ಕನ್ನಡ ಕಥೆಗಳು - Kannada Kathegalu · ವೈದ್ಯರು ಕಳಿಸಿದ ಜೀವನ ಪಾಠ · ಸಣ್ಣ ಕತೆ

ಕನ್ನಡ ಕಥೆಗಳು – Kannada Kathegalu 

ವೈದ್ಯರು ಕಲಿಸಿದ ಜೀವನ ಪಾಠ

Daddy's Hands-Artistic
“ಡಾಕ್ಟರ್! ನಾನೊಂದು ಗಂಭೀರ ಸಮಸ್ಯೆಯಲ್ಲಿ ಸಿಲುಕಿದ್ದೇನೆ.. ನೀವು ಸಹಾಯ ಮಾಡಲೇಬೇಕು… “. ಕನ್ಸಲ್ಟೇಶನ್ ರೂಮಿಗೆ ಧಾವಿಸಿದ ಆಕೆ ವೈದ್ಯರ ಬಳಿ ಅಂಗಲಾಚತೊಡಗಿದಳು. “ನನ್ನ ಮಗುವಿಗಿನ್ನೂ ೧ ವರ್ಷ ತುಂಬಿಲ್ಲ, ನಾನು ಮತ್ತೆ ಪ್ರೆಗ್ನೆಂಟ್ ಆಗಿದ್ದೇನೆ, ಇಷ್ಟು ಬೇಗ ನನಗಿನ್ನೊಂದು ಮಗು ಬೇಡ ಡಾಕ್ಟರ್ ” ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿ ಆಕೆ ಡಾಕ್ಟರ ಮುಖವನ್ನು ವಿಷಣ್ಣವಾಗಿ ನೋಡುತ್ತಾ ಕುಳಿತಳು.

“ಸರಿ.. ನಾನೇನು ಮಾಡಬೇಕು ಹೇಳಿ” ಡಾಕ್ಟರ್ ಕೇಳಿದರು.
“ನನಗೆ ಈ ಮಗು ಬೇಕಿಲ್ಲ… ಅಬಾರ್ಶನ್ ಮಾಡ್ಬೇಕು.. ನೀವು ಸಹಾಯ ಮಾಡ್ಬೇಕು ಡಾಕ್ಟರ್… ” ಸಣ್ಣ ದನಿಯಲ್ಲಿ ಅವಳು ಉತ್ತರಿಸಿದಳು.
ಡಾಕ್ಟರ್ ಚಿಂತಾಮಗ್ನರಾದರು, ಒಂದಷ್ಟು ಸಮಯದ ಮೌನವನ್ನು ಮುರಿದು ಡಾಕ್ಟರ್ ಹೇಳಿದರು “ಅದಕ್ಕಿಂತಲೂ ಒಳ್ಳೆಯ ಉಪಾಯವಿದೆ ನನ್ನಲ್ಲಿ… ಇದರಿಂದ ನಿಮ್ಮ ಆರೋಗ್ಯಕ್ಕೂ ಯಾವುದೇ ಅನಾಹುತವಿಲ್ಲ…”.
ಆಕೆಯ ಮುಖ ಅರಳಿತು. ಡಾಕ್ಟರ್ ತನ್ನ ಕೋರಿಕೆಯನ್ನು ಒಪ್ಪಿಕೊಂಡಳೆಂದು ಮತ್ತಷ್ಟು ನಿರಾಳವಾದಳು.

ಡಾಕ್ಟರ್ ಮುಂದುವರೆಸಿದರು “ನೋಡಿ.. ೨ ಮಕ್ಕಳನ್ನು ಒಟ್ಟಿಗೆ ನೋಡಿಕೊಳ್ಳಲು, ಪೋಷಿಸಲು ನಿಮಗೆ ಕಷ್ಟವಿದೆ ಅಂದ್ರಿ.. ಹಾಗಾದ್ರೆ ಒಂದು ಮಗುವನ್ನು ಕೊಲ್ಲಲೇ ಬೇಕು… ನಿಮ್ಮ ಕೈಯಲ್ಲಿರುವ ಮಗುವನ್ನು ಇಲ್ಲವಾಗಿಸೋಣ..ಇದರಿಂದ ಮತ್ತೊಂದು ಮಗುವನ್ನು ಪಡೆಯುವ ಮುಂಚೆ ಒಂದಿಷ್ಟು ಕಾಲ ಅರಾಮವಾಗಿರಬಹುದು… ಹೇಗಾದರೂ ಒಂದು ಮಗುವನ್ನು ಇಲ್ಲವಾಗಿಸಲೇಬೇಕು.. ಯಾವ ಮಗುವಾದರೇನಂತೆ ?, ಅಬಾರ್ಶನ್ ಎಂಬುದು ತುಂಬಾ ರಿಸ್ಕಿ, ನಿಮ್ಮ ಕೈಯಲ್ಲಿರುವ ಮಗುವನ್ನು ಇಲ್ಲವಾಗಿಸಿದರೆ ನಿಮ್ಮ ಆರೋಗ್ಯಕ್ಕೂ ಯಾವುದೇ ಅನಾಹುತವಾಗುವುದಿಲ್ಲ…. …. …. ”
“ನೋ ನೋ ಡಾಕ್ಟರ್ !!, ನನ್ನ ಮಗುವನ್ನು ನಾನೇ ಕೊಲ್ಲುವುದಾ..?! ಅಬ್ಬಾ .. ಎಷ್ಟೊಂದು ಕ್ರೂರ !, ಎಷ್ಟೊಂದು ಭಯಾನಕ.. ನಾನದನ್ನು ಮಾಡಲಾರೆ… !”
ಇನ್ನೂ ಮಾತು ಮುಗಿಸದ ಡಾಕ್ಟರನ್ನು ತಡೆದ ಅವಳು ಜೋರುದನಿಯಲ್ಲಿ ಕಂಪಿಸುತ್ತಾ ನುಡಿದಳು, ಅವಳ ಹಣೆ ಬೆವರತೊಡಗಿತ್ತು, ಎದೆ ಬಡಿತ ಜೋರಾಗಿತ್ತು .

“ಓಕೆ ..ಒಕೆ .. ಐ ಅಗ್ರೀಡ್ !”
ಡಾಕ್ಟರ್ ಮಾತು ಮುಂದುವರೆಸಿದರು “ಒಂದು ಮಗುವನ್ನು ನೀವು ಕೊಲ್ಲಲ್ಲು ಒಪ್ಪಿಕೊಂಡಿದ್ದೀರಿ, ಹಾಗಿದ್ದಾಗ ನಿಮ್ಮ ಸಮಸ್ಯೆಗೆ ಇದುವೇ ಒಳ್ಳೆಯ ಪರಿಹಾರವೆಂದುಕೊಂಡೆ .. ಅದಕ್ಕೆ ಹೇಳಿದೆ.. ”

ಆಕೆಗೆ ತನ್ನ ತಪ್ಪಿನ ಅರಿವಾಯಿತು. ನಂತರ ಡಾಕ್ಟರ್ ಗರ್ಭದಲ್ಲಿರುವ ಮಗುವಿಗೂ ಆಕೆಯ ಇನ್ನೊಂದು ಮಗುವಿನಂತೆ ಜೀವವಿದೆ, ಅದನ್ನು ಗರ್ಭಪಾತ ಮಾಡಿ ತೆಗೆಸುವುದು ಕೊಲ್ಲುವುದಕ್ಕೆ ಸಮಾನ … ಅದು ಕೈಯಲ್ಲಿರುವ ಮಗುವನ್ನು ಕೊಂದಷ್ಟೇ ದೊಡ್ಡ ಅಪರಾಧ ಎಂದು ತಿಳಿ ಹೇಳಿದರು.
ದುಖಃದ ಕಟ್ಟೆ ಒಡೆದು ಆ ತಾಯಿ ಕಣ್ಣೀರಾದಳು, ಮಗುವನ್ನು ಎಷ್ಟೇ ಕಷ್ಟಪಟ್ಟರೂ ಹೆತ್ತು ಸಾಕುವುದಾಗಿ ಡಾಕ್ಟರ್ ಬಳಿ ಪ್ರತಿಜ್ಞೆಗೈದು ಭಾರವಾದ ಹೃದಯದೊಂದಿಗೆ ಹೊರಡಲು ಅಣಿಯಾಗುವಾಗ ಲೋಕದ ಸಮಸ್ತ ತಂದೆ-ತಾಯಿಗಳು ಕಲಿಯಬೇಕಾದ ಜೀವನ ಪಾಠವೊಂದನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದಳು.

