯನ್ನು ತೊರೆದು ನಾನು ನಿನ್ನ ಜೊತೆ ಬರೆಲಾರೆ” ಆತನ ಮುಂದೆ ಆಕೆ ಗೊಗರೆಯುವಾಗ ಅವನಿಗೆ ನಿಜವಾದ ಪ್ರೀತಿ ಯಾವುದೆಂದು ಅರಿವಾಯಿತು.

ಮೌಢ್ಯ
“ಆ ಜನಾಂಗ ಕೆಟ್ಟ ಮೌಢ್ಯಗಳಿಂದ ತುಂಬಿ ಕೆಟ್ಟು ಹೋಗಿದೆ. ಯಾರೋ ತಿಂದು ಬಿಟ್ಟು ಹೋದ ಎಂಜಲೆಲೆಯ ಮೇಲೆ ಉರುಳಿ ಹರಕೆ ತೀರಿಸುತ್ತಾರಂತೆ. ಇವರನ್ನು ಇಂತಹ ಮೌಢ್ಯಗಳಿಂದ ಮೇಲೆತ್ತುವ ಕಾರ್ಯ ಈ ಕೂಡಲೇ ಆಗಬೇಕು” ಸ್ವಯಂ ಘೋಷಿತ ಆ ಬುದ್ದಿಜೀವಿ ಒಂದು ಜನಾಂಗದ ಮೇಲೆ ತನ್ನ ಪ್ರೀತಿ ಪ್ರದರ್ಶಿಸುತ್ತಿದ್ದ. ವಿಪರ್ಯಾಸವೆಂದರೆ ತಾವು ಬಿಟ್ಟು ಹೋದ ಎಂಜಲೆಲೆಯ ಮೇಲೆ ಉರುಳುತ್ತಾರೆಂದು ಗೊತ್ತಿದ್ದೂ ಎಂಜಲೆಲೆಯನ್ನು ಬಿಟ್ಟು ಹೋಗುತ್ತಿದ್ದವರ ಮೌಢ್ಯದ ಬಗ್ಗೆ ಆತ ಜಾಣ ಮೌನವಹಿಸಿದ್ದ.


Leave a Comment

ನ್ಯಾನೋ ಕಥೆಗಳು

ಒಂದಿಷ್ಟು ನ್ಯಾನೋ ಕತೆಗಳು

lathi_charge_2
ಹರಾಜು
ಡೆಲ್ಲಿಯ ರಾಜಬೀದಿಗಳಲ್ಲಿ ಮುಂದಿನ ವಾರ ನಡೆಯುವ ಜಗತ್ತಿನ ಅತ್ಯಂತ ಬೆಳೆಬಾಳುವ ವಸ್ತುಗಳ ಹರಾಜಿನ ಬಗ್ಗೆ ಅಲ್ಲಲ್ಲಿ ದೊಡ್ಡ ದೊಡ್ಡ ಪೋಸ್ಟರ್ ಸ್ಥಾಪಿಸಲಾಗಿತ್ತು. ಅದನ್ನು ನೋಡುತ್ತಿದ್ದ ಹಿರಿಯರೊಬ್ಬರು ನಿಟ್ಟುಸಿರು ಬಿಡುತ್ತಾ ಹೇಳಿದರು .
“ಅತ್ಯಂತ ಬೆಲೆಬಾಳುವ ವಸ್ತು ಕಳೆದ ವಾರವೇ ಹರಾಜಾಗಿದೆ… ಹೆಣ್ಣಿನ ಮಾನಕ್ಕಿಂತ ಬೆಲೆಬಾಳುವ ಅದು ಯಾವ ವಸ್ತುವನ್ನು ಹರಾಜಿಗಿಡುತ್ತಾರೋ …?”

ಫ್ಲಾಟ್
“ಅಲ್ಲಿ ಸ್ವಿಮ್ಮಿಂಗ್ ಪೂಲ್ ಇಲ್ಲ , ಜಿಮ್ ಇಲ್ಲ, ಮಸಾಜ್ ಸೆಂಟರ್ ಇಲ್ಲ, ಟೆನಿಸ್ ಗ್ರೌಂಡ್ ಇಲ್ಲ . ಆ ಅಪಾರ್ಟ್ಮೆಂಟಲ್ಲಿ ನಮಗೆ ಫ್ಲಾಟ್ ಬೇಡ..” ಹೊಸ ಮನೆಯ ಖರೀದಿಯ ಸನ್ನಾಹದಲ್ಲಿದ್ದ ಗಂಡನಲ್ಲಿ ಹೆಂಡತಿ ಜಗಳ ಕಾಯುತ್ತಿದ್ದಳು.
ಸೋರುತ್ತಿರುವ ಶೀಟ್ ಮಾಡು, ಮುರಿದಿರುವ ಬಾಗಿಲು, ಜರಿದಿರುವ ಗೋಡೆ , ಹೊಟ್ಟೆಗೆ ಅನ್ನವಿಲ್ಲದ ತನ್ನ ಬಾಲ್ಯಕಾಲ ಆತನ ಕಣ್ಣಮುಂದೆ ಬಂದು ಅಣಕವಾಡುತ್ತಾ ನಿಂತಿತು.

