ವೈದ್ಯರು ಕಲಿಸಿದ ಜೀವನ ಪಾಠ
“ಡಾಕ್ಟರ್! ನಾನೊಂದು ಗಂಭೀರ ಸಮಸ್ಯೆಯಲ್ಲಿ ಸಿಲುಕಿದ್ದೇನೆ.. ನೀವು ಸಹಾಯ ಮಾಡಲೇಬೇಕು… “. ಕನ್ಸಲ್ಟೇಶನ್ ರೂಮಿಗೆ ಧಾವಿಸಿದ ಆಕೆ ವೈದ್ಯರ ಬಳಿ ಅಂಗಲಾಚತೊಡಗಿದಳು. “ನನ್ನ ಮಗುವಿಗಿನ್ನೂ ೧ ವರ್ಷ ತುಂಬಿಲ್ಲ, ನಾನು ಮತ್ತೆ ಪ್ರೆಗ್ನೆಂಟ್ ಆಗಿದ್ದೇನೆ, ಇಷ್ಟು ಬೇಗ ನನಗಿನ್ನೊಂದು ಮಗು ಬೇಡ ಡಾಕ್ಟರ್ ” ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿ ಆಕೆ ಡಾಕ್ಟರ ಮುಖವನ್ನು ವಿಷಣ್ಣವಾಗಿ ನೋಡುತ್ತಾ ಕುಳಿತಳು.
“ಸರಿ.. ನಾನೇನು ಮಾಡಬೇಕು ಹೇಳಿ” ಡಾಕ್ಟರ್ ಕೇಳಿದರು.
“ನನಗೆ ಈ ಮಗು ಬೇಕಿಲ್ಲ… ಅಬಾರ್ಶನ್ ಮಾಡ್ಬೇಕು.. ನೀವು ಸಹಾಯ ಮಾಡ್ಬೇಕು ಡಾಕ್ಟರ್… ” ಸಣ್ಣ ದನಿಯಲ್ಲಿ ಅವಳು ಉತ್ತರಿಸಿದಳು.
ಡಾಕ್ಟರ್ ಚಿಂತಾಮಗ್ನರಾದರು, ಒಂದಷ್ಟು ಸಮಯದ ಮೌನವನ್ನು ಮುರಿದು ಡಾಕ್ಟರ್ ಹೇಳಿದರು “ಅದಕ್ಕಿಂತಲೂ ಒಳ್ಳೆಯ ಉಪಾಯವಿದೆ ನನ್ನಲ್ಲಿ… ಇದರಿಂದ ನಿಮ್ಮ ಆರೋಗ್ಯಕ್ಕೂ ಯಾವುದೇ ಅನಾಹುತವಿಲ್ಲ…”.
ಆಕೆಯ ಮುಖ ಅರಳಿತು. ಡಾಕ್ಟರ್ ತನ್ನ ಕೋರಿಕೆಯನ್ನು ಒಪ್ಪಿಕೊಂಡಳೆಂದು ಮತ್ತಷ್ಟು ನಿರಾಳವಾದಳು.