_ಹುಸೇನಿ
ಎಳೆ:ಅಂತರ್ಜಾಲ

Leave a comment

ಹುಸೇನಿ ಪದ್ಯಗಳು - 28 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 28

rice

1)
ಪ್ರೇಮ ಕವಿಯೊಬ್ಬನ ಮದುವೆಯಾದ
ಹುಡುಗಿಗೆ,
ಹೂವು, ಮೋಡ ಮತ್ತು ಚಂದಿರನ
ಮೇಲೆ ಸವತಿ ಮತ್ಸರ !
2)
ದೇವ
ಅಗುಳಿನ ಮೇಲೆ ಬಡವನೊಬ್ಬನ
ಹೆಸರು ಬರೆದಿದ್ದ;
ಕಾಳ ಸಂತೆಯ ಕೊಳ್ಳೆ-
ಖದೀಮ ಅದನ್ನು ಬದಲಿಸಿದ.

3)
ಅವನು ಸರ್ವಜ್ಞಾನಸಂಪನ್ನ
ಸ್ವರ್ಗದ ಆಸೆಗೆ ಎಲ್ಲ ತೊರೆದು-
ಹಿಮಾಲಯಕ್ಕೆ ಹೋರಟ,
ನಾನು ಅಲ್ಪ;
ತಾಯಿಯ ಪಾದ ಹುಡುಕಿ ಹೊರಟೆ..

_ಹುಸೇನಿ

Leave a comment

ಹುಸೇನಿ ಪದ್ಯಗಳು - 27 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 27

bird mirror painting

1)
ಆ ಹೆದ್ದಾರಿ ಬದಿಯ ಪಾರ್ಕಿನ ಕಲ್ಲು-ಹಾಸಿನ
ಮೇಲೆ ಜಗದ ಪರಿವಿಲ್ಲದ ಜೋಡಿಯೊಂದು
ಪ್ರಣಯಾಟದಲ್ಲಿ ಮೈ ಮರೆತಿದೆ.
ಅವರನ್ನು ದಾಟಿ ಹೋದ ಆ ಮುದುಕನ
ಎದೆ-ಬಯಲೊಳಗೆ ಬಿರಿದ ಸಾವಿರ ಹೂವುಗಳು!
2)
ತನ್ನದೇ ಬಿಂಬವನ್ನು ಶತ್ರುವೆಂದುಕೊಂಡ ಹಕ್ಕಿ
ಕನ್ನಡಿಯನ್ನು ಕುಕ್ಕಿ ಕುಕ್ಕಿ ಪುಡಿಮಾಡಿತು
ಗಾಜಿನ ಚೂರಲ್ಲೆಲ್ಲ ಶತ್ರುಗಳ ಪಡೆಯನ್ನು
ಕಂಡದ್ದೇ ತಡ – ಬದುಕಿದೆಯಾ ಬಡ ಜೀವವೇ
ಎಂದು ಹಾರಿ ಹೋಯಿತು.
3)
ನಿನ್ನ ಕಣ್ರೆಪ್ಪೆಯಂತೆ ಕಾಪಾಡುತ್ತೇನೆ
ಅಂತ ಕವಿತೆ ಕಟ್ಟುತ್ತಿದ್ದವನ
ಕಣ್ಣಂಚಿನಲಿ ಕರಗುವ ನಿರಾಸೆಯ
ಹನಿಗಳಲಿ ಅವಳು ಜಿನುಗುತ್ತಿದ್ದಳು.

4)
ಬಂಜೆ ಎಂದು ಮೂದಲಿಸಿದರು ಜನ
“ನಾನೇ ನಿನ್ನ ಮಗು” ಅಂದವನೇ ಅವಳ
ಮಡಿಲ ಮೇಲೆ ಮಗುವಾದ, ಲೋಕದ
ಸಮಸ್ತ ತಾಯ್ತನ ಅವಳ ಎದೆಗರ್ಭವ ಹೊಕ್ಕಿತು…

