ವಿಧಿ
ಊರಲ್ಲಿ ಡೆಂಗ್ಯು ಜ್ವರ ವ್ಯಾಪಕವಾಗಿ ಹಬ್ಬಿತ್ತು.. ದಿನೇ ದಿನೇ ಸತ್ತವರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತು.. ಆತ ಅದರಿಂದ ತಪ್ಪಿಸಿಕೊಳ್ಳಲು ಖುಷಿಯಿಂದಲೇ ದೂರದಲ್ಲಿರುವ ಮಾವನ ಮನೆಗೆ ಹೊರಟಿದ್ದ.
ಅಂದ ಹಾಗೆ ಆತ ಮಾವನ ಮನೆಗೆ ತಲುಪಿಲ್ಲವಂತೆ . ದಾರಿ ಮಧ್ಯೆ ಸಂಭವಿಸಿದ ಆಕ್ಸಿಡೆಂಟಲ್ಲಿ ಸತ್ತುಹೋದನಂತೆ.
ಅಭಿಪ್ರಾಯ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಕನ್ನಡಿ ಹಿಡಿಯುವ ಟಿ .ವಿ ನೇರಪ್ರಸಾರ ಕಾರ್ಯಕ್ರಮವದು. ಪತ್ರಕರ್ತ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಜನರ ಅಭಿಪ್ರಾಯವನ್ನು ಕೇಳುತ್ತಿದ್ದನು.ಮುಂದಿನಿಂದ ಬಂದ ಐಶಾರಾಮಿ ಕಾರನ್ನು ತಡೆದು ನಿಲ್ಲಿಸಿ ಅಭಿಪ್ರಾಯ ಪಡೆಯಲು ಮುಂದಾದ. “ನಾವು ಸಾರ್ವಜನಿಕ ಬಸ್ಸುಗಳನ್ನು ಉಪಯೋಗಿಸಬೇಕು , ಸ್ವಂತ ವಾಹನವಿದ್ದರೆ ಶೇರಿಂಗ್ ವ್ಯವಸ್ಥೆ ಯನ್ನು ಪಾಲಿಸಬೇಕು” ಆತ ಮಾತು ಮುಂದುವರೆಸುತ್ತಿದ್ದಂತೆ ಪತ್ರಕರ್ತ ಕಾರಿನ ಒಳಗೆ ಇಣುಕಿದ. ಉಳಿದ ಸೀಟ್ ಗಳೆಲ್ಲ ಖಾಲಿಯಾಗಿತ್ತು…
ಬೆಲೆ
ಆತ ಆಗರ್ಭ ಶ್ರೀಮಂತ. ಬಡವರನ್ನು ಎಂದೂ ತನ್ನ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ.. ಅದರಿಂದ ತನ್ನ ‘ಬೆಲೆ’ ಕಡಿಮೆಯಾಗುತ್ತದೆ ಅಂತ ಹೇಳುತ್ತಿದ್ದ. ತನ್ನ ೪ ಅಂತಸ್ತಿನ ಮನೆಯ ‘ಗೃಹಪ್ರವೇಶ’ಕ್ಕೂ ಮೊನ್ನೆ ಮೊನ್ನೆ ನಡೆದ ಮಗಳ ಅದ್ದೂರಿ ‘ಮದುವೆ’ಗೂ ಊರಿನ ಯಾವುದೇ ಬಡವರನ್ನು ಆತ ಅಮಂತ್ರಿಸಿರಲಿಲ್ಲ.. ಆದರೆ ಪ್ರತೀ ಶುಕ್ರವಾರದ ನಮಾಜಿನಲ್ಲಿ ಆತನ ತಲೆ ಬಡವನೊಬ್ಬನ ಕಾಲ ಬುಡದಲ್ಲಿರುತ್ತಿತ್ತು..
ಬಡವ
ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅವರಿಬ್ಬರ ಮದುವೆಗೆ ಆತನ ಬಡತನ ಅಡ್ಡ ಬಂತು. ಅವಳ ತಂದೆ ಬೇರೊಬ್ಬ ಶ್ರೀಮಂತನಿಗೆ ಕೊಟ್ಟು ಮದುವೆ ಮಾಡಿಸಿದರು. ಮದುವೆ ಆದ ಮರುವರ್ಷವೇ ಆತನ ವ್ಯವಹಾರವೆಲ್ಲ ನೆಲಗಚ್ಚಿದವು.. ನೋಡ ನೋಡುತ್ತಲೇ ಆತ ದರಿದ್ರನಾದ.
ವಿಪರ್ಯಾಸ
ಎಕರೆ ಗಟ್ಟಲೆ ಭೂಮಿಯಲ್ಲಿ ವಿಸ್ತಾರವಾಗಿ ಹರಡಿರುವ ಗಗನ ಚುಂಬಿ ಕಟ್ಟಡ ಕೊನೆಯ ಅಂತಸ್ತಿನಲ್ಲಿ “ಗೋ ಗ್ರೀನ್ ” ಎಂಬ ಹಸಿರು ಪೋಸ್ಟರ್ ರಾರಾಜಿಸುತ್ತಿತ್ತು ..