ಡಾಕ್ಟರ್ ಮುಂದುವರೆಸಿದರು “ನೋಡಿ.. ೨ ಮಕ್ಕಳನ್ನು ಒಟ್ಟಿಗೆ ನೋಡಿಕೊಳ್ಳಲು, ಪೋಷಿಸಲು ನಿಮಗೆ ಕಷ್ಟವಿದೆ ಅಂದ್ರಿ.. ಹಾಗಾದ್ರೆ ಒಂದು ಮಗುವನ್ನು ಕೊಲ್ಲಲೇ ಬೇಕು… ನಿಮ್ಮ ಕೈಯಲ್ಲಿರುವ ಮಗುವನ್ನು ಇಲ್ಲವಾಗಿಸೋಣ..ಇದರಿಂದ ಮತ್ತೊಂದು ಮಗುವನ್ನು ಪಡೆಯುವ ಮುಂಚೆ ಒಂದಿಷ್ಟು ಕಾಲ ಅರಾಮವಾಗಿರಬಹುದು… ಹೇಗಾದರೂ ಒಂದು ಮಗುವನ್ನು ಇಲ್ಲವಾಗಿಸಲೇಬೇಕು.. ಯಾವ ಮಗುವಾದರೇನಂತೆ ?, ಅಬಾರ್ಶನ್ ಎಂಬುದು ತುಂಬಾ ರಿಸ್ಕಿ, ನಿಮ್ಮ ಕೈಯಲ್ಲಿರುವ ಮಗುವನ್ನು ಇಲ್ಲವಾಗಿಸಿದರೆ ನಿಮ್ಮ ಆರೋಗ್ಯಕ್ಕೂ ಯಾವುದೇ ಅನಾಹುತವಾಗುವುದಿಲ್ಲ…. …. …. ”
“ನೋ ನೋ ಡಾಕ್ಟರ್ !!, ನನ್ನ ಮಗುವನ್ನು ನಾನೇ ಕೊಲ್ಲುವುದಾ..?! ಅಬ್ಬಾ .. ಎಷ್ಟೊಂದು ಕ್ರೂರ !, ಎಷ್ಟೊಂದು ಭಯಾನಕ.. ನಾನದನ್ನು ಮಾಡಲಾರೆ… !”
ಇನ್ನೂ ಮಾತು ಮುಗಿಸದ ಡಾಕ್ಟರನ್ನು ತಡೆದ ಅವಳು ಜೋರುದನಿಯಲ್ಲಿ ಕಂಪಿಸುತ್ತಾ ನುಡಿದಳು, ಅವಳ ಹಣೆ ಬೆವರತೊಡಗಿತ್ತು, ಎದೆ ಬಡಿತ ಜೋರಾಗಿತ್ತು .
“ಓಕೆ ..ಒಕೆ .. ಐ ಅಗ್ರೀಡ್ !”
ಡಾಕ್ಟರ್ ಮಾತು ಮುಂದುವರೆಸಿದರು “ಒಂದು ಮಗುವನ್ನು ನೀವು ಕೊಲ್ಲಲ್ಲು ಒಪ್ಪಿಕೊಂಡಿದ್ದೀರಿ, ಹಾಗಿದ್ದಾಗ ನಿಮ್ಮ ಸಮಸ್ಯೆಗೆ ಇದುವೇ ಒಳ್ಳೆಯ ಪರಿಹಾರವೆಂದುಕೊಂಡೆ .. ಅದಕ್ಕೆ ಹೇಳಿದೆ.. ”
ಆಕೆಗೆ ತನ್ನ ತಪ್ಪಿನ ಅರಿವಾಯಿತು. ನಂತರ ಡಾಕ್ಟರ್ ಗರ್ಭದಲ್ಲಿರುವ ಮಗುವಿಗೂ ಆಕೆಯ ಇನ್ನೊಂದು ಮಗುವಿನಂತೆ ಜೀವವಿದೆ, ಅದನ್ನು ಗರ್ಭಪಾತ ಮಾಡಿ ತೆಗೆಸುವುದು ಕೊಲ್ಲುವುದಕ್ಕೆ ಸಮಾನ … ಅದು ಕೈಯಲ್ಲಿರುವ ಮಗುವನ್ನು ಕೊಂದಷ್ಟೇ ದೊಡ್ಡ ಅಪರಾಧ ಎಂದು ತಿಳಿ ಹೇಳಿದರು.
ದುಖಃದ ಕಟ್ಟೆ ಒಡೆದು ಆ ತಾಯಿ ಕಣ್ಣೀರಾದಳು, ಮಗುವನ್ನು ಎಷ್ಟೇ ಕಷ್ಟಪಟ್ಟರೂ ಹೆತ್ತು ಸಾಕುವುದಾಗಿ ಡಾಕ್ಟರ್ ಬಳಿ ಪ್ರತಿಜ್ಞೆಗೈದು ಭಾರವಾದ ಹೃದಯದೊಂದಿಗೆ ಹೊರಡಲು ಅಣಿಯಾಗುವಾಗ ಲೋಕದ ಸಮಸ್ತ ತಂದೆ-ತಾಯಿಗಳು ಕಲಿಯಬೇಕಾದ ಜೀವನ ಪಾಠವೊಂದನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದಳು.
