ತೊರೆಯ ತೀರದ ನೆನಪುಗಳು

ವೊಹ್ ಕಾಗಝ್ ಕಿ ಕಷ್ತಿ ವೊಹ್ ಬಾರಿಶ್ ಕಾ ಪಾನೀ..

kagaj-1

ಕೆಲವೊಮ್ಮೆ ಎಲ್ಲದಕ್ಕೂ ಅತೀತವಾಗಿ ಬದುಕು ಕಾಡುತ್ತದೆ. ಅಪರಾತ್ರಿಗಳಲ್ಲಿ ಎದ್ದು ಕೂರುತ್ತೇನೆ, ಸಾಂತ್ವನಕ್ಕೆ ಮತ್ತದೇ ಹೆಂಚಿನ ಮನೆ, ಅಡಿಕೆ ತೋಟ, ಅದರಾಚೆಗಿನ ತೋಡು, ತೋಡು ಬದಿಯ ಪೇರಳೆ ಮರಗಳು, ಮಾವಿನ ಮರ, ಹಲಸಿನ ಮರ , ಕೊಕ್ಕೋ ಮರ, ಸೀತಾಫಲ, ನೇರಳೆ… ಪಕ್ಕದಲ್ಲೇ ಇರುವ ಆಟದ ಬಯಲು, ಅಡಿಕೆ ಗರಿಯ ಬ್ಯಾಟು, ರಬ್ಬರ್ ಚೆಂಡು, ಕೊಡ ತುಂಬಾ ನೀರು, ಆ ಉರಿ ಬಿಸಿಲು… ಆ ಹರಿದ ಬ್ಯಾಗು, ಬಟನ್ ಇರದ ಬಿಳಿ ಅಂಗಿ, ಕಲರ್ ಮಾಸಿ ಹೋದ ನೀಲಿ ಚಡ್ಡಿ, ಕಂಠಪಾಠದ ಮಗ್ಗಿ… ಇವೆಲ್ಲ ಬೇಕೆನಿಸುತ್ತದೆ. ದೊಡ್ದವನಾದಂತೆ ಬಾಲ್ಯಕ್ಕೆ ಮರಳುವ ಅಧಮ್ಯ ತುಡಿತ, ಇಷ್ಟು ವರ್ಷದ ಒಡನಾಟದ ನಂತರವೂ ಈ ಮೆಟ್ರೋ ಸಿಟಿಯು ನನಗೆ ಆಪ್ತವಾಗಲಿಲ್ಲ. ಇಲ್ಲಿರುವುದೆಲ್ಲವೂ ನನ್ನದಲ್ಲ ಎಂಬ ಕೊರಗು, ಅಥವಾ ಈ ಅತಿವೇಗಕ್ಕೆ ಒಗ್ಗಿಕೊಂಡ ಬದುಕಿನೊಂದಿಗಿರುವ ಅಸಮಾಧಾನ. ಇಲ್ಲಿಗೆ ಸಲ್ಲುವುದೇ ಇಲ್ಲ ನಾನು. ಒಂಟಿಯಾದಂತೆಲ್ಲ ಮತ್ತಷ್ಟು ಆಳದ ಪಾತಾಳಕ್ಕೆ ಇಳಿಯುತ್ತೇನೆ. ಅಲ್ಲಿ ಮೌನದ ಕಿವಿಗುಚ್ಚುವ ಕರಾಡತನ ಮತ್ತಷ್ಟು ಅಸಹನೀಯವೆನಿಸುತ್ತದೆ. ವ್ಯಾಕುಲಚಿತ್ತ ಮನಸ್ಸು ಮತ್ತೆ ಹಂಬಲಿಸುವುದೊಂದೇ .. ವೊಹ್ ಕಾಗಝ್ ಕಿ ಕಷ್ತಿ.. ವೊಹ್ ಬಾರೀಶ್ ಕ ಪಾನಿ.

