ಕಂಪ್ಪೌಂಡಾವೃತ ಬಹುಮಡಿಯ ಮನೆಯ
ಅಲ್ಸೇಶನ್ ನಾಯಿಗೂ..
ಸಿಕ್ಕಿದ್ದನ್ನೆಲ್ಲ ತಿಂದು ರಾತ್ರಿಯೆಲ್ಲಾ ಊಳಿಡುವ
ಬೀದಿನಾಯಿಗೂ ಇರುವ ವ್ಯತ್ಯಾಸ
ಬರಿಯ ‘ಸ್ವಾತಂತ್ರ್ಯ’
ಸಮಯದ ವೇಗಕ್ಕೆ ಕುಪಿತನಾದವನು
ಗಡಿಯಾರವನ್ನು ಹೊಡೆದು ಹಾಕಿದ;
ಆದರೂ ಸಮಯ ನಿಲ್ಲಲಿಲ್ಲ ಎಂಬುದು
ಈ ಸಮಯದ ಸತ್ಯ…
ತನ್ನದೆಲ್ಲವನ್ನೂ ಬಡವರಿಗೆ ಧಾರೆ ಎರೆದವನೂ
ಆಗರ್ಭ ಶ್ರೀಮಂತ ಜಿಪುಣ ಇಬ್ಬರೂ ಸತ್ತರು
ವ್ಯತ್ಯಾಸ ಇಷ್ಟೇ…
ಮೊದಲನೆಯವನು ಜನಮಾನಸದಲ್ಲಿ ಈಗಲೂ
ಬದುಕಿದ್ದಾನೆ..
ಕುಡಿಗಳು ಎಷ್ಟೇ ಬಲಿತು ಹೊರಚಾಚಿ
ಹಾರಲಣಿಯಾಗಿ
ಆಕಾಶದತ್ತ ಮೊಗವಿಟ್ಟರೂ
ತಾಯಿ ಬೇರು
ಸಡಿಲವಾಗುವುದೇ ಇಲ್ಲ…