_ಹುಸೇನಿ
ಎಳೆ:ಅಂತರ್ಜಾಲ
Published by ಹುಸೇನಿ ~
ನನ್ನ ನಾಳೆಯ ಕುರಿತು ನನಗಲ್ಲ, ಈ ಭೂಮಿ ಯಾವುದೇ ಜೀವಿಗೂ ಪ್ರವಚಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವತ್ತೂ ಬಾರದ ನಾಳೆಯ ಬಗ್ಗೆ ನಂಗೇನು ಅಷ್ಟು ಕುತೂಹಲವಿಲ್ಲ. ಈ ಬದುಕು ಈ ಕ್ಷಣದ್ದು ಅಷ್ಟೇ ಎಂದು ನಂಬುವವನು ನಾನು. ನಾ ಈ ಪದವನ್ನು ಬೆರೆಯುವ ವೇಳೆ 'ಈ ಕ್ಷಣ' ಆಗಿದ್ದ ಈ ಹೊತ್ತನ್ನು ಇನ್ನೈದು ನಿಮಿಷದ ಬಳಿಕ ನಾ ತಿರುಗಿ ನೋಡಬಹುದು. ಅಂಥಹ ನನ್ನ ದೃಷ್ಟಿ ಪರದೆಯಲ್ಲಿ ಶಾಶ್ವತವಾಗಿ ಉಳಿಯುವ, ನನ್ನನ್ನು ಸದಾ ಜೀವಂತವಿರಿಸುವ ಪ್ರೇರಣೆಯಾಗಿ, ಒಂಟಿಯಾದಾಗ ದಿಕ್ಕಾಗಿ, ದುಃಖಕ್ಕೆ ಸಾಂತ್ವನವಾಗಿ, ಭಾರಕ್ಕೊಂದು ಹೆಗಲಾಗಿ, ಅತ್ತ ಕ್ಷಣವ ನಗುವಾಗಿ, ನಕ್ಕ ಕ್ಷಣ ಅಳುವಾಗಿ, ಮಳೆಯ ನಂತರ ತೊಟ್ಟಿಕ್ಕುವ ಹನಿಯಾಗಿ, ಬದುಕು ಇಷ್ಟೆಯಾ ಎಂದೆನಿಸುವ ವೇಳೆ ನೀಲಾಗಸದ ತುಂಬಾ ಕಾಮನಬಿಲ್ಲಾಗಿ ಮೂಡುವ ನನ್ನ ನೆನಪುಗಳು, ಅಂತಹ ನೆನಪುಗಳ ವ್ಯಸನಿ ನಾನು. ಆ ಕಾರಣಕ್ಕೇ ಇರಬಹುದು ನಿನ್ನೆಗಳಲ್ಲೇ ಹೆಚ್ಚು ಬದುಕುತ್ತೇನೆ. ಅಂತಹ ಒಂದಿಷ್ಟು ಬೊಗಸೆ ನೆನಪುಗಳನ್ನು ಈ ಸಂಚಿಯೊಳಗೆ ತುಂಬಿದ್ದೇನೆ..
ನನ್ನ ಬಗ್ಗೆ ನನ್ನ ಬರಹಗಳೇ ಹೆಚ್ಚು ಮಾತನಾಡುವುದರಿಂದ ಇಲ್ಲಿ ಹೇಳಲು ಹೆಚ್ಚು ಉಳಿದಿಲ್ಲ. ಇಳಿಸಂಜೆಯಲ್ಲಿ ಕಾಡುಮಧ್ಯೆಯೋ, ಕಡಲ ತೀರದಲ್ಲೋ ಕಳೆದುಹೋಗಲು ಸದಾ ಹಂಬಲಿಸುವ ಮನ, ಬಾನ ಮಡಿಲಿನಿಂದ ಒಂದಿಷ್ಟು ವರ್ಷಧಾರೆಯೂ ಸೇರಿಕೊಂಡರೆ ಕಥೆ ಮುಗಿಯುತು;ನೆನಪುಗಳನ್ನೆಲ್ಲ ನೇವರಿಸಿ ಮಾತಿಗೆ ಕೂತು, ಮನಸ್ಸು ಮೌನವಾಗಿ ಅದ್ಯಾವುದೋ ಲೋಕದ ವಾಸಿಯಾಗುತ್ತದೆ. ಅಲ್ಲಿ ಬದುಕಿನ ಜಂಜಡವಿಲ್ಲ. ಗಾಳಿ, ನೀರು, ಬೆಳಕು ಉಚಿತವಾಗಿ ಸಿಗೋ ಜಗದಲಿ ಬದುಕನ್ನು ದುಸ್ತರ ಮಾಡಿಕೊಂಡ ನಿಮ್ಮಗಳ ಸಿನಿಕ ಜಗದಾಚೆಯ ಅನೂಹ್ಯ ಲೋಕವದು. ಹಕ್ಕಿಗಳ ಕಲರವಕ್ಕೆ ಸಾಥಿಯಾದ ಜೀರುಂಡೆಗಳ ನಾದ. ಪಕ್ಕದಲ್ಲೇ ಹರಿವ ತೋಡಿನ ಝುಳು-ಝುಳು. ರಾತ್ರಿಯ ನಿಶೀಥತೆ, ದೂರದಲ್ಲಿ ಒದರುವ ಗೂಬೆ, ಊಳಿಡುವ ನರಿ. ನನ್ನದೇ ಲೋಕವದು. ಕತ್ತಲಿಗೂ ಬೆಳಕನ್ನು ತೊಡಿಸಿ ಉನ್ಮಾದವನ್ನು ಉಣ್ಣುವ ಬೆಳಕಿನ ಜನರ ವಿಕ್ಷಿಪ್ತತೆಗೆ ಅಲ್ಲಿ ಜಾಗವಿಲ್ಲ. ಕತ್ತಲನ್ನು ಕತ್ತಲಾಗಿಯೂ ಬೆಳಕನ್ನು ಬೆಳಕಾಗಿಯೂ ಆಸ್ವಾದಿಸುತ್ತೇನೆ, ಅಲ್ಲಷ್ಟೇ ನಾನು ನಾನಾಗಿ ಹೆಚ್ಚು ಬದುಕುತ್ತೇನೆ. ಅದರಿಂದಲೋ ಏನೋ ನಾನು ಎಂದೂ ಸಲ್ಲದ ಈ ಬೆಳಕಿನ ಜಗದ ಬಗ್ಗೆ ತೀರದ ಅಸಹ್ಯತನವಿದೆ. ಕೋಪವಿದೆ, ಪರಿತಾಪವಿದೆ. ಆದರೇನು ? ಒಲ್ಲದೆಯೂ ನಾನು ಕೂಡ ಈ ಜಗದ ಕ್ಷುಲ್ಲಕತೆಯ ಭಾಗವಾಗಿದ್ದೇನೆ. ಅದರಿಂದಾಚೆ ಹೊರಬರಲು ಪ್ರಯತ್ನಿಸಿದಷ್ಟೂ ತೀವ್ರವಾಗಿ ನನ್ನನ್ನು ಸೆಳೆಯುತ್ತದೆ ಅದು. ಮನುಷ್ಯನೊಂದಿಗೆ ಹುಟ್ಟಿದ ಅಥವಾ ಹೇರಲ್ಪಟ್ಟ ಒಂದಷ್ಟು ಜವಾಬ್ದಾರಿಗಳೆಂಬ ಕಟ್ಟುಪಾಡುಗಳು, ಸಂಭಂದಗಳೆಂಬ ಬೇಲಿ. ಖುಷಿಯನ್ನು ವಸ್ತುಗಳ ಗಾತ್ರಕ್ಕೂ ಬೆಲೆಗೂ ನಿಗುದಿಗೊಳಿಸಿ, ಆ ವಸ್ತು ಸಿಕ್ಕರೆಷ್ಟೇ ಖುಷಿ ಎಂದು ಬದುಕಿಗೆ ನಿಯಮ ಹಾಕಲಾಗಿದೆ ಇಲ್ಲಿ. ಭೌತ ವಸ್ತುಗಳ ವ್ಯಾಮೋಹದಲ್ಲಿ ಬಾಲ್ಯವನ್ನೂ, ಕೌಮಾರವನ್ನೂ, ಯವ್ವನವನ್ನೂ ಅನುಭವಿಸಲು ಸಾಧ್ಯವಿಲ್ಲವಾಗಿದೆ. ಇದೆಲ್ಲದರಿಂದ ಮುಕ್ತಿಗಾಗಿ ಸದಾ ಹಂಬಲಿಸುತ್ತೇನೆ. ನೀ ಕಟ್ಟಿಕೊಂಡ ಸೌಧವೋ, ಕೋಟೆವೋ, ನೀನುಡುವ ವಸ್ತ್ರದ ಬೆಲೆಯೋ, ಸಂಚರಿಸುವ ವಾಹನದ ಮೌಲ್ಯವೋ, ಬ್ಯಾಂಕಿನ ಲಾಕರಿನಲ್ಲಿಟ್ಟಿರುವ ಒಡವೆಯೊ, ನಿನ್ನ ಹಿಂಬಾಲಕ ಪಡೆಯೋ ನಿನ್ನ ಮನಸಿನ ಸಂತೃಪ್ತಿಯನ್ನೂ ಖುಷಿಯನ್ನೂ ಅಲೆಯುವ ಮಾಪಕವಲ್ಲ. ಇದ್ಯಾವುದರಲ್ಲೂ ಪೂರ್ಣ ಸಂತೋಷವನ್ನು ಪಡೆದವರ್ಯಾರು ನಾನು ಕಂಡದ್ದಿಲ್ಲ, ಕೇಳಿದ್ದಿಲ್ಲ. "ಮನಃಶಾಂತಿಯೇ ಅತ್ಯುನ್ನತ ಶ್ರೀಮಂತಿಕೆ", ಈ ಬೆಳಕಿನ ಜಗದ ತುಂಬೆಲ್ಲಾ ಯಾವುದೊ ಕರ್ಕಶ ಸಂಗೀತಕ್ಕೆ ಕಿವುಡಾದ ಮಂದಿಯ ಮಧ್ಯೆ ಈ ಸತ್ಯವನ್ನು ಕೂಗಿ ಕೂಗಿ ಹೇಳುವ ಪ್ರಯತ್ನದಲ್ಲಿದ್ದೇನೆ..
ನಿಮ್ಮನೆ ಹುಡುಗ,
ಹುಸೇನಿ ~
ನೆನಪಿನ ಸಂಚಿಯ ಕುರಿತಾದ ನಿಮ್ಮ ಅಭಿಪ್ರಾಯವನ್ನು ಕಳುಹಿಸಿ : nenapinasanchi@gmail.com
View all posts by ಹುಸೇನಿ ~
super sir
LikeLike
awosome ansmwer ..
LikeLike
ಈ ಕಥೆಯಲ್ಲಿ ಡಾಕ್ಟರ್ ಒಳ್ಳೆಯ ಪಾಠ ಕಲಿಸಿದರು.
LikeLike
Tumba channagi ede sir
Brona hatte maduvarige ondu valle pata super story
LikeLike
Very nice………story
LikeLike
Nice…………… superb
LikeLike