kagaj-2



ಖುಷಿ ತಾನಾಗಿ ಒಲಿಯುವ ಬಾಲ್ಯಕ್ಕೂ, ಖುಷಿಯನ್ನು ಹುಡುಕಿ ಹೋಗಬೇಕಾದ ಅನಿವಾರ್ಯತೆಯ ಈ ಕಾಲಕ್ಕೂ ತುಂಬಾ ವ್ಯತ್ಯಾಸವಿದೆ. ಬಾಲ್ಯವೆಂದರೆ ಬದುಕು ಹರಳುಗಟ್ಟುವ ಕಾಲ. ಅಲ್ಲಿನ ಆಟ, ಪಾಠ, ಮುಗ್ದತೆ, ಕುತೂಹಲ, ಭಯ, ತುಂಟಾಟ, ಮೋಜು, ಮಸ್ತಿಗಳೆಲ್ಲಾ ಖುಷಿಯನ್ನು ಮೊಗೆಮೊಗೆದು ಕೊಡುತ್ತವೆ. ಅಲ್ಲಿ ಖುಶಿಯಾಗಲು ನಿರ್ದಿಷ್ಟ ಕಾರಣ ಬೇಕಿಲ್ಲ. ಬೇಲಿ ಹಾರಿ ಗೇರು ಬೀಜ ಕದಿಯುವಾಗ ತೋಟದಾಳು ಬಂದು ಓಡಿಸಿದರೂ ಖುಷಿ, ನೆಲ್ಲಿಕಾಯಿ ಹುಡುಕಿ ಕಾಡೇರಿದಾಗ ಜಾರಿ ಬಿದ್ದು ಕಾಲಿಗೆ ಪೆಟ್ಟಾದರೂ ಖುಷಿ, ತಮ್ಮನಿಗೆ ಕೀಟಲೆ ಮಾಡಿ ಅಮ್ಮನಿಂದ ಬೆನ್ನಿಗೆರೆಡು ಸಿಕ್ಕರೂ ಖುಷಿ, ಊಟ ಮಾಡದ ಹಠದಲ್ಲಿ ಬರಸೆಳೆದು ಮುತ್ತುಗೆರೆದು ಅಮ್ಮನ ಕೈತುತ್ತಿನಲ್ಲಿ ಎಂಥಾ ಖುಷಿ, ಮನೆಲೆಕ್ಕ ಮಾಡದೆ ಟೀಚರ್ ಬೆತ್ತ ತೆಗ್ಯೋ ಮುನ್ನವೇ ಕೈ ಚಾಚುವಾಗ್ಲೂ ಖುಷಿ, ಸಂಜೆ ತೋಡಲ್ಲಿ ಹುಟ್ಟುಡುಗೆಯಲ್ಲಿ ಈಜಾಡುವಾಗಲೂ ಖುಷಿ, ಅಲ್ಲಿ ಪ್ರತೀ ಒಂದು ಕ್ಷಣವು ಖುಷಿಯ ವಾಗ್ದಾನದೊಂದಿಗೆ ಬರುತ್ತದೆ. ಆ ಖುಶಿಗಳನ್ನೆಲ್ಲ ಇಲ್ಲಿ ಎಲ್ಲಿ ಹುಡುಕಲಿ?. ಹಬ್ಬದ ಹೊಸ ಉಡುಗೆಯನ್ನು ಮತ್ತೆ ಮತ್ತೆ ನೋಡಿ, ಮೂಸಿ, ಮೈ ಮೇಲೆ ಇಟ್ಟು ಕನ್ನಡಿ ನೋಡುವಾಗಿನ ಖುಷಿ ತಿಂಗಳಿಗೊಂದು ಖರೀದಿಸುವ ಬ್ರಾಂಡೆಡ್ ಡ್ರೆಸ್-ಗಳಲ್ಲಿ ಹೇಗೆ ಹುಡುಕಲಿ?, ಸ್ಕೂಲಿನ ಖಾಲಿ ಬೆಂಚಿನ ತುದಿಯಲ್ಲಿ ಕೂತು ಬೆಂಚನ್ನು ಮೇಲೆಕ್ಕೆತ್ತುವ ಖುಷಿ ಸಾಫ್ಟ್ವೇರ್ ಕಂಪೆನಿಗಳ ಅರಾಮಿ ಚೆಯರ್ಗಳಲ್ಲಿ ಹೇಗೆ ಹುಡುಕಲಿ?, ಗೇರು ಬೀಜದ ಮರ, ಮಾವಿನ ಮರಗಳಿಗೆ ಚಕಚಕನೆ ಹತ್ತಿ ಹಣ್ಣು ಕೊಯ್ಯುವ ಖುಷಿಯನ್ನು, ಹಿತ್ತಿಲಿನ ಮರಕ್ಕೆ ಹತ್ತಿ ಮಂಗನಾಟವಾಡಿದ ಖುಷಿಯನ್ನು, ಕರೆಂಟಿರದ ನಮ್ಮೂರ ಸರ್ಕಾರಿ ಶಾಲೆಯ ಮರದ ಕೆಳಗಿನ ಕನ್ನಡ ಪಾಠದ ಖುಷಿಯನ್ನು ಈ ಕಾಂಕ್ರೀಟ್ ಕಾಡಲ್ಲಿ ಎಲ್ಲಿ ಹುಡುಕಲಿ?, ಕ್ರಿಕೆಟ್ ಆಟದಲ್ಲಿ, ಬೆಟ್ಟ ಹತ್ತುವಾಗ, ಮಳೆನೀರಿನ ಪಾಚಿಗೆ ಜಾರಿ ಬಿದ್ದು ಏಟು ಮಾಡಿಕೊಳ್ಳುವ ಖುಶಿಯನ್ನು ಈ ಫುಟ್ಬಾತ್ ಮತ್ತು ಆಫೀಸ್ ಕಾರಿಡಾರ್ಸಲ್ಲಿ ಹೇಗೆ ಹುಡುಕಲಿ?, ಹೊಸ ಆಟಿಕೆಯ ಆಟದ ಮಧ್ಯೆ ಅದರೊಳಗೇನಿದೆ ಎಂಬ ಕುತೂಹಲಕ್ಕೆ ಜೋತು ಬಿದ್ದು ಬಿಚ್ಚಿಡುವ, ಮತ್ತೆ ಪೋಣಿಸಲಾಗದ ಖುಶಿಯನ್ನು ಈ ಲ್ಯಾಪ್ಟಾಪ್, ಡೆಸ್ಕ್ಟಾಪ್ ಮತ್ತು ಮ್ಯಾಕ್ ಗಳಲ್ಲಿ ಹೇಗೆ ಹುಡುಕಲಿ?, ಶಾಲೆಗೆ ಚಕ್ಕರ್ ಹಾಕುವ ನೆಪದ ಹೊಟ್ಟೆನೋವಿನ, ಅಮ್ಮನ ಕಹಿ ಕಷಾಯದ ಖುಷಿಯನ್ನು ರಜಕ್ಕೆ ಒಂದು ತಿಂಗಳು ಮುಂಚೆ ಹೇಳಬೇಕಾದ ಐಟಿ ಕಂಪೆನಿಯ ಹಾಲಿಡೇ ಮಾನೇಜ್ಮೆಂಟ್ಗಳಲ್ಲಿ ಹೇಗೆ ಹುಡುಕಲಿ?, ಸೈಕಲ್ ಚಕ್ರವೊಂದನ್ನು ಕೋಲಿನಲ್ಲಿ ಬಡಿಯುತ್ತಾ ರಸ್ತೆಯಲ್ಲಿ ಓಡಿಸಿದ್ದ ಖುಷಿಯನ್ನು, ಉಜಾಲದ ಬಾಟಲಿಗೆ ಚಪ್ಪಲಿಯ ಚಕ್ರ ಮಾಡಿ ಊರಿನ ಗಲ್ಲಿಗಳಲ್ಲಿ ಮೆರವಣಿಗೆ ಹೋದ ಖುಷಿಯನ್ನು ಕಂಪೆನಿ ಕ್ಯಾಬ್-ಗಳಲ್ಲಿ ಹೇಗೆ ಹುಡುಕಲಿ?, ಮನೆ ಮುಂದಿನ ಹುಳಿ ಮರದಲ್ಲಿ ಉಯ್ಯಾಲೆಯಾಡಿದ ಖುಷಿಯನ್ನು, ಮಣ್ಣಲ್ಲೇ ಜಾರುಬಂಡಿಯ ಖುಷಿಯನ್ನು ಈ ಮೆಟ್ರೋದ ಪಾರ್ಕುಗಳಲ್ಲಿ ಹೇಗೆ ಹುಡುಕಲಿ?, ಮಕ್ಕಳ ದಿನಾಚರಣೆಗೆ ಹಾಕಿದ ಬಣ್ಣ ಬಣ್ಣದ ವೇಷದ ಖುಷಿಯನ್ನು, ಈದ್ ಮಿಲಾದಿಗೆ ಊರ ಜನರ ಮುಂದೆ ಹಾಡಿದ ಖುಷಿಯನ್ನು ಇಲ್ಲಿನ ಇವೆಂಟ್ಸ್-ಗಳಲ್ಲಿ, ಫೌಂಡೇಷನ್ ಡೇಗಳಲ್ಲಿ ಹೇಗೆ ಹುಡುಕಲಿ?, ಜೇನು ಕೊಪ್ಪೆಗೆ ಕಲ್ಲು ಹೊಡೆದದ್ದು, ಗಿಳಿ ಗೂಡಿಗೆ ಇಣುಕಿ ನೋಡಿದ್ದು, ಪಾರಿವಾಳದ ಗೂಡಿಂದ ಮೊಟ್ಟೆ ಕದ್ದದ್ದು, ನಾಟಿ ಕೋಳಿಯ ಹಸಿ ಮೊಟ್ಟೆಯನ್ನು ಕುಡಿದದ್ದು, ಅಮ್ಮ ಕೆರೆದಿಟ್ಟ ಬಿಸಿ ಹಸು ಹಾಲನ್ನು ಕುಡಿದದ್ದು, ಅಂಗಳದಲ್ಲಿ ಮನೆ ಮಾಡಿದ್ದು, ಮದುವೆ ಮಾಡಿ ಆಡಿದ್ದು, ಮಣ್ಣುಂಡೆ ಮಾಡಿ ಹಂಚಿದ್ದು, ಮಾವಿನ ಮಿಡಿಯನ್ನು ಉಪ್ಪಿನೊಂದಿಗೆ ಮುಕ್ಕಿ ತಿಂದದ್ದು, ಬೆಕ್ಕಿನ ಮರಿಗೆ ರಟ್ಟಿನ ಮನೆ ಮಾಡಿ ಕೊಟ್ಟದ್ದು, ಕಳ್ಳ ಪೋಲೀಸ್ ಆಟದಲ್ಲಿ ಮೋಸ ಮಾಡಿದ್ದು, ಮಕ್ಕಳನ್ನೆಲ್ಲ ಸಾಲಾಗಿ ಅಂಗಿಯ ತುದಿಗೆ ಹಿಡಿಯಲು ಹೇಳಿ ಬಸ್ ಆಟದಲ್ಲಿ ಡ್ರೈವರ್ ಆದದ್ದು, ಮಳೆಗಾಲದಲ್ಲಿ ನೀರಲ್ಲಿ ಮಜಾ ಮಾಡಿದ್ದು, ರಾತ್ರಿ ಕಾಲು ಹುಳ ತಿಂದ ನೋವಿಗೆ ಅತ್ತಿದ್ದು, ಜೋರು ಗಾಳಿಗೆ ಕೊಡೆ ಹಿಮ್ಮುಖವಾದಾಗ ಅದರಲ್ಲಿ ನೀರು ತುಂಬಿದ್ದು… ಈ ಖುಶಿಗಳನ್ನೆಲ್ಲ ಇಲ್ಲಿ ಹೇಗೆ ಹುಡುಕಲಿ ?. ಅದೆಲ್ಲಕ್ಕಿಂತ ಹೆಚ್ಚಾಗಿ ಅಮ್ಮನ ಎದೆಗೂಡಿನ ಕಾವಿನ ಖುಶಿಯನ್ನೂ, ಮಡಿಲ ಸಾಂತ್ವನದ ಖುಶಿಯನ್ನೂ ಇಲ್ಲಿ ಹೇಗೆ ಹುಡುಕಲಿ?.