_ಹುಸೇನಿ

Leave a comment

ಬಾಗಿಲು · ಸಣ್ಣ ಕತೆ

ಬಾಗಿಲು

door
ಮದುವೆಯ ಮೊದಲ ರಾತ್ರಿ ಗಂಡ ಹೆಂಡತಿ ಒಂದು ಪಂದ್ಯ ಕಟ್ಟಿದರು. ಬೆಳಗ್ಗಿನ ತನಕ ಯಾರಿಗೂ ಬಾಗಿಲು ತೆರೆಯಬಾರದು ಎಂದಾಗಿತ್ತು ಆ ಪಂದ್ಯ.ಮೊದಲು ಗಂಡಿನ ಅಪ್ಪ ಅಮ್ಮ ಅವರನ್ನು ನೋಡಲು ಬಂದರು. ಅವನು ಮತ್ತು ಅವಳು ಇಬ್ಬರೂ ಬಾಗಿಲಿನ ಹಿಂದಿದ್ದರು, ಬಂದದ್ದು ಅವನ ಅಪ್ಪ ಎಂದು ತಿಳಿದಾಕ್ಷಣ ಪರಸ್ಪರ ಮುಖ ನೋಡಿಕೊಂಡರು. ಅವನಿಗೆ ಬಾಗಿಲು ತೆರೆಯಬೇಕೆಂದನಿಸಿತಾದರೂ, ಎಲ್ಲಿ ಸೋತು ಹೋಗುತ್ತೇನೋ ಅಂದುಕೊಂಡು ಸುಮ್ಮನಾದ. ಅವನ ಅಪ್ಪ ಅಮ್ಮ ಕಾದು ಇನ್ನೂ ಬಾಗಿಲು ತೆರೆಯದಿರುವುದನ್ನು ಕಂಡು ಮರಳಿ ಹೋದರು. ಸ್ವಲ್ಪ ಸಮಯದ ಬಳಿಕ ಹೆಣ್ಣಿನ ಹೆತ್ತವರು ಬಂದು ಬಾಗಿಲು ತಟ್ಟಿದರು. ಇಬ್ಬರೂ ಮತ್ತೆ ಪರಸ್ಪರ ಮುಖ ನೋಡಿಕೊಂಡರು. ಬಾಗಿಲ ಬಡಿತ ಅವಳಿಗೆ ಅಸಹನೀಯವಾಗತೊಡಗಿತು. ಏನೋ ನೆನಪಾಗಿ ದುಃಖ ಉಮ್ಮಳಿಸಿ ಬಂತು.. ನನ್ನಿಂದ ಇದು ಸಾಧ್ಯವಿಲ್ಲ.. ನನ್ನ ಹೆತ್ತವರಿಗೆ ನೋವು ಕೊಡಲಾರೆ ಎಂದವಳೇ ಬಾಗಿಲು ತೆರೆದಳು. ಆ ಕ್ಷಣ ಅವನು ಏನೂ ಮಾತನಾಡದೆ ಸುಮ್ಮನಾದನು.
ವರ್ಷಗಳು ಉರುಳಿತು, ಅವರಿಗೀಗ 4 ಗಂಡು ಮತ್ತು 1 ಹೆಣ್ಣು ಮಗಳು. ಅವನು ದಿನಗಳ ಹಿಂದೆ ಹುಟ್ಟಿದ ಮಗಳಿಗೆ ಅದ್ದೂರಿಯಾಗಿ ಪಾರ್ಟೀ ಆಯೋಜಿಸಿದನು. ಕುಟುಂಬದ ಪ್ರತಿ ಸದಸ್ಯನಿಗೂ ಆಮಂತ್ರಣವಿತ್ತು. ಅದೇ ರಾತ್ರಿ ಅದೇನೋ ಕನವರಿಸುತ್ತಿದ್ದ ಅವನಲ್ಲಿ ಅವಳು ಇದುವರೆಗೂ ಯಾವ ಮಕ್ಕಳಿಗೂ ಮಾಡದ ಇಷ್ಟು ದೊಡ್ಡ ಪಾರ್ಟೀ ಈಗ ಮಾಡಲು ಕಾರಣವನ್ನು ಕೇಳಿದಳು.. ಅವನು ಮುಗುಳ್ನಗುತ್ತಾ ಉತ್ತರಿಸಿದ..
“ಇವಳು ಮಾತ್ರ ನನಗಾಗಿ ಬಾಗಿಲು ತೆರೆಯುತ್ತಾಳೆ”

_ಹುಸೇನಿ
ಮೂಲ: ಅಂತರ್ಜಾಲ

Leave a comment