Month: August 2015
Best Kannada Whatsapp Status – ಕನ್ನಡ ಸ್ಟೇಟಸ್
ಬಿಂದು – 10
೧)
ಮನುಷ್ಯ ತಾನೇ ಸೃಷ್ಟಿಸಿದ ಕರ್ಕಶಕ್ಕೆ ಕಿವಿ ಮುಚ್ಚಿದ್ದ,
ಯಾರೂ ಕೇಳದ ರಾಗಕೆ ಎಲೆಯೊಂದು ತಲೆದೂಗುತ್ತಿತ್ತು..
೨)
ಮನುಷ್ಯ ತನ್ನೆಲ್ಲ ವಿಜ್ಞಾನವನ್ನು ಬಳಸಿ ಚಂದಿರ ಲೋಕಕ್ಕೆ ಹೋದ;
ತಿಂಗಳ ರಾತ್ರಿ ಕೊಳದೊಳಗಿಂದ ಚಂದಿರ ಕಿಸಕ್ಕನೆ ಅವರ ನೋಡಿ ನಗುತ್ತಿದ್ದ..
ಹುಸೇನಿ ~
ರಂಝಾನ್ ಪ್ರಾರ್ಥನೆಗಳು
ಬೀಜದೊಳಗೆ ಮರವಿಟ್ಟ,
ಹೂವೊಳಗೆ ಸುಗಂದವಿಟ್ಟ ದೊರೆಯೇ..
ಕಸುವು ಮರೆತ ಕಣ್ಣೊಳಗೊಂದಿಷ್ಟು
ಹನಿ ತುಂಬಿಸು,
ಪಾಪವನ್ನೆಲ್ಲ ತೊಳೆದು ನಿನ್ನ ದಾರಿಯ
ಹುಡುಕಬೇಕು…
ರಂಝಾನಿನ ರಾತ್ರಿ,
ಕರಗಳನ್ನೆತ್ತಿ ನಿನ್ನೆಡೆಗೆ ಚಾಚಿದ್ದೇನೆ ದೊರೆಯೇ..
ಎಲ್ಲದಕ್ಕೂ ಮೊದಲಾಗಿ
ಮಾಡಿಟ್ಟ ಪಾಪಗಳ ನೆನೆದು
ತುಂಬುವ ಕಣ್ಣುಗಳನ್ನು ಕೊಡು…
ಬಿರಿಯುವ ಹೃದಯವೊಂದನು ಕೊಡು..
ದೊರೆಯೇ…
ನಿನ್ನ ನಾಮವನ್ನೇ ಮರೆತಿದ್ದೇನೆ
ನಿಂತ ಭೂಮಿ ಕುಸಿಯಲಿ,
ಆಕಾಶ ಕಳಚಿ ಬೀಳಲಿ,
ಕಸುವು ಮರೆತ ನಾಲಿಗೆಯಲ್ಲಿ
ನಿನ್ನ ಹೆಸರನ್ನೊಮ್ಮೆ ಕೂಗಬೇಕು…
ರಂಝಾನಿನಲ್ಲೂ ಕಾಡದ ಹಸಿವು,
ಮರಣ ಮನೆಯಲ್ಲೂ ಕಾಡದ
ಮೃತ್ಯು ಭಯ,
ಇವೆರಡೂ ನನ್ನನ್ನು
ಭಯಭೀತನನ್ನಾಗಿಸಿದೆ ದೊರೆಯೇ..
ಸ್ನೇಹಿತರ ದಿನದಂದು ..
ತನ್ನ ಗೆಳೆತಿ ಜೀವನ್ಮುಖಿ (ದೀಪಕ್ಕನ ಮಗಳು) ಮಾತು ಬಿಟ್ಟಳೆಂದು ಒಂದೇ ಸಮನೆ ಅಳುತ್ತಿದ್ದ ಅವಳ ಗೆಳತಿ. ದೀಪಕ್ಕ, ಗಿರೀಶಣ್ಣ ಯಾರೂ ಸಮಾಧಾನಿಸಿದರೂ ಸಾಮಾಧಾನವಾಗದ ಅವರನ್ನು ಪ್ರೀತಿಯಿಂದ ಬರಸೆಳೆದು ಮುದ್ದುಮಾಡಿ, ಕೈ ಕೈ ಪೋಣಿಸಿ ಕೋಪವನ್ನು ತಣಿಸಿ ರಾಜಿ ಮಾಡಿಸಿದ ಕನ್ನಡದ ಮೇರು ಚಿತ್ರ ಸಾಹಿತಿ ಕೆ ಕಲ್ಯಾಣ್. ಕೊನೆಗೆ ಎಲ್ಲವೂ ಸುಗಮವಾದಾಗ ಹತ್ತಿರವಿದ್ದ ನನ್ನಲ್ಲಿ ಫೋಟೋ ತೆಗೆಯುವಂತೆ ಕಲ್ಯಾಣ್ ರವರು ಕೋರಿಕೊಂಡಾಗ ತೆಗೆದ ಚಿತ್ರ ಇದು. ದೀಪಕ್ಕನಿಗೆ ಫೋಟೋವನ್ನು ವಾಟ್ಸಾಪ್ ಮಾಡುವಂತೆಯೂ ಸೂಚಿಸಿದರು. ಮಕ್ಕಳೊಂದಿಗೆ ಮಗುವಾಗಿ ಬೆರೆದ ಕಲ್ಯಾಣ್ ರವರ ಸೂಕ್ಷ ಸೆಲೆಯ ವ್ಯಕ್ತಿತ್ವ ತುಂಬಾ ಇಷ್ಟವಾಯ್ತು. ಸ್ನೇಹಿತರ ದಿನದಂದು ಎರಡು ಪುಟ್ಟ ಹೃದಯಗಳ ಸ್ನೇಹ ಸೌರಭ್ಯಕ್ಕೆ ಸಾಕ್ಷಿಯಾದ ಖುಶಿ ನನ್ನದು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಂದು ನಡೆದ ದೀಪಕ್ಕನ ‘ಅಸ್ಮಿತಾ’ ಕವನ ಸಂಕಲನ ಬಿಡುಗಡೆಯ ಹಲವು ರಸ-ಕ್ಷಣಗಳಲ್ಲಿ ಇದೂ ಒಂದು.