kagaj-3

ಮನ ಬಾಲ್ಯದ ಓಣಿಯೇರಿದಾಗ ಎಲ್ಲೆ ಮೀರಿ ಚಡಪಡಿಸುತ್ತದೆ. ಯಾವ ಚಿಂತೆ,ನಿರೀಕ್ಷೆ ,ಅಸೆ ಏನೂ ಇಲ್ಲದೆ ಬಂಧನ ವಿಲ್ಲದೆ ಹಾರಾಡುತ್ತ ಕಳೆದ ಆ ದಿನಗಳು…
ನಾ ದುನಿಯಾಂಕ ಗಮ್ ಥಾ.. ನಾ ರಿಶ್ತೊಂಕೆ ಬಂಧನ್ ಬಡೀ ಖೂಬ್ ಸೂರತ್ ಥಿ ವೋ ಝಿಂದಗಾನಿ…
ಈಗಿನ ಸುಂದರ ಮುಖವಾಡದ, ಕೃತಕ ನಗುವಿನ, ಜವಾಬ್ದಾರಿಗಳ ಕುಲುಮೆಯಲ್ಲಿ ಪ್ರತೀದಿನ ನರಳಬೇಕಾದ, ನನಸಾಗದ ಕನಸುಗಳ ಬೆನ್ನೇರಿ ಓಡುವ ಹುಂಬತನದ ಯವ್ವನ ಉಸಿರುಗಟ್ಟಿಸುವಾಗ ಮತ್ತೆ ಕವಿವಾಣಿ ನೆನಪಾಗುತ್ತದೆ…
ಯೆ ದೌಲತ್ ಭಿ ಲೇಲೋ, ಯೆ ಶುಹ್ರತ್ ಭಿ ಲೇಲೋ, ಭಲೇ ಛೀನ್ ಲೋ ಮುಜ್ಹ್ ಸೇ ಮೇರೀ ಜವಾನೀ , ಮಗರ್ ಮುಜ್ಹ್ ಕು ಲೌಟಾದೋ ಬಚ್ಪನ್ ಕಾ ಸಾವನ್, ವೊಹ್ ಕಾಗಜ್ ಕಿ ಕಶ್ತೀ ವೊಹ್ ಬಾರಿಶ್ ಕಾ ಪಾನೀ”

ಹುಸೇನಿ ~

Leave a comment

ಕನ್ನಡ ಪ್ರೇಮ ಕವನಗಳು · ಕನ್ನಡ ಪ್ರೇಮಕವನ · ಕನ್ನಡಿ ಕವಿತೆಗಳು‬ · ಕವನಗಳು · ಬಿರಿಯದ ಮೊಗ್ಗು · ಹುಸೇನಿ_ಪದ್ಯಗಳು

ವಿಸ್ಮಯ

೧.
ಈಗೀಗ
ನೀನೆಂದರೆ,
ಬರೆದು ಖಾಲಿಯಾದ ಶಬ್ದ,
ಅಲ್ಲೇ ಉಳಿದು ಬಿಡುವ ಎದೆಯ ನಿಟ್ಟುಸಿರು,
ಮತ್ತು
ತೀರದ ಮರಳು ಅಳಿಸಿಟ್ಟ ಹೆಸರು…

೨.
ನೀ
ತೊರೆದು ಹೋದ ಹಾದಿಯ
ಹಸಿರು, ಮತ್ತೆ ಬಂಜರಾಗಿಯೇ
ಉಳಿದ ನನ್ನೆದೆ ಗೂಡು
ಕಾಲದ
ವಿಸ್ಮಯವಲ್ಲದೆ ಮತ್ತೇನು … ?

೩.
ನದಿ-ಸಾಗರಕ್ಕೆ
ಪ್ರೇಮದ ಉಪಮೆ ಕೊಟ್ಟವರೇ ಕೇಳಿ,
ಎಲ್ಲ ನದಿಗಳಿಗೂ ಕಡಲು ಇರುವುದಿಲ್ಲ..

~ ಹುಸೇನಿ

ಇನ್ನಷ್ಟು ಓದಿಗೆ…

kannada kavanagalu · kannada love kavanagalu · Kannada Love letters · kannada love poems · Kannada quotes · Kannada Quotes Status · Kannada Quotes Status (ಕನ್ನಡ ಸ್ಟೇಟಸ್)

Kannada Kavanagalu – ಕನ್ನಡ ಪ್ರೇಮ ಕವನಗಳು

ಕವಿತೆಯೆಂದರೆ

ಕವಿತೆಯೆಂದರೆ ಹಾಗೆ..
ಅವಳ ಮುಂಗೈ ಮೆಹಂದಿಯ ಘಮಲು,
ಸಣ್ಣಗೆ ಬೆವೆತ ಕೊರಳಿನ ಘಮಲು …
ಕವಿತೆಯೆಂದರೆ ಹಾಗೆ..
ಅವಳ ಮುಚ್ಚಿಟ್ಟ ಮಚ್ಚೆಗಳ ಕೊನಲು…