ಯೋಜನೆ
ಯುವಕರ ಭವಿಷ್ಯವನ್ನು ಉತ್ತಮಗೊಳಿಸುವ ಪದ್ದತಿಯನ್ನು ನಮ್ಮ ಸರಕಾರ ಹಾಕಿಕೊಂಡಿದೆ ಅಂತ ಭಾಷಣ ಬಿಗಿದಿದ್ದ ಆ ಸಚಿವ ನ್ಯಾಯ ಕೇಳಿ ಬೀದಿಗಿಳಿದ ಯುವಕರ ಮೇಲೆ ಲಾಟಿ ಚಾರ್ಜ್ಗೆ ಆದೇಶ ಕೊಟ್ಟ .
ಕೊನೆಗೆ ಸತ್ತ ಯುವಕರಿಗೆ 10 ಲಕ್ಷ ಪರಿಹಾರ ಘೋಸಿಸಿ ತಾನು ಕೊಟ್ಟ ಮಾತನ್ನು ಪಾಲಿಸಿದ್ದೇನೆ ಅಂತ ಬೀಗಿದ.

ಸಾವು
ಬಾಡಿಗೆ ಹಂತಕನಿಗೆ ಗಲ್ಲು ಶಿಕ್ಷೆಯ ತೀರ್ಪು ಕೊಡಲಾಯ್ತು .ಆತ ಯಾವುದೇ ಅಳುಕಿಲ್ಲದೆ ಅದನ್ನ ಸ್ವೀಕರಿಸಿದ. ಅವನನ್ನು ಕರೆದುಕೊಂಡು ಹೋಗುತ್ತಿದ್ದ ಪೇದೆ ಆಶ್ಚರ್ಯದಿಂದ ಕೇಳಿದ “ನಿನಗೆ ಹೆದರಿಕೆ ಇಲ್ಲವೇ …?”
“ನಾನು ಎಷ್ಟು ಮಂದಿಯನ್ನು ಕೊಂದಿದ್ದೀನೋ ಅಷ್ಟು ಬಾರಿ ಅವರೊಂದಿಗೆ ನಾನೂ ಸತ್ತಿದ್ದೇನೆ. ಇನ್ನೊಮ್ಮೆ ಸಾಯಲು ನಾನೇಕೆ ಭಯಪಡಲಿ…?” ಆತನ ಮಾತಲ್ಲೂ ಎಳ್ಳಷ್ಟು ಅಳುಕಿರಲಿಲ್ಲ.


Leave a Comment

ನ್ಯಾನೋ ಕಥೆಗಳು · ಶೇಮ್ ಶೇಮ್ ಸೌಮ್ಯಾ ..

ಶೇಮ್ ಶೇಮ್ ಸೌಮ್ಯಾ ..

ಸೌಮ್ಯ ಎನ್ ಎಂಬ ಹೆಸರಿನವಳು ನನ್ನ “ನೆನಪಿನ ಸಂಚಿ “ಯಿಂದ ಕದ್ದು ಕನ್ನಡ ಪ್ರಭದಲ್ಲಿ ಪ್ರಕಟಿಸಿರುವ ನ್ಯಾನೋ ಕತೆಗಳು ..

ದಿನಾಂಕ 27 ಡಿಸೆಂಬರ್ 2012 ಕನ್ನಡ ಪ್ರಭ -ಅನೇಕ – ಬೈ-ಟು ಕಾಫಿಯ 18 ನೇ ಪುಟದಲ್ಲಿ ಸಣ್ ಸ್ಟೋರಿ ವಿಭಾಗದಲ್ಲಿ:-

San-kategalu

ದಿನಾಂಕ 31 ಡಿಸೆಂಬರ್ 2012 ಕನ್ನಡ ಪ್ರಭ -ಅನೇಕ – ಬೈ-ಟು ಕಾಫಿಯ 18 ನೇ ಪುಟದಲ್ಲಿ ‘ವೇದಿಕೆ’ ವಿಭಾಗದಲ್ಲಿ:-

My Nano-stories

ಶೇಮ್ ಶೇಮ್ ಸೌಮ್ಯಾ ..
ಶೇಮ್ ಶೇಮ್ ……..!


Leave a Comment