ಕನ್ನಡ ಪ್ರೇಮ ಕವನಗಳು · ಪ್ರೇಮ ಕವನಗಳು · kannada love kavanagalu

ಪ್ರೇಮ ಕವನಗಳು – ಕನ್ನಡ ಪ್ರೀತಿಯ ಕವನಗಳು – Kannada Love Kavanagalu

ಆಟ

ಹೇ ಹಣತೆ ಕಂಗಳ ಹುಡುಗೀ
ಅಪರಿಚಿತ ರಾತ್ರಿಗಳಲಿ
ನನ್ನ ಹುಡುಕಿಕೊಳ್ಳುವ ಈ ಆಟದಲ್ಲಿ
ನಿಜಕ್ಕೂ ಮಜವಿದೆ ..

~ ಹುಸೇನಿ

~

ಅಪೂರ್ಣ ಸಾಲುಗಳು .. 2 · Kannada barahagalu

ಅಪೂರ್ಣ ಸಾಲುಗಳು .. 2

ಮತ್ತೆ ಏನೂ ಬರೆಯಲ್ಲ ಅಂತ ಪ್ರೀತಿಯಿಂದ ಬಯ್ಯುವ ನನ್ನ ಅಸಂಬದ್ಧ ಆಲಾಪಗಳ ಹಿರಿ/ಕಿರಿ ಗೆಳೆಯ ಗೆಳತಿಯರಲ್ಲಿ ಕ್ಷಮೆ ಕೇಳುತ್ತಾ …
ವರ್ಷಗಳ ಹಿಂದೆ ಎಂದೋ ಬರೆದಿಟ್ಟು ಮರೆತುಹೋದ ಅಪೂರ್ಣ ಸಾಲುಗಳು .. ಜನ್ಮಕ್ಕಂಟಿದ ಉದಾಸೀನತೆಯೋ, ಕ್ಷಣದ ನಂತರದ ಭಾವ-ಭಂಗತೆಯೋ ಕಾರಣವಾಗಿರಬಹುದಾದ ಈ ಅಪೂರ್ಣಸಾಲುಗಳಿಗೆ ಮುಕ್ತಿ ಕೊಡುತ್ತಿದ್ದೇನೆ 😂🙏

ಅಪೂರ್ಣ ಸಾಲುಗಳು -1 ನ್ನು ಈ ಲಿಂಕಿನಲ್ಲಿ ಓದಬಹುದು

[ಮೊದಲೇ ಹೇಳಿದಂತೆ ಇಲ್ಲಿರುವ ಒಂದೊಂದು ಬರಹಗಳು ಅಪೂರ್ಣ. ಆ ಕಾರಣಕ್ಕೆ ಇಲ್ಲಿನ ಭಾವಗಳೂ ಪೂರ್ಣವಾಗಿಲ್ಲವೆಂದು ಇನ್ನೊಮ್ಮೆ ನೆನಪಿಸುತ್ತೇನೆ]

೧.
ಇನ್ನು ಒಂದು ಜನ್ಮವಿರಬಹುದೇ…? ಇದ್ದರೆ ಒಂದು ಹೂವಿನ ಎಸಳುಗಳಾಗಿ ನಾವು ಹುಟ್ಟಬೇಕು.. ವಸಂತವು ನಮ್ಮನ್ನು ನೋಡಿ ಅಸೂಯೆಪಡಬೇಕು… ಕಾಲ ನಮ್ಮನ್ನು ನೋಡಿ ಮಂದಹಾಸ ಬೀರಬೇಕು.. ಒಂದು ದಿನ ಬಿಸಿಲ ಬೇಗೆಯಲ್ಲಿ
ನಾನು ಬಾಡಿ ಹೋಗಲು.. ನೆನಪಿಗಾಗಿ ನೀನು ಒಂದಿಷ್ಟು ಕಣ್ಣೀರು ಹರಿಸಬೇಕು.. ಅದಲ್ಲವೇ “ಪ್ರೀತಿ ಬಂಧನ “…

೨.
ಕನಸುತ್ತೇನೆ  .. ಸಂಭ್ರಮಿಸುತ್ತೇನೆ .. ಮತ್ತೆಲ್ಲದರ ಹಾಗೆ ನಿರಂತರತೆಯನ್ನು ಕಾಯ್ದುಕೊಳ್ಳದ ಬದುಕಿನ ಪ್ರತೀ ಮಜಲಿನೊಂದಿಗೆ ಅವಿನಾಭಾವತೆಯನ್ನು ಬೆಳೆಸಲು ಪ್ರಯತ್ನಿಸುತ್ತೇನೆ… ಬದುಕೆಂದರೆ ನಿರಂತರ ಚಲನೆಯಲ್ಲವೇ ? ಹೌದು .. ಗೋಚರಿಸದ ಇಲೆಕ್ಟ್ರಾನುಗಳು ತಮ್ಮ ಪರಮಾಣು ಬೀಜದ ಸುತ್ತ, ನಾವು ಇರುವ ಭೂಮಿಸೂರ್ಯನ ಸುತ್ತ, ಸೂರ್ಯ ತನ್ನ ಅಕ್ಷದ ಸುತ್ತ ಮತ್ತು ತನ್ನ ಪರಿವಾರ ಸಮೇತ ಬ್ರಹ್ಮಾಂಡ ಅಥವ ಗೆಲಕ್ಸಿಯ ಕೇಂದ್ರದ ಸುತ್ತ, ಪ್ರತೀ ಗೆಲಕ್ಸಿ ಇತರ ಗೆಲಕ್ಸಿಗಳಿಂದ ದೂರಕ್ಕೆ , ಹೀಗೆ ವಿಶ್ವದಲ್ಲಿ ಘಟಿಸುವ ಪ್ರತಿಯೊಂದರ ಬುನಾದಿಯಲ್ಲಿ ಇರುವ ವಿದ್ಯಮಾನವೇ ಚಲನೆ. ಅಂಥಹ ಚಲನೆಗಳ ಒಟ್ಟು ಮೊತ್ತ ಫಲಿತಾಂಶವೇ ಬದುಕು.

೩.
ಕಡುಗಪ್ಪು ತುಂಬಿದ
ನನ್ನ ಬಾಳಲ್ಲಿ,
ದೀವಟಿಗೆಯ ಹಿಡಿದು
ಬೆಳಕ ಚೆಲ್ಲಿದವಳು..
ಆ ಬೆಳಕಿಗೇ
ಮರುಳಾದೆನು..
ದೀಪದ ಕೆಳಗಿನ
ತಮವ ಅರಿಯದಾದೆನು..

ನಸುನಕ್ಕು ನನ್ನೆದೆಯ 
ಬಾಂದಳದ  ಶಶಿಯಾದಳು..
ಆ ಶಶಿಯ ನಿಶೆಗೆ 
ಮರುಳಾದೆನು 
ತಪ್ಪದೇ ಬರುವ 
ಅಮಾವಾಸ್ಯೆಯ
ತಿಳಿಯದಾದೆನು…
(ಪೇಲವತನಕ್ಕೆ ಕ್ಷಮೆಯಿರಲಿ 😄🙏 ತುಂಬಾ ಹಳೇದು )

೪.
ಮೋಹದ ನಿನ್ನ
ಹಸಿ ಕನಸುಗಳಿಗೆ
ಸಾಲುಗಳು ಕೂಡುವುದೇ ಇಲ್ಲ ರೂಹೀ

ಬಾ..
ಎದೆಗಿಳಿದು ಕವಿತೆಯಾಗಿಬಿಡು
ನಿನ್ನ ಸಾಲುಗಳ ಸಾಲಕ್ಕೆ
ನನ್ನ ಬದುಕ ಅಡವಿಟ್ಟುಬಿಡುತ್ತೇನೆ..

೫.
ನೀನು ಸಿಕ್ಕ ದಿನ ನಿನಗೆ ನೆನಪಿರಬಹುದು. ನೀನು ನುಡಿದ ಮೊದಲ ಮಾತು ನನ್ನಲ್ಲೊಳಗೆ ಸೃಜಿಸಿದ ಅನುಭಾವಶರಧಿಯ ಆಳ ಮತ್ತು ವಿಸ್ತಾರ ನಿನ್ನ ಊಹೆಗೆ ನಿಲುಕುವಂಥದ್ದಲ್ಲ.
ನಿನಗೆ ಗೊತ್ತು ನನ್ನದು ಯಾರ ಮುಂದೆಯೂ ತೆರೆದುಕೊಳ್ಳದ, ಸ್ಪಂದನೆಯ ಹಂಗೇ ಇಲ್ಲದಂತೆ ಪರಿತ್ಯಕ್ತ ಮನಸ್ಸು. ಗಿಜಿಗಿಡುವ ಸಂತೆಯೊಳಗಿನ ಅಬ್ಬರದ ಮಾತುಗಳ ನಡುವಿಂದ ಮೌನದ ಚಿಪ್ಪಿನೊಳಗೆ ತೂರಿ ಅಡಗಿಕೊಂಡು ಬಿಡಬೇಕೆನ್ನಿಸುವ ಮೌನ-ಮೋಹಿ ಅದು. ಆ ಮನಸ್ಸು ಇಗೀಗ ಸುಮ್ಮನೆ ನಗುವುದು ಕಲಿತಿದೆ. ನೀ ಸಿಕ್ಕಿದ ಘಳಿಗೆಯಿಂದ ನೋವುಗಳನ್ನು ಒಪ್ಪಿಕೊಂಡು ಅದನ್ನು ಮೀರಿಸುವ ದಿವ್ಯ ಶಕ್ತಿಯೊಂದನ್ನು ಅವಾಹಿಸಿಕೊಂಡಿದ್ದೇನೆ.

~ಹುಸೇನಿ

Ammana kavana · ಅಂಬೆಗಾಲು · ಕನ್ನಡ ಕವನಗಳು · ಕನ್ನಡ ಕವಿತೆಗಳು · ಕನ್ನಡಿ ಕವಿತೆಗಳು‬ · ಕವನ · ಕವನಗಳು · ಬಿಂದು · ಹುಸೇನಿ_ಪದ್ಯಗಳು

Kannada Kavanagalu – ಕನ್ನಡ ಕವನಗಳು

ಅಂಬೆಗಾಲು

ಒಲವು ಬಲಿತು ಕೂಸಾದ
ಜೀವಕ್ಕಿಂದು ತೊದಲ ಅಂಬೆಗಾಲು;
ದಿನ ಎಣಿದು ಮನ ಕುಣಿದು
ಅಪ್ಪನ ಆಕಾಶ ತುಂಬಾ ಅಲೆ ಸೆಳೆವ ಕಡಲು!

~ ಹುಸೇನಿ

ಕತ್ತಲು - ಕಣ್ಣೀರು · kannada kavanagalu

Kannada Kavanagalu – ಕನ್ನಡ ಕವನಗಳು

ಕತ್ತಲು – ಕಣ್ಣೀರು


ನಿಮ್ಮ ಬೆಳಕಿನ ಜಗತ್ತಿನಲ್ಲಿ
ಅಲ್ಪ ಕತ್ತಲು
ಕಡ
ಕೊಡಿರಿ;
ನಾನೋ ಅಪ್ಪಟ ಮನುಷ್ಯ;
ಕಣ್ಣೀರಿಂದಷ್ಟೇ ಸಾಂತ್ವನಗೊಳ್ಳುವ
ನೋವುಗಳಿವೆ…

ಬಿಂದು · ಬಿಂದು 26 · kannada to english

ಕನ್ನಡ ಕವನಗಳು – Kannada Kavanagalu

ಬಿಂದು – 26

ಮಾತಿಗೆ ಸಿಕ್ಕವರೆಲ್ಲರ ಒಂದೇ ವರಸೆ,
ಹುಸೇನಿ, ನಿನ್ನ ಕವಿತೆಗಳಿಗೇನಾಗಿದೆ?

ಮತ್ತೆ ನನ್ನದು ಅದೇ ಉತ್ತರ,
ನನ್ನೊಳಗೆ ಬೆಂಕಿಯ ಚಿಲುಮೆ ಉರಿಸಿ
ಹೊರಗೆ
ಹೂ ಅರಸಿ ನಡೆಯುವ ಕವಿತೆ ನಾ
ಕಟ್ಟಲಾರೆ..